ನಾಡಹಬ್ಬ ಆಚರಿಸಲಿಕ್ಕೆ ಮೈಸೂರು ತನ್ನನ್ನು ತಾನು ಅಲಂಕರಿಸಿಕೊಂಡು, ಸಜ್ಜಾಗಿ ನಿಂತಿದೆ. ದೇವಿ ಚಾಮುಂಡೇಶ್ವರಿಯನ್ನು ಚಿನ್ನದ ಅಂಬಾರಿಯಲ್ಲಿ ಹೊರಲು ಬಲರಾಮ ಆತುರದಿಂದ ಕಾಯುತ್ತಿದ್ದಾನೆ. ಪ್ರತೀತಿಯ ಪ್ರಕಾರ ವಿಜಯದಶಮಿಯಂದೇ ಶ್ರೀರಾಮನು ಲಂಕೇಶನನ್ನು ಸಂಹರಿಸಿ ಲೋಕಕಂಟಕವನ್ನು ನಿವಾರಿಸಿದ್ದು. ಹಾಗಾಗಿ ದಸರಾ ಅಧರ್ಮದ ವಿರುದ್ಧ ಧರ್ಮದ ವಿಜಯದ ಪ್ರತೀಕ. ಉತ್ತರ ಭಾರತದಲ್ಲಿ ಈಗಲೂ ವಿಜಯದಶಮಿಯಂದು ರಾವಣ, ಕುಂಭಕರ್ಣರ ಎತ್ತರದ ಪುತ್ತಳಿಗಳನ್ನು ಸುಡುತ್ತಾರೆ. ಶ್ರೀರಾಮನ ಜೀವನ ನಿಜಕ್ಕೂ ಮಾನವ ಸಮಾಜಕ್ಕೆ ಆದರ್ಶ. ರಾಮನ ಕಥೆ ಯಾವುದೇ ಸಾಹಸಗಾಥೆಗಿಂತ ಕಡಿಮೆಯಿಲ್ಲ. ಶ್ರೀರಾಮನು ಎಂಥದ್ದೇ ಸಂದರ್ಭದಲ್ಲೂ ಧರ್ಮಪಥದಿಂದ ಭ್ರಷ್ಟನಾಗಲಿಲ್ಲ. ಜೀವನದಲ್ಲಿ ಎದುರಾದ ಪ್ರತಿಯೊಂದು ಕಷ್ಟಗಳನ್ನು ನಗು ನಗುತ್ತಾ ಎದುರಿಸಿದ್ದ ಶ್ರೀರಾಮ ತನ್ನ ಪ್ರತಿಯೊಂದು ಕಾರ್ಯದಲ್ಲಿ ಹೊಸ ಮರ್ಯಾದೆಯನ್ನು ಸ್ಥಾಪಿಸಿ, ಮರ್ಯಾದಾ ಪುರುಷೋತ್ತಮನ ಸ್ಥಾನವನ್ನು ಅಲಂಕರಿಸಿದ್ದಾನೆ, ಶ್ರೀರಾಮನ ಜೀವನಕಥೆ ಮಾನವನ ಎಲ್ಲಾ ಭಾವಗಳ, ಭಾವನೆಗಳ, ಸಂಬಂಧಗಳ ಆಗರ. ಅಲ್ಲಿ ಪ್ರೀತಿ-ವಾತ್ಸಲ್ಯ ಇದೆ, ಆದರ್ಶ-ಗೌರವ ಇದೆ, ಧೈರ್ಯ-ಸಾಹಸವಿದೆ, ಕರುಣೆ-ಶರಣಾಗತಿ ಇದೆ. ಮೋಸ-ವಂಚನೆ ಇದೆ. ತ್ಯಾಗವಿದೆ, ಗೆಳೆತನವಿದೆ, ಹಗೆತನವಿದೆ. ಇದೆಲ್ಲವನ್ನು ಪ್ರಪಂಚದ ಮೊಟ್ಟ ಮೊದಲ ಕಾವ್ಯದಲ್ಲಿ ಸೆರೆ ಹಿಡಿಯಲಾಗಿದೆ. ನಮಗೆಲ್ಲರಿಗೂ ಗೊತ್ತಿರುವಂತೆ ವಾಲ್ಮೀಕಿ ರಚಿತ ರಾಮಾಯಣವೇ ಈ ಮಹಾಕಾವ್ಯ.
ಹಾಗಂತ ನಾನೇನು ರಾಮಾಯಣವನ್ನು ಮತ್ತೆ ಬರೆಯುತ್ತಿಲ್ಲ. ಚಿತ್ರಕಲೆ ನನಗೆ ತುಂಬಾ ಇಷ್ಟವಾದ ವಿಷಯ, ಜೊತೆಗೆ ನನ್ನ ಹವ್ಯಾಸವೂ ಕೂಡ. ಸುಮಾರು ಮೂರು-ನಾಲ್ಕು ವರ್ಷಗಳ ಹಿಂದೆ ಇಂಟರ್ನೆಟ್ಟಿನಲ್ಲಿ ಬಿ.ಜಿ.ಶರ್ಮಾ ಮತ್ತು ಇಂದ್ರ ಶರ್ಮಾರ ಕೆಲವೊಂದು ಚಿತ್ರಗಳು ಕಣ್ಣಿಗೆ ಬಿದ್ದವು. ರಾಮಾಯಣವನ್ನು ತಮ್ಮ ಅದ್ಭುತ ಚಿತ್ರಕಲೆಯಲ್ಲಿ ಸೆರೆ ಹಿಡಿದಿದ್ದಾರೆ. ಅವುಗಳನ್ನು ಎಲ್ಲರ ಜೊತೆಗೆ ಹಂಚುವ ತವಕ ನನಗೆ. ದೃಶ್ಯ ಮಾಧ್ಯಮ ಹೆಚ್ಚು ಪರಿಣಾಮಕಾರಿಯೂ ಹೌದಲ್ಲವೇ?
ಒಂದು ಸಲ ಮಹರ್ಷಿ ವಾಲ್ಮೀಕಿ ತನ್ನ ಶಿಷ್ಯರ ಜೊತೆ ಸ್ನಾನಕ್ಕೆ ತೆರಳಿದ್ದಾಗ ಬೇಡನಿಂದ ಹತವಾದ ಗಂಡು ಕ್ರೌಂಚ ಪಕ್ಷಿಯನ್ನು ನೋಡುತ್ತಾರೆ. ಹೆಣ್ಣು ಪಕ್ಷಿಯ ಆರ್ತನಾದ ಕಂಡು ಖೇದಗೊಂಡು ಬೇಡನಿಗೆ ಶಾಪಕೊಡುತ್ತಾರೆ. ಕಾವ್ಯರೂಪದಲ್ಲಿದ್ದ ಅವರ ಶಾಪವೇ ಪ್ರಪಂಚದ ಮೊದಲ ಶ್ಲೋಕ. ಈ ವಿಶೇಷ ಘಟನೆಯ ಕುರಿತು ಮಹರ್ಷಿ ವಾಲ್ಮೀಕಿ ಆಶ್ಚರ್ಯಪಡುತ್ತಿರಬೇಕಾದರೆ ಸ್ವಯಂ ಬ್ರಹ್ಮ ದೇವ ಪ್ರತ್ಯಕ್ಷವಾಗಿ ಶ್ರೀರಾಮನ ಜೀವನ ವೃತ್ತಾಂತ ಬರೆಯುವಂತೆ ಪ್ರೇರೇಪಿಸುತ್ತಾರೆ. ಬ್ರಹ್ಮದೇವನ ಆಣತಿಯಂತೆ ವಾಲ್ಮೀಕಿ ರಾಮಾಯಣ ಮಹಾಕಾವ್ಯ ರಚಿಸುತ್ತಾರೆ.
ಅಯೋಧ್ಯೆಯ ರಾಜ ದಶರಥನಿಗೆ ಮಕ್ಕಳಿಲ್ಲವೆನ್ನುವ ಕೊರಗು. ಗುರುಹಿರಿಯರ ಆದೇಶದಂತೆ ಪುತ್ರಕಾಮೇಷ್ಟಿ ಯಜ್ಞವನ್ನು ಕೈಗೊಳ್ಳುತ್ತಾನೆ. ಯಜ್ಞದಿಂದ ಪ್ರಸನ್ನಗೊಂಡ ಯಜ್ಞಪುರುಷನು ಪಾಯಸದೊಂದಿಗೆ ಪ್ರತ್ಯಕ್ಷನಾಗುತ್ತಾನೆ. ಯಜ್ಞಪ್ರಸಾದವನ್ನು ದಶರಥನು ತನ್ನ ಪತ್ನಿಯರಿಗೆ ಹಂಚುತ್ತಾನೆ. ಪರಿಣಾಮವಾಗಿ ಕೌಸಲ್ಯೆಯು ರಾಮನಿಗೆ, ಕೈಕೇಯಿಯು ಭರತನಿಗೆ, ಸುಮಿತ್ರೆಯು ಲಕ್ಷಣ, ಶತೃಘ್ನರಿಗೆ ಜನ್ಮ ಕೊಡುತ್ತಾರೆ. ರಾಜನ ಆನಂದಕ್ಕೆ ಪಾರವೇ ಇಲ್ಲ. ಮನೆ ತುಂಬಾ ಮಕ್ಕಳು. ಅಪಾರ ಪ್ರೀತಿಯ ಜೊತೆಗೆ ಯೋಗ್ಯ ಶಿಕ್ಷಣವನ್ನೂ, ಶಸ್ತ್ರಾಸ್ತ್ರ ಕಲೆಯನ್ನೂ ಕಲಿಸುತ್ತಾನೆ. ಕೌಸಲ್ಯೆಯ ಕಣ್ಮಣಿಯಾದ ರಾಮನೆಂದರೆ ದಶರಥನಿಗೆ ಪಂಚಪ್ರಾಣ. ಒಂದು ಕ್ಷಣವೂ ರಾಮನನ್ನು ಬಿಟ್ಟಿರಲಾಗದಷ್ಟು ಪ್ರೀತಿ.
ಒಂದು ದಿನ ಬ್ರಹ್ಮರ್ಷಿ ವಿಶ್ವಾಮಿತ್ರರು ಅಯೋಧ್ಯೆಗೆ ಬರುತ್ತಾರೆ. ತಮ್ಮ ಯಾಗ ರಕ್ಷಣೆಗೆ ರಾಮನನ್ನು ಕಳುಹಿಸಿಕೊಡಬೇಕೆಂದು ದಶರಥನಲ್ಲಿ ಕೇಳುತ್ತಾರೆ. ರಾಮನನ್ನು ಬಿಟ್ಟಿರಲಾಗದಿದ್ದರೂ ಕುಲಗುರು ವಶಿಷ್ಠರ ಆಣತಿಯಂತೆ ದೃಢ ಮನಸ್ಸು ಮಾಡಿ ರಾಮನನ್ನು ಕಳುಹಿಸುತ್ತಾನೆ. ರಾಮನ ಜೊತೆ ಲಕ್ಷ್ಮಣನೂ ಹೊರಡುತ್ತಾನೆ. ಮಹರ್ಷಿ ವಿಶ್ವಾಮಿತ್ರರು ರಾಮ, ಲಕ್ಷ್ಮಣರಿಗೆ ಬಲ, ಅತಿಬಲವೆಂಬ ವಿದ್ಯೆಯನ್ನೂ, ಹಲವು ದೈವಿಕ ಶಸ್ತ್ರಾಸ್ತ್ರ ಪ್ರಯೋಗಗಳನ್ನು ಹೇಳಿಕೊಡುತ್ತಾರೆ. ದಂಡಕಾರಣ್ಯ ದಟ್ಟವಾದ ಕಾಡು. ರಾಕ್ಷಸಿಯಾದ ತಾಟಕಿ ಮತ್ತವಳ ಮಕ್ಕಳ ಉಪಟಳದಿಂದಾಗಿ ಸುಂದರವಾದ ಕಾಡು ಗೊಂಡಾರಣ್ಯವಾಗಿ ಮಾರ್ಪಾಡಾಗಿತ್ತು. ಅರಣ್ಯವನ್ನು ಪ್ರವೇಶಿಸುತ್ತಿದ್ದಂತೆ ತಾಟಕಿ ಧನುರ್ಬಾಣಗಳನ್ನು ಧರಿಸಿರುವ ರಾಮ-ಲಕ್ಷ್ಮಣರ ಮೇಲೆರಗುತ್ತಾಳೆ. ಭಯಂಕರ ಯುದ್ಧ ನಡೆಯುತ್ತದೆ. ಮುನಿ ವಿಶ್ವಾಮಿತ್ರರ ಆದೇಶದಂತೆ ರಾಮನು ತಾಟಕಿಯನ್ನು ಸಂಹರಿಸುತ್ತಾನೆ. ಮುನಿಗಳ ಇಚ್ಛೆಯಂತೆ ಯಜ್ಞಕ್ಕೆ ರಕ್ಷಣೆಯಿತ್ತು, ಉಪಟಳ ಕೊಡುತ್ತಿದ್ದ ಸುಬಾಹುವನ್ನೂ ರಾಮನ ಬಾಣಗಳು ಸಂಹರಿಸುತ್ತವೆ. ಮಾರಕವಾಗಿ ಗಾಯಗೊಂಡ ಮಾರೀಚನು ಸುಮಾರು ಯೋಜನ ದೂರದ ಸಾಗರ ದಡದಲ್ಲಿ ಬೀಳುತ್ತಾನೆ. ಯಜ್ಞ ಸುಸೂತ್ರವಾಗಿ ನಡೆದ ಕಾರಣ ಮುನಿವರ್ಯರು ತುಂಬಾ ಪ್ರಸನ್ನವಾಗಿದ್ದರು.
ಸೀತೆ ಮಿಥಿಲೆಯ ರಾಜ ಜನಕನ ಮಗಳು. ಜನಕರಾಜನು ತನ್ನ ಮಗಳ ಸ್ವಯಂವರವನ್ನೇರ್ಪಡಿಸಿದ್ದನು. ಆಮಂತ್ರಣವನ್ನು ಸ್ವೀಕರಿಸಿದ ಮುನಿ ವಿಶ್ವಾಮಿತ್ರರು ರಾಮ-ಲಕ್ಷ್ಮಣರೊಂದಿಗೆ ಮಿಥಿಲೆಗೆ ಪ್ರಯಾಣ ಬೆಳೆಸುತ್ತಾರೆ. ದಾರಿಯಲ್ಲಿ ಋಷಿ ಗೌತಮರ ಆಶ್ರಮ ಸಿಗುತ್ತದೆ. ಶ್ರೀರಾಮನ ಪಾದಸ್ಪರ್ಷದಿಂದ ಕಲ್ಲಾಗಿದ್ದ ಅಹಲ್ಯೆಯ ಶಾಪ ವಿಮೋಚನೆಯಾಗುತ್ತದೆ. ಮಿಥಿಲೆಯಲ್ಲಿ ರಾಜೋಚಿತ ಸ್ವಾಗತ ದೊರೆಯುತ್ತದೆ. ನಗರವೆಲ್ಲಾ ಸ್ವಯಂವರದ ಸಂಭ್ರಮದಿಂದ ಅಮರಾವತಿಯಂತೆ ನಳನಳಿಸುತ್ತಿತ್ತು. ರಾಮ-ಲಕ್ಷ್ಮಣರು ನಗರವನ್ನು ಸುತ್ತಾಡುತ್ತಾ ಉದ್ಯಾನವನದ ಕಡೆಗೆ ಬರುತ್ತಾರೆ. ದೇವಿ ಗೌರಿಯ ಪೂಜೆಗಾಗಿ ಬಂದ ಸೀತೆಯನ್ನು ರಾಮ ನೋಡುತ್ತಾನೆ. ಒಬ್ಬರನ್ನೊಬ್ಬರು ನೋಡುತ್ತಾ ಮೈಮರೆಯುತ್ತಾರೆ. ಶ್ರೀರಾಮನೇ ತನ್ನನ್ನು ವರಿಸಲಿಯೆಂದು ಮಾತೆ ಗೌರಿಯನ್ನು ಸೀತೆ ಪ್ರಾರ್ಥಿಸುತ್ತಾಳೆ.
ಸ್ವಯಂವರದ ದಿನದಂದು ಸಭಾಂಗಣದಲ್ಲಿ ದೇಶ-ವಿದೇಶದ ರಾಜಕುಮಾರರು ಸೀತೆಯನ್ನು ವರಿಸುವ ಇಚ್ಛೆಯಿಂದ ನೆರೆದಿದ್ದರು. ಸ್ವಯಂವರದ ನಿಯಮದಂತೆ ಶಿವ ಧನುಸ್ಸನ್ನೆತ್ತಿ ಹೆದೆ ಏರಿಸಬೇಕಿತ್ತು. ಎಲ್ಲಾ ರಾಜಕುಮಾರರು ಪ್ರಯತ್ನಿಸಿ ಸೋತು ಹೋದರು. ಕೊನೆಗೆ ಶ್ರೀರಾಮನು ಸಭಾಂಗಣದ ಮಧ್ಯೆ ಬಂದು ಗುರುಹಿರಿಯರಿಗೂ, ಧನುಸ್ಸಿಗೂ ನಮಸ್ಕರಿಸುತ್ತಾನೆ, ಧನುಸ್ಸನ್ನು ಎತ್ತಿ ಹೆದೆಯೇರಿಸುತ್ತಿದ್ದಂತೆ ಮೇಘಗಳ ಗರ್ಜನೆಯಂತೆ ಸದ್ದಾಗಿ ಧನುಸ್ಸು ಮುರಿದು ಬೀಳುತ್ತದೆ. ಸಂಪ್ರೀತೆಯಾದ ಸೀತೆಯು ಶ್ರೀರಾಮನಿಗೆ ವರಮಾಲೆಯನ್ನು ತೊಡಿಸುತ್ತಾಳೆ. ಮಿಥಿಲೆಯಲ್ಲಿನ ವಿಷಯ ತಿಳಿದು ದಶರಥನ ಹಾಗೂ ರಾಣಿಯರ ಆನಂದಕ್ಕೆ ಪಾರವೇ ಇರಲಿಲ್ಲ. ಸಂಪೂರ್ಣ ರಾಜ ಪರಿವಾರ ವಿವಾಹದಲ್ಲಿ ಪಾಲ್ಗೊಳ್ಳಲು ಮಿಥಿಲೆಗೆ ತೆರಳುತ್ತದೆ. ರಾಮನು ಸೀತೆಯನ್ನೂ, ಲಕ್ಷ್ಮಣನು ಊರ್ಮಿಳೆಯನ್ನೂ, ಭರತನು ಮಾಂಡವಿಯನ್ನೂ, ಶತೃಘ್ನನು ಶ್ರುತಕೀರ್ತಿಯನ್ನೂ ವರಿಸುತ್ತಾರೆ. ನಾಲ್ಕೂ ರಾಜಕುಮಾರರ ವಿವಾಹ ಮಹೋತ್ಸವವನ್ನು ವಿಜ್ರಂಭಣೆಯಿಂದ ನೆರವೇರಿಸಿ ದಶರಥನ ಪರಿವಾರವು ಸಂತೋಷದಿಂದ ಅಯೋಧ್ಯೆಗೆ ಮರಳುತ್ತದೆ.
ಚಿತ್ರಕೃಪೆ: www.masters-gallery.com
0 comments:
Post a Comment