ರಾಮ – ಸೀತೆಯ ವಿವಾಹವಾಗಿ ಕೆಲವು ವರ್ಷಗಳೇ ಕಳೆದವು. ಅತ್ಯಂತ ಅಪರೂಪವೂ, ಅನುರೂಪವೂ ಆದ ಜೋಡಿ ಅವರದ್ದು. ರಾಮ–ಸೀತೆಯನ್ನು ಕಂಡಾಗ ಅಯೋಧ್ಯೆಯ ಜನರ ಪಾಲಿಗೆ ಸಾಕ್ಷಾತ್ ಲಕ್ಷ್ಮಿ–ನಾರಾಯಣರನ್ನು ನೋಡಿದಂತಾಗುತ್ತಿತ್ತು. ಮಹಾರಾಜ ದಶರಥನ ಮನಸ್ಸಲ್ಲಿ ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡಿ ಅಯೋಧ್ಯೆಯ ರಾಜನನ್ನಾಗಿಸುವ ಅಭಿಲಾಷೆಯಾಯಿತು. ಶ್ರೀರಾಮನು ಧರ್ಮನಿಷ್ಟನೂ, ಕರ್ತವ್ಯನಿಷ್ಟನೂ, ನ್ಯಾಯಪರನೂ ಆಗಿದ್ದನು. ರಾಜನಾಗುವ ಎಲ್ಲಾ ಗುಣಗಳು ಆತನಲ್ಲಿ ಸಮ್ಮಿಳಿತವಾಗಿದ್ದರಿಂದ ವಿಷಯವನ್ನು ತಿಳಿದ ಮಂತ್ರಿಗಣ ಸಹಜವಾಗಿ ತಮ್ಮ ಸಹಮತವನ್ನು ತಿಳಿಸಿ ಸಂತೋಷಪಟ್ಟರು. ಅಯೋಧ್ಯೆಯ ನಾಗರಿಕರ ಸಂಭ್ರಮ ಮುಗಿಲು ಮುಟ್ಟಿತು.
ಆದರೆ ಅಯೋಧ್ಯೆಯ ಜನರ ಸಂತೋಷವನ್ನು ಕೈಕೇಯಿಯ ದಾಸಿಯಾದ ಮಂಥರೆಗೆ ಸಹಿಸಲಾಗಲಿಲ್ಲ. ಭರತನ ಮೇಲೆ ಆಕೆಗೆ ಅಮಿತ ಪ್ರೀತಿ. ಭರತನನ್ನು ರಾಜನ ರೂಪದಲ್ಲಿ ನೋಡುವ ಇಚ್ಛೆಯಿಂದ ಮಹಾರಾಣಿ ಕೈಕೇಯಿ ಮನಸ್ಸು ಕದಡುತ್ತಾಳೆ. ಮೊದಮೊದಲು ಕೈಕೇಯಿ ಒಪ್ಪಲಿಲ್ಲವಾದರೂ ಮಂಥರೆಯ ದುರ್ಭೋದನೆಗೆ ಹಾವಾಡಿಗನ ಪುಂಗಿಗೆ ತಲೆದೂಗುವ ಹಾವಿನಂತೆ ಮಣಿಯುತ್ತಾಳೆ.
ಶ್ರೀರಾಮನ ಪಟ್ಟಾಭಿಷೇಕದ ಶುಭ ಸುದ್ದಿಯನ್ನು ತಿಳಿಸಲು ತನ್ನ ಅಂತ:ಪುರಕ್ಕೆ ಬಂದ ದಶರಥನಲ್ಲಿ, ಹಿಂದೊಮ್ಮೆ ದೇವಾಸುರ ಯುದ್ಧದ ಸಂದರ್ಭದಲ್ಲಿ ನೀಡಿದ ಎರಡು ವಚನಗಳನ್ನು ನೆರವೇರಿಸುವಂತೆ ಕೇಳುತ್ತಾಳೆ. ಭರತನಿಗೆ ಪಟ್ಟಾಭಿಷೇಕವಾಗಬೇಕೆಂಬುದು ಮೊದಲ ಬೇಡಿಕೆಯಾಗಿದ್ದರೆ, ಶ್ರೀರಾಮ ಹದಿನಾಲ್ಕು ವರ್ಷಗಳ ಕಾಲ ವನವಾಸವನ್ನು ಮಾಡಬೇಕೆಂಬುದು ಎರಡನೆಯ ಬೇಡಿಕೆಯಾಗಿತ್ತು. ಕೈಕೇಯಿ ಮಾತುಗಳನ್ನು ಕೇಳಿದಾಗ ದಶರಥನಿಗೆ ತನ್ನ ಪದತಲದಲ್ಲಿನ ಭೂಮಿಯೇ ಕುಸಿದಂತೆ ಭಾಸವಾಯಿತು. ಪರಿಪರಿಯಾಗಿ ಬೇಡಿಕೊಂಡರೂ ಕೈಕೇಯಿ ತನ್ನ ಪಟ್ಟು ಬಿಡಲಿಲ್ಲ.
ಪಿತೃ ವಾಕ್ಯ ಪರಿಪಾಲನೆಗಾಗಿ ಶ್ರೀರಾಮನು ಅರಣ್ಯಕ್ಕೆ ತೆರಳಲು ಅನುವಾಗುತ್ತಾನೆ. ಆತನ ಜೊತೆ ಸೀತೆಯೂ, ಲಕ್ಷ್ಮಣನೂ ಹೊರಡುತ್ತಾನೆ. ಸಂತೋಷದಿಂದ ನಳನಳಿಸುತ್ತಿದ್ದ ಅಯೋಧ್ಯೆಯಲ್ಲಿ ಈಗ ಸ್ಮಶಾನ ಮೌನ. ದಶರಥನಂತೂ “ರಾಮ ರಾಮ” ಎನ್ನುತ್ತಾ ಪ್ರಜ್ನಾಹೀನನಾಗುತ್ತಿದ್ದನು. ಶ್ರೀರಾಮ ಲಕ್ಷ್ಮಣರು ನಾರುಮಡಿಯನ್ನುಟ್ಟು, ಮಾತಾ-ಪಿತರ, ಹಾಗೂ ಗುರು ಹಿರಿಯರ ಆಶೀರ್ವಾದವನ್ನು ಪಡೆದು ಧನುರ್ದಾರಿಗಳಾಗಿ ಅರಣ್ಯಕ್ಕೆ ತೆರಳಲು ಸಿದ್ಧರಾಗುತ್ತಾರೆ. ರಾಮನಿಲ್ಲದ ಅಯೋಧ್ಯೆ ತಮಗೂ ಬೇಡವೆಂದು ಪ್ರಜಾಜನರು ರಾಮ, ಲಕ್ಷ್ಮಣ ಹಾಗೂ ಸೀತೆಯೊಂದಿಗೆ ಕಾಡಿಗೆ ತೆರಳಲು ಸಿದ್ಧರಾಗುತ್ತಾರೆ.
ಸುಮಂತ್ರನು ಸಾರಥಿಯಾಗಿರುವ ಶ್ರೀರಾಮನ ರಥವನ್ನು ಹಿಂಬಾಲಿಸುತ್ತಾರೆ. ರಾಮನ ಯಾವುದೇ ಸಾಂತ್ವನದ ಮಾತುಗಳನ್ನು ಕೇಳಲು ಸಿದ್ಧರಿರಲಿಲ್ಲ. ಹೀಗೆ ಅಯೋಧ್ಯೆಯನ್ನು ಪರಿತ್ಯಜಿಸಿದ ರಾಮ ಲಕ್ಷ್ಮಣ, ಸೀತೆ ಹಾಗೂ ಪ್ರಜೆಗಳು ಆ ರಾತ್ರಿಯನ್ನು ತಮಸಾ ನದಿಯ ದಡದಲ್ಲಿ ಕಳೆಯುತ್ತಾರೆ. ಮರುದಿನ ಬೆಳಗ್ಗೆ ಆರಣ್ಯದತ್ತ ತನ್ನ ಪ್ರಯಾಣವನ್ನು ಮುಂದುವರಿಸುತ್ತಾರೆ.
ದಾರಿಯಲ್ಲಿ ಗುಹನ ಆಥಿತ್ಯವನ್ನು ಸ್ವೀಕರಿಸಿ ಆತನ ಕೋರಿಕೆಯಂತೆ ಗಂಗೆಯ ತಟದಲ್ಲಿ ಉಳಿಯುತ್ತಾರೆ. ಮರುದಿನ ಗಂಗಾನದಿ ದಾಟುವ ಸಲುವಾಗಿ ಗುಹನು ದೋಣಿಯನ್ನು ಸಿದ್ಧ ಪಡಿಸುತ್ತಾನೆ. ಶ್ರೀರಾಮನು ಪ್ರಜಾಜನರಿಗೆ ಸಾಂತ್ವನ ಹೇಳಿ ಅಯೋಧ್ಯೆಗೆ ಮರಳುವಂತೆ ಹೇಳುತ್ತಾನೆ. ತನ್ನ ಜನ್ಮಭೂಮಿಯ ಧೂಳನ್ನು ಹಣೆಗೊತ್ತಿ ಪತ್ನಿ ಹಾಗೂ ಅನುಜನೊಂದಿಗೆ ಗಂಗಾನದಿಯನ್ನು ದಾಟುತ್ತಾನೆ. ಗಂಗಾ ಹಾಗೂ ಯಮುನೆಯ ಸಂಗಮದ ಬಳಿ ಇರುವ ಭಾರದ್ವಾಜ ಮುನಿಗಳ ಆಶ್ರಮಕ್ಕೆ ಭೇಟಿಕೊಟ್ಟು ವಾಸಕ್ಕೆ ಯೋಗ್ಯವಾದ ಒಂದು ಸ್ಥಳವನ್ನು ಸೂಚಿಸಬೇಕಾಗಿ ಕೇಳಿಕೊಳ್ಳುತ್ತಾರೆ. ಅತ್ಯಂತ ಸುಂದರವಾಗಿರುವ ಚಿತ್ರಕೂಟವು ಯೋಗ್ಯವಾದ ಸ್ಥಳವೆಂದು ಮುನಿವರ್ಯರು ಸಲಹೆ ನೀಡುತ್ತಾರೆ. ಮುನಿ ಭಾರದ್ವಾಜರ ಸಲಹೆಯಂತೆ ರಾಮ-ಲಕ್ಷ್ಮಣ ಸೀತಾದಿಗಳು ಚಿತ್ರಕೂಟಕ್ಕೆ ತೆರಳುತ್ತಾರೆ.
ಅಯೋಧ್ಯೆಗೆ ಮರಳಿದ ಸುಮಂತ್ರನು ರಾಮನ ಸಂದೇಶವನ್ನು ದು:ಖತಪ್ತನಾದ ದಶರಥನಿಗೂ, ಮೂವರು ರಾಣಿಯರಿಗೂ ತಿಳಿಸುತ್ತಾನೆ. ರಾಮನನ್ನು ತನ್ನ ಪ್ರಾಣಕ್ಕಿಂತಲೂ ಮಿಗಿಲಾಗಿ ಪ್ರೀತಿಸುವ ದಶರಥನಿಗೆ ಆತನ ಅಗಲಿಕೆಯನ್ನು ಸಹಿಸುವುದು ಸಾಧ್ಯವಾಗಲಿಲ್ಲ. ಶ್ರವಣ ಕುಮಾರನ ಅಂಧ ಮಾತಾಪಿತರ ಶಾಪದ ಪರಿಣಾಮವಾಗಿ ಪುತ್ರವಿಯೋಗ ಸಹಿಸಲಾರದೆ ದಶರಥನ ಪ್ರಾಣಪಕ್ಷಿ ಹಾರಿ ಹೋಗುತ್ತದೆ. ಕೇಕೇಯ ದೇಶಕ್ಕೆ ಹೋಗಿದ್ದ ಭರತ, ಶತೃಘ್ನರನ್ನು ಕುಲಗುರು ವಶಿಷ್ಠರು ಅಯೋಧ್ಯೆಗೆ ಕರೆಸುತ್ತಾರೆ. ರಾಜೋಚಿತವಾಗಿ ದಶರಥನ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುತ್ತದೆ. ರಾಮನ ಸ್ಥಾನವನ್ನು ಅಲಂಕರಿಸಲು ಇಚ್ಚಿಸದ ಭರತನು ಶ್ರೀರಾಮನನ್ನು ಕರೆತರಲು ಕಾಡಿಗೆ ತೆರಳುವುದಾಗಿ ಹೇಳುತ್ತಾನೆ. ಭರತನ ಭ್ರಾತೃಪ್ರೇಮವನ್ನು ಅಯೋಧ್ಯೆಗೆ ಅಯೋಧ್ಯೆಯೇ ಕೊಂಡಾಡುತ್ತದೆ. ಶ್ರೀರಾಮನು ಗುಹನ ಆಧಿತ್ಯವನ್ನು ಸ್ವೀಕರಿಸಿದ್ದು, ಗಂಗಾನದಿಯನ್ನು ದಾಟಿದ್ದು, ಭಾರದ್ವಾಜ ಮುನಿಗಳ ದರ್ಶನ ಪಡೆದ ವಿಷಯಾದಿಗಳನ್ನು ಗುಹನ ಮೂಲಕ ಭರತನು ತಿಳಿದುಕೊಳ್ಳುತ್ತಾನೆ. ಭಾರದ್ವಾಜರ ಆಥಿತ್ಯ ಸ್ವೀಕರಿಸಿದ ಭರತನು ಚಿತ್ರಕೂಟದೆಡೆಗೆ ಪ್ರಯಾಣ ಬೆಳೆಸುತ್ತಾನೆ.
ತನ್ನನ್ನು ಅರಸಿಕೊಂಡು ಬಂದ ಭರತನನ್ನು ನೋಡಿ ಶ್ರೀರಾಮನು ಆತನನ್ನು ಆಲಂಗಿಸಿ ಆನಂದಾಶ್ರುಗಳನ್ನು ಸುರಿಸುತ್ತಾನೆ. ಜೊತೆಗೆ ದಶರಥನ ಮರಣ ವಾರ್ತೆಯನ್ನು ಕೇಳಿ ದುಃಖತಪ್ತನಾಗುತ್ತಾನೆ. ಭರತನು ಪರಿ ಪರಿಯಾಗಿ ವಿನಂತಿಸಿದರೂ ಶ್ರೀರಾಮ ತನ್ನ ಅಚಲವಾದ ನಿರ್ದಾರದಿಂದ ಹಿಂದೆ ಸರಿಯಲೊಲ್ಲ. ಅಯೋಧ್ಯೆಯ ಸಿಂಹಾಸನವೇರಲು ಬಯಸದ ಭರತನು ರಾಮನಂತೆ ವನವಾಸಿ ಜೀವನ ನಡೆಸುವ ನಿರ್ಧಾರವನ್ನು ಕೈಗೊಳ್ಳುತ್ತಾನೆ.
ಅದರಂತೆ ನಾರುಮಡಿಯುಟ್ಟು, ದರ್ಭೆಯ ಮೇಲೆ ಪವಡಿಸುವ, ಕಂದ ಮೂಲಾದಿಗಳನ್ನು ತಿನ್ನವ ಮೂಲಕ ರಾಜ ಭೋಗವನ್ನು ತ್ಯಜಿಸುತ್ತಾನೆ. ಕೊನೆ ಪಕ್ಷ ರಾಮ ಮರಳದಿದ್ದರೆ ಆತನ ಪಾದುಕೆಯಾದರೂ ಕೊಡಬೇಕೆಂದು ಪ್ರಾರ್ಥಿಸುತ್ತಾನೆ. ಅಯೋಧ್ಯೆಯ ಹೊರಗೆ ನಂದಿಗ್ರಾಮದಲ್ಲಿ ಶ್ರೀರಾಮನ ಪಾದುಕೆಗಳನ್ನಿಟ್ಟು ರಾಜ್ಯಭಾರ ಮಾಡುವ ತನ್ನಿಚ್ಛೆಯನ್ನು ತಿಳಿಸುತ್ತಾನೆ. ಭರತನ ಭಾತೃಪ್ರೇಮಕ್ಕೆ ಮನಸೋತ ರಾಮನು ಆತನಿಗೆ ತನ್ನ ಪಾದುಕೆಗಳನ್ನು ನೀಡುತ್ತಾನೆ. ಜೊತೆಗೆ ರಾಜನೀತಿಯ ಅತ್ಯಮೂಲ್ಯ ಪಾಠವನ್ನು ತಿಳಿಸುತ್ತಾನೆ. ರಾಮನ ಪಾದುಕೆಗಳನ್ನು ತಲೆಯ ಮೇಲೆ ಹೊತ್ತುಕೊಂಡು ನಂದೀಗ್ರಾಮಕ್ಕೆ ಭರತನು ಮರಳುತ್ತಾನೆ.
ಶಾಂತವಾಗಿದ್ದ ಚಿತ್ರಕೂಟದ ವಾತಾವರಣ ಜನರ ಆಗಮನದಿಂದ ಅಶಾಂತವಾಗಿದ್ದು ಶ್ರೀರಾಮನ ವಾಸಸ್ಥಾನದ ಬಗ್ಗೆ ಜನರಿಗೆ ತಿಳಿದು ಮುಂದೆ ಅದು ತಪಸ್ವಿಗಳಿಗೂ, ಮುನಿಗಳಿಗೂ ತೊಂದರೆಯಾಗುವ ಸಾಧ್ಯತೆ ಇತ್ತು. ಇದನ್ನರಿತ ರಾಮಾದಿಗಳು ಚಿತ್ರಕೂಟವನ್ನು ತೊರೆದು ಮುಂದೆ ಸಾಗುವ ನಿರ್ಧಾರ ಮಾಡುತ್ತಾರೆ. ಅರಣ್ಯದಲ್ಲಿ ಅತ್ರಿ ಮುನಿಗಳ ಆಶ್ರಮಕ್ಕೆ ಭೇಟಿ ಕೊಡುತ್ತಾರೆ. ಅತ್ರಿ-ಅನಸೂಯರ ಆಥಿತ್ಯವನ್ನು ಸ್ವೀಕರಿಸುತ್ತಾರೆ. ಮಾತೆ ಅನಸೂಯೆಯು ಸೀತೆಗೆ ಪತಿವೃತಾ ಧರ್ಮದ ಮಹತ್ವವನ್ನು ತಿಳಿಸುತ್ತಾರೆ ಜೊತೆಗೆ ಬಗೆ ಬಗೆಯ ಆಭರಣಗಳನ್ನೂ, ಪರಿಮಳ ದ್ರವ್ಯಗಳನ್ನೂ, ಎಂದೂ ಮಲಿನವಾಗದೇ ಇರುವ ವಸ್ತ್ರಗಳನ್ನೂ, ಬಾಡದೇ ಇರುವ ಹೂವಿನಹಾರವನ್ನು ಪ್ರೀತಿಯಿಂದ ಉಡುಗೊರೆಯಾಗಿ ಕೊಡುತ್ತಾರೆ. ಅತ್ರಿ ಮುನಿಗಳ ಸಲಹೆಯಂತೆ ಗೋದಾವರಿಯ ತಟದಲ್ಲಿರುವ ಪಂಚವಟಿಯ ಕಡೆಗೆ ಪ್ರಯಾಣ ಬೆಳೆಸುತ್ತಾರೆ.
1 comments:
Hi,
Good article written with shortly and collected good quality photos,
keep on write, good luck
Post a Comment