Sunday, August 23, 2009

ವಕ್ರತುಂಡ ಮಹಾಕಾಯ . . .

ಆನೆಯ ಮುಖ, ದೊಡ್ಡ ಚಾಮರ ಕರ್ಣಗಳು, ಡೊಳ್ಳು ಹೊಟ್ಟೆ, ಕೈಯಲ್ಲೊಂದು ಮೋದಕ, ಪಕ್ಕದಲ್ಲೇ ಮೂಷಕ. ಯಾರಿಗೆ ತಾನೇ ಇಷ್ಟವಾಗೋದಿಲ್ಲ ಈ ರೂಪ? ಅಗ್ರಪೂಜೆಯ ಒಡೆಯನಾದ ಗಣನಾಯಕ ಅಂದ್ರೆ ಎಲ್ಲರಿಗೂ ಇಷ್ಟ, ಅವನ ಮೇಲೆ ಬಹಳ ಪ್ರೀತಿ. ಯಾವುದೇ ಶುಭ ಕಾರ್ಯವಿರಲಿ ವಿನಾಯಕನಿಗೆ ಪೂಜೆ ಸಲ್ಲಿಸದಿದ್ದರೆ ಮನಸ್ಸಿಗೆ ನೆಮ್ಮದಿ, ಕೆಲಸದಲ್ಲಿ ಜಯ ಸಿಗದೆಂಬ ಅಚಲವಾದ ನಂಬಿಕೆ ನಮ್ಮಲ್ಲಿ ಮನೆಮಾಡಿದೆ. ದೇವತೆಗಳಲ್ಲಿ ಕಾಣಸಿಗುವ ವಿಶಿಷ್ಟ ಅದ್ರೂ ಮನಮೋಹಕ ರೂಪ ನಮ್ಮ ಗಣಪನದ್ದು.

ಗಣಪತಿಯ ಹುಟ್ಟು ಹೇಗಾಯಿತು ಅನ್ನೋದಕ್ಕೆ ಹತ್ತು – ಹಲವು ಕತೆಗಳಿವೆ. ಅದರಲ್ಲೂ ಅತ್ಯಂತ ಪ್ರಸಿದ್ಧವಾದ ಕತೆ ಈ ರೀತಿ ಇದೆ. ಸ್ನಾನಕ್ಕೆ ಹೋಗುವಾಗ ತನ್ನ ಏಕಾಂತವನ್ನು ಕಾಪಾಡಲು ದೇವಿ ಪಾರ್ವತಿಯು ಬಾಲಕನೊಬ್ಬನನ್ನು ಸೃಷ್ಟಿಸುತ್ತಾಳೆ. ಸ್ನಾನಕ್ಕೆ ತೆರಳುವ ಮುನ್ನ ಚಂದನವನ್ನು ಅರೆದು ತನ್ನ ಮೈಗೆ ಹಚ್ಚಿಕೊಳ್ಳುತ್ತಾಳೆ. ಅದೇ ಚಂದನದಿಂದ ಒಂದು ಬಾಲಕನ ರೂಪವನ್ನು ಸೃಷ್ಟಿಸಿ ಜೀವ ಕೊಡುತ್ತಾಳೆ. ತನ್ನನ್ನು ಬಾಲಕನ ತಾಯಿಯೆಂದು ಪರಿಚಯಿಸುತ್ತಾಳೆ. ತಾನು ಸ್ನಾನಕ್ಕೆ ತೆರಳುವಾಗು ಸ್ನಾನಗೃಹವನ್ನು ಕಾಯಬೇಕೆಂದೂ, ಯಾರಿಗೂ ಪ್ರವೇಶದ ಅನುಮತಿ ಕೊಡಬಾರದೆಂದು ಹೇಳುತ್ತಾಳೆ. ಸ್ವಲ್ಪ ಹೊತ್ತಿನಲ್ಲೇ ಪಾರ್ವತಿಯನ್ನು ನೋಡಲು ಮಹಾದೇವ ಬರುತ್ತಾನೆ. ತಾಯಿಯ ಮಾತನ್ನು ಅಕ್ಷರಶಃ ಪಾಲಿಸುವ ಬಾಲಕ ಶಿವನನ್ನು ತಡೆಯುತ್ತಾನೆ. ಶಂಕರ ಎಷ್ಟೇ ಹೇಳಿದರೂ ಬಾಲಕ ತನ್ನ ಪಟ್ಟು ಬಿಡಲಿಲ್ಲ. ಇದರಿಂದ ಕುಪಿತನಾದ ಚಂದ್ರಕಾಂತನು ಬಾಲಕನ ಜೊತೆ ಘೋರ ಯುದ್ಧ ಮಾಡುತ್ತಾನೆ. ಕೊನೆಗೆ ಬಾಲಕನ ರುಂಡವನ್ನು ಮುಂಡದಿಂದ ಬೇರ್ಪಡಿಸುತ್ತಾನೆ. ಮಗನ ಆರ್ತನಾದ ಕೇಳಿ ಓಡಿ ಬಂದ ಪಾರ್ವತಿ ಆತನ ಶವವನ್ನು ನೋಡಿ ಕುಪಿತಳಾಗುತ್ತಾಳೆ. ಮಹಾಕಾಳಿಯ ರೂಪ ತಾಳಿ ತ್ರಿಲೋಕವನ್ನೇ ನಾಶ ಮಾಡುವುದಾಗಿ ಹೇಳುತ್ತಾಳೆ. ಶಿವ ಪಾರ್ವತಿಗೆ ಸಾಂತ್ವನವನ್ನು ಹೇಳಿ ತಲೆಯೊಂದನ್ನು ಹುಡುಕಿ ತರುವಂತೆ ತನ್ನ ಗಣಗಳಿಗೆ ಆದೇಶಿಸುತ್ತಾನೆ. ಹೀಗೆ ತಲೆಯೊಂದನ್ನು ಅರಸುತ್ತಾ ಹೋದ ಗಣಗಳಿಗೆ ಉತ್ತರ ದಿಕ್ಕಿನಲ್ಲಿ ಮಲಗಿರುವ ಆನೆಯೊಂದು ಕಾಣಿಸುತ್ತದೆ. ಅದರ ತಲೆಯನ್ನು ಕಡಿದು ಕೈಲಾಸಕ್ಕೆ ಮರಳುತ್ತಾರೆ. ಆನೆಯ ತಲೆಯನ್ನು ಬಾಲಕನಿಗೆ ಜೋಡಿಸಿ ಜೀವ ಕೊಡುತ್ತಾನೆ ಶಿವ. ನೆರೆದ ದೇವತೆಗಳು ಸಂತೋಷಗೊಂಡು ಬಾಲಕನನ್ನು ಹರಸುತ್ತಾರೆ. ಅಗ್ರಪೂಜೆಯ ಅಧಿಪತ್ಯವನ್ನೂ ಶಿವಸುತನಿಗೆ ಕೊಡುತ್ತಾರೆ. ಮಹಾದೇವನು ಗಜಾನನನಿಗೆ ಶಿವಗಣಗಳ ಅಧಿಪತಿಯ ಪಟ್ಟ ಕಟ್ಟುತ್ತಾನೆ. ಇದರಿಂದಾಗಿಯೇ ಬಾಲಕನನ್ನು ಗಣೇಶ, ಗಣಪತಿ ಎಂಬ ಹೆಸರಿಂದ ಕರೆಯುತ್ತಾರೆ. ಪಾರ್ವತಿಯ ಆನಂದಕ್ಕೆ ಪಾರವೇ ಇರಲಿಲ್ಲ. ಅಶ್ರುಧಾರೆ ಸುರಿಸುತ್ತಾ ಮಗನನ್ನು ಅಪ್ಪಿಕೊಳ್ಳುತ್ತಾಳೆ.

ಪ್ರತಿಯೊಂದರಲ್ಲೂ ದೇವರನ್ನು ಕಾಣುವಂತೆ ಹೇಳುತ್ತದೆ ಸನಾತನ ಧರ್ಮ. ಗಾಳಿ, ನೀರು, ಆಕಾಶ, ಪೃಥ್ವಿ, ಅಗ್ನಿ, ಗೋವು, ಸರೀಸೃಪಗಳು, ಪ್ರಾಣಿ-ಪಕ್ಷಿಗಳಲ್ಲೂ ದೇವರಿದ್ದಾನೆ ಅಂತ ಹೇಳುತ್ತದೆ ನಮ್ಮ ಹಿಂದೂ ಧರ್ಮ. ಹೆಚ್ಚು ಕಡಿಮೆ ಎಲ್ಲಾ ದೇವ-ದೇವಿಯರ ಚಿತ್ರಗಳಲ್ಲಿ ಪ್ರಾಣಿ-ಪಕ್ಷಿಗಳನ್ನು ಅವರ ವಾಹನ ರೂಪದಲ್ಲಿ ನೋಡುತ್ತೇವೆ. ದೇವರಿಗೆ ಸಂಬಂಧ ಪಟ್ಟ ಪ್ರತಿಯೊಂದೂ ಪವಿತ್ರವೇ. ಹಾಗಾಗಿ ಈ ಪ್ರಾಣಿ-ಪಕ್ಷಿಗಳಿಗೂ ವಿಶೇಷ ಸ್ಥಾನವನ್ನು ಕಲ್ಪಿಸಿದೆ ಸನಾತನ ಧರ್ಮ. ದೇವರನ್ನು ಬೇರೆ ಬೇರೆ ರೂಪಗಳಲ್ಲಿ ಸಾಕ್ಷಾತ್ಕಾರ ಮಾಡಿದವರು ಹಲವರು. ತಾವು ಕಂಡ ರೂಪವನ್ನು ಶ್ಲೋಕಗಳಲ್ಲಿ, ಸ್ತೋತ್ರಗಳಲ್ಲಿ, ಪುರಾಣಗಳಲ್ಲಿ, ಶಾಸ್ತ್ರಗಳಲ್ಲಿ ಸೆರೆ ಹಿಡಿದಿದ್ದಾರೆ ನಮ್ಮ ಋಷಿಗಳು, ಮುನಿಗಳು, ತಪಸ್ವಿಗಳು. ಶ್ರೀರಾಮ, ಲಕ್ಷ್ಮಿ, ಶ್ರೀಕೃಷ್ಣ, ಆಂಜನೇಯ, ಮಹಾಕಾಳಿ, ತ್ರಿಮೂರ್ತಿಗಳು, ದುರ್ಗೆ ಹೀಗೆ ಪ್ರತಿಯೊಂದು ದೇವ-ದೇವತೆಗಳಿಗೆ ಒಂದು ವಿಶಿಷ್ಟವಾದ, ನಿರ್ದಿಷ್ಟವಾದ ರೂಪವಿದೆ. ಈ ಕಾರಣದಿಂದಲೇ ಚಿತ್ರ ಅಥವಾ ಮೂರ್ತಿ ನೋಡಿದ ಕೂಡಲೇ ಅದು ಯಾವ ದೇವತೆಯದ್ದು ಅಂತ ತಿಳಿಯುತ್ತದೆ. ಇಷ್ಟೆಲ್ಲಾ ಹಲವಾರು ರೂಪಗಳಿದ್ದರೂ ಆಕಾರದಿಂದ ನಿರಾಕಾರ, ನಿರ್ಗುಣ ಬ್ರಹ್ಮನೆಡೆಗೆ ಸಾಗುವ ಪಥವನ್ನೂ ಸನಾತನ ಧರ್ಮ ತೋರಿಸುತ್ತದೆ. ದೇವನೊಬ್ಬ ನಾಮ ಹಲವು ಅನ್ನೋ ಮಾತೊಂದಿದೆ. ಹಾಗೆಯೇ ನಾವು ದೇವರನ್ನು ಹತ್ತು ಹಲವು ರೂಪಗಳಲ್ಲಿ ಕಂಡರೂ, ಆರಾಧಿಸಿದರೂ ನಮ್ಮ ಗುರಿ ಒಂದೇ, ಪಥ ಒಂದೇ. ಅದೇ ನಿರಾಕಾರನಾದ ಪರಮಾತ್ಮನ ಅನುಭೂತಿ. ಹಾಗಂತ ನಾವು ಪೂಜಿಸುವ ರೂಪಗಳಿಗೆ ಅರ್ಥವಿಲ್ಲವೆಂದಲ್ಲ. ಪ್ರತಿಯೊಂದು ರೂಪಕ್ಕೂ ಅದ್ಭುತವಾದ ಅರ್ಥವನ್ನು ಕಲ್ಪಿಸಿದ್ದಾರೆ ನಮ್ಮ ಪೂರ್ವಜರು.

ಗಜಾನನನ ರೂಪವೂ ಅನೇಕಾನೇಕ ಅದ್ಭುತವಾದ, ವಿಶೇಷವಾದ ಅಂಶಗಳನ್ನೊಳಗೊಂಡಿದೆ. ಆನೆಯ ಮುಖ, ಚಾಮರದಂತಹ ಕಿವಿಗಳು, ಡೊಳ್ಳು ಹೊಟ್ಟೆ, ಕುಬ್ಜ ದೇಹ, ನಾಲ್ಕು ಕೈಗಳು, ಅವುಗಳಲ್ಲಿ ಮೋದಕ, ಪಾಶಾಂಕುಶಗಳು, ವಾಹನ ರೂಪದಲ್ಲಿ ಇಲಿ. ಇದು ಸಾಮಾನ್ಯವಾಗಿ ಕಾಣಸಿಗುವ ರೂಪ. ಆತನ ಅಭಯಹಸ್ತ ಶರಣಾಗತನಾದವನಿಗೆ ರಕ್ಷಣೆಯನ್ನು ಒದಗಿಸುತ್ತದೆ. ಶರಣಾದವರ ಕಷ್ಟಗಳನ್ನು ನಿವಾರಿಸಿ ಅಭಯ ನೀಡುವ ಕರುಣಾಳು ಮಹಾಕಾಯ ಶಿವಸುತ. ಆತನ ಕೈಯಲ್ಲಿರುವ ಮೋದಕ ಆಂತರ್ಯದ ಸಿಹಿತನದ ಪ್ರತೀಕ. ಮನುಷ್ಯನ ಆಸೆ, ಮೋಹ, ಪ್ರಾಪಂಚಿಕ ಬಂಧನಗಳನ್ನು ಸೆರೆ ಹಿಡಿಯುವುದು ಪಾಶವಾದರೆ, ಮನುಷ್ಯನನ್ನು ಸತ್ಯ ಹಾಗೂ ಧರ್ಮದ ಹಾದಿಯಲ್ಲಿ ನಡೆಯುವಂತೆ ಪ್ರೇರೇಪಿಸುತ್ತದೆ ಆತನ ಅಂಕುಶ. ಡೊಳ್ಳು ಹೊಟ್ಟೆ ವಿನಾಯಕನ ಔದಾರ್ಯದ ಚಿಹ್ನೆ. ತಿಂದದ್ದೆಲ್ಲವನ್ನು ಜೀರ್ಣಿಸುವಂತೆ ತನ್ನ ಆರಾಧಕರ, ಭಕ್ತರ ಕಷ್ಟಗಳನ್ನೆಲ್ಲಾ ಜೀರ್ಣಿಸಿ ಹರಸುವಂತಹ ಉದಾರಿಯೇ ಮಹಾಗಣಪತಿ. ವಿಘ್ನ ನಿವಾರಕನನ್ನು ನೋಡಿದ ಕೂಡಲೇ ಪಕ್ಕನೆ ಕಣ್ಣಿಗೆ ಕಾಣಿಸುವುದೇ ಆತನ ಆನೆಯ ಮೊಗ. ಶಕ್ತಿ, ಬುದ್ಧಿವಂತಿಕೆ ಮತ್ತು ಸೌಭಾಗ್ಯದ ಪ್ರತಿರೂಪವೇ ಆನೆ. ಗಜರಾಜನ ಎಲ್ಲಾ ಒಳ್ಳೆಯ ಗುಣಗಳು ಗಜಾನನನಲ್ಲಿ ಸಮ್ಮಿಳಿತವಾಗಿವೆ. ಕಾಡಿನಲ್ಲಿರುವ ಅತ್ಯಂತ ಶಕ್ತಿಶಾಲಿ ಪ್ರಾಣಿ ಆನೆ. ಸ್ವಭಾವತಃ ಶಾಂತ, ಸೌಮ್ಯ ಮತ್ತು ಸಸ್ಯಾಹಾರಿ. ಆಹಾರಕ್ಕಾಗಿ ಯಾವುದೇ ಪ್ರಾಣಿಯನ್ನು ಕೊಲ್ಲುವುದಿಲ್ಲ. ಪಳಗಿಸಿರುವ ಆನೆ ತನ್ನ ಒಡೆಯನ ಅಚ್ಚುಮೆಚ್ಚಿನ ಸಂಗಾತಿ. ಪ್ರೀತಿಯನ್ನು ದಯೆಯನ್ನು ತೋರಿಸಿದಲ್ಲಿ ವಿಶೇಷವಾದ ವಾತ್ಸಲ್ಯವನ್ನು ನಿಷ್ಟೆಯನ್ನು ತೋರಿಸುವ ಮಹಾಕಾಯವದು. ಹಾಗೆಯೇ ಅತ್ಯಂತ ಶಕ್ತಿಶಾಲಿಯೂ, ವಿಘ್ನನಾಶಕನೂ ಆದ ಗಣಪತಿಯು ಕ್ಷಮಾಗುಣವುಳ್ಳವನೂ, ಭಕ್ತರ ಪ್ರೀತಿಗೆ, ವಾತ್ಸಲ್ಯಕ್ಕೆ ಕರಗುವವನೂ ಆಗಿದ್ದಾನೆ. ಹೇಗೆ ಕೋಪಗೊಂಡ ಆನೆ ಇಡೀ ಕಾಡನ್ನೇ ನಾಶಮಾಡುವಲ್ಲಿ ಸಮರ್ಥವಾಗಿದೆಯೋ ಅದೇ ರೀತಿ ವಿಘ್ನಗಳನ್ನು, ವೈರಿಗಳನ್ನು, ಅರಿಷ್ಟಗಳನ್ನು ಯಾವುದೇ ಮುಲಾಜಿಲ್ಲದೇ ಗಣೇಶನು ನಿವಾರಿಸುತ್ತಾನೆಂಬುದು ಹಿಂದೂ ಧರ್ಮದ ಅಚಲವಾದ ನಂಬಿಕೆ.

ವಿನಾಯಕನ ದೊಡ್ಡ ತಲೆ ಆನೆಯ ಬುದ್ಧಿವಂತಿಕೆಯ ಪ್ರತಿರೂಪ. ಆತನ ದೊಡ್ಡ ಕಿವಿಗಳು ಧಾನ್ಯದ ರಾಶಿಯಿಂದ ಹೊಟ್ಟನ್ನು ಪ್ರತ್ಯೇಕಿಸುವ ಬೀಸಣಿಗೆಯಂತೆ. ಪೌಷ್ಠಿಕ ಧಾನ್ಯದಿಂದ ಜೊಳ್ಳನ್ನು ಪ್ರತ್ಯೇಕಿಸುವಂತೆ ಮಾನವನಲ್ಲಿರುವ ಋಣಾತ್ಮಕ ಅಂಶಗಳನ್ನು ಇಲ್ಲವಾಗಿಸುತ್ತವೆ. ಅವು ಎಲ್ಲವನ್ನು ಕೇಳಿಸಿಕೊಂಡರೂ ಕೇವಲ ಸತ್ಯವನ್ನು, ಒಳ್ಳೆಯದನ್ನು ಮಾತ್ರ ಉಳಿಸಿಕೊಳ್ಳುತ್ತವೆ. ತನ್ನೆಲ್ಲ ಭಕ್ತರ ಪ್ರಾರ್ಥನೆಗಳನ್ನು ಆಲಿಸುವ ಕ್ಷಮತೆಯನ್ನು ಚಾಮರದಂತಹ ಕಿವಿಗಳು ಹೊಂದಿವೆ. ಗಣೇಶನ ಸೊಂಡಿಲು ವಿವೇಕವನ್ನು ಬಿಂಬಿಸುತ್ತದೆ. ಆಧ್ಯಾತ್ಮಿಕ ಪ್ರಗತಿಗೆ, ಪಥಕ್ಕೆ ಬೇಕಾಗುವ ಮುಖ್ಯವಾದ ಗುಣವೇ ವಿವೇಕ. ಆನೆ ತನ್ನೆಲ್ಲ ಕೆಲಸಗಳಿಗೆ ಸೊಂಡಿಲನ್ನು ಬಳಸುತ್ತದೆ. ದೊಡ್ಡ ದೊಡ್ಡ ಮರದಿಮ್ಮಿಗಳನ್ನು ಎತ್ತುವಂತಹ, ಅವುಗಳನ್ನು ನದಿ ನೀರಿಗೆ ತಳ್ಳವಂತಹ ಶಕ್ತಿಶಾಲಿ ಕೆಲಸದಿಂದ ಹಿಡಿದು ಸಣ್ಣ ಸಣ್ಣ ಹಸಿರೆಲೆಗಳನ್ನು ಹೆಕ್ಕುವ, ಹುಲ್ಲನ್ನು ಮುರಿಯುವ, ತೆಂಗಿನಕಾಯಿಯ ತುಣುಕನ್ನು ಹೆಕ್ಕಿ ಬಾಯಲ್ಲಿಡುವಂತಹ ನಾಜೂಕಾದ ಕೆಲಸಗಳಿಗೂ ಆನೆ ಸೊಂಡಿಲನ್ನು ಬಳಸುತ್ತದೆ. ಅತ್ಯಂತ ಕಠಿಣವಾದ ಮತ್ತು ನಾಜೂಕಾದ ಕೆಲಸವನ್ನು ಮಾಡುವ ಸೊಂಡಿಲು ಗಣೇಶನ ಬುದ್ಧಿಮತ್ತೆಯನ್ನೂ, ವಿವೇಕವನ್ನೂ ಬಿಂಬಿಸುತ್ತದೆ. ವಿಘ್ನರಾಜನನ್ನು ಏಕದಂತ ಅಂತಲೂ ಕರೆಯುತ್ತಾರೆ. ಇದಕ್ಕೆ ಕಾರಣ ಗಣೇಶನ ಮುರಿದಿರುವ ದಂತ. ಪುರಾಣಗಳ ಪ್ರಕಾರ ಇದಕ್ಕೆ ಹಲವಾರು ಕಾರಣಗಳಿವೆ. ಒಂದು ಕತೆಯ ಪ್ರಕಾರ ಶಿವನನ್ನು ಭೇಟಿಯಾಗಲು ಮಹಾಮುನಿ ಪರಶುರಾಮರು ಕೈಲಾಸಕ್ಕೆ ಬರುತ್ತಾರೆ. ಶಿವ ದೀರ್ಘ ನಿದ್ದೆಯಲ್ಲಿದ್ದ ಕಾರಣ ಆತನ ಒಳ ಮನೆಯ ಕಾವಲುಗಾರನಾಗಿದ್ದ ಗಣೇಶ ಪರಶುರಾಮರನ್ನು ತಡೆಯುತ್ತಾನೆ. ಇದರಿಂದ ಕೋಪಗೊಂಡ ರಾಮ ಗಣೇಶನತ್ತ ಪರಶುವನ್ನು ಎಸೆಯುತ್ತಾರೆ. ಹಿಂದೆ ಶಂಕರನು ಇದೆ ಪರಶುವನ್ನು ರಾಮನಿಗೆ ನೀಡಿರುತ್ತಾನೆ. ಮಹದೇವನ ಮೇಲಿನ ಗೌರವದಿಂದ ಗಣೇಶನು ವಿನಮ್ರವಾಗಿ ಕೈ ಮುಗಿದು ಪರಶುವಿನ ಪ್ರಹಾರವನ್ನು ತನ್ನ ದಂತದ ಮೇಲೆ ತೆಗೆದುಕೊಳ್ಳುತ್ತಾನೆ. ಪರಿಣಾಮವಾಗಿ ದಂತವೊಂದು ಮುರಿಯುತ್ತದೆ. ಇನ್ನೊಂದು ಕತೆಯ ಪ್ರಕಾರ ಮಹರ್ಷಿ ವ್ಯಾಸರು ತಾನು ರಚಿಸುವ ಮಹಾಭಾರತವನ್ನು ಬರೆಯಬೇಕೆಂದು ಗಣೇಶನನ್ನು ಕೇಳಿಕೊಳ್ಳುತ್ತಾರೆ. ಅಂತಹ ಮಹಾಗ್ರಂಥ ಬರೆಯುವುದು ಸುಲಭದ ಮಾತಲ್ಲ. ಅದಕ್ಕಾಗಿ ವಿಶೇಷವಾದ ಲೇಖನಿ ಬೇಕೆಂಬುದನ್ನು ಅರಿತ ಗಣಪತಿ ತನ್ನ ದಂತವನ್ನೇ ಮುರಿದು ಲೇಖನಿಯಾಗಿ ಬಳಸುತ್ತಾನೆ. ಜ್ಞಾನ ಗಳಿಸುವುದಕ್ಕೆ ಯಾವುದೇ ರೀತಿಯ ತ್ಯಾಗ ಮಾಡಿದರು ಕಡಿಮೆ ಅನ್ನುವಂತಹ ಪಾಠವನ್ನು ಗಣೇಶ ಈ ಮೂಲಕ ಕಲಿಸುತ್ತಾನೆ.

ಏಕದಂತನ ವಾಹನವಾಗಿರುವ ಇಲಿ ಗಣೇಶನ ಎಲ್ಲಾ ಚಿತ್ರ, ಮೂರ್ತಿಗಳಲ್ಲಿ ಕಂಡುಬರುವ ಮುಖ್ಯ ಅಂಶ. ಮೇಲ್ನೋಟಕ್ಕೆ ಇದು ಬಹಳ ವಿಚಿತ್ರ ಅನ್ನಿಸಬಹುದು. ಮಹಾಕಾಯನ ಅಷ್ಟು ದೊಡ್ಡ ದೇಹವನ್ನು ಇಲಿಯಂತ ಸಣ್ಣ ಜೀವ ಹೇಗೆ ಹೊರುವುದಕ್ಕೆ ಸಾಧ್ಯ ಅಂತ ಆಶ್ಚರ್ಯವಾಗದೇ ಇರದು. ಇದರ ಒಳಾರ್ಥ ಇಷ್ಟೆ. ಜ್ಞಾನಿಗೆ ಈ ಪ್ರಪಂಚದಲ್ಲಿ ಯಾವುದು ಕುರೂಪವಲ್ಲ, ಯಾವುದು ಕೆಟ್ಟದ್ದಲ್ಲ. ಸಿಕ್ಕ ಸಿಕ್ಕೆಡೆಗೆ ಅಲೆದಾಡುವ, ಒಳ್ಳೆಯದು ಕೆಟ್ಟದ್ದೆಂಬ ಪರಿವೆ ಇಲ್ಲದೇ ಒಡಾಡುವ ಮನುಷ್ಯನ ಮನಸ್ಸಿನ ಪ್ರತೀಕವೇ ಇಲಿ. ಇಲಿಯನ್ನು ಪಳಗಿಸಿ ತನ್ನ ಅಧೀನದಲ್ಲಿರಿಸಿದಂತೆ ಹುಚ್ಚು ಕುದುರೆಯಂತೆ ಕಂಡ ಕಂಡಲ್ಲಿ ಅಲೆಯುವ ಮನಸ್ಸನ್ನು ಬೌದ್ಧಿಕ ವೈಚಾರಿಕತೆಯಿಂದ ಸತ್ಯಪಥದೆಡೆಗೆ ಕರೆದೊಯ್ಯುತ್ತಾನೆ ಲಂಬೋದರ.

ವಿಘ್ನೇಶನ ಮಾತೃಪ್ರೇಮದ ಬಗ್ಗೆ ಎಲ್ಲರಿಗೂ ತಿಳಿದಿದೆ. ಅಮ್ಮನೇ ಗಣೇಶನ ಸರ್ವಸ್ವ. ಯಾವುದಾದರೊಂದು ಕೆಸವನ್ನು ನಾಳೆ ನಾಳೆಯೆಂದು ಮುಂದೂಡಿದರೆ ‘ನಾಳೆ ನಾಳೆ ಅಂದ್ರೆ ಗಣೇಶನ ಮದುವೆ’ ಎಂಬ ಮಾತೊಂದನ್ನು ಹೇಳುತ್ತಾರೆ. ದಕ್ಷಿಣ ಭಾರತೀಯ ಪದ್ಧತಿಯಲ್ಲಿ ಗಣೇಶ ಆಜನ್ಮ ಬ್ರಹ್ಮಚಾರಿ. ಇದಕ್ಕೆ ಕಾರಣ ಆತನ ಮಾತೃಪ್ರೇಮವೇ. ಗಣಪತಿಯ ಪ್ರಕಾರ ದೇವಿ ಪಾರ್ವತಿಯು ಈ ಪ್ರಪಂಚದಲ್ಲೇ ಅಂತ್ಯಂತ ಸುಂದರವಾದ ಹಾಗೂ ಪರಿಪೂರ್ಣವಾದ ಹೆಣ್ಣು. ನನಗೂ ಕೂಡ ಪಾರ್ವತಿಯಂತಹ ಸೌಂದರ್ಯವತಿಯೂ, ಬುದ್ಧಿವಂತೆಯೂ ಆಗಿರುವ ಹೆಣ್ಣನ್ನು ಹುಡುಕಿ ತನ್ನಿ. ಆಮೇಲೆ ಮದುವೆಯಾಗುತ್ತೇನೆ ಅನ್ನೋದು ಗಣಪತಿಯ ಶರತ್ತು. ಆದ್ರೆ ಯಾರಿಂದಲೂ ಶಿವೆಯಂತಹ ಹೆಣ್ಣನ್ನು ಹುಡುಕಿ ತರಲು ಸಾಧ್ಯವಾಗಲೇ ಇಲ್ಲ. ಹುಡುಕಾಟ ಇನ್ನೂ ಜಾರಿಯಲ್ಲಿದೆ…

ಹಿಂದೂ ಧರ್ಮದ ಅತ್ಯಂತ ಶಕ್ತಿಶಾಲಿ ಹಾಗೂ ಪವಿತ್ರವಾದ ಚಿಹ್ನೆಯೇ ‘ಓಂ’. ಓಂ ಮತ್ತು ಗಣೇಶನಿಗೆ ಅವಿನಾಭಾವ ಸಂಬಂಧ. ದೈವಿಕ ಅಸ್ತಿತ್ವದ ಪ್ರತೀಕವಾದ ‘ಓಂ’ ಅನ್ನು ತಲೆಕೆಳಗಾಗಿ ಹಿಡಿದರೆ ಗಣೇಶನ ಮುಖದಂತೆ ಕಾಣಿಸುತ್ತದೆ. ‘ಓಂ’ ಜೊತೆ ಈ ರೀತಿ ಕಾಣಿಸಿಕೊಳ್ಳುವುದು ಗಣೇಶನೊಬ್ಬನೆ. ಸನಾತನ ಧರ್ಮದಲ್ಲಿ ಗಣೇಶನ ಅಗ್ರಸ್ಥಾನವನ್ನು ಇದು ಪ್ರತಿಬಿಂಬಿಸುತ್ತದೆ.

ಗಣೇಶ ಚತುರ್ಥಿಯ ಶುಭಾಷಯಗಳು…

Sunday, August 16, 2009

ಭಾರತದ ಉದ್ದಗಲಗಳಲ್ಲಿ ಭಾರತೀಯನೇಕೆ ಕಾಣಿಸಲಿಲ್ಲ???

ಒಬ್ಬ ಪಾಶ್ಚಿಮಾತ್ಯ ಪ್ರವಾಸಿಗ ಭಾರತಕ್ಕೆ ಭೇಟಿ ಕೊಡ್ತಾನೆ. ಸದ್ಯಕ್ಕೆ ಅಮೇರಿಕಾದವ ಅಂತ ಅಂದುಕೊಳ್ಳುವ. ಸುಮಾರು ಮೂರು ತಿಂಗಳ ಕಾಲ ಭಾರತ ಪ್ರವಾಸ ಕೈಕೊಳ್ಳುತ್ತಾನೆ. ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ, ಗುಜರಾತಿನಿಂದ ಮಣಿಪುರದ ತನಕ ಕಾಣಿಸುವ ಪ್ರತಿಯೊಂದು ಪ್ರೇಕ್ಷಣೀಯ ಸ್ಥಳಗಳನ್ನೂ, ಸ್ಮಾರಕಗಳನ್ನೂ ವೀಕ್ಷಿಸುತ್ತಾನೆ. ಕೊನೆಗೊಮ್ಮೆ ತನ್ನ ದೇಶಕ್ಕೆ ಮರಳುತ್ತಾನೆ. ಸುಮಾರು ತಿಂಗಳುಗಳ ನಂತರ ಭೇಟಿಯಾದ ಗೆಳೆಯನೊಬ್ಬ ಪ್ರವಾಸಿಗನ ಅನುಭವಗಳ ಬಗ್ಗೆ ಕೇಳ್ತಾನೆ. ಆಗ ಅಮೇರಿಕಾದ ಪ್ರವಾಸಿಗ ಹೇಳ್ತಾನೆ ‘ಭಾರತ ಸಕತ್ತಾಗಿದೆ. ಪ್ರವಾಸ ಅತ್ಯಂತ ಸಂತೋಷದಾಯಕವಾಗಿತ್ತು. ಜಗತ್ಪ್ರಸಿದ್ಧ ತಾಜ್ ಮಹಲ್ ನೋಡಿದೆ, ದೆಹಲಿಯ ಮೊಘಲ್ ಸ್ಮಾರಕಗಳಿಗೆ ಭೇಟಿಕೊಟ್ಟೆ. ಮೈ ಚಾಚಿ ಮಲಗಿರುವ ಸಹ್ಯಾದ್ರಿಯ ಸೌಂದರ್ಯ ಬಣ್ಣಿಲಸಾಧ್ಯ. ದಕ್ಷಿಣದ ದೇವಾಲಯಗಳು ಅತ್ಯಪೂರ್ವ. ಆದರೆ. . .’ ಮಾತು ಮುಗಿಸುತ್ತಿದ್ದಂತೆ ಆತನ ಗೆಳೆಯನ ಹುಬ್ಬುಗಳು ಪ್ರಶ್ನಿಸುವಂತೆ ಮೇಲೇರಿದ್ದವು. ಗೆಳೆಯನ ಮನದ ಇಂಗಿತ ಅರಿತ ಪ್ರವಾಸಿಗ ಮುಂದುವರಿಸುತ್ತಾ ಹೇಳುತ್ತಾನೆ ‘ಒಬ್ಬನೇ ಭಾರತೀಯನ್ನು ನೋಡಲಿಲ್ಲ!!!’ ಗೆಳೆಯ ಅವಕ್ಕಾಗಿ ತೆರೆದ ಬಾಯಿಯೊಂದಿಗೆ ಪ್ರವಾಸಿಗನ್ನು ದಿಟ್ಟಿಸುತ್ತಾನೆ. ಮರುಕ್ಷಣ ಸಾವರಿಸಿಕೊಂಡು ಕೇಳ್ತಾನೆ ‘ಏನು ತಮಾಷೆಯ ಮಾತು ಆಡ್ತಿದ್ದೀಯಾ? ನೀನು ಹೋಗಿದ್ದು ಭಾರತಕ್ಕೆ. ಮತ್ತೆ ಒಬ್ಬನೇ ಒಬ್ಬ ಭಾರತೀಯನ್ನು ನೋಡಿಲ್ವಾ???’ ಅದಕ್ಕೆ ಪ್ರವಾಸಿಗ ಹೇಳ್ತಾನೆ ‘ಹೌದು. ಭಾರತದ ಉದ್ದಗಲಗಳಲ್ಲಿ ಸಂಚರಿಸಿದ್ದು ನಿಜ. ಆದ್ರೆ ಒಬ್ಬನೇ ಒಬ್ಬ ಭಾರತೀಯನ್ನು ನೋಡಿಲ್ಲ. ನಾನು ಬಿಹಾರಿಯನ್ನು ನೋಡಿದೆ, ಗುಜರಾತಿಯನ್ನು ನೋಡಿದೆ, ಮರಾಠಿಗನನ್ನು ನೋಡಿದೆ, ಕನ್ನಡಿಗ, ತಮಿಳನನ್ನೂ ನೋಡಿದೆ ಆದ್ರೆ ಭಾರತೀಯ ಮಾತ್ರ ಕಾಣಿಸಲಿಲ್ಲ. ನಾನು ಹಿಂದುವನ್ನು ನೋಡಿದೆ, ಮುಸಲ್ಮಾನನನ್ನು ನೋಡಿದೆ, ಕ್ರೈಸ್ತ, ಸಿಖ್, ಬೌದ್ಧ, ಜೈನರನ್ನು ನೋಡಿದೆ ಆದ್ರೂ ಭಾರತೀಯ ಕಾಣಿಸಲೇ ಇಲ್ಲ. ನಾನು ಬ್ರಾಹ್ಮಣನನ್ನು ನೋಡಿದೆ, ರಜಪೂತನನ್ನು ನೋಡಿದೆ, ವಿಶ್ವಕರ್ಮನನ್ನು ನೋಡಿದೆ, ಮಡಿವಾಳ, ಕುರುಬ, ಒಕ್ಕಲಿಗರನ್ನು ನೋಡಿದೆ ಆದ್ರೆ ಭಾರತೀಯ ಅಲ್ಲೂ ಕಾಣಿಸ್ಲೇ ಇಲ್ಲ.’ . . . ಇದು ನನ್ನ ಸಹಕರ್ಮಿಯೊಬ್ಬರಿಗೆ ಬಂದಿದ್ದ ಈಮೈಲು. ಫಾರ್ವರ್ಡ್ ಮೈಲುಗಳ ಹಾವಳಿ ಭಯಂಕರ ಇದೆ. ಅಂಥದ್ರಲ್ಲಿ ಇಂತಹ ಒಂದೆರಡು ಒಳ್ಳೆಯ ಈ-ಮೇಲುಗಳು ಬರುತ್ತಿರುತ್ತವೆ. ಇವರು ಪಕ್ಕದಲ್ಲೇ ಕುಳಿತುಕೊಳ್ಳುವುದರಿಂದ ಅಲ್ಲಿಂದಲೇ ಓದಿ ಹೇಳಿದರು. ನಾನು ಕೇಳಿ ಸುಮ್ಮನೆ ಮುಗುಳ್ನಕ್ಕು ಸುಮ್ಮನಾದೆ.

ಆದ್ರೆ ಮನಸ್ಸಿನ ಎಲ್ಲೋ ಒಂದು ಮೂಲೆಯಲ್ಲಿ ಆ ಈ-ಮೇಲಿನ ವಿಷಯ ಕೊರೆಯುತ್ತಿತ್ತು. ಮನಸ್ಸು ಗಹನವಾದ ಯೋಚನೆಯಲ್ಲಿ ಮುಳುಗಿತ್ತು. ನಮ್ಮ ದೃಷ್ಟಿಕೋನದ ಬಗ್ಗೆ, ಯೋಚನಾ ವೈಖರಿಯ ಬಗ್ಗೆ ನಮಗೇ ನಾಚಿಕೆಯಾಗಬೇಕೆನಿಸಿತು. ಮೇಲಿನ ವಿಷಯ ಎಷ್ಟು ನಿಜ ಅಲ್ವಾ? ನಾವು ಪ್ರಾಂತ್ಯ, ರಾಜ್ಯ, ಭಾಷೆ, ಜಾತಿ-ಧರ್ಮಗಳ ಪರಿಧಿಗಳನ್ನು ಬಿಟ್ಟು ಹೊರಬರುವುದೇ ಇಲ್ಲ. ‘ರಾಷ್ಟ್ರೀಯತೆ’ಯ ಪರಿಕಲ್ಪನೆಯೇ ನಮ್ಮಲ್ಲಿ ಇಲ್ಲ. ವೈವಿಧ್ಯತೆಯಲ್ಲಿ ಏಕತೆ, ಒಗ್ಗಟ್ಟಿನಲ್ಲಿ ಬಲ ಎಂಬಿತ್ಯಾದಿ ಮಾತುಗಳು ಕೇವಲ ಪುಸ್ತಕಗಳಿಗೆ, ಭಾಷಣಗಳಿಗೆ ಸೀಮಿತವಾಗಿದೆ. ವರ್ಷಕ್ಕೊಮ್ಮೆ ಬರುವ ಆಗಷ್ಟ್ 15, ಜನವರಿ 26 ಕ್ಕೆ ಧ್ವಜ ಹಾರಿಸಿ, ಸಿಹಿ ತಿಂದು, ರಜಾದಿನವನ್ನು ಗಡದ್ದಾಗಿ ಕಳೆದು ಭಾರತ್ ಮಾತಾ ಕೀ ಜೈ ಅಂತ ಹೇಳಿ ಕೈ ತೊಳೆದುಕೊಳ್ಳುತ್ತೇವೆ.

ಐಟಿ ಕಾಶಿಯಾಗಿರುವ ಬೆಂಗಳೂರಿಗೆ ಬರುತ್ತಿರುವ ಉತ್ತರ ಭಾರತೀಯರನ್ನು ನೋಡಿ ಕನ್ನಡಿಗ ಕಂಗಾಲಾಗಿ ಬೊಬ್ಬಿಡುತ್ತಿದ್ದಾನೆ. ಈ ನಾರ್ತ್ ಇಂಡಿಯನ್ಸ್ ಬಂದು ಬೆಂಗ್ಳೂರೇ ಹಾಳಾಗೋಯ್ತು ಅಂತ ಗೊಣಗಾಡುವುದು ಆತನಿಗೆ ಅಭ್ಯಾಸವಾಗಿ ಹೋಗಿದೆ. ನಾವೇ ಶ್ರೇಷ್ಠರು, ದಕ್ಷಿಣ ಭಾರತೀಯರು ದಡ್ಡರು ಎಂಬ ಭಾವನೆ ಉತ್ತರ ಭಾರತೀಯರಲ್ಲಿ ಮನೆಮಾಡಿದೆ ಅನ್ನೋದು ಅವರ ನಡವಳಿಕೆ, ಮಾತುಗಳಿಂದ ಸ್ಪಷ್ಟವಾಗುತ್ತದೆ. ಅವಕಾಶ ಸಿಕ್ಕಾಗೆಲ್ಲಾ ‘ಮದ್ರಾಸಿ’, ‘ಇಡಲಿ-ವಡಾ’ ಅಂತ ತಮಾಷೆ ಮಾಡ್ಲಿಕ್ಕೂ ಹಿಂಜರಿಯುವುದಿಲ್ಲ. ಆರ್ಯ-ದ್ರಾವಿಡ ಸಿದ್ಧಾಂತವನ್ನು ಇನ್ನೂ ಮುಷ್ಟಿಯಲ್ಲಿ ಹಿಡಿದು ಉತ್ತರ ಭಾರತೀಯರನ್ನು ದ್ವೇಷಿಸುವುದು ತಮಿಳರಿಗೆ ಹೊಸದಲ್ಲ. ಇದನ್ನೇ ನೆಪವಾಗಿಸಿ ಶ್ರೀ ರಾಮ ಯಾರು? ಸೇತುವೆ ಕಟ್ಟಲಿಕ್ಕೆ ಆತನೇನು ಇಂಜಿನಿಯರಾ? ಆತ ಯಾವ ಕಾಲೇಜಿನಿಂದ ಓದಿದ್ದು ಅಂತೆಲ್ಲಾ ಅಸಂಬದ್ದ ಪ್ರಶ್ನೆಗಳನ್ನು ಕೇಳುವ ತಮಿಳನ ಬಗ್ಗೆ ಅಳಬೇಕೋ ನಗಬೇಕೋ ತಿಳಿಯುತ್ತಿಲ್ಲ. ಏಮಂಡಿ, ಚೆಪ್ಪಂಡಿ ಅಂತ ಕೇವಲ ತನ್ನದೇ ಆದ ಗುಂಪು ಕಟ್ಟಿಕೊಳ್ಳುವ ತೆಲುಗ ಯಾರ ಜೊತೆಯೂ ಬೆರೆಯಲು ಬಯಸುವುದಿಲ್ಲ. ಕೆಲಸ ಹುಡುಕಿಕೊಂಡು ಬಂದ ಬಿಹಾರಿಗಳನ್ನು ಮರಾಠಿಗಳು ಮುಂಬೈಯ ಬೀದಿಯಲ್ಲಿ ಹಿಡಿದು ಬಡಿಯುತ್ತಿದ್ದಾರೆ. ಕಾಶ್ಮೀರಿ ಬೇಸತ್ತು ಪ್ರತ್ಯೇಕ ರಾಷ್ಟ್ರಕ್ಕಾಗಿ ಪ್ರತ್ಯೇಕತಾವಾದ ಹಾಡ್ತಾ ಇದ್ದಾನೆ. ಈಶಾನ್ಯ ಭಾರತದ ರಾಜ್ಯಗಳಂತೂ ಮುಖ್ಯವಾಹಿನಿಯಲ್ಲಿ ಇಲ್ಲವೇ ಇಲ್ಲ. ಭಾರತದ ಭೂಪಟ ನೋಡಿದಾಗಲೇ ಇವುಗಳ ಇರುವು ಗೊತ್ತಾಗುತ್ತದೆ. ಇದೆಲ್ಲರ ಜೊತೆಗೆ ಧಾರ್ಮಿಕ ಪ್ರತ್ಯೇಕತೆ ಬೇರೆ. ಎಲ್ಲಾ ಕಡೆ ಜಾತಿ ಬಹಳ ಮುಖ್ಯವಾಗುತ್ತದೆ. ಒಂದು ಅರ್ಜಿ ತುಂಬಿಸಬೇಕಾದ್ರೂ ಜಾತಿ-ಧರ್ಮ ನಮೂದಿಸಬೇಕು. ‘ನೀವು ಯಾವ ಜಾತಿ?’ ಅಂತ ಕೇಳಲಿಕ್ಕೆ ಜನ ಸ್ವಲ್ಪವೂ ಸಂಕೋಚ ತೋರಿಸುವುದಿಲ್ಲ. ಹಿಂದೂ, ಇಸ್ಲಾಂ, ಕ್ರೈಸ್ತ, ಸಿಖ್, ಬೌದ್ಧ, ಜೈನ ಮುಂತಾದವು ನಮ್ಮಲ್ಲಿರುವ ಪ್ರಮುಖ ಧರ್ಮಗಳು. ಈ ಪ್ರಮುಖ ಧರ್ಮಗಳಲ್ಲೂ ನೂರಾರು ಕವಲುಗಳು. ಹಿಂದೂ ಧರ್ಮವನ್ನೇ ಗಮನಿಸಿ. ಬ್ರಾಹ್ಮಣರು, ಒಕ್ಕಲಿಗರು, ರಜಪೂತರು, ಲಿಂಗಾಯತರು, ವಿಶ್ವಕರ್ಮರು, ಬಂಟರು ಅಂತ ಸಾವಿರಾರು ಉಪಜಾತಿಗಳು. ಇವುಗಳಲ್ಲಿ ಮತ್ತೆ ಹತ್ತು ಹಲವು ಗುಂಪುಗಳು. ಬ್ರಾಹ್ಮಣರಲ್ಲಿ ಎಷ್ಟೊಂದು ಬಗೆಯ ಬ್ರಾಹ್ಮಣರು? ಮಾಧ್ವರು, ಐಯ್ಯಂಗಾರ್, ಸಾರಸ್ವತರು, ಶಿವಳ್ಳಿ ಬ್ರಾಹ್ಮಣರು, ಕರಡಿ ಬ್ರಾಹ್ಮಣರು, ಸ್ಮಾರ್ಥರು ಹೀಗೆ ಇನ್ನೆಷ್ಟು ಬಗೆಯ ಬ್ರಾಹ್ಮಣರೋ? ಕೊನೆ ಪಕ್ಷ ದೇವರನ್ನೂ ಬಿಡಲಿಲ್ಲ. ಶೈವರಂತಲೋ, ವೈಷ್ಣವರಂತಲೋ, ಶಾಕ್ತ್ಯರಂತಲೋ, ಗಾಣಪತ್ಯರಂತಲೋ ಹಂಚಿ ಹೋಗಿದ್ದಾರೆ. ವೇದವ್ಯಾಸರೇನೋ ಕ್ಲಿಷ್ಟಕರವಾದ ವೇದಗಳು ಸುಲಭವಾಗಲಿ ಅಂತ ನಾಲ್ಕು ಭಾಗಗಳಾಗಿ ವಿಂಗಡಿಸಿದ್ದಾರೆ. ನಾವು ಅದರಲ್ಲೂ ಪ್ರತ್ಯೇಕತೆಯ ರಾಗ ಹಾಡಿದೆವು. ನಾವು ಯಜುರ್ವೇದವನ್ನು ಹಿಂಬಾಲಿಸುತ್ತೇವೆ, ನಾವು ಸಾಮವೇದವನ್ನು ಹಿಂಬಾಲಿಸುತ್ತೇವೆ, ನಾವು ಋಗ್ವೇದ… ಅಂತ ವೇದಗಳ ಹೆಸರಲ್ಲೂ ಪ್ರತ್ಯೇಕತೆಯನ್ನು ತೋರಿಸಿಕೊಂಡಿದ್ದೇವೆ. ಎಷ್ಟೊಂದು ವಿಪರೀತ ಅಂದ್ರೆ ತಿಮ್ಮಪ್ಪನಿಗೆ ‘U‘ ನಾಮ ಹಾಕ್ಬೇಕೋ, ‘V‘ ನಾಮ ಹಾಕ್ಬೇಕೋ ಅಂತ ಕೋರ್ಟ್ ಮೆಟ್ಟಲು ಹತ್ತಿದವರು ನಾವು!!!

ನನ್ನ ಗೆಳೆಯನೊಬ್ಬನನ್ನು ಕೇಳಿದ್ದೆ ನಿಂಗೆ ಹಿಸ್ಟ್ರಿ ಇಷ್ಟವಾ ಅಂತ. ಅದಕ್ಕಾತ ‘ಇಲ್ಲ ಮಾರಾಯ. ಹಿಸ್ಟ್ರಿ ಬಹಳ ಬೋರು. ಯಾರು ಯಾವ ರಾಜ್ಯ ಆಳಿದ್ರು, ಯಾರ್ಯಾರ ಮೇಲೆ ದಂಡೆತ್ತಿ ಹೋದ್ರು, ಎಷ್ಟು ಜನರನ್ನು ಮದುವೆಯಾದ್ರು, ಅವರ ಮಕ್ಳು ಯಾರ್ಯಾರು ಅಂತ ಬರೀ ಕುಯ್ತಾರೆ. ಗೋಲ್ಡ್ ಮೆಡಲ್ ಸಿಕ್ರೆ ಸಾಕು ಅಂತ ಓದುತ್ತಾ ಇದ್ದೆ’ ಅಂತ ಹೇಳಿ ಕಣ್ಣು ಮಿಟುಕಿಸಿದ್ದ. ಅಂದ ಹಾಗೆ ನಮ್ಮ ಗೆಳೆಯರ ಬಳಗದಲ್ಲಿ ‘ಗೋಲ್ಡ್ ಮೆಡಲ್’ ನ ಅರ್ಥವೇ ಬೇರೆ. ನೂರಕ್ಕೆ ಮೂವತ್ತೈದು ಸಿಕ್ರೆ ಅದೇ ನಮ್ಮ ಗೋಲ್ಡ್ ಮೆಡಲ್. ನನ್ನ ಪ್ರಕಾರ ಇತಿಹಾಸ ಓದುವುದು ಬರೇ ವಂಶಾವಳಿ ತಿಳಿದುಕೊಳ್ಳುವುದಕ್ಕಲ್ಲ. ಇತಿಹಾಸವನ್ನು ತಿಳಿದುಕೊಂಡು ಹಿಂದೆ ಮಾಡಿರುವ ತಪ್ಪುಗಳನ್ನು ಪುನರಾವರ್ತಿಸದೆ, ಒಳ್ಳೆಯ ಅಂಶಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸುವುದೇ ಆಗಿದೆ. ನಮ್ಮಲ್ಲಿ ಎಂಥೆಂಥ ರಾಜರಿದ್ದರು. ಆದ್ರೆ ಅವರಿಗೆ ತಮ್ಮ ರಾಜ್ಯ ಬಿಟ್ಟು ಬೇರೇನು ಕಾಣಿಸ್ತಿರಲಿಲ್ಲ. ಆ ಕಾಲದಲ್ಲೂ ರಾಷ್ಟ್ರದ ಪರಿಕಲ್ಪನೆಯೆಂಬುದು ಇರಲಿಲ್ಲ. ತಮ್ಮ-ತಮ್ಮ ಆಡಳಿತ ಪ್ರದೇಶಗಳೇ ಅವರ ಪಾಲಿನ ರಾಷ್ಟ್ರಗಳು. ಪರಕೀಯರು ಆಕ್ರಮಣ ಮಾಡಿದಾಗ್ಲೂ ಒಂದುಗೂಡಿ ವೈರಿಯನ್ನು ಎದುರಿಸಲಿಲ್ಲ. ಘೋರಿ, ಘಸ್ನಿಯಂತಹ ಪರಕೀಯರು ದೋಚುತ್ತಿದ್ದಾಗ ಜಯಚಂದನಂತಹ ಸ್ವಾರ್ಥಿಗಳು ಪೃಥ್ವಿರಾಜನಂತಹ ಸಾಹಸಿಗೆ ಸಾಥ್ ಕೊಡಲಿಲ್ಲ. ಬ್ರಿಟಿಷರಂತೂ ಬೆಣ್ಣೆಗಾಗಿ ಜಗಳವಾಡುವ ಬೆಕ್ಕುಗಳ ಮಧ್ಯೆ ಮಂಗನಂತಿದ್ದರು. ನಮ್ಮ ದೌರ್ಬಲ್ಯವನ್ನು ಚೆನ್ನಾಗಿ ತಿಳಿದುಕೊಡಿದ್ದರು. ಒಡೆದು ಆಳುವ ನೀತಿಯನ್ನು ಅನುಸರಿಸಿ ತಮ್ಮ ಕಾರ್ಯ ಸಾಧನೆ ಮಾಡಿದರು. ಜಾತಿ-ಧರ್ಮದ ಹೆಸರಲ್ಲೇ ಆಖಂಡ ಭಾರತ ಮೂರು ದೇಶಗಳಾಗಿ ಹಂಚಿಹೋಗಿಲ್ವೇ? ಇಷ್ಟಾದ್ರೂ ನಾವು ನಮ್ಮ ತಪ್ಪುಗಳನ್ನು ತಿದ್ದಿಕೊಂಡ ಹಾಗೆ ಕಾಣಿಸ್ತಿಲ್ಲ.

ಇದು ಹಲವು ವರ್ಷಗಳ ಹಳೆಯ ಮಾತು. ನಮ್ಮೂರಲ್ಲಿ ಒಬ್ಬ ಹೆಣ್ಣುಮಗಳಿದ್ದಳು. (ಈಗಲೂ ಇದ್ದಾಳೆನೋ ಆದ್ರೆ ಸರಿಯಾಗಿ ಗೊತ್ತಿಲ್ಲ.) ಗುಡ್ಡಕಾಡೆಲ್ಲಾ ಸುತ್ತಾಡಿ ಒಳ್ಳೆಯ ಬಳ್ಳಿಗಳನ್ನು ಹುಡುಕಿ ಬುಟ್ಟಿ ಹೆಣೆಯುವುದು ಅವಳ ಕೆಲಸವಾಗಿತ್ತು. ಅವಳ ಕೈಯ ನೈಪುಣ್ಯ ಯಾವುದೇ ಕಲೆಗಾರನಿಗಿಂತ ಕಡಿಮೆಯಿರಲಿಲ್ಲ. ಅವಳು ಮಾಡಿಕೊಟ್ಟ ಬುಟ್ಟಿಗಳು ವರ್ಷಗಳ ಕಾಲ ಸ್ವಲ್ಪವೂ ಹಾಳಾಗದೆ ಕೆಲಸಕ್ಕೆ ಬರುತ್ತಿದ್ದವು. ವಿಷಯ ಅದಲ್ಲ. ಮಧ್ಯಾಹ್ನದ ಸುಡುಬಿಸಿಲಿಗೆ ಬರ್ತಾ ಇದ್ದಳವಳು. ಮನೆಯಲ್ಲಿ ಊಟದ ಹೊತ್ತಿಗೆ ಯಾರೂ ಹಸಿದು ಹೋದದ್ದಿಲ್ಲ. ಈ ಹೆಣ್ಣುಮಗಳಿಗೆ ಊಟ ಕೊಟ್ರೆ ಅದನ್ನು ಗುಡ್ಡಕ್ಕೊಯ್ದು ಗೇರು ಮರದ ನೆರಳಲ್ಲಿ ಕುಳಿತು ತಿನ್ನುತ್ತಾ ಇದ್ದಳು. ಎಷ್ಟೇ ಹೇಳಿದ್ರೂ ಮನೆಯ ಹಜಾರದಲ್ಲೂ ಕುಳಿತುಕೊಳ್ಳುತ್ತಿರಲಿಲ್ಲ. ಅದಕ್ಕೆ ಕಾರಣ ಇಷ್ಟೆ ಅವಳು ಕೊರಗ ಪಂಗಡಕ್ಕೆ ಸೇರಿದವಳು. ಸಣ್ಣವರಿದ್ದಾಗ ಇದೆಲ್ಲಾ ಅರ್ಥವಾಗುತ್ತಿರಲಿಲ್ಲ. ಈಗ ನೆನೆಸಿಕೊಂಡಾಗಲೆಲ್ಲಾ ಬೇಜಾರಾಗುತ್ತೆ. ಅರ್ಥವಿಲ್ಲದ ಕೆಲವೊಂದು ಸಾಮಾಜಿಕ ಕಟ್ಟಳೆಗಳನ್ನು ಲಕ್ಷ್ಮಣರೇಖೆಯಂತೆ ಪಾಲಿಸುತ್ತಿದ್ದುದು, ಪಾಲಿಸುತ್ತಿರುವುದು ಬಹಳ ಬೇಸರದ ವಿಷಯವೇ ಸರಿ. ನನ್ನಜ್ಜಿ ಹಳೆಯ ತಲೆಮಾರಿಗೆ ಸೇರಿದ ಹೆಣ್ಣುಮಗಳು. ಸಹಜವಾಗಿಯೇ ಮನೆಯಲ್ಲಿ ಧರ್ಮ, ಸಂಪ್ರದಾಯ, ಕಟ್ಟಳೆ, ಆಚಾರಗಳೆಲ್ಲಾ ಇದ್ದವು. ಮನೆಯ ಹಿತ್ತಿಲು ದಾಟಿ ಎರಡು ಹೆಜ್ಜೆ ಹಾಕಿದರೆ ಒಂದು ಮನೆ ಇದೆ. ಆ ಮನೆ ಚೋಮು ಅನ್ನೋರದ್ದು. ಚೋಮುಗೆ ಮಕ್ಕಳೆಂದರೆ ತುಂಬಾ ಇಷ್ಟ. ಊರಿಗೆ ಹೋದಾಗಲೆಲ್ಲಾ ‘ದನಿಕುಲೇ ಬತ್ತರಾ’ ಅಂತ ಪ್ರೀತಿಯಿಂದ ಮಾತನಾಡಿಸುತ್ತಿದ್ದಳು. ಬಿಸು ಕಣಿಗೆ ಎಳೆಯ ಗೇರುಬೀಜದ ತಿರುಳು ತಂದುಕೊಡ್ತಾ ಇದ್ದಳು. ಆದ್ರೆ ನಾವು ಅವರ ಮನೆಗೆ ಹೋಗುವ ಹಾಗಿರಲಿಲ್ಲ. ಮುಟ್ಟುವ ಹಾಗಿರಲಿಲ್ಲ. ಇದು ನಾವು ತುಂಬಾ ಚಿಕ್ಕವರಿದ್ದಾಗಿನ ಮಾತು. ಈಗ ಮನೆಗೆ ಹೋದಾಗಲೆಲ್ಲಾ ಚೋಮು ಅದೇ ಪ್ರೀತಿಯೊಂದಿಗೆ ಬರ್ತಾಳೆ, ಜೊತೆಗೆ ತಲೆ ನೇವರಿಸಿ ಮುತ್ತನ್ನೂ ಇಕ್ಕುತ್ತಾಳೆ. ಅಜ್ಜಿ ಈಗ ಯಾವುದೇ ಕಟ್ಟಳೆಗಳನ್ನು ಹಾಕುವುದಿಲ್ಲ. ಮನಸ್ಸಲ್ಲಿ ಯಾವುದೇ ಹುಳುಕುಗಳಿಲ್ಲ. ಬದಲಾಗಿ ಚೋಮುವಿನ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ, ಪ್ರೀತಿಯಿದೆ. ಸಂಪ್ರದಾಯ, ಜಾತಿ-ಮತಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನೂ ಕೊಡುವುದಿಲ್ಲ. ಅಜ್ಜಿಯ ಯೋಚನಾ ವೈಖರಿ ಕೂಡಾ ಕಾಲಕ್ಕೆ ತಕ್ಕಂತೆ ಬದಲಾಗಿದೆ. ನಾನು ಅನ್ಯ ಜಾತಿಯ ಹುಡುಗಿಯನ್ನು ಮದುವೆ ಆಗ್ತೀನಿ ಅಂದಾಗ ಮೊದಲ ಬೆಂಬಲ ಸಿಕ್ಕಿದ್ದೇ ನನ್ನ ಅಜ್ಜಿಯಿಂದ. ಸಂಪ್ರದಾಯದಂಥ ಸಂಪ್ರದಾಯವನ್ನು ಮೈಗೂಡಿಸಿ ಬೆಳೆದ, ಬಾಳಿದ ನನ್ನ ಅಜ್ಜಮ್ಮನೇ ಇಷ್ಟೊಂದು ಬದಲಾಗಿರುವಾಗ ನಾವು ಯಾಕೆ ಬದಲಾಗಬಾರದು? ನಮ್ಮ ಯೋಚನಾ ಶೈಲಿ ಯಾಕೆ ಬದಲಾಗಬಾರದು? ಧರ್ಮ, ಸಂಸ್ಕೃತಿ ಬೇಕು ನಿಜ. ಆದ್ರೆ ಅದು ದೇಶಕ್ಕಿಂತ ದೊಡ್ದದಲ್ಲ.ಜಾತಿ-ಮತ, ಪ್ರಾಂತ್ಯ, ರಾಜ್ಯಗಳ ಸೀಮೆಗಳನ್ನು ದಾಟಿ ಸುಭದ್ರವಾದ ಭಾರತವನ್ನೇಕೆ ಕಟ್ಟಬಾರದು?

ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ವಂದೇ ಮಾತರಂ. . .

Wednesday, August 05, 2009

ಯೆಡ್ಡಿ, ಜೈ ಹೋ. . .

ಒಂದು ದಶಕದ ಬಳಿಕವೂ ದೇಶಕ್ಕಾಗಿ ಹೋರಾಡಿದ, ಹೋರಾಡಿ ಬಲಿದಾನ ಮಾಡಿದ ರಾಜ್ಯದ ಸುಮಾರು ಹದಿನೈದು ಯೋಧರನ್ನು ರಾಜ್ಯ ಸರಕಾರ ನೆನೆಸಿಕೊಂಡು ಸಹಾಯ ಹಸ್ತವನ್ನು ಚಾಚಿದ್ದು ತುಂಬಾ ಸಂತೋಷದ ವಿಷಯ. ವಿಜಯ ದಿವಸದ ಮರುದಿನವೇ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಕಾರ್ಗಿಲ್ ಯುದ್ಧದಲ್ಲಿ ಮಡಿದ ಹಾಗೂ ಗಾಯಗೊಂಡ ಯೋಧರ ಕುಟುಂಬಗಳಿಗೆ ತಲಾ 5 ಲಕ್ಷ ಹಾಗೂ 1 ಲಕ್ಷ ರುಪಾಯಿಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಜೊತೆಗೆ ಸರಕಾರ ಆ ಯೋಧರ ಮಕ್ಕಳ ವಿದ್ಯಾಭ್ಯಾಸದ ಭಾರವನ್ನು ಹೊರುವುದಾಗಿಯೂ ಭರವಸೆಯನ್ನು ನೀಡಿದ್ದಾರೆ. ನಿಜವಾಗ್ಲೂ ಸರಕಾರದ ನಿಲುವು ಶ್ಲಾಘನೀಯ. “ಇವನ್ಯಾರೋ ಯೆಡ್ಡಿಯನ್ನು, ಬಿಜೆಪಿ ಸರಕಾರವನ್ನು ಹೊಗಳ್ತಾ ಇದ್ದಾನೆ. ಬಹುಶಃ ಬಿಜೆಪಿಯವನಾಗಿರಬೇಕು” ಅಂತ ನೀವೇನಾದ್ರು ತಿಳ್ಕೊಂಡ್ರೆ ತಪ್ಪು ನಂದಲ್ಲ. ನಾನು ಬಿಜೆಪಿಯವನೂ ಅಲ್ಲ, ಕಾಂಗ್ರೆಸಿಗನೂ ಅಲ್ಲ ಒಳ್ಳೆಯ ಕೆಲಸವೊಂದನ್ನು ಸಮರ್ಥಿಸುತ್ತಿದ್ದೇನೆ ಅಷ್ಟೆ.

ಸಾಮಾನ್ಯವಾಗಿ ಸೈನ್ಯ ಸೇರುವವರು ಎರಡು ವಿಧದ ಜನರು. ಮೊದಲನೆಯ ವಿಧದಲ್ಲಿರುವ ಜನ ನನ್ನ ಗೆಳೆಯ ಹೃಷಿಯಂತವರು. ಸೈನ್ಯ ಸೇರಬೇಕೆಂಬ ಆಸೆ, ಛಲ ಎರಡೂ ಇರುತ್ತದೆ. ಸೇನೆಯ ಸಮವಸ್ತ್ರ ಧರಿಸಬೇಕೆಂಬ ಹೊಂಗಸನ್ನು ಹೊತ್ತು ದಿನ-ರಾತ್ರಿ ಅದಕ್ಕಾಗಿ ಕಷ್ಟ ಪಡುತ್ತಾರೆ (ಅಂದ ಹಾಗೆ ಹೃಷಿ ಈಗ ಭಾರತೀಯ ನೌಕಾ ಸೇನೆಯಲ್ಲಿದ್ದಾನೆ). ವೃದ್ಧ ತಂದೆ-ತಾಯಿಯ ಹೆಗಲಾಗುವ ಆಸೆಯಿಂದ, ಕುಟುಂಬ ಘೋಷಣೆಯ ಸಲುವಾಗಿ ಸೈನ್ಯ ಸೇರುವವರು ಎರಡನೇ ವಿಧದ ಜನರು. ಹಾಗಂತ ಇವರು ಮೊದಲನೇ ವಿಧದ ಜನಕ್ಕಿಂತ ಕಡಿಮೆ ಸಾಮರ್ಥ್ಯದವರಲ್ಲ, ಸ್ವಾರ್ಥಿಗಳೂ ಅಲ್ಲ. ನದಿಯ ಎರಡು ಕವಲುಗಳು ಸಮುದ್ರವನ್ನು ಸೇರುವ ಹಾಗೆ ಈ ಎರಡು ವಿಧದ ಜನರು ಸೇನೆಯನ್ನು ಸೇರುತ್ತಾರೆ. ಹಾದಿ ಯಾವುದಾದರೇನಂತೆ ಗುರಿ ಮಾತ್ರ ಭಾರತೀಯ ಸೇನೆ. ಉದ್ದೇಶ ದೇಶರಕ್ಷಣೆ.

ಕರ್ನಾಟಕದಿಂದ ಸೇನೆಯನ್ನು ಸೇರುವ ಬಹುತೇಕ ಜನರು ಕೊಡಗಿನವರು ಹಾಗೂ ಉತ್ತರ ಕರ್ನಾಟಕದ ಬಳ್ಳಾರಿ, ಬೀದರ್, ಗುಲ್ಬರ್ಗಾ, ಬಿಜಾಪುರ, ಬೆಳಗಾವಿ ಜಿಲ್ಲೆಯವರು. ಕೊಡವರು ಮೂಲತಃ ಸೈನಿಕರೇ. ಸೈನ್ಯಕ್ಕೆ ಸೇರುವುದು ಒಂದು ಹೆಮ್ಮೆಯ ವಿಷಯ ಅವರಿಗೆ. ಉತ್ತರ ಕರ್ನಾಟಕದಲ್ಲಿ ಜೀವನ ಮಟ್ಟ ಸ್ವಲ್ಪ ಕಷ್ಟ. ಹಾಗಂತ ಅವರ ಬಳಿ ಏನೂ ಇಲ್ಲ ಅಂತ ಹೇಳುತ್ತಿಲ್ಲ. ಎಕರೆ ಗಟ್ಟಲೆ ಕೃಷಿ ಭೂಮಿ ಈ ರೈತಾಪಿ ಜನರ ಬಳಿ ಇದೆ. ಆದ್ರೆ ಮಳೆಯ ಅಭಾವವೋ, ಇನ್ಯಾವುದೋ ಕಾರಣಗಳಿಂದ ಚೆನ್ನಾಗಿ ಬೆಳೆ ಕೈಗೆ ಬರುವುದೇ ಇಲ್ಲ. ‘ಕೃಷಿತೋ ದುರ್ಭಿಕ್ಷಂ ನಾಸ್ತಿ’ ಎಂಬ ಮಾತು ಉತ್ತರ ಕರ್ನಾಟಕದ ರೈತರ ಪಾಲಿಗೆ ‘ಕೃಷಿತೋ ದುರ್ಭಿಕ್ಷಂ ಜಾಸ್ತಿ’ ಆಗಿದೆ. (ಇದು ಉತ್ತರ ಕರ್ನಾಟಕದ ಮಾತ್ರವಲ್ಲ ಎಲ್ಲಾ ಕೃಷಿಕರ ಪಾಡು ಅಷ್ಟೆ.) ಬಹುಶಃ ಇದೇ ಕಾರಣಕ್ಕೆ ಬಹಳಷ್ಟು ಉತ್ತರ ಕರ್ನಾಟಕದ ರೈತಾಪಿ ಜನರು, ಕಾರ್ಮಿಕರು ಬೆಂಗಳೂರಿಗೆ ಗುಳೇ ಹೊರಡುತ್ತಾರೆ. ಬೆಂಗಳೂರು ಅವರಿಗೆ ದುಬಾಯಿ, ಅಮೇರಿಕಾ ಇದ್ದ ಹಾಗೆ. ದಿನವಿಡೀ ಮೈ ಮುರಿದು ದುಡಿದು ತಿಂಗಳ ಕೊನೆಗೆ ಮನೆಗೆ ಹಣ ಕಳುಹಿಸಿ ಕೃತಾರ್ಥರಾಗುತ್ತಾರೆ. ಇಂತಹ ಅಸಂಖ್ಯಾತ ಕುಟುಂಬಗಳಿಗೆ ಸೇನೆಯೇ ಕಾಮಧೇನು. ಮನೆ ಮಗ ಸೈನ್ಯ ಸೇರಿದ್ರೆ ಹೆಮ್ಮೆಯಿಂದ ‘ಮಗ ಮಿಲಿಟ್ರಿನಾಗೆ ಇದಾನ್ರೀ’ ಅಂತ ಹೇಳಿಕೊಳ್ಳುತ್ತಾರೆ. ಹೀಗಿದ್ದಾಗ ದೇಶಕ್ಕಾಗಿ ಹೋರಾಡುತ್ತಾ ಏನಾದರೂ ಅನಾಹುತಗಳಾದಲ್ಲಿ ಕುಟುಂಬಕ್ಕೆ ದಿಕ್ಕೇ ಇಲ್ಲದಂತಾಗುತ್ತದೆ.

ಧೋನಿ, ಯುವರಾಜ್, ಇರ್ಫಾನ್, ಜಹೀರ್ ಮುಂತಾದ ಕ್ರಿಕೆಟಿಗರು ಪಾಕಿಸ್ಥಾನದ ವಿರುದ್ಧ ಸೆಂಚುರಿ ಬಾರಿಸಿದರೆ, ಐದಾರು ವಿಕೆಟ್ ಕಿತ್ತರೆ ಅಥವಾ ಯಾವುದಾದರೂ ಮುಖ್ಯವಾದ ಟೂರ್ನಿ ಗೆದ್ದರೆ ಸೈಟು, ಲಕ್ಷಾಂತರ ರುಪಾಯಿಗಳು, ಮನೆ ಅಂತ ಏನೇನೋ ಕೊಡುತ್ತಾರೆ. ಮೊದಲೇ ಲಕ್ಷಾಧೀಶ, ಕೋಟ್ಯಾಧೀಶ ಕ್ರಿಕೆಟಿಗರ ಮೇಲೆ ಅನಾವಶ್ಯಕವಾಗಿ ದುಡ್ಡು ಸುರಿಸುತ್ತಾರೆ. ಆದ್ರೆ ಯುದ್ಧದಲ್ಲಿ ಗತಿಸಿ ಹೋದ ಯೋಧನ ಬಗ್ಗೆ ಯಾರಿಗೂ ಕಾಳಜಿ ಇರುವುದಿಲ್ಲ. ಒಂದೆರಡು ಮೆಡಲುಗಳನ್ನು ಕೊಟ್ಟು ಗೌರವಿಸಿದ್ರೆ ಸಾಕೆ? ಅವನ ಪರಿವಾರದ ಹೊಟ್ಟೆ ತುಂಬಿಸುವುದು ಬೇಡವೇ? ಅವನನ್ನೇ ನಂಬಿ ಬದುಕುವ ವೃದ್ಧ ತಂದೆ-ತಾಯಿ, ಮಡದಿ, ಮಕ್ಕಳು, ಬರೇ ಮನೆಯ ಸೂರನ್ನು ನೋಡ್ತಾ ನಿಟ್ಟುಸಿರು ಬಿಡಬೇಕಷ್ಟೆ. ಯೋಧನೊಬ್ಬ ಮಡಿದಾಗ ಅತ್ಯಪೂರ್ವ ಸೈನ್ಯ ಸತ್ಕಾರವೇನೋ ಸಿಗುತ್ತದೆ. ತ್ರಿವರ್ಣ ಹೊದಿಸಿದ ದೇಹ, ಸೇನಾವಾದ್ಯಗಳ, ಘೋಷ, ಇಪ್ಪತ್ತೊಂದು ತೋಪಿನ ಸಲಾಮು ಎಲ್ಲವೂ. ಆದರೆ ತೋಪುಗಳ ಸದ್ದು ಕರಗುತ್ತಿದ್ದಂತೆ ಯೋಧನ ನೆನಪುಗಳು ಸ್ಮೃತಿ ಪಟಲದಿಂದ ಮಾಸುತ್ತವೆ.

ಅಂಥದ್ದರಲ್ಲಿ ಯೆಡ್ಡಿ ಸರಕಾರ ಈ ರೀತಿ ಯೋಧರ ಸಹಾಯಕ್ಕೆ ಮುಂದಾಗಿದ್ದು ಅಭಿನಂದನೀಯವೇ ಸರಿ. ಇದು ಬರೀ ಬಾಯಿಮಾತಿನ ಘೋಷಣೆಯಾಗದೆ ಆಚರಣೆಗೆ ಬರಲಿ. ಯೋಧರೆಲ್ಲರ ಕುಟುಂಬಕ್ಕೆ ಸರಕಾರದ ಸರ್ವ ಸವಲತ್ತುಗಳೂ, ಸಹಾಯಗಳೂ ಲಭಿಸಲಿ.

ವಿ.ಸೂ: ನಾನು ಯಾವುದೇ ಪಕ್ಷದ ವಕ್ತಾರನೂ ಅಲ್ಲ, ಬೆಂಬಲಿಗನೂ ಅಲ್ಲ. ಜವಾಬ್ದಾರಿಯುತ ನಾಗರಿಕನಂತು ಅಲ್ಲವೇ ಅಲ್ಲ. ಯಾಕಂದ್ರೆ ನಾನು ಈ ವರೆಗೆ ಮತವನ್ನೇ ಚಲಾಯಿಸಿಲ್ಲ.