ಆನೆಯ ಮುಖ, ದೊಡ್ಡ ಚಾಮರ ಕರ್ಣಗಳು, ಡೊಳ್ಳು ಹೊಟ್ಟೆ, ಕೈಯಲ್ಲೊಂದು ಮೋದಕ, ಪಕ್ಕದಲ್ಲೇ ಮೂಷಕ. ಯಾರಿಗೆ ತಾನೇ ಇಷ್ಟವಾಗೋದಿಲ್ಲ ಈ ರೂಪ? ಅಗ್ರಪೂಜೆಯ ಒಡೆಯನಾದ ಗಣನಾಯಕ ಅಂದ್ರೆ ಎಲ್ಲರಿಗೂ ಇಷ್ಟ, ಅವನ ಮೇಲೆ ಬಹಳ ಪ್ರೀತಿ. ಯಾವುದೇ ಶುಭ ಕಾರ್ಯವಿರಲಿ ವಿನಾಯಕನಿಗೆ ಪೂಜೆ ಸಲ್ಲಿಸದಿದ್ದರೆ ಮನಸ್ಸಿಗೆ ನೆಮ್ಮದಿ, ಕೆಲಸದಲ್ಲಿ ಜಯ ಸಿಗದೆಂಬ ಅಚಲವಾದ ನಂಬಿಕೆ ನಮ್ಮಲ್ಲಿ ಮನೆಮಾಡಿದೆ. ದೇವತೆಗಳಲ್ಲಿ ಕಾಣಸಿಗುವ ವಿಶಿಷ್ಟ ಅದ್ರೂ ಮನಮೋಹಕ ರೂಪ ನಮ್ಮ ಗಣಪನದ್ದು.
ಗಣಪತಿಯ ಹುಟ್ಟು ಹೇಗಾಯಿತು ಅನ್ನೋದಕ್ಕೆ ಹತ್ತು – ಹಲವು ಕತೆಗಳಿವೆ. ಅದರಲ್ಲೂ ಅತ್ಯಂತ ಪ್ರಸಿದ್ಧವಾದ ಕತೆ ಈ ರೀತಿ ಇದೆ. ಸ್ನಾನಕ್ಕೆ ಹೋಗುವಾಗ ತನ್ನ ಏಕಾಂತವನ್ನು ಕಾಪಾಡಲು ದೇವಿ ಪಾರ್ವತಿಯು ಬಾಲಕನೊಬ್ಬನನ್ನು ಸೃಷ್ಟಿಸುತ್ತಾಳೆ. ಸ್ನಾನಕ್ಕೆ ತೆರಳುವ ಮುನ್ನ ಚಂದನವನ್ನು ಅರೆದು ತನ್ನ ಮೈಗೆ ಹಚ್ಚಿಕೊಳ್ಳುತ್ತಾಳೆ. ಅದೇ ಚಂದನದಿಂದ ಒಂದು ಬಾಲಕನ ರೂಪವನ್ನು ಸೃಷ್ಟಿಸಿ ಜೀವ ಕೊಡುತ್ತಾಳೆ. ತನ್ನನ್ನು ಬಾಲಕನ ತಾಯಿಯೆಂದು ಪರಿಚಯಿಸುತ್ತಾಳೆ. ತಾನು ಸ್ನಾನಕ್ಕೆ ತೆರಳುವಾಗು ಸ್ನಾನಗೃಹವನ್ನು ಕಾಯಬೇಕೆಂದೂ, ಯಾರಿಗೂ ಪ್ರವೇಶದ ಅನುಮತಿ ಕೊಡಬಾರದೆಂದು ಹೇಳುತ್ತಾಳೆ. ಸ್ವಲ್ಪ ಹೊತ್ತಿನಲ್ಲೇ ಪಾರ್ವತಿಯನ್ನು ನೋಡಲು ಮಹಾದೇವ ಬರುತ್ತಾನೆ. ತಾಯಿಯ ಮಾತನ್ನು ಅಕ್ಷರಶಃ ಪಾಲಿಸುವ ಬಾಲಕ ಶಿವನನ್ನು ತಡೆಯುತ್ತಾನೆ. ಶಂಕರ ಎಷ್ಟೇ ಹೇಳಿದರೂ ಬಾಲಕ ತನ್ನ ಪಟ್ಟು ಬಿಡಲಿಲ್ಲ. ಇದರಿಂದ ಕುಪಿತನಾದ ಚಂದ್ರಕಾಂತನು ಬಾಲಕನ ಜೊತೆ ಘೋರ ಯುದ್ಧ ಮಾಡುತ್ತಾನೆ. ಕೊನೆಗೆ ಬಾಲಕನ ರುಂಡವನ್ನು ಮುಂಡದಿಂದ ಬೇರ್ಪಡಿಸುತ್ತಾನೆ. ಮಗನ ಆರ್ತನಾದ ಕೇಳಿ ಓಡಿ ಬಂದ ಪಾರ್ವತಿ ಆತನ ಶವವನ್ನು ನೋಡಿ ಕುಪಿತಳಾಗುತ್ತಾಳೆ. ಮಹಾಕಾಳಿಯ ರೂಪ ತಾಳಿ ತ್ರಿಲೋಕವನ್ನೇ ನಾಶ ಮಾಡುವುದಾಗಿ ಹೇಳುತ್ತಾಳೆ. ಶಿವ ಪಾರ್ವತಿಗೆ ಸಾಂತ್ವನವನ್ನು ಹೇಳಿ ತಲೆಯೊಂದನ್ನು ಹುಡುಕಿ ತರುವಂತೆ ತನ್ನ ಗಣಗಳಿಗೆ ಆದೇಶಿಸುತ್ತಾನೆ. ಹೀಗೆ ತಲೆಯೊಂದನ್ನು ಅರಸುತ್ತಾ ಹೋದ ಗಣಗಳಿಗೆ ಉತ್ತರ ದಿಕ್ಕಿನಲ್ಲಿ ಮಲಗಿರುವ ಆನೆಯೊಂದು ಕಾಣಿಸುತ್ತದೆ. ಅದರ ತಲೆಯನ್ನು ಕಡಿದು ಕೈಲಾಸಕ್ಕೆ ಮರಳುತ್ತಾರೆ. ಆನೆಯ ತಲೆಯನ್ನು ಬಾಲಕನಿಗೆ ಜೋಡಿಸಿ ಜೀವ ಕೊಡುತ್ತಾನೆ ಶಿವ. ನೆರೆದ ದೇವತೆಗಳು ಸಂತೋಷಗೊಂಡು ಬಾಲಕನನ್ನು ಹರಸುತ್ತಾರೆ. ಅಗ್ರಪೂಜೆಯ ಅಧಿಪತ್ಯವನ್ನೂ ಶಿವಸುತನಿಗೆ ಕೊಡುತ್ತಾರೆ. ಮಹಾದೇವನು ಗಜಾನನನಿಗೆ ಶಿವಗಣಗಳ ಅಧಿಪತಿಯ ಪಟ್ಟ ಕಟ್ಟುತ್ತಾನೆ. ಇದರಿಂದಾಗಿಯೇ ಬಾಲಕನನ್ನು ಗಣೇಶ, ಗಣಪತಿ ಎಂಬ ಹೆಸರಿಂದ ಕರೆಯುತ್ತಾರೆ. ಪಾರ್ವತಿಯ ಆನಂದಕ್ಕೆ ಪಾರವೇ ಇರಲಿಲ್ಲ. ಅಶ್ರುಧಾರೆ ಸುರಿಸುತ್ತಾ ಮಗನನ್ನು ಅಪ್ಪಿಕೊಳ್ಳುತ್ತಾಳೆ.
ಪ್ರತಿಯೊಂದರಲ್ಲೂ ದೇವರನ್ನು ಕಾಣುವಂತೆ ಹೇಳುತ್ತದೆ ಸನಾತನ ಧರ್ಮ. ಗಾಳಿ, ನೀರು, ಆಕಾಶ, ಪೃಥ್ವಿ, ಅಗ್ನಿ, ಗೋವು, ಸರೀಸೃಪಗಳು, ಪ್ರಾಣಿ-ಪಕ್ಷಿಗಳಲ್ಲೂ ದೇವರಿದ್ದಾನೆ ಅಂತ ಹೇಳುತ್ತದೆ ನಮ್ಮ ಹಿಂದೂ ಧರ್ಮ. ಹೆಚ್ಚು ಕಡಿಮೆ ಎಲ್ಲಾ ದೇವ-ದೇವಿಯರ ಚಿತ್ರಗಳಲ್ಲಿ ಪ್ರಾಣಿ-ಪಕ್ಷಿಗಳನ್ನು ಅವರ ವಾಹನ ರೂಪದಲ್ಲಿ ನೋಡುತ್ತೇವೆ. ದೇವರಿಗೆ ಸಂಬಂಧ ಪಟ್ಟ ಪ್ರತಿಯೊಂದೂ ಪವಿತ್ರವೇ. ಹಾಗಾಗಿ ಈ ಪ್ರಾಣಿ-ಪಕ್ಷಿಗಳಿಗೂ ವಿಶೇಷ ಸ್ಥಾನವನ್ನು ಕಲ್ಪಿಸಿದೆ ಸನಾತನ ಧರ್ಮ. ದೇವರನ್ನು ಬೇರೆ ಬೇರೆ ರೂಪಗಳಲ್ಲಿ ಸಾಕ್ಷಾತ್ಕಾರ ಮಾಡಿದವರು ಹಲವರು. ತಾವು ಕಂಡ ರೂಪವನ್ನು ಶ್ಲೋಕಗಳಲ್ಲಿ, ಸ್ತೋತ್ರಗಳಲ್ಲಿ, ಪುರಾಣಗಳಲ್ಲಿ, ಶಾಸ್ತ್ರಗಳಲ್ಲಿ ಸೆರೆ ಹಿಡಿದಿದ್ದಾರೆ ನಮ್ಮ ಋಷಿಗಳು, ಮುನಿಗಳು, ತಪಸ್ವಿಗಳು. ಶ್ರೀರಾಮ, ಲಕ್ಷ್ಮಿ, ಶ್ರೀಕೃಷ್ಣ, ಆಂಜನೇಯ, ಮಹಾಕಾಳಿ, ತ್ರಿಮೂರ್ತಿಗಳು, ದುರ್ಗೆ ಹೀಗೆ ಪ್ರತಿಯೊಂದು ದೇವ-ದೇವತೆಗಳಿಗೆ ಒಂದು ವಿಶಿಷ್ಟವಾದ, ನಿರ್ದಿಷ್ಟವಾದ ರೂಪವಿದೆ. ಈ ಕಾರಣದಿಂದಲೇ ಚಿತ್ರ ಅಥವಾ ಮೂರ್ತಿ ನೋಡಿದ ಕೂಡಲೇ ಅದು ಯಾವ ದೇವತೆಯದ್ದು ಅಂತ ತಿಳಿಯುತ್ತದೆ. ಇಷ್ಟೆಲ್ಲಾ ಹಲವಾರು ರೂಪಗಳಿದ್ದರೂ ಆಕಾರದಿಂದ ನಿರಾಕಾರ, ನಿರ್ಗುಣ ಬ್ರಹ್ಮನೆಡೆಗೆ ಸಾಗುವ ಪಥವನ್ನೂ ಸನಾತನ ಧರ್ಮ ತೋರಿಸುತ್ತದೆ. ದೇವನೊಬ್ಬ ನಾಮ ಹಲವು ಅನ್ನೋ ಮಾತೊಂದಿದೆ. ಹಾಗೆಯೇ ನಾವು ದೇವರನ್ನು ಹತ್ತು ಹಲವು ರೂಪಗಳಲ್ಲಿ ಕಂಡರೂ, ಆರಾಧಿಸಿದರೂ ನಮ್ಮ ಗುರಿ ಒಂದೇ, ಪಥ ಒಂದೇ. ಅದೇ ನಿರಾಕಾರನಾದ ಪರಮಾತ್ಮನ ಅನುಭೂತಿ. ಹಾಗಂತ ನಾವು ಪೂಜಿಸುವ ರೂಪಗಳಿಗೆ ಅರ್ಥವಿಲ್ಲವೆಂದಲ್ಲ. ಪ್ರತಿಯೊಂದು ರೂಪಕ್ಕೂ ಅದ್ಭುತವಾದ ಅರ್ಥವನ್ನು ಕಲ್ಪಿಸಿದ್ದಾರೆ ನಮ್ಮ ಪೂರ್ವಜರು.
ಗಜಾನನನ ರೂಪವೂ ಅನೇಕಾನೇಕ ಅದ್ಭುತವಾದ, ವಿಶೇಷವಾದ ಅಂಶಗಳನ್ನೊಳಗೊಂಡಿದೆ. ಆನೆಯ ಮುಖ, ಚಾಮರದಂತಹ ಕಿವಿಗಳು, ಡೊಳ್ಳು ಹೊಟ್ಟೆ, ಕುಬ್ಜ ದೇಹ, ನಾಲ್ಕು ಕೈಗಳು, ಅವುಗಳಲ್ಲಿ ಮೋದಕ, ಪಾಶಾಂಕುಶಗಳು, ವಾಹನ ರೂಪದಲ್ಲಿ ಇಲಿ. ಇದು ಸಾಮಾನ್ಯವಾಗಿ ಕಾಣಸಿಗುವ ರೂಪ. ಆತನ ಅಭಯಹಸ್ತ ಶರಣಾಗತನಾದವನಿಗೆ ರಕ್ಷಣೆಯನ್ನು ಒದಗಿಸುತ್ತದೆ. ಶರಣಾದವರ ಕಷ್ಟಗಳನ್ನು ನಿವಾರಿಸಿ ಅಭಯ ನೀಡುವ ಕರುಣಾಳು ಮಹಾಕಾಯ ಶಿವಸುತ. ಆತನ ಕೈಯಲ್ಲಿರುವ ಮೋದಕ ಆಂತರ್ಯದ ಸಿಹಿತನದ ಪ್ರತೀಕ. ಮನುಷ್ಯನ ಆಸೆ, ಮೋಹ, ಪ್ರಾಪಂಚಿಕ ಬಂಧನಗಳನ್ನು ಸೆರೆ ಹಿಡಿಯುವುದು ಪಾಶವಾದರೆ, ಮನುಷ್ಯನನ್ನು ಸತ್ಯ ಹಾಗೂ ಧರ್ಮದ ಹಾದಿಯಲ್ಲಿ ನಡೆಯುವಂತೆ ಪ್ರೇರೇಪಿಸುತ್ತದೆ ಆತನ ಅಂಕುಶ. ಡೊಳ್ಳು ಹೊಟ್ಟೆ ವಿನಾಯಕನ ಔದಾರ್ಯದ ಚಿಹ್ನೆ. ತಿಂದದ್ದೆಲ್ಲವನ್ನು ಜೀರ್ಣಿಸುವಂತೆ ತನ್ನ ಆರಾಧಕರ, ಭಕ್ತರ ಕಷ್ಟಗಳನ್ನೆಲ್ಲಾ ಜೀರ್ಣಿಸಿ ಹರಸುವಂತಹ ಉದಾರಿಯೇ ಮಹಾಗಣಪತಿ. ವಿಘ್ನ ನಿವಾರಕನನ್ನು ನೋಡಿದ ಕೂಡಲೇ ಪಕ್ಕನೆ ಕಣ್ಣಿಗೆ ಕಾಣಿಸುವುದೇ ಆತನ ಆನೆಯ ಮೊಗ. ಶಕ್ತಿ, ಬುದ್ಧಿವಂತಿಕೆ ಮತ್ತು ಸೌಭಾಗ್ಯದ ಪ್ರತಿರೂಪವೇ ಆನೆ. ಗಜರಾಜನ ಎಲ್ಲಾ ಒಳ್ಳೆಯ ಗುಣಗಳು ಗಜಾನನನಲ್ಲಿ ಸಮ್ಮಿಳಿತವಾಗಿವೆ. ಕಾಡಿನಲ್ಲಿರುವ ಅತ್ಯಂತ ಶಕ್ತಿಶಾಲಿ ಪ್ರಾಣಿ ಆನೆ. ಸ್ವಭಾವತಃ ಶಾಂತ, ಸೌಮ್ಯ ಮತ್ತು ಸಸ್ಯಾಹಾರಿ. ಆಹಾರಕ್ಕಾಗಿ ಯಾವುದೇ ಪ್ರಾಣಿಯನ್ನು ಕೊಲ್ಲುವುದಿಲ್ಲ. ಪಳಗಿಸಿರುವ ಆನೆ ತನ್ನ ಒಡೆಯನ ಅಚ್ಚುಮೆಚ್ಚಿನ ಸಂಗಾತಿ. ಪ್ರೀತಿಯನ್ನು ದಯೆಯನ್ನು ತೋರಿಸಿದಲ್ಲಿ ವಿಶೇಷವಾದ ವಾತ್ಸಲ್ಯವನ್ನು ನಿಷ್ಟೆಯನ್ನು ತೋರಿಸುವ ಮಹಾಕಾಯವದು. ಹಾಗೆಯೇ ಅತ್ಯಂತ ಶಕ್ತಿಶಾಲಿಯೂ, ವಿಘ್ನನಾಶಕನೂ ಆದ ಗಣಪತಿಯು ಕ್ಷಮಾಗುಣವುಳ್ಳವನೂ, ಭಕ್ತರ ಪ್ರೀತಿಗೆ, ವಾತ್ಸಲ್ಯಕ್ಕೆ ಕರಗುವವನೂ ಆಗಿದ್ದಾನೆ. ಹೇಗೆ ಕೋಪಗೊಂಡ ಆನೆ ಇಡೀ ಕಾಡನ್ನೇ ನಾಶಮಾಡುವಲ್ಲಿ ಸಮರ್ಥವಾಗಿದೆಯೋ ಅದೇ ರೀತಿ ವಿಘ್ನಗಳನ್ನು, ವೈರಿಗಳನ್ನು, ಅರಿಷ್ಟಗಳನ್ನು ಯಾವುದೇ ಮುಲಾಜಿಲ್ಲದೇ ಗಣೇಶನು ನಿವಾರಿಸುತ್ತಾನೆಂಬುದು ಹಿಂದೂ ಧರ್ಮದ ಅಚಲವಾದ ನಂಬಿಕೆ.
ವಿನಾಯಕನ ದೊಡ್ಡ ತಲೆ ಆನೆಯ ಬುದ್ಧಿವಂತಿಕೆಯ ಪ್ರತಿರೂಪ. ಆತನ ದೊಡ್ಡ ಕಿವಿಗಳು ಧಾನ್ಯದ ರಾಶಿಯಿಂದ ಹೊಟ್ಟನ್ನು ಪ್ರತ್ಯೇಕಿಸುವ ಬೀಸಣಿಗೆಯಂತೆ. ಪೌಷ್ಠಿಕ ಧಾನ್ಯದಿಂದ ಜೊಳ್ಳನ್ನು ಪ್ರತ್ಯೇಕಿಸುವಂತೆ ಮಾನವನಲ್ಲಿರುವ ಋಣಾತ್ಮಕ ಅಂಶಗಳನ್ನು ಇಲ್ಲವಾಗಿಸುತ್ತವೆ. ಅವು ಎಲ್ಲವನ್ನು ಕೇಳಿಸಿಕೊಂಡರೂ ಕೇವಲ ಸತ್ಯವನ್ನು, ಒಳ್ಳೆಯದನ್ನು ಮಾತ್ರ ಉಳಿಸಿಕೊಳ್ಳುತ್ತವೆ. ತನ್ನೆಲ್ಲ ಭಕ್ತರ ಪ್ರಾರ್ಥನೆಗಳನ್ನು ಆಲಿಸುವ ಕ್ಷಮತೆಯನ್ನು ಚಾಮರದಂತಹ ಕಿವಿಗಳು ಹೊಂದಿವೆ. ಗಣೇಶನ ಸೊಂಡಿಲು ವಿವೇಕವನ್ನು ಬಿಂಬಿಸುತ್ತದೆ. ಆಧ್ಯಾತ್ಮಿಕ ಪ್ರಗತಿಗೆ, ಪಥಕ್ಕೆ ಬೇಕಾಗುವ ಮುಖ್ಯವಾದ ಗುಣವೇ ವಿವೇಕ. ಆನೆ ತನ್ನೆಲ್ಲ ಕೆಲಸಗಳಿಗೆ ಸೊಂಡಿಲನ್ನು ಬಳಸುತ್ತದೆ. ದೊಡ್ಡ ದೊಡ್ಡ ಮರದಿಮ್ಮಿಗಳನ್ನು ಎತ್ತುವಂತಹ, ಅವುಗಳನ್ನು ನದಿ ನೀರಿಗೆ ತಳ್ಳವಂತಹ ಶಕ್ತಿಶಾಲಿ ಕೆಲಸದಿಂದ ಹಿಡಿದು ಸಣ್ಣ ಸಣ್ಣ ಹಸಿರೆಲೆಗಳನ್ನು ಹೆಕ್ಕುವ, ಹುಲ್ಲನ್ನು ಮುರಿಯುವ, ತೆಂಗಿನಕಾಯಿಯ ತುಣುಕನ್ನು ಹೆಕ್ಕಿ ಬಾಯಲ್ಲಿಡುವಂತಹ ನಾಜೂಕಾದ ಕೆಲಸಗಳಿಗೂ ಆನೆ ಸೊಂಡಿಲನ್ನು ಬಳಸುತ್ತದೆ. ಅತ್ಯಂತ ಕಠಿಣವಾದ ಮತ್ತು ನಾಜೂಕಾದ ಕೆಲಸವನ್ನು ಮಾಡುವ ಸೊಂಡಿಲು ಗಣೇಶನ ಬುದ್ಧಿಮತ್ತೆಯನ್ನೂ, ವಿವೇಕವನ್ನೂ ಬಿಂಬಿಸುತ್ತದೆ. ವಿಘ್ನರಾಜನನ್ನು ಏಕದಂತ ಅಂತಲೂ ಕರೆಯುತ್ತಾರೆ. ಇದಕ್ಕೆ ಕಾರಣ ಗಣೇಶನ ಮುರಿದಿರುವ ದಂತ. ಪುರಾಣಗಳ ಪ್ರಕಾರ ಇದಕ್ಕೆ ಹಲವಾರು ಕಾರಣಗಳಿವೆ. ಒಂದು ಕತೆಯ ಪ್ರಕಾರ ಶಿವನನ್ನು ಭೇಟಿಯಾಗಲು ಮಹಾಮುನಿ ಪರಶುರಾಮರು ಕೈಲಾಸಕ್ಕೆ ಬರುತ್ತಾರೆ. ಶಿವ ದೀರ್ಘ ನಿದ್ದೆಯಲ್ಲಿದ್ದ ಕಾರಣ ಆತನ ಒಳ ಮನೆಯ ಕಾವಲುಗಾರನಾಗಿದ್ದ ಗಣೇಶ ಪರಶುರಾಮರನ್ನು ತಡೆಯುತ್ತಾನೆ. ಇದರಿಂದ ಕೋಪಗೊಂಡ ರಾಮ ಗಣೇಶನತ್ತ ಪರಶುವನ್ನು ಎಸೆಯುತ್ತಾರೆ. ಹಿಂದೆ ಶಂಕರನು ಇದೆ ಪರಶುವನ್ನು ರಾಮನಿಗೆ ನೀಡಿರುತ್ತಾನೆ. ಮಹದೇವನ ಮೇಲಿನ ಗೌರವದಿಂದ ಗಣೇಶನು ವಿನಮ್ರವಾಗಿ ಕೈ ಮುಗಿದು ಪರಶುವಿನ ಪ್ರಹಾರವನ್ನು ತನ್ನ ದಂತದ ಮೇಲೆ ತೆಗೆದುಕೊಳ್ಳುತ್ತಾನೆ. ಪರಿಣಾಮವಾಗಿ ದಂತವೊಂದು ಮುರಿಯುತ್ತದೆ. ಇನ್ನೊಂದು ಕತೆಯ ಪ್ರಕಾರ ಮಹರ್ಷಿ ವ್ಯಾಸರು ತಾನು ರಚಿಸುವ ಮಹಾಭಾರತವನ್ನು ಬರೆಯಬೇಕೆಂದು ಗಣೇಶನನ್ನು ಕೇಳಿಕೊಳ್ಳುತ್ತಾರೆ. ಅಂತಹ ಮಹಾಗ್ರಂಥ ಬರೆಯುವುದು ಸುಲಭದ ಮಾತಲ್ಲ. ಅದಕ್ಕಾಗಿ ವಿಶೇಷವಾದ ಲೇಖನಿ ಬೇಕೆಂಬುದನ್ನು ಅರಿತ ಗಣಪತಿ ತನ್ನ ದಂತವನ್ನೇ ಮುರಿದು ಲೇಖನಿಯಾಗಿ ಬಳಸುತ್ತಾನೆ. ಜ್ಞಾನ ಗಳಿಸುವುದಕ್ಕೆ ಯಾವುದೇ ರೀತಿಯ ತ್ಯಾಗ ಮಾಡಿದರು ಕಡಿಮೆ ಅನ್ನುವಂತಹ ಪಾಠವನ್ನು ಗಣೇಶ ಈ ಮೂಲಕ ಕಲಿಸುತ್ತಾನೆ.
ಏಕದಂತನ ವಾಹನವಾಗಿರುವ ಇಲಿ ಗಣೇಶನ ಎಲ್ಲಾ ಚಿತ್ರ, ಮೂರ್ತಿಗಳಲ್ಲಿ ಕಂಡುಬರುವ ಮುಖ್ಯ ಅಂಶ. ಮೇಲ್ನೋಟಕ್ಕೆ ಇದು ಬಹಳ ವಿಚಿತ್ರ ಅನ್ನಿಸಬಹುದು. ಮಹಾಕಾಯನ ಅಷ್ಟು ದೊಡ್ಡ ದೇಹವನ್ನು ಇಲಿಯಂತ ಸಣ್ಣ ಜೀವ ಹೇಗೆ ಹೊರುವುದಕ್ಕೆ ಸಾಧ್ಯ ಅಂತ ಆಶ್ಚರ್ಯವಾಗದೇ ಇರದು. ಇದರ ಒಳಾರ್ಥ ಇಷ್ಟೆ. ಜ್ಞಾನಿಗೆ ಈ ಪ್ರಪಂಚದಲ್ಲಿ ಯಾವುದು ಕುರೂಪವಲ್ಲ, ಯಾವುದು ಕೆಟ್ಟದ್ದಲ್ಲ. ಸಿಕ್ಕ ಸಿಕ್ಕೆಡೆಗೆ ಅಲೆದಾಡುವ, ಒಳ್ಳೆಯದು ಕೆಟ್ಟದ್ದೆಂಬ ಪರಿವೆ ಇಲ್ಲದೇ ಒಡಾಡುವ ಮನುಷ್ಯನ ಮನಸ್ಸಿನ ಪ್ರತೀಕವೇ ಇಲಿ. ಇಲಿಯನ್ನು ಪಳಗಿಸಿ ತನ್ನ ಅಧೀನದಲ್ಲಿರಿಸಿದಂತೆ ಹುಚ್ಚು ಕುದುರೆಯಂತೆ ಕಂಡ ಕಂಡಲ್ಲಿ ಅಲೆಯುವ ಮನಸ್ಸನ್ನು ಬೌದ್ಧಿಕ ವೈಚಾರಿಕತೆಯಿಂದ ಸತ್ಯಪಥದೆಡೆಗೆ ಕರೆದೊಯ್ಯುತ್ತಾನೆ ಲಂಬೋದರ.
ವಿಘ್ನೇಶನ ಮಾತೃಪ್ರೇಮದ ಬಗ್ಗೆ ಎಲ್ಲರಿಗೂ ತಿಳಿದಿದೆ. ಅಮ್ಮನೇ ಗಣೇಶನ ಸರ್ವಸ್ವ. ಯಾವುದಾದರೊಂದು ಕೆಲಸವನ್ನು ನಾಳೆ ನಾಳೆಯೆಂದು ಮುಂದೂಡಿದರೆ ‘ನಾಳೆ ನಾಳೆ ಅಂದ್ರೆ ಗಣೇಶನ ಮದುವೆ’ ಎಂಬ ಮಾತೊಂದನ್ನು ಹೇಳುತ್ತಾರೆ. ದಕ್ಷಿಣ ಭಾರತೀಯ ಪದ್ಧತಿಯಲ್ಲಿ ಗಣೇಶ ಆಜನ್ಮ ಬ್ರಹ್ಮಚಾರಿ. ಇದಕ್ಕೆ ಕಾರಣ ಆತನ ಮಾತೃಪ್ರೇಮವೇ. ಗಣಪತಿಯ ಪ್ರಕಾರ ದೇವಿ ಪಾರ್ವತಿಯು ಈ ಪ್ರಪಂಚದಲ್ಲೇ ಅಂತ್ಯಂತ ಸುಂದರವಾದ ಹಾಗೂ ಪರಿಪೂರ್ಣವಾದ ಹೆಣ್ಣು. ನನಗೂ ಕೂಡ ಪಾರ್ವತಿಯಂತಹ ಸೌಂದರ್ಯವತಿಯೂ, ಬುದ್ಧಿವಂತೆಯೂ ಆಗಿರುವ ಹೆಣ್ಣನ್ನು ಹುಡುಕಿ ತನ್ನಿ. ಆಮೇಲೆ ಮದುವೆಯಾಗುತ್ತೇನೆ ಅನ್ನೋದು ಗಣಪತಿಯ ಶರತ್ತು. ಆದ್ರೆ ಯಾರಿಂದಲೂ ಶಿವೆಯಂತಹ ಹೆಣ್ಣನ್ನು ಹುಡುಕಿ ತರಲು ಸಾಧ್ಯವಾಗಲೇ ಇಲ್ಲ. ಹುಡುಕಾಟ ಇನ್ನೂ ಜಾರಿಯಲ್ಲಿದೆ…
ಹಿಂದೂ ಧರ್ಮದ ಅತ್ಯಂತ ಶಕ್ತಿಶಾಲಿ ಹಾಗೂ ಪವಿತ್ರವಾದ ಚಿಹ್ನೆಯೇ ‘ಓಂ’. ಓಂ ಮತ್ತು ಗಣೇಶನಿಗೆ ಅವಿನಾಭಾವ ಸಂಬಂಧ. ದೈವಿಕ ಅಸ್ತಿತ್ವದ ಪ್ರತೀಕವಾದ ‘ಓಂ’ ಅನ್ನು ತಲೆಕೆಳಗಾಗಿ ಹಿಡಿದರೆ ಗಣೇಶನ ಮುಖದಂತೆ ಕಾಣಿಸುತ್ತದೆ. ‘ಓಂ’ ಜೊತೆ ಈ ರೀತಿ ಕಾಣಿಸಿಕೊಳ್ಳುವುದು ಗಣೇಶನೊಬ್ಬನೆ. ಸನಾತನ ಧರ್ಮದಲ್ಲಿ ಗಣೇಶನ ಅಗ್ರಸ್ಥಾನವನ್ನು ಇದು ಪ್ರತಿಬಿಂಬಿಸುತ್ತದೆ.
ಗಣೇಶ ಚತುರ್ಥಿಯ ಶುಭಾಷಯಗಳು…
2 comments:
ತುಂಬಾ ಚೆನ್ನಾಗಿ ಬರೆದಿದ್ದೀರಿ. ನಿಮ್ಮ ಬ್ಲಾಗ್ ನಲ್ಲಿ ಇನ್ನೂ ಇಂತಹ ವಿಚಾರಗಳು ಬರುತ್ತಿರಲಿ. ಬರಿತಾ ಇರಿ.
Shivanand
www.ssgavalkar.blogspot.com
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಮುಂದೆಯೂ ಇಂತಹ ವಿಷಯಗಳನ್ನು ಬರೆಯುವಲ್ಲಿ ನನ್ನ ಪ್ರಯತ್ನ ಖಂಡಿತಾ ಇರುತ್ತದೆ...
ನಮಗೆ ದೇವರಲ್ಲಿ ಭಕ್ತಿ ಇದೆ ನಿಜ. ಬಹಳಷ್ಟು ಆಚಾರಗಳನ್ನೂ ಪಾಲಿಸ್ತೇವೆ. ಆದ್ರೆ ನಾವು ಯಾಕೆ ಈ ರೀತಿ ಮಾಡ್ಬೇಕು, ಅದರ ಹಿನ್ನಲೆ ಏನು, ನಾವು ಆಚರಿಸುವ, ಪಾಲಿಸುವ ವಿಷಯಗಳ ಹಿಂದಿನ ಅರ್ಥ ಏನು ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುವುದೇ ಇಲ್ಲ. ಏನೋ ದೊಡ್ಡವರು ಹೇಳಿದ್ದಾರೆ ಅಂತ ಕೋಲೆ ಬಸವನಂತೆ ತಲೆ ಬಗ್ಗಿಸಿ ಹಿಂಬಾಲಿಸುತ್ತೇವೆಯೇ ವಿನ: ನಮ್ಮ ಸಂಸ್ಕಾರಗಳ ಹಿನ್ನಲೆಯ ಶ್ರೀಮಂತಿಕೆಯನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಎಳ್ಳಷ್ಟೂ ಮಾಡುವುದಿಲ್ಲ. ನಾಗತಿಹಳ್ಳಿಯವರ 'ನಮ್ಮ ಪ್ರೀತಿಯ ಹುಡುಗಿ'ಯ ಪುರೋಹಿತರು ನಮ್ಮೆಲ್ಲರಲ್ಲಿ ಇದ್ದಾನೆಂಬುದು ಸುಳ್ಳಲ್ಲ. ಚಿತ್ರದ ದೃಶ್ಯವೊಂದರಲ್ಲಿ ಬಿಳಿಯರ ಹೆಣ್ಣು ಮಗಳೊಬ್ಬಳು ಪುರೋಹಿತರಲ್ಲಿ ಕೇಳ್ತಾಳೆ 'ಗಣೇಶನಿಗೆ ಏಕೆ ಐದು ತಲೆ' ಅಂತ. ಅದಕ್ಕವರು 'ಮರ ಜಾಸ್ತಿ ಇತ್ತು. ಅದಕ್ಕೆ ಶಿಲ್ಪಿ ಒಂದರ ಬದಲು ಐದು ತಲೆ ಮಾಡಿದ್ದಾನೆ.' ಅಂತ ಹೇಳಿ ಹಲ್ಲು ಕಿಸಿಯುತ್ತಾರೆ. ಗೊಳ್ಳಂತ ನಗುವೇನೋ ಬರುತ್ತದೆ. ಆದರೆ ನಮ್ಮಲ್ಲಿ ಬಹಳಷ್ಟು ಜನರು ಕೂಡ ಆ ಪುರೋಹಿತರಷ್ಟೇ ಅಜ್ಞಾನಿಗಳು ಎಂಬುದು ಸುಳ್ಳಲ್ಲ.
ನಿಜ ಹೇಳ್ಬೇಕಂದ್ರೆ ನನಗೂ ಬಹಳಷ್ಟು ವಿಷಯಗಳು ತಿಳಿದಿರಲಿಲ್ಲ. ಈ ಸಂಬಂಧದಲ್ಲಿ ಅಲ್ಲಿ-ಇಲ್ಲಿ ನಡೆಸಿದ ಹುಡುಕಾಟದಿಂದ ವಿಷಯಗಳು ತಿಳಿದವು. ಅವುಗಳನ್ನು ಈ ಲೇಖನದಲ್ಲಿ ಸೆರೆ ಹಿಡಿದು ನಿಮ್ಮ ಜೊತೆ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ ಅಷ್ಟೆ.
ಆಗಾಗ್ಗೆ ಭೇಟಿ ಕೊಡ್ತಾ ಇರಿ....
Post a Comment