ಒಬ್ಬ ಪಾಶ್ಚಿಮಾತ್ಯ ಪ್ರವಾಸಿಗ ಭಾರತಕ್ಕೆ ಭೇಟಿ ಕೊಡ್ತಾನೆ. ಸದ್ಯಕ್ಕೆ ಅಮೇರಿಕಾದವ ಅಂತ ಅಂದುಕೊಳ್ಳುವ. ಸುಮಾರು ಮೂರು ತಿಂಗಳ ಕಾಲ ಭಾರತ ಪ್ರವಾಸ ಕೈಕೊಳ್ಳುತ್ತಾನೆ. ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ, ಗುಜರಾತಿನಿಂದ ಮಣಿಪುರದ ತನಕ ಕಾಣಿಸುವ ಪ್ರತಿಯೊಂದು ಪ್ರೇಕ್ಷಣೀಯ ಸ್ಥಳಗಳನ್ನೂ, ಸ್ಮಾರಕಗಳನ್ನೂ ವೀಕ್ಷಿಸುತ್ತಾನೆ. ಕೊನೆಗೊಮ್ಮೆ ತನ್ನ ದೇಶಕ್ಕೆ ಮರಳುತ್ತಾನೆ. ಸುಮಾರು ತಿಂಗಳುಗಳ ನಂತರ ಭೇಟಿಯಾದ ಗೆಳೆಯನೊಬ್ಬ ಪ್ರವಾಸಿಗನ ಅನುಭವಗಳ ಬಗ್ಗೆ ಕೇಳ್ತಾನೆ. ಆಗ ಅಮೇರಿಕಾದ ಪ್ರವಾಸಿಗ ಹೇಳ್ತಾನೆ ‘ಭಾರತ ಸಕತ್ತಾಗಿದೆ. ಪ್ರವಾಸ ಅತ್ಯಂತ ಸಂತೋಷದಾಯಕವಾಗಿತ್ತು. ಜಗತ್ಪ್ರಸಿದ್ಧ ತಾಜ್ ಮಹಲ್ ನೋಡಿದೆ, ದೆಹಲಿಯ ಮೊಘಲ್ ಸ್ಮಾರಕಗಳಿಗೆ ಭೇಟಿಕೊಟ್ಟೆ. ಮೈ ಚಾಚಿ ಮಲಗಿರುವ ಸಹ್ಯಾದ್ರಿಯ ಸೌಂದರ್ಯ ಬಣ್ಣಿಲಸಾಧ್ಯ. ದಕ್ಷಿಣದ ದೇವಾಲಯಗಳು ಅತ್ಯಪೂರ್ವ. ಆದರೆ. . .’ ಮಾತು ಮುಗಿಸುತ್ತಿದ್ದಂತೆ ಆತನ ಗೆಳೆಯನ ಹುಬ್ಬುಗಳು ಪ್ರಶ್ನಿಸುವಂತೆ ಮೇಲೇರಿದ್ದವು. ಗೆಳೆಯನ ಮನದ ಇಂಗಿತ ಅರಿತ ಪ್ರವಾಸಿಗ ಮುಂದುವರಿಸುತ್ತಾ ಹೇಳುತ್ತಾನೆ ‘ಒಬ್ಬನೇ ಭಾರತೀಯನ್ನು ನೋಡಲಿಲ್ಲ!!!’ ಗೆಳೆಯ ಅವಕ್ಕಾಗಿ ತೆರೆದ ಬಾಯಿಯೊಂದಿಗೆ ಪ್ರವಾಸಿಗನ್ನು ದಿಟ್ಟಿಸುತ್ತಾನೆ. ಮರುಕ್ಷಣ ಸಾವರಿಸಿಕೊಂಡು ಕೇಳ್ತಾನೆ ‘ಏನು ತಮಾಷೆಯ ಮಾತು ಆಡ್ತಿದ್ದೀಯಾ? ನೀನು ಹೋಗಿದ್ದು ಭಾರತಕ್ಕೆ. ಮತ್ತೆ ಒಬ್ಬನೇ ಒಬ್ಬ ಭಾರತೀಯನ್ನು ನೋಡಿಲ್ವಾ???’ ಅದಕ್ಕೆ ಪ್ರವಾಸಿಗ ಹೇಳ್ತಾನೆ ‘ಹೌದು. ಭಾರತದ ಉದ್ದಗಲಗಳಲ್ಲಿ ಸಂಚರಿಸಿದ್ದು ನಿಜ. ಆದ್ರೆ ಒಬ್ಬನೇ ಒಬ್ಬ ಭಾರತೀಯನ್ನು ನೋಡಿಲ್ಲ. ನಾನು ಬಿಹಾರಿಯನ್ನು ನೋಡಿದೆ, ಗುಜರಾತಿಯನ್ನು ನೋಡಿದೆ, ಮರಾಠಿಗನನ್ನು ನೋಡಿದೆ, ಕನ್ನಡಿಗ, ತಮಿಳನನ್ನೂ ನೋಡಿದೆ ಆದ್ರೆ ಭಾರತೀಯ ಮಾತ್ರ ಕಾಣಿಸಲಿಲ್ಲ. ನಾನು ಹಿಂದುವನ್ನು ನೋಡಿದೆ, ಮುಸಲ್ಮಾನನನ್ನು ನೋಡಿದೆ, ಕ್ರೈಸ್ತ, ಸಿಖ್, ಬೌದ್ಧ, ಜೈನರನ್ನು ನೋಡಿದೆ ಆದ್ರೂ ಭಾರತೀಯ ಕಾಣಿಸಲೇ ಇಲ್ಲ. ನಾನು ಬ್ರಾಹ್ಮಣನನ್ನು ನೋಡಿದೆ, ರಜಪೂತನನ್ನು ನೋಡಿದೆ, ವಿಶ್ವಕರ್ಮನನ್ನು ನೋಡಿದೆ, ಮಡಿವಾಳ, ಕುರುಬ, ಒಕ್ಕಲಿಗರನ್ನು ನೋಡಿದೆ ಆದ್ರೆ ಭಾರತೀಯ ಅಲ್ಲೂ ಕಾಣಿಸ್ಲೇ ಇಲ್ಲ.’ . . . ಇದು ನನ್ನ ಸಹಕರ್ಮಿಯೊಬ್ಬರಿಗೆ ಬಂದಿದ್ದ ಈಮೈಲು. ಫಾರ್ವರ್ಡ್ ಮೈಲುಗಳ ಹಾವಳಿ ಭಯಂಕರ ಇದೆ. ಅಂಥದ್ರಲ್ಲಿ ಇಂತಹ ಒಂದೆರಡು ಒಳ್ಳೆಯ ಈ-ಮೇಲುಗಳು ಬರುತ್ತಿರುತ್ತವೆ. ಇವರು ಪಕ್ಕದಲ್ಲೇ ಕುಳಿತುಕೊಳ್ಳುವುದರಿಂದ ಅಲ್ಲಿಂದಲೇ ಓದಿ ಹೇಳಿದರು. ನಾನು ಕೇಳಿ ಸುಮ್ಮನೆ ಮುಗುಳ್ನಕ್ಕು ಸುಮ್ಮನಾದೆ.
ಆದ್ರೆ ಮನಸ್ಸಿನ ಎಲ್ಲೋ ಒಂದು ಮೂಲೆಯಲ್ಲಿ ಆ ಈ-ಮೇಲಿನ ವಿಷಯ ಕೊರೆಯುತ್ತಿತ್ತು. ಮನಸ್ಸು ಗಹನವಾದ ಯೋಚನೆಯಲ್ಲಿ ಮುಳುಗಿತ್ತು. ನಮ್ಮ ದೃಷ್ಟಿಕೋನದ ಬಗ್ಗೆ, ಯೋಚನಾ ವೈಖರಿಯ ಬಗ್ಗೆ ನಮಗೇ ನಾಚಿಕೆಯಾಗಬೇಕೆನಿಸಿತು. ಮೇಲಿನ ವಿಷಯ ಎಷ್ಟು ನಿಜ ಅಲ್ವಾ? ನಾವು ಪ್ರಾಂತ್ಯ, ರಾಜ್ಯ, ಭಾಷೆ, ಜಾತಿ-ಧರ್ಮಗಳ ಪರಿಧಿಗಳನ್ನು ಬಿಟ್ಟು ಹೊರಬರುವುದೇ ಇಲ್ಲ. ‘ರಾಷ್ಟ್ರೀಯತೆ’ಯ ಪರಿಕಲ್ಪನೆಯೇ ನಮ್ಮಲ್ಲಿ ಇಲ್ಲ. ವೈವಿಧ್ಯತೆಯಲ್ಲಿ ಏಕತೆ, ಒಗ್ಗಟ್ಟಿನಲ್ಲಿ ಬಲ ಎಂಬಿತ್ಯಾದಿ ಮಾತುಗಳು ಕೇವಲ ಪುಸ್ತಕಗಳಿಗೆ, ಭಾಷಣಗಳಿಗೆ ಸೀಮಿತವಾಗಿದೆ. ವರ್ಷಕ್ಕೊಮ್ಮೆ ಬರುವ ಆಗಷ್ಟ್ 15, ಜನವರಿ 26 ಕ್ಕೆ ಧ್ವಜ ಹಾರಿಸಿ, ಸಿಹಿ ತಿಂದು, ರಜಾದಿನವನ್ನು ಗಡದ್ದಾಗಿ ಕಳೆದು ಭಾರತ್ ಮಾತಾ ಕೀ ಜೈ ಅಂತ ಹೇಳಿ ಕೈ ತೊಳೆದುಕೊಳ್ಳುತ್ತೇವೆ.
ಐಟಿ ಕಾಶಿಯಾಗಿರುವ ಬೆಂಗಳೂರಿಗೆ ಬರುತ್ತಿರುವ ಉತ್ತರ ಭಾರತೀಯರನ್ನು ನೋಡಿ ಕನ್ನಡಿಗ ಕಂಗಾಲಾಗಿ ಬೊಬ್ಬಿಡುತ್ತಿದ್ದಾನೆ. ಈ ನಾರ್ತ್ ಇಂಡಿಯನ್ಸ್ ಬಂದು ಬೆಂಗ್ಳೂರೇ ಹಾಳಾಗೋಯ್ತು ಅಂತ ಗೊಣಗಾಡುವುದು ಆತನಿಗೆ ಅಭ್ಯಾಸವಾಗಿ ಹೋಗಿದೆ. ನಾವೇ ಶ್ರೇಷ್ಠರು, ದಕ್ಷಿಣ ಭಾರತೀಯರು ದಡ್ಡರು ಎಂಬ ಭಾವನೆ ಉತ್ತರ ಭಾರತೀಯರಲ್ಲಿ ಮನೆಮಾಡಿದೆ ಅನ್ನೋದು ಅವರ ನಡವಳಿಕೆ, ಮಾತುಗಳಿಂದ ಸ್ಪಷ್ಟವಾಗುತ್ತದೆ. ಅವಕಾಶ ಸಿಕ್ಕಾಗೆಲ್ಲಾ ‘ಮದ್ರಾಸಿ’, ‘ಇಡಲಿ-ವಡಾ’ ಅಂತ ತಮಾಷೆ ಮಾಡ್ಲಿಕ್ಕೂ ಹಿಂಜರಿಯುವುದಿಲ್ಲ. ಆರ್ಯ-ದ್ರಾವಿಡ ಸಿದ್ಧಾಂತವನ್ನು ಇನ್ನೂ ಮುಷ್ಟಿಯಲ್ಲಿ ಹಿಡಿದು ಉತ್ತರ ಭಾರತೀಯರನ್ನು ದ್ವೇಷಿಸುವುದು ತಮಿಳರಿಗೆ ಹೊಸದಲ್ಲ. ಇದನ್ನೇ ನೆಪವಾಗಿಸಿ ಶ್ರೀ ರಾಮ ಯಾರು? ಸೇತುವೆ ಕಟ್ಟಲಿಕ್ಕೆ ಆತನೇನು ಇಂಜಿನಿಯರಾ? ಆತ ಯಾವ ಕಾಲೇಜಿನಿಂದ ಓದಿದ್ದು ಅಂತೆಲ್ಲಾ ಅಸಂಬದ್ದ ಪ್ರಶ್ನೆಗಳನ್ನು ಕೇಳುವ ತಮಿಳನ ಬಗ್ಗೆ ಅಳಬೇಕೋ ನಗಬೇಕೋ ತಿಳಿಯುತ್ತಿಲ್ಲ. ಏಮಂಡಿ, ಚೆಪ್ಪಂಡಿ ಅಂತ ಕೇವಲ ತನ್ನದೇ ಆದ ಗುಂಪು ಕಟ್ಟಿಕೊಳ್ಳುವ ತೆಲುಗ ಯಾರ ಜೊತೆಯೂ ಬೆರೆಯಲು ಬಯಸುವುದಿಲ್ಲ. ಕೆಲಸ ಹುಡುಕಿಕೊಂಡು ಬಂದ ಬಿಹಾರಿಗಳನ್ನು ಮರಾಠಿಗಳು ಮುಂಬೈಯ ಬೀದಿಯಲ್ಲಿ ಹಿಡಿದು ಬಡಿಯುತ್ತಿದ್ದಾರೆ. ಕಾಶ್ಮೀರಿ ಬೇಸತ್ತು ಪ್ರತ್ಯೇಕ ರಾಷ್ಟ್ರಕ್ಕಾಗಿ ಪ್ರತ್ಯೇಕತಾವಾದ ಹಾಡ್ತಾ ಇದ್ದಾನೆ. ಈಶಾನ್ಯ ಭಾರತದ ರಾಜ್ಯಗಳಂತೂ ಮುಖ್ಯವಾಹಿನಿಯಲ್ಲಿ ಇಲ್ಲವೇ ಇಲ್ಲ. ಭಾರತದ ಭೂಪಟ ನೋಡಿದಾಗಲೇ ಇವುಗಳ ಇರುವು ಗೊತ್ತಾಗುತ್ತದೆ. ಇದೆಲ್ಲರ ಜೊತೆಗೆ ಧಾರ್ಮಿಕ ಪ್ರತ್ಯೇಕತೆ ಬೇರೆ. ಎಲ್ಲಾ ಕಡೆ ಜಾತಿ ಬಹಳ ಮುಖ್ಯವಾಗುತ್ತದೆ. ಒಂದು ಅರ್ಜಿ ತುಂಬಿಸಬೇಕಾದ್ರೂ ಜಾತಿ-ಧರ್ಮ ನಮೂದಿಸಬೇಕು. ‘ನೀವು ಯಾವ ಜಾತಿ?’ ಅಂತ ಕೇಳಲಿಕ್ಕೆ ಜನ ಸ್ವಲ್ಪವೂ ಸಂಕೋಚ ತೋರಿಸುವುದಿಲ್ಲ. ಹಿಂದೂ, ಇಸ್ಲಾಂ, ಕ್ರೈಸ್ತ, ಸಿಖ್, ಬೌದ್ಧ, ಜೈನ ಮುಂತಾದವು ನಮ್ಮಲ್ಲಿರುವ ಪ್ರಮುಖ ಧರ್ಮಗಳು. ಈ ಪ್ರಮುಖ ಧರ್ಮಗಳಲ್ಲೂ ನೂರಾರು ಕವಲುಗಳು. ಹಿಂದೂ ಧರ್ಮವನ್ನೇ ಗಮನಿಸಿ. ಬ್ರಾಹ್ಮಣರು, ಒಕ್ಕಲಿಗರು, ರಜಪೂತರು, ಲಿಂಗಾಯತರು, ವಿಶ್ವಕರ್ಮರು, ಬಂಟರು ಅಂತ ಸಾವಿರಾರು ಉಪಜಾತಿಗಳು. ಇವುಗಳಲ್ಲಿ ಮತ್ತೆ ಹತ್ತು ಹಲವು ಗುಂಪುಗಳು. ಬ್ರಾಹ್ಮಣರಲ್ಲಿ ಎಷ್ಟೊಂದು ಬಗೆಯ ಬ್ರಾಹ್ಮಣರು? ಮಾಧ್ವರು, ಐಯ್ಯಂಗಾರ್, ಸಾರಸ್ವತರು, ಶಿವಳ್ಳಿ ಬ್ರಾಹ್ಮಣರು, ಕರಡಿ ಬ್ರಾಹ್ಮಣರು, ಸ್ಮಾರ್ಥರು ಹೀಗೆ ಇನ್ನೆಷ್ಟು ಬಗೆಯ ಬ್ರಾಹ್ಮಣರೋ? ಕೊನೆ ಪಕ್ಷ ದೇವರನ್ನೂ ಬಿಡಲಿಲ್ಲ. ಶೈವರಂತಲೋ, ವೈಷ್ಣವರಂತಲೋ, ಶಾಕ್ತ್ಯರಂತಲೋ, ಗಾಣಪತ್ಯರಂತಲೋ ಹಂಚಿ ಹೋಗಿದ್ದಾರೆ. ವೇದವ್ಯಾಸರೇನೋ ಕ್ಲಿಷ್ಟಕರವಾದ ವೇದಗಳು ಸುಲಭವಾಗಲಿ ಅಂತ ನಾಲ್ಕು ಭಾಗಗಳಾಗಿ ವಿಂಗಡಿಸಿದ್ದಾರೆ. ನಾವು ಅದರಲ್ಲೂ ಪ್ರತ್ಯೇಕತೆಯ ರಾಗ ಹಾಡಿದೆವು. ನಾವು ಯಜುರ್ವೇದವನ್ನು ಹಿಂಬಾಲಿಸುತ್ತೇವೆ, ನಾವು ಸಾಮವೇದವನ್ನು ಹಿಂಬಾಲಿಸುತ್ತೇವೆ, ನಾವು ಋಗ್ವೇದ… ಅಂತ ವೇದಗಳ ಹೆಸರಲ್ಲೂ ಪ್ರತ್ಯೇಕತೆಯನ್ನು ತೋರಿಸಿಕೊಂಡಿದ್ದೇವೆ. ಎಷ್ಟೊಂದು ವಿಪರೀತ ಅಂದ್ರೆ ತಿಮ್ಮಪ್ಪನಿಗೆ ‘U‘ ನಾಮ ಹಾಕ್ಬೇಕೋ, ‘V‘ ನಾಮ ಹಾಕ್ಬೇಕೋ ಅಂತ ಕೋರ್ಟ್ ಮೆಟ್ಟಲು ಹತ್ತಿದವರು ನಾವು!!!
ನನ್ನ ಗೆಳೆಯನೊಬ್ಬನನ್ನು ಕೇಳಿದ್ದೆ ನಿಂಗೆ ಹಿಸ್ಟ್ರಿ ಇಷ್ಟವಾ ಅಂತ. ಅದಕ್ಕಾತ ‘ಇಲ್ಲ ಮಾರಾಯ. ಹಿಸ್ಟ್ರಿ ಬಹಳ ಬೋರು. ಯಾರು ಯಾವ ರಾಜ್ಯ ಆಳಿದ್ರು, ಯಾರ್ಯಾರ ಮೇಲೆ ದಂಡೆತ್ತಿ ಹೋದ್ರು, ಎಷ್ಟು ಜನರನ್ನು ಮದುವೆಯಾದ್ರು, ಅವರ ಮಕ್ಳು ಯಾರ್ಯಾರು ಅಂತ ಬರೀ ಕುಯ್ತಾರೆ. ಗೋಲ್ಡ್ ಮೆಡಲ್ ಸಿಕ್ರೆ ಸಾಕು ಅಂತ ಓದುತ್ತಾ ಇದ್ದೆ’ ಅಂತ ಹೇಳಿ ಕಣ್ಣು ಮಿಟುಕಿಸಿದ್ದ. ಅಂದ ಹಾಗೆ ನಮ್ಮ ಗೆಳೆಯರ ಬಳಗದಲ್ಲಿ ‘ಗೋಲ್ಡ್ ಮೆಡಲ್’ ನ ಅರ್ಥವೇ ಬೇರೆ. ನೂರಕ್ಕೆ ಮೂವತ್ತೈದು ಸಿಕ್ರೆ ಅದೇ ನಮ್ಮ ಗೋಲ್ಡ್ ಮೆಡಲ್. ನನ್ನ ಪ್ರಕಾರ ಇತಿಹಾಸ ಓದುವುದು ಬರೇ ವಂಶಾವಳಿ ತಿಳಿದುಕೊಳ್ಳುವುದಕ್ಕಲ್ಲ. ಇತಿಹಾಸವನ್ನು ತಿಳಿದುಕೊಂಡು ಹಿಂದೆ ಮಾಡಿರುವ ತಪ್ಪುಗಳನ್ನು ಪುನರಾವರ್ತಿಸದೆ, ಒಳ್ಳೆಯ ಅಂಶಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸುವುದೇ ಆಗಿದೆ. ನಮ್ಮಲ್ಲಿ ಎಂಥೆಂಥ ರಾಜರಿದ್ದರು. ಆದ್ರೆ ಅವರಿಗೆ ತಮ್ಮ ರಾಜ್ಯ ಬಿಟ್ಟು ಬೇರೇನು ಕಾಣಿಸ್ತಿರಲಿಲ್ಲ. ಆ ಕಾಲದಲ್ಲೂ ರಾಷ್ಟ್ರದ ಪರಿಕಲ್ಪನೆಯೆಂಬುದು ಇರಲಿಲ್ಲ. ತಮ್ಮ-ತಮ್ಮ ಆಡಳಿತ ಪ್ರದೇಶಗಳೇ ಅವರ ಪಾಲಿನ ರಾಷ್ಟ್ರಗಳು. ಪರಕೀಯರು ಆಕ್ರಮಣ ಮಾಡಿದಾಗ್ಲೂ ಒಂದುಗೂಡಿ ವೈರಿಯನ್ನು ಎದುರಿಸಲಿಲ್ಲ. ಘೋರಿ, ಘಸ್ನಿಯಂತಹ ಪರಕೀಯರು ದೋಚುತ್ತಿದ್ದಾಗ ಜಯಚಂದನಂತಹ ಸ್ವಾರ್ಥಿಗಳು ಪೃಥ್ವಿರಾಜನಂತಹ ಸಾಹಸಿಗೆ ಸಾಥ್ ಕೊಡಲಿಲ್ಲ. ಬ್ರಿಟಿಷರಂತೂ ಬೆಣ್ಣೆಗಾಗಿ ಜಗಳವಾಡುವ ಬೆಕ್ಕುಗಳ ಮಧ್ಯೆ ಮಂಗನಂತಿದ್ದರು. ನಮ್ಮ ದೌರ್ಬಲ್ಯವನ್ನು ಚೆನ್ನಾಗಿ ತಿಳಿದುಕೊಡಿದ್ದರು. ಒಡೆದು ಆಳುವ ನೀತಿಯನ್ನು ಅನುಸರಿಸಿ ತಮ್ಮ ಕಾರ್ಯ ಸಾಧನೆ ಮಾಡಿದರು. ಜಾತಿ-ಧರ್ಮದ ಹೆಸರಲ್ಲೇ ಆಖಂಡ ಭಾರತ ಮೂರು ದೇಶಗಳಾಗಿ ಹಂಚಿಹೋಗಿಲ್ವೇ? ಇಷ್ಟಾದ್ರೂ ನಾವು ನಮ್ಮ ತಪ್ಪುಗಳನ್ನು ತಿದ್ದಿಕೊಂಡ ಹಾಗೆ ಕಾಣಿಸ್ತಿಲ್ಲ.
ಇದು ಹಲವು ವರ್ಷಗಳ ಹಳೆಯ ಮಾತು. ನಮ್ಮೂರಲ್ಲಿ ಒಬ್ಬ ಹೆಣ್ಣುಮಗಳಿದ್ದಳು. (ಈಗಲೂ ಇದ್ದಾಳೆನೋ ಆದ್ರೆ ಸರಿಯಾಗಿ ಗೊತ್ತಿಲ್ಲ.) ಗುಡ್ಡಕಾಡೆಲ್ಲಾ ಸುತ್ತಾಡಿ ಒಳ್ಳೆಯ ಬಳ್ಳಿಗಳನ್ನು ಹುಡುಕಿ ಬುಟ್ಟಿ ಹೆಣೆಯುವುದು ಅವಳ ಕೆಲಸವಾಗಿತ್ತು. ಅವಳ ಕೈಯ ನೈಪುಣ್ಯ ಯಾವುದೇ ಕಲೆಗಾರನಿಗಿಂತ ಕಡಿಮೆಯಿರಲಿಲ್ಲ. ಅವಳು ಮಾಡಿಕೊಟ್ಟ ಬುಟ್ಟಿಗಳು ವರ್ಷಗಳ ಕಾಲ ಸ್ವಲ್ಪವೂ ಹಾಳಾಗದೆ ಕೆಲಸಕ್ಕೆ ಬರುತ್ತಿದ್ದವು. ವಿಷಯ ಅದಲ್ಲ. ಮಧ್ಯಾಹ್ನದ ಸುಡುಬಿಸಿಲಿಗೆ ಬರ್ತಾ ಇದ್ದಳವಳು. ಮನೆಯಲ್ಲಿ ಊಟದ ಹೊತ್ತಿಗೆ ಯಾರೂ ಹಸಿದು ಹೋದದ್ದಿಲ್ಲ. ಈ ಹೆಣ್ಣುಮಗಳಿಗೆ ಊಟ ಕೊಟ್ರೆ ಅದನ್ನು ಗುಡ್ಡಕ್ಕೊಯ್ದು ಗೇರು ಮರದ ನೆರಳಲ್ಲಿ ಕುಳಿತು ತಿನ್ನುತ್ತಾ ಇದ್ದಳು. ಎಷ್ಟೇ ಹೇಳಿದ್ರೂ ಮನೆಯ ಹಜಾರದಲ್ಲೂ ಕುಳಿತುಕೊಳ್ಳುತ್ತಿರಲಿಲ್ಲ. ಅದಕ್ಕೆ ಕಾರಣ ಇಷ್ಟೆ ಅವಳು ಕೊರಗ ಪಂಗಡಕ್ಕೆ ಸೇರಿದವಳು. ಸಣ್ಣವರಿದ್ದಾಗ ಇದೆಲ್ಲಾ ಅರ್ಥವಾಗುತ್ತಿರಲಿಲ್ಲ. ಈಗ ನೆನೆಸಿಕೊಂಡಾಗಲೆಲ್ಲಾ ಬೇಜಾರಾಗುತ್ತೆ. ಅರ್ಥವಿಲ್ಲದ ಕೆಲವೊಂದು ಸಾಮಾಜಿಕ ಕಟ್ಟಳೆಗಳನ್ನು ಲಕ್ಷ್ಮಣರೇಖೆಯಂತೆ ಪಾಲಿಸುತ್ತಿದ್ದುದು, ಪಾಲಿಸುತ್ತಿರುವುದು ಬಹಳ ಬೇಸರದ ವಿಷಯವೇ ಸರಿ. ನನ್ನಜ್ಜಿ ಹಳೆಯ ತಲೆಮಾರಿಗೆ ಸೇರಿದ ಹೆಣ್ಣುಮಗಳು. ಸಹಜವಾಗಿಯೇ ಮನೆಯಲ್ಲಿ ಧರ್ಮ, ಸಂಪ್ರದಾಯ, ಕಟ್ಟಳೆ, ಆಚಾರಗಳೆಲ್ಲಾ ಇದ್ದವು. ಮನೆಯ ಹಿತ್ತಿಲು ದಾಟಿ ಎರಡು ಹೆಜ್ಜೆ ಹಾಕಿದರೆ ಒಂದು ಮನೆ ಇದೆ. ಆ ಮನೆ ಚೋಮು ಅನ್ನೋರದ್ದು. ಚೋಮುಗೆ ಮಕ್ಕಳೆಂದರೆ ತುಂಬಾ ಇಷ್ಟ. ಊರಿಗೆ ಹೋದಾಗಲೆಲ್ಲಾ ‘ದನಿಕುಲೇ ಬತ್ತರಾ’ ಅಂತ ಪ್ರೀತಿಯಿಂದ ಮಾತನಾಡಿಸುತ್ತಿದ್ದಳು. ಬಿಸು ಕಣಿಗೆ ಎಳೆಯ ಗೇರುಬೀಜದ ತಿರುಳು ತಂದುಕೊಡ್ತಾ ಇದ್ದಳು. ಆದ್ರೆ ನಾವು ಅವರ ಮನೆಗೆ ಹೋಗುವ ಹಾಗಿರಲಿಲ್ಲ. ಮುಟ್ಟುವ ಹಾಗಿರಲಿಲ್ಲ. ಇದು ನಾವು ತುಂಬಾ ಚಿಕ್ಕವರಿದ್ದಾಗಿನ ಮಾತು. ಈಗ ಮನೆಗೆ ಹೋದಾಗಲೆಲ್ಲಾ ಚೋಮು ಅದೇ ಪ್ರೀತಿಯೊಂದಿಗೆ ಬರ್ತಾಳೆ, ಜೊತೆಗೆ ತಲೆ ನೇವರಿಸಿ ಮುತ್ತನ್ನೂ ಇಕ್ಕುತ್ತಾಳೆ. ಅಜ್ಜಿ ಈಗ ಯಾವುದೇ ಕಟ್ಟಳೆಗಳನ್ನು ಹಾಕುವುದಿಲ್ಲ. ಮನಸ್ಸಲ್ಲಿ ಯಾವುದೇ ಹುಳುಕುಗಳಿಲ್ಲ. ಬದಲಾಗಿ ಚೋಮುವಿನ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ, ಪ್ರೀತಿಯಿದೆ. ಸಂಪ್ರದಾಯ, ಜಾತಿ-ಮತಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನೂ ಕೊಡುವುದಿಲ್ಲ. ಅಜ್ಜಿಯ ಯೋಚನಾ ವೈಖರಿ ಕೂಡಾ ಕಾಲಕ್ಕೆ ತಕ್ಕಂತೆ ಬದಲಾಗಿದೆ. ನಾನು ಅನ್ಯ ಜಾತಿಯ ಹುಡುಗಿಯನ್ನು ಮದುವೆ ಆಗ್ತೀನಿ ಅಂದಾಗ ಮೊದಲ ಬೆಂಬಲ ಸಿಕ್ಕಿದ್ದೇ ನನ್ನ ಅಜ್ಜಿಯಿಂದ. ಸಂಪ್ರದಾಯದಂಥ ಸಂಪ್ರದಾಯವನ್ನು ಮೈಗೂಡಿಸಿ ಬೆಳೆದ, ಬಾಳಿದ ನನ್ನ ಅಜ್ಜಮ್ಮನೇ ಇಷ್ಟೊಂದು ಬದಲಾಗಿರುವಾಗ ನಾವು ಯಾಕೆ ಬದಲಾಗಬಾರದು? ನಮ್ಮ ಯೋಚನಾ ಶೈಲಿ ಯಾಕೆ ಬದಲಾಗಬಾರದು? ಧರ್ಮ, ಸಂಸ್ಕೃತಿ ಬೇಕು ನಿಜ. ಆದ್ರೆ ಅದು ದೇಶಕ್ಕಿಂತ ದೊಡ್ದದಲ್ಲ.ಜಾತಿ-ಮತ, ಪ್ರಾಂತ್ಯ, ರಾಜ್ಯಗಳ ಸೀಮೆಗಳನ್ನು ದಾಟಿ ಸುಭದ್ರವಾದ ಭಾರತವನ್ನೇಕೆ ಕಟ್ಟಬಾರದು?
ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ವಂದೇ ಮಾತರಂ. . .
3 comments:
ಮನ ಮುಟ್ಟುವಂತಹ ಲೇಖನ ಕಣ್ರೀ!
ಆ ಜಾತಿ - ಈ ಜಾತಿ ಅನ್ನೋ ಗುಣ ನಮ್ಮಲ್ಲಿ ಅಪ್ಪಿಕೊಂಡಿರುವಾಗ, ಹೊರಗಿನವರು "ಭಾರತೀಯ"ನನ್ನು ಕಾಣೋದು ಕಷ್ಟವೇ. ಪಂಗಡ-ರಾಜ್ಯಗಳ ಬಿಟ್ಟು ನಾವು ಯೋಚಿಸೋದೇ ಇಲ್ಲ. ಇನ್ನೂ ಕುಲ ಜಾತಿ ವಿಚಾರಿಸದೇ ಒಂದು ಕಡ್ಡಿಯೂ ಮಿಸುಕದು! ಎಂಥಾ ವಿಪರ್ಯಾಸ ಅಲ್ವೇ?!
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು ಸತ್ಯ... ನಮ್ಮ ಮಧ್ಯೆ ಇರುವ ಜಾತಿ-ಧರ್ಮಗಳ ವೈಷಮ್ಯತೆ ಬಹಳ ಬೇಸರ ತರಿಸುತ್ತದೆ... ಯಾವಾಗ ನಾವು ಈ ಜಂಜಾಟದಿಂದ ಹೊರಗೆ ಬರುತ್ತೀವೋ ಗೊತ್ತಿಲ್ಲ...
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು ಸತ್ಯ... ನಮ್ಮ ಮಧ್ಯೆ ಇರುವ ಜಾತಿ-ಧರ್ಮಗಳ ವೈಷಮ್ಯತೆ ಬಹಳ ಬೇಸರ ತರಿಸುತ್ತದೆ... ಯಾವಾಗ ನಾವು ಈ ಜಂಜಾಟದಿಂದ ಹೊರಗೆ ಬರುತ್ತೀವೋ ಗೊತ್ತಿಲ್ಲ...
Post a Comment