ಒಂದು ದಶಕದ ಬಳಿಕವೂ ದೇಶಕ್ಕಾಗಿ ಹೋರಾಡಿದ, ಹೋರಾಡಿ ಬಲಿದಾನ ಮಾಡಿದ ರಾಜ್ಯದ ಸುಮಾರು ಹದಿನೈದು ಯೋಧರನ್ನು ರಾಜ್ಯ ಸರಕಾರ ನೆನೆಸಿಕೊಂಡು ಸಹಾಯ ಹಸ್ತವನ್ನು ಚಾಚಿದ್ದು ತುಂಬಾ ಸಂತೋಷದ ವಿಷಯ. ವಿಜಯ ದಿವಸದ ಮರುದಿನವೇ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಕಾರ್ಗಿಲ್ ಯುದ್ಧದಲ್ಲಿ ಮಡಿದ ಹಾಗೂ ಗಾಯಗೊಂಡ ಯೋಧರ ಕುಟುಂಬಗಳಿಗೆ ತಲಾ 5 ಲಕ್ಷ ಹಾಗೂ 1 ಲಕ್ಷ ರುಪಾಯಿಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಜೊತೆಗೆ ಸರಕಾರ ಆ ಯೋಧರ ಮಕ್ಕಳ ವಿದ್ಯಾಭ್ಯಾಸದ ಭಾರವನ್ನು ಹೊರುವುದಾಗಿಯೂ ಭರವಸೆಯನ್ನು ನೀಡಿದ್ದಾರೆ. ನಿಜವಾಗ್ಲೂ ಸರಕಾರದ ನಿಲುವು ಶ್ಲಾಘನೀಯ. “ಇವನ್ಯಾರೋ ಯೆಡ್ಡಿಯನ್ನು, ಬಿಜೆಪಿ ಸರಕಾರವನ್ನು ಹೊಗಳ್ತಾ ಇದ್ದಾನೆ. ಬಹುಶಃ ಬಿಜೆಪಿಯವನಾಗಿರಬೇಕು” ಅಂತ ನೀವೇನಾದ್ರು ತಿಳ್ಕೊಂಡ್ರೆ ತಪ್ಪು ನಂದಲ್ಲ. ನಾನು ಬಿಜೆಪಿಯವನೂ ಅಲ್ಲ, ಕಾಂಗ್ರೆಸಿಗನೂ ಅಲ್ಲ ಒಳ್ಳೆಯ ಕೆಲಸವೊಂದನ್ನು ಸಮರ್ಥಿಸುತ್ತಿದ್ದೇನೆ ಅಷ್ಟೆ.
ಸಾಮಾನ್ಯವಾಗಿ ಸೈನ್ಯ ಸೇರುವವರು ಎರಡು ವಿಧದ ಜನರು. ಮೊದಲನೆಯ ವಿಧದಲ್ಲಿರುವ ಜನ ನನ್ನ ಗೆಳೆಯ ಹೃಷಿಯಂತವರು. ಸೈನ್ಯ ಸೇರಬೇಕೆಂಬ ಆಸೆ, ಛಲ ಎರಡೂ ಇರುತ್ತದೆ. ಸೇನೆಯ ಸಮವಸ್ತ್ರ ಧರಿಸಬೇಕೆಂಬ ಹೊಂಗಸನ್ನು ಹೊತ್ತು ದಿನ-ರಾತ್ರಿ ಅದಕ್ಕಾಗಿ ಕಷ್ಟ ಪಡುತ್ತಾರೆ (ಅಂದ ಹಾಗೆ ಹೃಷಿ ಈಗ ಭಾರತೀಯ ನೌಕಾ ಸೇನೆಯಲ್ಲಿದ್ದಾನೆ). ವೃದ್ಧ ತಂದೆ-ತಾಯಿಯ ಹೆಗಲಾಗುವ ಆಸೆಯಿಂದ, ಕುಟುಂಬ ಘೋಷಣೆಯ ಸಲುವಾಗಿ ಸೈನ್ಯ ಸೇರುವವರು ಎರಡನೇ ವಿಧದ ಜನರು. ಹಾಗಂತ ಇವರು ಮೊದಲನೇ ವಿಧದ ಜನಕ್ಕಿಂತ ಕಡಿಮೆ ಸಾಮರ್ಥ್ಯದವರಲ್ಲ, ಸ್ವಾರ್ಥಿಗಳೂ ಅಲ್ಲ. ನದಿಯ ಎರಡು ಕವಲುಗಳು ಸಮುದ್ರವನ್ನು ಸೇರುವ ಹಾಗೆ ಈ ಎರಡು ವಿಧದ ಜನರು ಸೇನೆಯನ್ನು ಸೇರುತ್ತಾರೆ. ಹಾದಿ ಯಾವುದಾದರೇನಂತೆ ಗುರಿ ಮಾತ್ರ ಭಾರತೀಯ ಸೇನೆ. ಉದ್ದೇಶ ದೇಶರಕ್ಷಣೆ.
ಕರ್ನಾಟಕದಿಂದ ಸೇನೆಯನ್ನು ಸೇರುವ ಬಹುತೇಕ ಜನರು ಕೊಡಗಿನವರು ಹಾಗೂ ಉತ್ತರ ಕರ್ನಾಟಕದ ಬಳ್ಳಾರಿ, ಬೀದರ್, ಗುಲ್ಬರ್ಗಾ, ಬಿಜಾಪುರ, ಬೆಳಗಾವಿ ಜಿಲ್ಲೆಯವರು. ಕೊಡವರು ಮೂಲತಃ ಸೈನಿಕರೇ. ಸೈನ್ಯಕ್ಕೆ ಸೇರುವುದು ಒಂದು ಹೆಮ್ಮೆಯ ವಿಷಯ ಅವರಿಗೆ. ಉತ್ತರ ಕರ್ನಾಟಕದಲ್ಲಿ ಜೀವನ ಮಟ್ಟ ಸ್ವಲ್ಪ ಕಷ್ಟ. ಹಾಗಂತ ಅವರ ಬಳಿ ಏನೂ ಇಲ್ಲ ಅಂತ ಹೇಳುತ್ತಿಲ್ಲ. ಎಕರೆ ಗಟ್ಟಲೆ ಕೃಷಿ ಭೂಮಿ ಈ ರೈತಾಪಿ ಜನರ ಬಳಿ ಇದೆ. ಆದ್ರೆ ಮಳೆಯ ಅಭಾವವೋ, ಇನ್ಯಾವುದೋ ಕಾರಣಗಳಿಂದ ಚೆನ್ನಾಗಿ ಬೆಳೆ ಕೈಗೆ ಬರುವುದೇ ಇಲ್ಲ. ‘ಕೃಷಿತೋ ದುರ್ಭಿಕ್ಷಂ ನಾಸ್ತಿ’ ಎಂಬ ಮಾತು ಉತ್ತರ ಕರ್ನಾಟಕದ ರೈತರ ಪಾಲಿಗೆ ‘ಕೃಷಿತೋ ದುರ್ಭಿಕ್ಷಂ ಜಾಸ್ತಿ’ ಆಗಿದೆ. (ಇದು ಉತ್ತರ ಕರ್ನಾಟಕದ ಮಾತ್ರವಲ್ಲ ಎಲ್ಲಾ ಕೃಷಿಕರ ಪಾಡು ಅಷ್ಟೆ.) ಬಹುಶಃ ಇದೇ ಕಾರಣಕ್ಕೆ ಬಹಳಷ್ಟು ಉತ್ತರ ಕರ್ನಾಟಕದ ರೈತಾಪಿ ಜನರು, ಕಾರ್ಮಿಕರು ಬೆಂಗಳೂರಿಗೆ ಗುಳೇ ಹೊರಡುತ್ತಾರೆ. ಬೆಂಗಳೂರು ಅವರಿಗೆ ದುಬಾಯಿ, ಅಮೇರಿಕಾ ಇದ್ದ ಹಾಗೆ. ದಿನವಿಡೀ ಮೈ ಮುರಿದು ದುಡಿದು ತಿಂಗಳ ಕೊನೆಗೆ ಮನೆಗೆ ಹಣ ಕಳುಹಿಸಿ ಕೃತಾರ್ಥರಾಗುತ್ತಾರೆ. ಇಂತಹ ಅಸಂಖ್ಯಾತ ಕುಟುಂಬಗಳಿಗೆ ಸೇನೆಯೇ ಕಾಮಧೇನು. ಮನೆ ಮಗ ಸೈನ್ಯ ಸೇರಿದ್ರೆ ಹೆಮ್ಮೆಯಿಂದ ‘ಮಗ ಮಿಲಿಟ್ರಿನಾಗೆ ಇದಾನ್ರೀ’ ಅಂತ ಹೇಳಿಕೊಳ್ಳುತ್ತಾರೆ. ಹೀಗಿದ್ದಾಗ ದೇಶಕ್ಕಾಗಿ ಹೋರಾಡುತ್ತಾ ಏನಾದರೂ ಅನಾಹುತಗಳಾದಲ್ಲಿ ಕುಟುಂಬಕ್ಕೆ ದಿಕ್ಕೇ ಇಲ್ಲದಂತಾಗುತ್ತದೆ.
ಧೋನಿ, ಯುವರಾಜ್, ಇರ್ಫಾನ್, ಜಹೀರ್ ಮುಂತಾದ ಕ್ರಿಕೆಟಿಗರು ಪಾಕಿಸ್ಥಾನದ ವಿರುದ್ಧ ಸೆಂಚುರಿ ಬಾರಿಸಿದರೆ, ಐದಾರು ವಿಕೆಟ್ ಕಿತ್ತರೆ ಅಥವಾ ಯಾವುದಾದರೂ ಮುಖ್ಯವಾದ ಟೂರ್ನಿ ಗೆದ್ದರೆ ಸೈಟು, ಲಕ್ಷಾಂತರ ರುಪಾಯಿಗಳು, ಮನೆ ಅಂತ ಏನೇನೋ ಕೊಡುತ್ತಾರೆ. ಮೊದಲೇ ಲಕ್ಷಾಧೀಶ, ಕೋಟ್ಯಾಧೀಶ ಕ್ರಿಕೆಟಿಗರ ಮೇಲೆ ಅನಾವಶ್ಯಕವಾಗಿ ದುಡ್ಡು ಸುರಿಸುತ್ತಾರೆ. ಆದ್ರೆ ಯುದ್ಧದಲ್ಲಿ ಗತಿಸಿ ಹೋದ ಯೋಧನ ಬಗ್ಗೆ ಯಾರಿಗೂ ಕಾಳಜಿ ಇರುವುದಿಲ್ಲ. ಒಂದೆರಡು ಮೆಡಲುಗಳನ್ನು ಕೊಟ್ಟು ಗೌರವಿಸಿದ್ರೆ ಸಾಕೆ? ಅವನ ಪರಿವಾರದ ಹೊಟ್ಟೆ ತುಂಬಿಸುವುದು ಬೇಡವೇ? ಅವನನ್ನೇ ನಂಬಿ ಬದುಕುವ ವೃದ್ಧ ತಂದೆ-ತಾಯಿ, ಮಡದಿ, ಮಕ್ಕಳು, ಬರೇ ಮನೆಯ ಸೂರನ್ನು ನೋಡ್ತಾ ನಿಟ್ಟುಸಿರು ಬಿಡಬೇಕಷ್ಟೆ. ಯೋಧನೊಬ್ಬ ಮಡಿದಾಗ ಅತ್ಯಪೂರ್ವ ಸೈನ್ಯ ಸತ್ಕಾರವೇನೋ ಸಿಗುತ್ತದೆ. ತ್ರಿವರ್ಣ ಹೊದಿಸಿದ ದೇಹ, ಸೇನಾವಾದ್ಯಗಳ, ಘೋಷ, ಇಪ್ಪತ್ತೊಂದು ತೋಪಿನ ಸಲಾಮು ಎಲ್ಲವೂ. ಆದರೆ ತೋಪುಗಳ ಸದ್ದು ಕರಗುತ್ತಿದ್ದಂತೆ ಯೋಧನ ನೆನಪುಗಳು ಸ್ಮೃತಿ ಪಟಲದಿಂದ ಮಾಸುತ್ತವೆ.
ಅಂಥದ್ದರಲ್ಲಿ ಯೆಡ್ಡಿ ಸರಕಾರ ಈ ರೀತಿ ಯೋಧರ ಸಹಾಯಕ್ಕೆ ಮುಂದಾಗಿದ್ದು ಅಭಿನಂದನೀಯವೇ ಸರಿ. ಇದು ಬರೀ ಬಾಯಿಮಾತಿನ ಘೋಷಣೆಯಾಗದೆ ಆಚರಣೆಗೆ ಬರಲಿ. ಯೋಧರೆಲ್ಲರ ಕುಟುಂಬಕ್ಕೆ ಸರಕಾರದ ಸರ್ವ ಸವಲತ್ತುಗಳೂ, ಸಹಾಯಗಳೂ ಲಭಿಸಲಿ.
ವಿ.ಸೂ: ನಾನು ಯಾವುದೇ ಪಕ್ಷದ ವಕ್ತಾರನೂ ಅಲ್ಲ, ಬೆಂಬಲಿಗನೂ ಅಲ್ಲ. ಜವಾಬ್ದಾರಿಯುತ ನಾಗರಿಕನಂತು ಅಲ್ಲವೇ ಅಲ್ಲ. ಯಾಕಂದ್ರೆ ನಾನು ಈ ವರೆಗೆ ಮತವನ್ನೇ ಚಲಾಯಿಸಿಲ್ಲ.
0 comments:
Post a Comment