Monday, December 21, 2009

ಕಲಾವಿದನ ಕುಂಚದಲ್ಲಿ ರಾಮಾಯಣ: ಸುಂದರಕಾಂಡ

ಜಾಂಬವಂತನ ಮಾತುಗಳಿಂದ ಆಂಜನೇಯನಲ್ಲಿ ಹೊಸ ಉತ್ಸಾಹ ಹೊಮ್ಮುತ್ತದೆ. ಬಾಲ್ಯದಲ್ಲಿ ಸೂರ್ಯನನ್ನು ಹಣ್ಣೆಂದು ಭಾವಿಸಿ ಆತನನ್ನು ತಿನ್ನಲು ಗಗನಕ್ಕೆ ಹಾರಿದ್ದು, ಇಂದ್ರನ ವಜ್ರದಿಂದ ಹನುವು ಘಾಸಿಗೊಂಡು ಭೂಮಿಗೆರಗಿದ್ದು, ದೇವತೆಗಳೆಲ್ಲರಿಂದ ವಿವಿಧ ಶಕ್ತಿಗಳನ್ನು ಆಶೀರ್ವಾದ ರೂಪದಲ್ಲಿ ಪಡೆದದ್ದು, ಸಾಕ್ಷಾತ್ ಸೂರ್ಯನಾರಾಯಣನ ಶಿಷ್ಯನಾಗಿ ಸರ್ವವೇದಶಾಸ್ತ್ರ ಪಾರಂಗತನಾಗಿದ್ದ ವಿಷಯಗಳೆಲ್ಲವೆನ್ನೂ ಜಾಂಬವಂತನು ಆಂಜನೀಪುತ್ರನಿಗೆ ತಿಳಿಸುತ್ತಾನೆ. ರಾಮಕಾರ್ಯ ಸಾಧಿಸುವ ಉತ್ಸಾಹ ಹನುಮನಲ್ಲಿ ನೂರ್ಮಡಿಗೊಳ್ಳುತ್ತದೆ. ಸಾಗರವನ್ನು ಲಂಘಿಸಿ ಲಂಕೆಗೆ ಹೋಗಿ ಬರುವುದಾಗಿ ವಾನರವೀರರಿಗೆ ಆಶ್ವಾಸನೆ ಕೊಡುತ್ತಾನೆ. ತನ್ನ ದೇಹವನ್ನು ಆಕಾಶದೆತ್ತರಕ್ಕೆ ಹಿಗ್ಗಿಸಿ, ‘ಜೈ ಶ್ರೀರಾಮ್’ ಎಂದು ಜಯಘೋಷ ಮಾಡಿ ಗಗನಕ್ಕೆ ಚಿಮ್ಮುತ್ತಾನೆ. ಹನುಮನು ಚಿಮ್ಮಿದ ರಭಸಕ್ಕೆ ಮಹೇಂದ್ರ ಪರ್ವತವೇ ಅಲ್ಲಾಡಿತು. ವಿಷ್ಣುವಿನ ವಾಹನನಾದ ಗರುಡನಂತೆ ಆಂಜನೇಯನು ಸಾಗರದ ಮೇಲೆ ಹಾರುತ್ತಿದ್ದನು. ಆತನಿಗೆ ದಣಿವಾಗದಿರಲೆಂದು ದೇವತೆಗಳು ಮೈನಾಕವನ್ನು ಕಳುಹಿಸುತ್ತಾರೆ. ಸಾಗರದ ಮಧ್ಯದಿಂದ ಎದ್ದು ಬಂದ ಮೈನಾಕ ಪರ್ವತದ ಕೋರಿಕೆಯನ್ನು ವಿನಮ್ರವಾಗಿ ನಿರಾಕರಿಸಿದ ಆಂಜನೇಯನು ಸ್ವಾಮಿಕಾರ್ಯ ಸಂಪೂರ್ಣಗೊಳಿಸುವ ತನಕ ವಿರಮಿಸುವುದಿಲ್ಲವೆಂದು ಹೇಳಿ ಮುಂದೆ ಸಾಗುತ್ತಾನೆ. ವಾಯುವಿನ ವೇಗದಲ್ಲಿ ಹಾರುತ್ತಿರುವ ಆಂಜನೇಯನ್ನು ಪರೀಕ್ಷಿಸಲೆಂದು ದೇವತೆಗಳು ನಾಗಮಾತೆ ಸುರಸೆಯನ್ನು ಕಳುಹಿಸುತ್ತಾರೆ. ರಾಕ್ಷಸಿರೂಪವನ್ನು ಧರಿಸಿ ಸುರಸೆಯು ಆಂಜನೇಯನ್ನು ತಡೆಯುತ್ತಾಳೆ. ತನಗೆ ಹಸಿವಾಗಿದೆಯೆಂದೂ, ತನಗೆ ಆಹಾರವಾಗಬೇಕೆಂದೂ ಹನುಮನಿಗೆ ಸುರಸೆಯು ಹೇಳುತ್ತಾಳೆ. ಅದಕ್ಕೆ ಹನುಮನು ರಾಮಕಾರ್ಯಕ್ಕಾಗಿ ಹೋಗುತ್ತಿರುವೆನೆಂದೂ, ಲಂಕೆಯಿಂದ ಮರಳುವಾಗ ಆಕೆಯ ಇಚ್ಛೆಯನ್ನು ನೆರವೇರಿಸುವುದಾಗಿ ಹೇಳುತ್ತಾನೆ. ಆದರೆ ಇದನ್ನೊಪ್ಪದ ಸುರಸೆಯು ತನ್ನ ಹಸಿವನ್ನು ಈಗಲೇ ನೀಗಿಸಬೇಕೆಂದು ಹೇಳುತ್ತಾಳೆ. ಸಂದಿಗ್ದತೆಯಲ್ಲಿ ಸಿಲುಕಿದ ಹನುಮನು ಸುರಸೆಯ ಬೇಡಿಕೆಯನ್ನು ಮನ್ನಿಸಲು ತನ್ನ ದೇಹದ ಗಾತ್ರವನ್ನು ಬೆಳೆಸುತ್ತಾನೆ. ಅದರ ದುಪ್ಪಟ್ಟು ಗಾತ್ರಕ್ಕೆ ಸುರಸೆಯು ತನ್ನ ಬಾಯಿಯನ್ನು ಹಿಗ್ಗಿಸುತ್ತಾಳೆ. ಕೂಡಲೇ ಹನುಮನು ಅಣುರೂಪ ಧರಿಸಿ ಸುರಸೆಯ ಬಾಯಿಯ ಮೂಲಕ ಆಕೆಯ ಉದರವನ್ನು ಪ್ರವೇಶಿಸಿ ಹೊರಬರುತ್ತಾನೆ, ಹನುಮನ ಬುದ್ಧಿಮತ್ತೆಯನ್ನು ಪ್ರಶಂಸಿಸಿದ ಸುರಸೆಯು ಆತನನ್ನು ಹರಸುತ್ತಾಳೆ. ಸಾಕ್ಷಾತ್ ಗರುಡನಂತೆ ವಾಯುವಿನ ವೇಗದಲ್ಲಿ ಹನುಮನು ಲಂಕೆಯೆಡೆಗೆ ಗಮಿಸುತ್ತಿರುವಂತೆ ಆತನನ್ನು ಯಾರೋ ತಡೆದಂತೆ ಭಾಸವಾಗುತ್ತದೆ. ಸಿಂಹಿಕೆಯೆಂಬ ರಾಕ್ಷಸಿಯು ಹನುಮನ ನೆರಳನ್ನು ಹಿಡಿದು ಆತನನ್ನು ತಡೆಯುತ್ತಾಳೆ. ತನ್ನ ದೇಹವನ್ನು ಕುಗ್ಗಿಸಿ, ಆಕೆಯ ಉದರಕ್ಕಿಳಿದು ದೇಹವನ್ನು ಹಿಗ್ಗಿಸುತ್ತಾನೆ, ಪರಿಣಾಮವಾಗಿ ಸಿಂಹಿಕೆಯು ಅಸುನೀಗುತ್ತಾಳೆ. ವೇಗವಾಗಿ ಸಾಗರವನ್ನು ಕ್ರಮಿಸಿ ಹನುಮನು ಸ್ವರ್ಣಲಂಕೆ ತಲುಪುತ್ತಾನೆ. ವಿಶ್ವಕರ್ಮ ನಿರ್ಮಿತ ಲಂಕೆಯು ನಾಲ್ಕೂ ದಿಕ್ಕುಗಳಿಂದ ಸಾಗರದಿಂದ ಆವೃತವಾಗಿತ್ತು. ಕೇತಕ, ಉದ್ದಾಲಕ, ನಾರೀಕೇಳ ವೃಕ್ಷಗಳಿಂದ ಹಸಿರು ನಳನಳಿಸುತ್ತಿತ್ತು. ನಗರದ ಸುತ್ತಲೂ ಕಟ್ಟಿರುವ ಬಲಿಷ್ಠವಾದ ಕೋಟೆಯನ್ನು ಭಯಂಕರರಾದ ರಾಕ್ಷಸರು ಕಾಯುತ್ತಿದ್ದರು. ಲಂಕೆಯ ಹೆಬ್ಬಾಗಿಲನ್ನು ಸಾಕ್ಷಾತ್ ಲಂಕಿಣಿಯೇ ಕಾಯುತ್ತಿದ್ದಳು. ನೈಸರ್ಗಿಕವಾಗಿ ಸುರಕ್ಷಿತವಾಗಿರುವ ಲಂಕೆಯನ್ನು ಗೆಲ್ಲುವುದು ದೇವತೆಗಳಿಗೂ ಅಸಾಧ್ಯ! ಲಂಕೇಶನು ಮಾತೆ ಸೀತೆಯನ್ನು ಇಲ್ಲೇ ಅಡಗಿಸಿರಬಹುದೆಂದು ಭಾವಿಸುತ್ತಾ, ಸೂರ್ಯಾಸ್ತವಾಗುವುದನ್ನು ಆಂಜನೇಯನು ಕಾಯುತ್ತಿದ್ದನು.

ಸೂರ್ಯಾಸ್ತದ ಬಳಿಕ ಇಂದ್ರನ ಅಮರಾವತಿಯಂತಿರುವ ಲಂಕೆಯನ್ನು ಪ್ರವೇಸಿಸುತ್ತಿರುವಂತೆ ಲಂಕಿಣಿಯು ಹನುಮನನ್ನು ತಡೆಯುತ್ತಾಳೆ. ವಿಕಾರವಾಗಿ ಅರಚುತ್ತಾ ಲಂಕಿಣಿಯು ಪ್ರಬಲವಾದ ಹೊಡೆತವನ್ನು ಆಂಜನೇಯನಿಗೆ ಕೊಡುತ್ತಾಳೆ. ಇದರಿಂದ ಕೋಪಗೊಂಡ ವಾನರಶ್ರೇಷ್ಠನು ಲಂಕಿಣಿಗೆ ಬಲವಾದ ಗುದ್ದೊಂದನ್ನು ಕೊಡುತ್ತಾನೆ. ಇಷ್ಟಕ್ಕೇ ಧರೆಗುರುಳಿದ ಲಂಕಿಣಿಗೆ ‘ವಾನರೊಬ್ಬನ ಪ್ರಹಾರದಿಂದ ಘಾಸಿಗೊಂಡಾಗ ಲಂಕೆಯ ಅಂತ್ಯ ಸಮೀಪಿಸಿದೆಯೆಂದು ತಿಳಿ’ ಎಂಬ ಬ್ರಹ್ಮದೇವನ ಮಾತು ನೆನಪಿಗೆ ಬರುತ್ತದೆ. ವಾನರವೀರನನ್ನು ಲಂಕೆಯನ್ನು ಪ್ರವೇಶಿಸುವಂತೆ ಲಂಕಿಣಿಯು ಹೇಳುತ್ತಾಳೆ. ಸೀತೆಯನ್ನು ಹುಡುಕುತ್ತಾ ಹನುಮನು ರಾವಣನ ಅರಮನೆಯನ್ನು ಪ್ರವೇಶಿಸುತ್ತಾನೆ. ವಜ್ರ, ವೈಢೂರ್ಯ, ಮುತ್ತು, ಮಾಣಿಕ್ಯಗಳಿಂದ ಲಂಕೇಶನ ಅರಮನೆ ಶೋಭಿತವಾಗಿತ್ತು. ಹಿಂದೊಮ್ಮೆ ಕುಬೇರನ ವಶದಲ್ಲಿದ್ದ ಪುಷ್ಪಕವಿಮಾನವನ್ನೂ ಹನುಮನು ನೋಡುತ್ತಾನೆ. ಸಂಪೂರ್ಣ ಅರಮನೆಯನ್ನು ಹುಡುಕಿದರೂ ಸೀತೆಯ ಪತ್ತೆ ಇಲ್ಲ. ಕೊನೆಗೆ ವಾನರೇಂದ್ರನು ಅಶೋಕವನದಲ್ಲಿ ಮಾತೆ ಸೀತೆಯ ಹುಡುಕಾಟವನ್ನು ಮುಂದುವರಿಸುತ್ತಾನೆ. ಮಾವು, ಉದ್ದಾಲಕ, ಚಂಪಕ, ನಾಗ, ಅಶೋಕ ಮುಂತಾದ ಮರಗಳಿಂದ ತಂಬಿತ್ತು ಅಶೋಕವನ. ಅಶೋಕವನದ ಮೂಲೆ ಮೂಲೆ ಹುಡುಕಾಡಿದ ಹನುಮನಿಗೆ ಕೊನೆಗೂ ಮಾತೆ ಸೀತೆ ಕಾಣಿಸುತ್ತಾಳೆ. ಆಕೆಯ ಸುತ್ತವೂ ಭಯಂಕರವಾದ ರಾಕ್ಷಸಿಯರು ಕಾವಲಿದ್ದರು. ಕಾರ್ಮೋಡಗಳ ಮಧ್ಯೆ ಪೂರ್ಣಚಂದ್ರನಂತೆ ಸೀತೆ ಕಾಣಿಸಿದಳು.

ಇನ್ನೇನು ಸೂರ್ಯೋದಯಕ್ಕೆ ಕೆಲವೇ ಪ್ರಹರಗಳಿರಬೇಕಾದರೆ ರಾಕ್ಷಸೇಂದ್ರ ರಾವಣನು ತನ್ನ ಪರಿವಾರದೊಂದಿಗೆ ಸೀತೆಯನ್ನು ನೋಡಲು ಬರುತ್ತಾನೆ. ವನವಾಸಿ ರಾಮನನ್ನು ಮರೆತು ತನ್ನನ್ನು ವರಿಸುವಂತೆ ಸೀತೆಗೆ ಹೇಳುತ್ತಾನೆ, ಅದಕ್ಕೆ ಪ್ರತಿಯಾಗಿ ಸೀತೆಯು, ತಾನು ಪತಿವೃತೆಯೆಂದೂ, ಶ್ರೀರಾಮನೇ ತನ್ನ ಸರ್ವಸ್ವವೆಂದೂ ಹೇಳುತ್ತಾಳೆ. ಅಧರ್ಮಿಯಾದ ರಾವಣನನ್ನು ಕೊನೆಗಾಣಿಸಲು ಲಕ್ಷ್ಮಣ ಸಮೇತನಾಗಿ ರಾಮನು ಬರುವನೆಂದೂ ಸೀತೆಯು ಮರುತ್ತರ ಕೊಡುತ್ತಾಳೆ. ಸೀತೆಯ ಕಠಿಣ ಮಾತುಗಳಿಂದ ಕ್ರುದ್ಧನಾದ ಲಂಕೇಶನು ತನ್ನನ್ನು ವರಿಸಲು ಎರಡು ತಿಂಗಳ ಅವಧಿಯನ್ನು ಕೊಡುತ್ತಾನೆ. ಸೀತೆಯ ಮನವೊಲಿಸುವಂತೆ ರಾಕ್ಷಸಿಯರಿಗೆ ಹೇಳಿ ರಾವಣನು ವಾಟಿಕೆಯಿಂದ ನಿರ್ಗಮಿಸುತ್ತಾನೆ, ರಾಕ್ಷಸಿಯರು ರಾವಣನನ್ನು ವರಿಸುವಂತೆ ಸೀತೆಯನ್ನು ಪರಿಪರಿಯಾಗಿ ಪೀಡಿಸುತ್ತಿರುವುದನ್ನೂ, ರಾಮನ ಪ್ರತಿ ಸೀತೆಯ ಅಮಿತವಾದ ಪ್ರೀತಿಯನ್ನೂ ಹನುಮನು ಮರೆಯಲ್ಲಿ ನಿಂತು ಗಮನಿಸುತ್ತಿರುತ್ತಾನೆ.

ಸೀತೆಯ ಮುಂದೆ ಹೇಗೆ ಪ್ರಕಟವಾಗುವುದು? ತಾನು ಶ್ರೀರಾಮನ ಸೇವಕನೆಂದು ಹೇಗೆ ಆಕೆಗೆ ತಿಳಿಯಪಡಿಸುವುದು ಎಂಬ ಗೊಂದಲ ಕಪಿವೀರನನ್ನು ಕಾಡುತ್ತದೆ. ಹನುಮನು ಸೀತೆಗೆ ಕೇಳಿಸುವಂತೆ ರಾಮಕಥೆಯನ್ನು ಸುಶ್ರಾವ್ಯವಾಗಿ ಹಾಡುತ್ತಾನೆ. ರಾಮನ ಕಥೆಯನ್ನು ಕೇಳಿದ ಸೀತೆಯ ಮುಖಾರವಿಂದವು ಅರಳುತ್ತದೆ. ಹನುಮನನ್ನು ಕಂಡ ಸೀತೆಯು ಬೆದರಿಹೋಗುತ್ತಾಳೆ. ತನ್ನನ್ನು ಮೋಸ ಮಾಡಲು ರಾಕ್ಷಸನ್ಯಾರೋ ವಾನರರೂಪದಲ್ಲಿ ಬಂದಿದ್ದಾನೆಂದು ಭಾವಿಸುತ್ತಾಳೆ. ಇದನ್ನರಿತ ಕಪೀಶನು ವಿನಮ್ರವಾಗಿ ಸೀತೆಯ ಬಳಿ ಬಂದು ಆಕೆಯೇ ಮಾತೆ ಸೀತೆಯೆಂದು ತಿಳಿದುಕೊಳ್ಳುತ್ತಾನೆ, ತಾನು ರಾಮದೂತನೆಂದೂ, ವಾನರರಾಜ ಸುಗ್ರೀವನ ಆಜ್ಞೆಯಂತೆ ಸೀತೆಯನ್ನು ಹುಡುಕುತ್ತಾ ಲಂಕೆಗೆ ಬಂದೆನೆಂದೂ ಹೇಳುತ್ತಾನೆ. ಸೀತೆಗೆ ರಾಮನನ್ನು ಭೇಟಿಯಾದ ರೀತಿ, ಸುಗ್ರೀವ ಸಖ್ಯ, ವಾಲಿ ವಧೆ, ಸಾಗರೋಲ್ಲಂಘನ ಎಲ್ಲವನ್ನೂ ವಿವರಿಸಿ ಶ್ರೀರಾಮನ ಮುದ್ರೆಯುಂಗುರವನ್ನು ಕೊಡುತ್ತಾನೆ. ಅದನ್ನು ನೋಡಿ ಸೀತೆಯು ಅತ್ಯಂತ ಸಂತೋಷಿತಳಾಗುತ್ತಾಳೆ. ಹನುಮನ ಕೋರಿಕೆಯಂತೆ ಚೂಡಾಮಣಿಯನ್ನು ಆತನ ಕೈಗಿತ್ತು ರಾಮನಿಗೆ ಕೊಡುವಂತೆ ಹೇಳುತ್ತಾಳೆ. ಸ್ವಯಂ ರಾಮನೇ ಲಂಕೆಗೆ ಬಂದು ತನ್ನನ್ನು ಬಂಧನದಿಂದ ಬಿಡಿಸಬೇಕೆಂದೂ ಹೇಳುತ್ತಾಳೆ.

ರಾವಣನ ಸಾಮರ್ಥ್ಯವನ್ನು ಪರೀಕ್ಷಸಲೋಸುಗ ವಾನರೇಂದ್ರನು ಅಶೋಕವಾಟಿಕೆಯನ್ನು ಧ್ವಂಸಗೊಳಿಸುತ್ತಾನೆ. ತಡೆಯಲು ಬಂದ ಅಸುರರನ್ನು ಯಮಸದನಕ್ಕಟ್ಟುತ್ತಾನೆ ಕಪೀಶ. ರಾವಣನ ಆದೇಶದಂತೆ ಹನುಮನನ್ನು ಸೆರೆ ಹಿಡಿಯಲು ಬಂದ ಜಂಬುಮಾಲಿಯೂ ಕಾಲವಾಗುತ್ತಾನೆ. ಆತನ ಸಹಾಯಕ್ಕೆ ಧಾವಿಸಿದ ಆತನ ಮಕ್ಕಳೂ ಗತಿಸುತ್ತಾರೆ, ರಾವಣಸುತ ಅಕ್ಷಕುಮಾರನೂ ವೀರಾವೇಷದಿಂದ ಹೋರಾಡಿದರೂ ಮಾರುತಿಯ ಮುಂದೆ ಆತನ ಆಟವೇನೂ ನಡೆಯಲಿಲ್ಲ. ತಮ್ಮ ಅಕ್ಷಕುಮಾರನು ಅಸುನೀಗಿದ್ದನ್ನು ಕಂಡು ಸ್ವಯಂ ಮೇಘನಾದನೇ ಯುದ್ಧಕ್ಕೆ ಬರುತ್ತಾನೆ. ತನ್ನೆಲ್ಲಾ ಬಾಣಗಳೂ ಹನುಮನಿಂದ ನಿಷ್ಕ್ರಿಯಗೊಂಡಾಗ ಆತನೆಡೆಗೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುತ್ತಾನೆ. ಮಹಾಸ್ತ್ರಕ್ಕೆ ಗೌರವ ಸಲ್ಲಿಸಲೋಸುಗ ವಾನರಶ್ರೇಷ್ಠನು ತಾನಾಗಿಯೇ ಬಂಧಿತಗೊಳ್ಳುತ್ತಾನೆ. ಲಂಕೇಶನ ಅಸ್ಥಾನದಲ್ಲಿ ಯೋಗ್ಯವಾದ ಉಪಚಾರವೂ, ಆಸನವೂ ಸಿಗದೆ ತನ್ನದೇ ಬಾಲವನ್ನು ಸುರುಳಿಸಿ ಯೋಗ್ಯವಾದ ಆಸನವನ್ನು ಹನುಮನು ಸಿದ್ಧಗೊಳಿಸುತ್ತಾನೆ. ರಾವಣನು ಆಂಜನೇಯನ ಪರಿಚಯವನ್ನು ಕೇಳಲು, ತಾನು ಶ್ರೀರಾಮನು ದೂತನೆಂದೂ, ರಾವಣನು ಮಾಡಿದ ಸೀತಾಪಹರಣವು ಧರ್ಮೋಚಿತವಲ್ಲವೆಂದೂ, ಸೀತೆಯನ್ನು ರಾಮನಿಗೆ ಒಪ್ಪಿಸಿ ಕ್ಷಮೆಯಾಚಿಸಿದಲ್ಲಿ ಮಹಾ ಕರುಣಾಳುವಾದ ರಾಘವನು ಕ್ಷಮಿಸುವನೆಂದೂ ಹೇಳುತ್ತಾನೆ, ಇದರಿಂದ ಕ್ರುದ್ಧನಾದ ಲಂಕೇಶನು ಹನುಮನು ತೋರಿದ ಉದ್ಧಟತನಕ್ಕೆ ಮರಣದಂಡನೆಯನ್ನು ವಿಧಿಸುತ್ತಾನೆ. ಆದರೆ ಧರ್ಮಾತ್ಮನಾದ ವಿಭೀಷಣನು ದೂತನನ್ನು ಕೊಲ್ಲುವುದು ಧರ್ಮವಲ್ಲ. ಅದರ ಬದಲು ಯಾವುದಾದರೂ ಘೋರ ಶಿಕ್ಷೆಯನ್ನು ಕೊಡಬೇಕೆಂದು ಸಲಹೆ ನೀಡುತ್ತಾನೆ. ಅದರಂತೆ ರಾವಣನು ಕಪಿಗೆ ಪ್ರಿಯವಾದ ಬಾಲಕ್ಕೆ ಬೆಂಕಿಯಿಡುವಂತೆ ಆದೇಶಿಸುತ್ತಾನೆ.

ಇದರಿಂದ ಉತ್ಸಾಹಗೊಂಡ ರಾಕ್ಷಸರು ಹನುಮನ ಬಾಲಕ್ಕೆ ಬಟ್ಟೆ ಸುತ್ತುತ್ತಾರೆ. ಆದರೆ ಹನುಮನ ಬಾಲವು ಬೆಳೆಯುತ್ತಾ ಹೋಯಿತು. ಅರಮನೆಯ ಬಟ್ಟೆಯೆಲ್ಲಾ ಮುಗಿದು ಹೋದವು. ಅಸುರರ ಕೈಗಳು ಸೋತು ಸುಣ್ಣವಾದವು. ಕೊನೆಗೆ ಎಣ್ಣೆ ಸುರಿದು ಬಾಲಕ್ಕೆ ಬೆಂಕಿ ಹಚ್ಚುತ್ತಾರೆ. ಬಂಧನದಿಂದ ಮುಕ್ತಗೊಂಡು, ಛಂಗನೆ ಹಾರಿ ರಾಮದೂತನು ಲಂಕೆಯ ಆಯಕಟ್ಟಿನ ಜಾಗಗಳಿಗೆ ಅಗ್ನಿಸ್ಪರ್ಷ ಮಾಡುತ್ತಾನೆ. ಕ್ಷಣದಲ್ಲೇ ನಗರದ ಎಲ್ಲೆಡೆ ಅಗ್ನಿಯ ಕೆನ್ನಾಲಿಗೆಗಳು ಹೊರಚಾಚಿ ಎಲ್ಲವನ್ನೂ ದಹಿಸುತ್ತವೆ. ಲಂಕಾನಗರದಲ್ಲಿ ಜನರ ಹಾಹಾಕಾರ ಕೇಳತೊಡಗುತ್ತದೆ. ವಾನರವೀರನು ಸಾಗರದಲ್ಲಿ ತನ್ನ ಬಾಲವನ್ನದ್ದಿ ಬೆಂಕಿಯನ್ನು ಆರಿಸುತ್ತಾನೆ,

ಅಶೋಕವನಕ್ಕೆ ಮರಳಿ ಸೀತೆಯು ಸಕುಶಲವಾಗಿರುವುದನ್ನು ಕಂಡು ಸಂತೋಷಗೊಂಡು, ಸಾಗರದಾಚೆ ಇರುವ ವಾನರವೀರರನ್ನು ಸೇರಲು ಮರಳುತ್ತಾನೆ. ಮಾತಿನಂತೆ ಮೈನಾಕದ ಮೇಲೆ ವಿರಮಿಸಿ ಅಂಗದ, ಜಾಂಬವಂತಾದಿಗಳನ್ನು ಸೇರುತ್ತಾನೆ. ರಾಮಕಾರ್ಯ ಸಫಲವಾಗಿದ್ದರಿಂದ ವಾನರರೆಲ್ಲಾ ಅತೀವ ಸಂತೋಷಪಡುತ್ತಾರೆ. ಹನುಮನ ಸಾಹಸವನ್ನು ಆತನಿಂದ ಕೇಳಿ ತಿಳಿಯುತ್ತಾರೆ. ದಕ್ಷಿಣದೆಡೆಗೆ ಮರಳಿದ ವಾನರರೆಲ್ಲಾ ಶ್ರೀರಾಮನ ಜಯಕಾರ ಮಾಡುತ್ತಾ ಕಿಷ್ಕಿಂಧೆಗೆ ಮರಳುತ್ತಾರೆ. ತಾನು ಸೀತೆಯನ್ನು ಲಂಕೆಯಲ್ಲಿ ನೋಡಿರುವುದಾಗಿಯೂ, ಆಕೆಯನ್ನು ಭೇಟಿಯಾಗಿರುವುದಾಗಿಯೂ, ಅಲ್ಲಿ ನಡೆದ ಘಟನೆಗಳನ್ನೆಲ್ಲಾ ಸವಿಸ್ತಾರವಾಗಿ ಹನುಮನು ರಾಮನಿಗೆ ತಿಳಿಸುತ್ತಾನೆ. ಸೀತೆಯಾಡಿದ ಪ್ರತಿಯೊಂದು ಮಾತನ್ನು ತಪ್ಪದೆ ರಾಮನಿಗೆ ತಿಳಿಸುತ್ತಾ, ಸೀತಾ ಮಾತೆ ಕೊಟ್ಟಿರುವ ಚೂಡಾಮಣಿಯನ್ನು ರಾಮನ ಕೈಗಳಲ್ಲಿ ಇರಿಸುತ್ತಾನೆ ಕಪಿಶ್ರೇಷ್ಠ. ರಾಮನ ಕಣ್ಣಾಲಿಗಳು ತುಂಬಿ ಹನುಮನನ್ನು ಆಲಂಗಿಸಿಕೊಳ್ಳುತ್ತಾನೆ.

ಚಿತ್ರಕೃಪೆ: www.masters-gallery.com

Wednesday, November 18, 2009

ಕಲಾವಿದನ ಕುಂಚದಲ್ಲಿ ರಾಮಾಯಣ: ಕಿಷ್ಕಿಂಧಾಕಾಂಡ

ಋಷ್ಯಮೂಕದೆಡೆಗೆ ಬರುತ್ತಿರುವ ಜಟಾಧಾರಿ, ಧನುರ್ಧಾರಿ ವೀರರನ್ನು ನೋಡಿ ಸುಗ್ರೀವನು ಚಿಂತಿತನಾಗುತ್ತಾನೆ. ಮಹಾಮುನಿ ಮತಂಗರ ಶಾಪದ ಪರಿಣಾಮವಾಗಿ ಕಿಷ್ಕಿಂಧಾಪತಿ ವಾಲಿ ಋಷ್ಯಮೂಕಕ್ಕೆ ಕಾಲಿಡುವಂತಿರಲಿಲ್ಲ. ಇದರಿಂದಾಗಿ ತನ್ನ ವಧೆಗಾಗಿ ವಾಲಿಯು ಯೋಧರನ್ನು ಕಳುಹಿಸಿದ್ದಾನೆಂಬುದು ಸುಗ್ರೀವನ ಚಿಂತೆಗೆ ಕಾರಣ, ಅಪರಿಚಿತ ಧನುರ್ಧಾರಿಗಳ ಬಗ್ಗೆ ತಿಳಿದುಕೊಂಡು ಬರುವಂತೆ ತನ್ನ ಆಪ್ತನೂ, ಬುದ್ಧಿಶಾಲಿಯೂ ಆದ ಹನುಮಂತನಿಗೆ ಸುಗ್ರೀವನು ಹೇಳುತ್ತಾನೆ. ಅದರಂತೆ ಸನ್ಯಾಸಿಯ ವೇಷ ಧರಿಸಿ ಹನುಮನು ರಾಮ-ಲಕ್ಷ್ಮಣರ ಬಳಿಗೆ ಬರುತ್ತಾನೆ. ತನ್ನ ಪಾಂಡಿತ್ಯವನ್ನೂ, ಮಾತುಗಾರಿಕೆಯನ್ನೂ ಅತ್ಯಂತ ಕುಶಲವಾಗಿ ಬಳಸುತ್ತಾ ರಾಮ-ಲಕ್ಷ್ಮಣರ ಸಂಪೂರ್ಣ ವೃತ್ತಾಂತವನ್ನು ತಿಳಿದುಕೊಳ್ಳುತ್ತಾನೆ. ರಾಮ-ಲಕ್ಷ್ಮಣರು ಸುಗ್ರೀವನ ಸಖ್ಯವನ್ನು ಬೆಳೆಸುವ ಸಲುವಾಗಿ ಬಂದಿದ್ದಾರೆಂದು ತಿಳಿದು ಹನುಮನು ನಿರಾಳವಾಗುತ್ತಾನೆ. ಶ್ರೀರಾಮನ ಪರಮ ಭಕ್ತನಾದ ಮಾರುತಿಯು ಸಂತೋಷಗೊಂಡು ತನ್ನ ನಿಜರೂಪವನ್ನು ಪ್ರಕಟಿಸುತ್ತಾನೆ. ರಾಮ-ಲಕ್ಷ್ಮಣರನ್ನು ಆಲಂಗಿಸಿದ ಹನುಮನು ರಾಘವರನ್ನು ಋಷ್ಯಮೂಕಕ್ಕೆ ಕರೆದೊಯ್ಯುತ್ತಾನೆ.

ರಾಮ – ಲಕ್ಷ್ಮಣರನ್ನು ಸುಗ್ರೀವನಿಗೆ ಪರಿಚಯಿಸಿದ ಹನುಮನು, ಶ್ರೀರಾಮನೊಂದಿಗೆ ಸ್ನೇಹವನ್ನು ಬೆಳೆಸುವಂತೆ ಸಲಹೆ ನೀಡುತ್ತಾನೆ. ಅದರಂತೆ ಅಗ್ನಿಯನ್ನು ಸಾಕ್ಷಿಯನ್ನಾಗಿಸಿ ರಾಮ – ಸುಗ್ರೀವರು ಸ್ನೇಹಿತರಾಗುತ್ತಾರೆ. ಸ್ನೇಹಿತ ಧರ್ಮದಂತೆ ಅಧರ್ಮಿ ವಾಲಿಯನ್ನು ಕೊನೆಗಾಣಿಸಿ, ಸುಗ್ರೀವನನ್ನು ಕಿಷ್ಕಿಂಧೆಯ ರಾಜನನ್ನಾಗಿ ಸ್ಥಾಪಿಸುತ್ತೇನೆಂದು ರಾಮನು ಮಾತು ಕೊಡುತ್ತಾನೆ. ಪ್ರತಿಯಾಗಿ ಸೀತಾನ್ವೇಷಣೆಯ ಮಹತ್ಕಾರ್ಯವನ್ನು ಮಾಡುವುದಾಗಿ ಸುಗ್ರೀವನು ಶ್ರೀರಾಮನಿಗೆ ಮಾತು ಕೊಡುತ್ತಾನೆ. ಸೀತೆಯು ಸೀರೆಯಂಚಲ್ಲಿ ಆಭರಣಗಳನ್ನಿಟ್ಟು ಎಸೆದ ಪೊಟ್ಟಣವನ್ನು ಸುಗ್ರೀವನು ರಾಮನಿಗೆ ತೋರಿಸುತ್ತಾನೆ, ಅವುಗಳನ್ನು ನೋಡುತ್ತಿದ್ದಂತೆ ರಾಮನ ಕಣ್ಣಾಲಿಗಳು ತುಂಬಿ ದೃಷ್ಟಿ ಮಂದವಾಯಿತು. ಆಭರಣಗಳನ್ನು ಗುರುತಿಸುವಂತೆ ರಾಮನು ಲಕ್ಷ್ಮಣನನ್ನು ಕೇಳುತ್ತಾನೆ. “ಬಳೆಗಳಾಗಲೀ, ಕಿವಿಯೋಲೆಗಳಾಗಲೀ ನನಗೆ ತಿಳಿಯದು. ದಿನನಿತ್ಯ ಮಾತೆ ಸೀತೆಯ ಕಾಲಿಗೆ ನಮಸ್ಕರಿಸುತ್ತಿದ್ದರಿಂದ ಈ ಕಾಲಂದುಗೆಗಳು ಮಾತೆಯದ್ದೇ ಎಂದು ಖಚಿತವಾಗಿ ಹೇಳಬಲ್ಲೆ” ಎಂದು ಲಕ್ಷ್ಮಣನು ಹೇಳುತ್ತಾನೆ.

ಹಿಂದೊಮ್ಮೆ ವಾಲಿಯನ್ನು ಮಾಯಾವಿ ಎಂಬ ರಾಕ್ಷಸನು ಯುದ್ಧಕ್ಕೆ ಕೆಣಕಿದಾಗ ವಾಲಿಯು ಸುಗ್ರೀವನೊಂದಿಗೆ ಆತನನ್ನು ಬೆನ್ನಟ್ಟಿ ಹೋಗಿದ್ದನು. ಹೆದರಿದ ಮಾಯಾವಿಯು ಗುಹೆಯೊಂದರೊಳಗೆ ಅಡಗಿ ಕುಳಿತುಕೊಳ್ಳುತ್ತಾನೆ. ಗುಹೆಗೆ ಕಾವಲಿರುವಂತೆ ಸುಗ್ರೀವನಿಗೆ ಆದೇಶಿಸಿ ವಾಲಿಯು ಗುಹೆಯನ್ನು ಪ್ರವೇಶಿಸುತ್ತಾನೆ. ಹಲವು ವರ್ಷಗಳುರುಳಿದರೂ ವಾಲಿಯು ಹೊರಗೆ ಬರಲೇ ಇಲ್ಲ. ಕೊನೆಗೊಮ್ಮೆ ಗುಹೆಯ ಬಾಗಿಲಿನಿಂದ ರಕ್ತ ಬರುವುದನ್ನು ನೋಡಿ, ವಾಲಿಯು ಗತಿಸಿರಬಹುದೆಂದು ಸುಗ್ರೀವನು ಭಾವಿಸುತ್ತಾನೆ. ಗುಹೆಯ ಬಾಗಿಲಿಗೆ ದೊಡ್ಡದೊಂದು ಬಂಡೆಯನ್ನಿಟ್ಟು ಕಿಷ್ಕಿಂಧೆಗೆ ಮರಳತ್ತಾನೆ. ಮಂತ್ರಿಗಳು ಸುಗ್ರೀವನನ್ನು ರಾಜನನ್ನಾಗಿಸುತ್ತಾರೆ. ಆದರೆ ಮಾಯಾವಿಯನ್ನು ಸಂಹರಿಸಿ ಮರಳಿದ ವಾಲಿಯು ಇದನ್ನು ನೋಡಿ ಅತ್ಯಂತ ಕ್ರುದ್ಧನಾಗುತ್ತಾನೆ. ವಾಲಿಯೆದುರು ಸೆಣೆಸಲಾಗದೆ ಸುಗ್ರೀವನು ಋಷ್ಯಮೂಕದಲ್ಲಿ ಅಡಗಿ ಕುಳಿತುಕೊಳ್ಳುತ್ತಾನೆ. ವಾಲಿಯು ಮಾಯಾವಿಯ ಅಣ್ಣನಾದ ದುಂಧುಂಭಿಯನ್ನು ವಧಿಸಿ ಆತನ ಮೃತದೇಹವನ್ನು ಹಲವು ಯೋಜನ ದೂರಕ್ಕೆಸೆದಾಗ ಅದರಿಂದ ರಕ್ತದ ತುಣುಕುಗಳು ಮಹರ್ಷಿ ಮತಂಗರ ಆಶ್ರಮದ ಮೇಲೆ ಬಿದ್ದಿದ್ದವು. ಇದರಿಂದ ಕ್ರುದ್ಧರಾದ ಮತಂಗರು “ ಈ ಮಹಾಪಾಪವನ್ನು ಮಾಡಿದವರು ಯಾರೇ ಇರಲಿ, ನನ್ನ ಆಶ್ರಮಕ್ಕೆ ಕಾಲಿರಿಸಿದ ಕೂಡಲೇ ಸಾಯಲಿ” ಎಂದು ಶಪಿಸುತ್ತಾರೆ. ಇದೇ ಕಾರಣದಿಂದ ವಾಲಿಯು ಋಷ್ಯಮೂಕಕ್ಕೆ ಬರಲಾರ ಎಂದು ಸುಗ್ರೀವನು ರಾಘವರಿಗೆ ವಿವರಿಸುತ್ತಾನೆ.

ಯೋಜನೆಯಂತೆ ಸುಗ್ರೀವನು ವಾಲಿಯನ್ನು ಯುದ್ಧಕ್ಕೆ ಕರೆಯುತ್ತಾನೆ. ಯುದ್ಧಾಹ್ವಾನವನ್ನು ಸ್ವೀಕರಿಸಿದ ವಾಲಿಯು ಸುಗ್ರೀವನೊಂದಿಗೆ ಸೆಣೆಸುತ್ತಾನೆ. ಪರಾಕ್ರಮ, ಶೌರ್ಯ, ಸಾಹಸದಲ್ಲಿ ವಾಲಿ – ಸುಗ್ರೀವರು ಒಬ್ಬರಿಗೊಬ್ಬರು ಸರಿ ಸಮನಾಗಿದ್ದರು. ಮದಭರಿತ ಆನೆಗಳಂತೆ ವೀರಾವೇಶದಿಂದ ಹೋರಾಡುತ್ತಿದ್ದರು. ಶ್ರೀ ರಾಮನಿಗೆ ವಾಲಿಯನ್ನು ಗುರುತಿಸಲು ಸಾಧ್ಯವಾಗಲಿಲ್ಲ. ವಾಲಿಯೊಂದಿಗೆ ಸೆಣಸಲಾಗದೆ ಸುಗ್ರೀವನು ಪರಾಜಿತನಾಗಿ ಯುದ್ಧಭೂಮಿಯಿಂದ ಕಾಲ್ಕೀಳುತ್ತಾನೆ. ಸುಗ್ರೀವನಿಗೆ ಹೂವಿನ ಹಾರವನ್ನು ತೊಡಿಸಿ ಎರಡನೇ ಬಾರಿ ವಾಲಿಯನ್ನು ಯುದ್ಧಕ್ಕೆ ಕರೆಯುವಂತೆ ಶ್ರೀ ರಾಮನು ಹೇಳುತ್ತಾನೆ. ವಾಲಿ – ಸುಗ್ರೀವರ ಮಧ್ಯೆ ಘೋರ ಯುದ್ಧ ನಡೆಯುತ್ತದೆ. ಸುಗ್ರೀವನ ಶೌರ್ಯ ಕಳೆಗುಂದುವುದನ್ನು ನೋಡಿ ಶ್ರೀರಾಮನು ತೀಕ್ಷ್ಣವಾದ ಬಾಣವನ್ನು ವಾಲಿಯೆಡೆಗೆ ಹೂಡುತ್ತಾನೆ. ರಾಮಬಾಣವು ವಾಲಿಯ ಎದೆಯನ್ನು ಛೇಧಿಸುವುದರೊಂದಿಗೆ ಅಧರ್ಮಿ ವಾಲಿಯು ನೆಲಕ್ಕುರುಳುತ್ತಾನೆ. ಧರ್ಮಿಷ್ಟನಾದ ರಾಮನು ಹೀಗೆ ಮಾಡಿದ್ದು ಸರಿಯೇ ಎಂದು ವಾಲಿ ಕೇಳಿದಾಗ, ಶ್ರೀರಾಮನು ಕಿಷ್ಕಿಂಧಾಧೀಶನಿಗೆ ಧರ್ಮದ ಪರಿಕಲ್ಪನೆಯನ್ನು ತಿಳಿಸುತ್ತಾನೆ. ತನ್ನ ತಪ್ಪನ್ನು ಅರಿತ ವಾಲಿಯು ಕ್ಷಮೆಯಾಚಿಸಿ ದೇಹತ್ಯಾಗ ಮಾಡುತ್ತಾನೆ. ಸುಗ್ರೀವನಿಗೆ ಕಿಷ್ಕಿಂದೆಯ ರಾಜನನ್ನಾಗಿ ಪಟ್ಟಾಭಿಷೇಕ ಮಾಡುತ್ತಾರೆ. ವಾಲಿ – ತಾರೆಯರ ಮಗನಾದ ಅಂಗದನನ್ನು ಯುವರಾಜನನ್ನಾಗಿ ನೇಮಿಸಲಾಗುತ್ತದೆ.

ಕಿಷ್ಕಿಂದೆಯಲ್ಲಿ ಮಳೆಗಾಲ ಆರಂಭವಾಗುತ್ತದೆ. ಸುಗ್ರೀವನು ತನ್ನ ಅರಮನೆಯ ಸುಖದಲ್ಲಿ ಮೈಮರೆಯುತ್ತಾನೆ. ಮಳೆಗಾಲ ಕಳೆದು ಶರಧೃತು ಬಂದರೂ ಸುಗ್ರೀವನಿಗೆ ತನ್ನ ವಚನದ ಪರಿವೆಯಿರಲಿಲ್ಲ. ಸುಗ್ರೀವನ ಈ ವರ್ತನೆಯಿಂದ ಕ್ರುದ್ಧನಾದ ಲಕ್ಷ್ಮಣನು ಸ್ವಯಂ ಅರಮನೆಗೆ ಬರುತ್ತಾನೆ. ಹನುಮ, ತಾರೆಯರ ಸಲಹೆಯಿಂದ ಎಚ್ಚೆತ್ತ ಸುಗ್ರೀವನು, ತನ್ನನ್ನು ಕ್ಷಮಿಸುವಂತೆ ಲಕ್ಷ್ಮಣನಿಗೆ ಕೇಳುತ್ತಾನೆ. ಸೀತಾನ್ವೇಷಣೆಯ ಸಲುವಾಗಿ ಹಲವು ದಿಕ್ಕುಗಳಿಂದ ತನ್ನ ವಾನರವೀರರನ್ನು ಕಿಷ್ಕಿಂಧೆಗೆ ಕರೆಸುತ್ತಾನೆ. ಸುಗ್ರೀವನ ಆಜ್ಞೆಯ ಮೇರೆಗೆ ಕಿಷ್ಕಿಂಧೆಯಲ್ಲಿ ಸೇರಿದ ಕಪಿ ಸಾಗರವನ್ನು ನೋಡಿ ಶ್ರೀರಾಮನು ಹರ್ಷಿಸುತ್ತಾನೆ. ಹಲವು ಸಾಹಸಿ ಕಪಿವರ್ಯರ ನೇತೃತ್ವದಲ್ಲಿ ಕಪಿಸೈನ್ಯಗಳು ನಾಲ್ಕೂ ದಿಕ್ಕುಗಳಿಗೆ ಸೀತೆಯನ್ನು ಹುಡುಕಲು ಹೊರಡುತ್ತವೆ. ಮಹಾವೀರ ವಿನತನ ನೇತೃತ್ವದಲ್ಲಿ ಪೂರ್ವದೆಡೆಗೂ, ಮಹಾಪರಾಕ್ರಮಿ ಶತಬಲಿಯ ನೇತೃತ್ವದಲ್ಲಿ ಉತ್ತರದೆಡೆಗೂ, ವೀರ ಸುಶೇಣನ ಮಾರ್ಗದರ್ಶನದಲ್ಲಿ ಪಶ್ಚಿಮದೆಡೆಗೂ, ಯುವರಾಜ ಅಂಗದನ ಮುಂದಾಳುತ್ವದಲ್ಲಿ ದಕ್ಷಿಣದೆಡೆಗೆ ವಾನರವೀರರು ಶ್ರೀರಾಮನ ಜಯಕಾರ ಮಾಡುತ್ತಾ ಮಾತೆ ಸೀತೆಯ ಹುಡುಕಾಟಕ್ಕೆ ತೆರಳುತ್ತಾರೆ, ಶ್ರೀರಾಮನಿಗೆ ಹನುಮನ ಮೇಲೆ ಬಹಳಷ್ಟು ನಂಬಿಕೆ. ಆದ್ದರಿಂದಲೇ ತನ್ನ ಉಂಗುರವನ್ನು ಆತನಿಗಿತ್ತು, ಸೀತೆಯ ಸುಳಿವು ದೊರೆತರೆ ಆಕೆಗೆ ಕೊಡುವಂತೆ ಹೇಳುತ್ತಾನೆ.

ಉತ್ತರ, ಪೂರ್ವ ಹಾಗೂ ಪಶ್ಚಿಮ ದಿಕ್ಕಿಗೆ ಹೋಗಿದ್ದ ವಾನರ ವೀರರೆಲ್ಲಾ ಬರಿಗೈಯಲ್ಲಿ ಮರಳುತ್ತಾರೆ. ಕಾಡು, ನಾಡು, ಗುಡಿ, ಕಂದರ, ನದಿ, ಪಾತಾಳ ಹೀಗೆ ಎಲ್ಲಿ ಹುಡುಕಿದರೂ ಮಾತೆ ಸೀತೆಯ ಸುಳಿವು ಸಿಗಲಿಲ್ಲ. ಅಂಗದನ ನೇತೃತ್ವದಲ್ಲಿ ದಕ್ಷಿಣದೆಡೆಗೆ ಹೋದ ವಾನರ ಸೇನೆ ಇನ್ನೂ ಮರಳಿರಲಿಲ್ಲ. ಎಲ್ಲೆಲ್ಲಿ ಹುಡುಕಿದರೂ ಸೀತೆಯ ಸುಳಿವಿಲ್ಲದೆ ವಾನರ ಸೇನೆಯ ಉತ್ಸಾಹ ಕುಸಿದಿತ್ತು. ಅಂಗದನು ತನ್ನ ಸೈನ್ಯವನ್ನು ಹುರಿದುಂಬಿಸಿ ಹುಡುಕಾಟವನ್ನು ಮುಂದುವರಿಸುತ್ತಾನೆ. ರಾಮ ಕಾರ್ಯದಲ್ಲಿ ವಿಫಲರಾದೆವೆಂದು ಭಾವಿಸಿ ಅನ್ನ ತ್ಯಾಗ ಮಾಡಿ ಪ್ರಾಣಾರ್ಪಣೆ ಮಾಡಲು ಅಂಗದ ಹಾಗೂ ಮೊದಲಾದ ವಾನರರು ನಿಶ್ಚಯಿಸುತ್ತಾರೆ. ಅಲ್ಲೇ ಕುಳಿತಿದ್ದ ವೃದ್ಧ ಗಿಡುಗ ಸಂಪಾತಿಗೆ ವಾನರರು ಕಾಣಿಸುತ್ತಾರೆ. ತನ್ನ ತಮ್ಮನಾದ ಜಟಾಯುವಿನ ಮರಣ ವಾರ್ತೆಯನ್ನು ವಾನರರಿಂದ ತಿಳಿದು ಸಂಪಾತಿ ಅತೀವ ದುಃಖಿತನಾಗುತ್ತಾನೆ. ಸೀತೆಯನ್ನು ರಾವಣನು ಸಾಗರದಾಚೆಯ ಲಂಕೆಗೆ ಕೊಂಡೊಯ್ದಿದ್ದಾನೆ ಎಂದು ಸಂಪಾತಿ ತಿಳಿಸುತ್ತಾನೆ. ಹಿಂದೊಮ್ಮೆ ಸೂರ್ಯನ ಪ್ರಖರ ಕಿರಣಗಳಿಂದಾಗಿ ಸಂಪಾತಿಯ ರೆಕ್ಕೆಗಳೆರಡೂ ಸುಟ್ಟಿದ್ದವು. ಸೀತೆಯ ಸುಳಿವನ್ನು ವಾನರರಿಗೆ ತಿಳಿಸುತ್ತಿದ್ದಂತೆ ಹೊಸ ರೆಕ್ಕೆಗಳು ಚಿಗುರುತ್ತವೆ. ವಾನರರಿಗೆ ವಿಜಯಶ್ರೀಯನ್ನು ಹರಸಿ ಸಂಪಾತಿಯು ಗಗನಕ್ಕೆರುತ್ತಾನೆ. ಸಂಪಾತಿಯ ಸಲಹೆಯಂತೆ ದಕ್ಷಿಣದ ಸಾಗರ ತಟಕ್ಕೆ ವಾನರರು ಬರುತ್ತಾರೆ. ಅಗಾಧವಾದ ಸಾಗರವನ್ನು ನೋಡಿ ದಾಟುವುದು ಹೇಗೆ ಎಂಬ ಚಿಂತೆ ವಾನರವೀರರನ್ನು ಕಾಡುತ್ತದೆ. ಮಹಾವೀರರಾದ ಗಜ, ಗವಾಕ್ಷ, ಗವಯ, ಗಂಧಮಾದನ, ಶರಭ, ಮೈಂದ, ದ್ವಿವಿದ, ಸುಶೇಷಣ ಮತ್ತು ಜಾಂಬವಂತರು ತಮ್ಮ ಸಾಮರ್ಥ್ಯವನ್ನು ಅಂಗದನಿಗೆ ಹೇಳಿದರು. ಸ್ವಯಂ ಅಂಗದನು ತಾನು ಸಾಗರವನ್ನು ಲಂಘಿಸಬಲ್ಲೆನೆಂದೂ ಆದರೆ ಮರಳಿ ಬರುವೆನೆಂಬ ವಿಶ್ವಾಸವಿಲ್ಲವೆಂದು ಹೇಳುತ್ತಾನೆ. ಆದರೆ ಹನುಮನೊಬ್ಬನೆ ಅಗಾಧವಾದ ಸಾಗರವನ್ನು ದಿಟ್ಟಿಸುತ್ತಾ ಕುಳಿತಿದ್ದನು. ಬಾಲ್ಯದಲ್ಲಿ ಮುನಿಗಳ ಶಾಪದಿಂದ ತನ್ನ ಶಕ್ತಿ, ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ಮರೆತಿರುತ್ತಾನೆ. ಇದನ್ನು ಗಮನಿಸಿದ ಜಾಂಬವಂತನು ಆಂಜನೇಯನಿಗೆ ಆತನ ಶಕ್ತಿ, ಸಾಮರ್ಥ್ಯಗಳನ್ನು ನೆನಪಿಸುತ್ತಾನೆ.

ಚಿತ್ರಕೃಪೆ: www.masters-gallery.com

Thursday, October 29, 2009

ಕಲಾವಿದನ ಕುಂಚದಲ್ಲಿ ರಾಮಾಯಣ: ಅರಣ್ಯಕಾಂಡ

ಚಿತ್ರಕೂಟವನ್ನು ಬಿಟ್ಟು ಬಂದ ರಾಮಾದಿಗಳು ದಂಡಕಾರಣ್ಯವನ್ನು ಪ್ರವೇಶಿಸುತ್ತಾರೆ. ಮಹಾತಪಸ್ವಿಗಳ, ಸಾಧು-ಸಂತರ ಬೀಡಾಗಿತ್ತು ದಂಡಕಾರಣ್ಯ. ದಟ್ಟ ಕಾನನದ ಗರ್ಭವನ್ನು ಪ್ರವೇಶಿಸುತ್ತಿದ್ದಂತೆ ಮಹಾಪರ್ವತಕಾಯನಾದ ದೈತ್ಯ ವಿರಾಧನು ಎದುರಾಗುತ್ತಾನೆ. ಸುಂದರವಾದ ಸೀತೆಯನ್ನು ನೋಡಿ ಆಕೆಯೆಡೆಗೆ ಮುನ್ನುಗ್ಗುತ್ತಾನೆ. ಕೂಡಲೇ ರಾಮ – ಲಕ್ಷ್ಮಣರು ಪ್ರತ್ಯಾಕ್ರಮ ಮಾಡಿ ತೀಕ್ಷ್ಣವಾದ ಬಾಣಗಳಿಂದ ವಿರಾಧನನ್ನು ಜರ್ಜರಿತಗೊಳಿಸುತ್ತಾರೆ. ಶ್ರೀರಾಮನು ವಿರಾಧನನ್ನು ವಧೆಗೈಯ್ಯುವ ಮೂಲಕ ಆತನನ್ನು ಶಾಪಮುಕ್ತಗೊಳಿಸುತ್ತಾನೆ (ಕುಬೇರನ ಶಾಪದಿಂದಾಗಿ ತಂಬುರನೆನ್ನುವ ಗಂಧರ್ವನು ದೈತ್ಯ ವಿರಾಧನಾಗಿ ದಂಡಕಾರಣ್ಯದಲ್ಲಿರುತ್ತಾನೆ).

ಬಳಿಕ ಶ್ರೀರಾಮ, ಲಕ್ಷ್ಮಣ, ಸೀತೆಯರು ಶರಭಂಗ, ಸುತೀಕ್ಷ್ಣ ಮೊದಲಾದ ತಪಸ್ವಿಗಳ ಆಶ್ರಮಗಳಿಗೆ ಭೇಟಿ ಮಾಡಿ ಆಶೀರ್ವಾದವನ್ನು ಪಡೆಯುತ್ತಾರೆ. ದಂಡಕ ಕಾಡಿನಲ್ಲಿನ ತಪಸ್ವಿಗಳ ಕೋರಿಕೆಯಂತೆ ಸಾಧುಜನರ ಸಾಧನೆಗೆ ಅಡ್ಡಿ ಮಾಡುವ ಅಸುರರನ್ನು ಸಂಹರಿಸುವುದಾಗಿ ಶ್ರೀರಾಮನು ಮಾತು ಕೊಡುತ್ತಾನೆ. ಮಹಾಮುನಿ ಸುತೀಕ್ಷ್ಣರ ಸಲಹೆಯಂತೆ ಜನಸ್ಥಾನದಿಂದ ಮಹರ್ಷಿ ಅಗಸ್ತ್ಯರ ಆಶ್ರಮದ ಕಡೆಗೆ ಸೀತಾ ಸಮೇತರಾಗಿ ರಾಮ, ಲಕ್ಷ್ಮಣರು ಪಯಣಿಸುತ್ತಾರೆ. ಅಗಸ್ತ್ಯ ಆಥಿತ್ಯವನ್ನು ಸ್ವೀಕರಿಸಿದ ರಾಮಾದಿಗಳು ವಾಸಕ್ಕೆ ಯೋಗ್ಯವಾದ ಸ್ಥಳವೊಂದನ್ನು ಸೂಚಿಸುವಂತೆ ಕೇಳುತ್ತಾರೆ. ಗೋದಾವರಿಯ ತಟದಲ್ಲಿರುವ ಪಂಚವಟಿಯನ್ನು ಸೂಚಿಸಿ ರಾಮ – ಲಕ್ಷ್ಮಣರಿಗೆ ಹಲವು ದಿವ್ಯಾಸ್ತ್ರಗಳನ್ನೂ ಮಹಾಮುನಿ ಅಗಸ್ತ್ಯರು ಕೊಡುತ್ತಾರೆ.

ಪಂಚವಟಿಯೆಡೆಗೆ ತೆರಳುವಾಗ ದಾರಿಯಲ್ಲಿ ಗೃಥರಾಜ ಜಟಾಯುವಿನ ಪರಿಚಯವಾಗುತ್ತದೆ. ಪಂಚವಟಿಯಲ್ಲಿ ಲಕ್ಷ್ಮಣನು ಸುಂದರವಾದ ಪರ್ಣಕುಟಿಯನ್ನು ತಯಾರಿಸುತ್ತಾನೆ. ರಾಮ – ಲಕ್ಷ್ಮಣ ಹಾಗೂ ಸೀತೆ ಸಂತೋಷದಿಂದ ಪಂಚವಟಿಯ ಸುಂದರ ಕಾನನದಲ್ಲಿ ತಮ್ಮ ವನವಾಸವನ್ನು ಕಳೆಯುತ್ತಾರೆ.

ಹೀಗಿರಬೇಕಾದರೆ ಒಂದು ದಿನ ಶೂರ್ಪನಖಿ ಎಂಬ ರಾಕ್ಷಸಿಯು ಪಂಚವಟಿಯಲ್ಲಿನ ಪರ್ಣಕುಟಿಯೆಡೆಗೆ ಬರುತ್ತಾಳೆ. ಸ್ಪುರದ್ರೂಪಿಯಾದ ರಾಮನನ್ನು ನೋಡಿ, ಮೋಹಿತಳಾಗಿ ಆತನನ್ನು ವರಿಸುವ ಉದ್ದೇಶದಿಂದ ಸುಂದರ ಕನ್ಯೆಯ ರೂಪವನ್ನು ಧರಿಸುತ್ತಾಳೆ. ತನ್ನನ್ನು ವಿವಾಹವಾಗುವಂತೆ ಶೂರ್ಪನಖಿಯು ರಾಮನನ್ನು ಕೇಳುತ್ತಾಳೆ. ತಾನು ವಿವಾಹಿತನೆಂದೂ, ಏಕಪತ್ನಿವ್ರತಸ್ತನೆಂದೂ ಹೇಳಿದ ರಾಮನು ತನ್ನಷ್ಟೇ ಸುಂದರನೂ, ಪರಾಕ್ರಮಿಯೂ ಆದ ಲಕ್ಷ್ಮಣನನ್ನು ಕೇಳುವಂತೆ ಹೇಳುತ್ತಾನೆ. ಲಕ್ಷ್ಮಣನಿಂದಲೂ ತಿರಸ್ಕೃತಳಾದಾಗ ಆಕೆ ತನ್ನ ನಿಜರೂಪಕ್ಕೆ ಮರಳುತ್ತಾಳೆ. ವಿಕಾರವಾಗಿ ಅರಚುತ್ತಾ ಇದಕ್ಕೆಲ್ಲಾ ಸೀತೆಯೇ ಕಾರಣಳೆಂದು ತಿಳಿದು ಆಕೆಯೆಡೆಗೆ ಮುನ್ನುಗ್ಗುತ್ತಾಳೆ. ರಾಮನ ಸಂಜ್ಞೆಯನ್ನರಿತ ಲಕ್ಷ್ಮಣನು ಹರಿತವಾದ ಖಡ್ಗದಿಂದ ಶೂರ್ಪನಖಳ ಮೂಗನ್ನೂ, ಕಿವಿಗಳನ್ನೂ ಕತ್ತರಿಸುತ್ತಾನೆ. ಅಪಮಾನಿತಳಾದ ಶೂರ್ಪನಖಳು ತನ್ನ ಅಣ್ಣನಾದ ಖರನ ಬಳಿ ಅಳಲನ್ನು ತೋಡಿಕೊಳ್ಳುತ್ತಾಳೆ. ಕೋಪಗೊಂಡು ಖರನು ತನ್ನ ಬಲಿಷ್ಟ ಸೈನಿಕರನ್ನು ಪಂಚವಟಿಗೆ ಕಳಿಹಿಸುತ್ತಾನೆ. ಆದರೆ ಶ್ರೀರಾಮನ ಪರಾಕ್ರಮದೆದುರು ರಾಕ್ಷಸರೆಲ್ಲಾ ಧೂಳಿಪಟವಾಗುತ್ತಾರೆ. ಇದರಿಂದ ಇನ್ನೂ ವ್ಯಗ್ರನಾದ ಖರನು ತನ್ನ ಅನುಜರಾದ ತ್ರಿಶಿರ ಮತ್ತು ದೂಷಣ ಹಾಗೂ ಹದಿಮೂರು ಸಾವಿರ ಸೈನಿಕರೊಂದಿಗೆ ಪಂಚವಟಿಗೆ ಬರುತ್ತಾರೆ. ಆದರೆ ಶ್ರೀರಾಮನೊಬ್ಬನೇ ಎಲ್ಲಾ ದೈತ್ಯರನ್ನು ಯಮಸದನಕ್ಕಟ್ಟುತ್ತಾನೆ.

ಲಂಕೆಯ ಅಧಿಪತಿ ರಾವಣ ಶೂರ್ಪನಖಳ ಅಣ್ಣ. ತನ್ನ ಅವಮಾನದ ಗಾಯವನ್ನು ಹೊತ್ತುಕೊಂಡು ಶೂರ್ಪನಖಿಯು ಲಂಕೆಗೆ ಬರುತ್ತಾಳೆ. ಸೀತೆಯ ಸೌಂದರ್ಯವನ್ನು ರಾವಣನಿಗೆ ಬಣ್ಣಿಸಿ ಆಕೆಯನ್ನು ಅಪಹರಿಸುವಂತೆ ಪ್ರೇರೇಪಿಸುತ್ತಾಳೆ. ಅಪಹರಣದ ಯೋಜನೆಯೊಂದಿಗೆ ರಾವಣನು ಮಾರೀಚನ ಬಳಿಗೆ ಬರುತ್ತಾನೆ. ರಾಮನ ಪರಾಕ್ರಮ, ಶೌರ್ಯದ ಪರಿಚಯವಿದ್ದ ಮಾರೀಚನು ಸೀತಾಪಹರಣದ ಯೋಜನೆಯನ್ನು ಬಿಡುವಂತೆ ಪರಿಪರಿಯಾಗಿ ರಾವಣನಿಗೆ ಬುದ್ಧಿವಾದವನ್ನು ಹೇಳುತ್ತಾನೆ. ಆದರೆ ಯಾವುದೇ ರೀತಿಯ ಬುದ್ಧಿವಾದವನ್ನು ಕೇಳಲು ರಾವಣ ಸಿದ್ಧನಿರಲಿಲ್ಲ. ಕೊನೆಗೆ ರಾವಣನ ಕೈಯಿಂದ ಸಾಯುವುದಕ್ಕಿಂತ ರಾಮನ ಬಾಣದಿಂದ ಮರಣಹೊಂದುವುದೇ ಲೇಸೆಂದು ಭಾವಿಸಿದ ಮಾರೀಚನು ರಾವಣನಿಗೆ ಸಹಾಯ ಮಾಡಲು ಒಪ್ಪತ್ತಾನೆ.

ಪರ್ಣಕುಟಿಯ ಬಳಿ ಕಾಣಿಸಿದ ಸ್ವರ್ಣ ಜಿಂಕೆಯನ್ನು ಹಿಡಿದು ತರುವಂತೆ ಸೀತೆ ರಾಮನನ್ನು ಕೇಳುತ್ತಾಳೆ. ಇದ್ಯಾವುದೋ ಕಪಟವಿರಬಹುದೆಂದು ರಾಮನಿಗೆ ಅನಿಸಿದರೂ ಸೀತೆಯ ಮನ ನೋಯಿಸಲು ಇಚ್ಚಿಸದೆ ಜಿಂಕೆಯನ್ನು ಹಿಡಿಯಲು ಅನುವಾಗುತ್ತಾನೆ. ಯಾವುದೇ ಕಾರಣಕ್ಕೂ ಸೀತೆಯನ್ನು ಬಿಟ್ಟು ಬರಬೇಡ ಎಂದು ಲಕ್ಷ್ಮಣನಿಗೆ ಹೇಳಿ ಶ್ರೀರಾಮನು ಜಿಂಕೆಯ ಬೆನ್ನಟ್ಟುತ್ತಾನೆ. ಇನ್ನೇನು ಕೈಗೆ ಸಿಗಬೇಕೆನ್ನುವಷ್ಟರಲ್ಲಿ ಜಿಂಕೆ ಛಂಗನೆ ಜಿಗಿದು ದೂರ ಹೋಗುತ್ತಿತ್ತು. ಕಾನನದಲ್ಲಿ ಬಹಳಷ್ಟು ದೂರ ಕ್ರಮಿಸಿದ ಬಳಿಕವೂ ಜಿಂಕೆ ಕೈಗೆ ಸಿಗದೆ ಶ್ರೀರಾಮನು ಅದರತ್ತ ಬಾಣವನ್ನು ಹೂಡುತ್ತಾನೆ. ಕೂಡಲೇ ಮಾಯಾ ಜಿಂಕೆಯ ರೂಪದಲ್ಲಿದ್ದ ಮಾರೀಚನು ಶ್ರೀರಾಮನ ದನಿಯಲ್ಲಿ ‘ಹಾ ಸೀತೆ… ಹಾ ಲಕ್ಷ್ಮಣ…’ ಎಂದು ಕೂಗಿ ಹತನಾಗುತ್ತಾನೆ. ಇದ್ಯಾವುದೋ ರಾಕ್ಷಸರ ಕಪಟವೆಂದು ಭಾವಿಸಿ ಪರ್ಣಕುಟಿಯೆಡೆಗೆ ಶೀಘ್ರವಾಗಿ ಮರಳುವ ಯತ್ನವನ್ನು ಶ್ರೀರಾಮನು ಮಾಡುತ್ತಾನೆ. ರಾಮನ ಆರ್ತನಾದ ಕೇಳಿ ವಿಚಲಿತಳಾದ ಸೀತೆ ರಾಮನ ಸಹಾಯಕ್ಕೆ ಹೋಗುವಂತೆ ಲಕ್ಷ್ಮಣನನ್ನು ಕೇಳುತ್ತಾಳೆ. ಲಕ್ಷ್ಮಣನ ಯಾವುದೇ ಸಾಂತ್ವನದ ಮಾತುಗಳನ್ನು ಕೇಳಲು ಸೀತೆ ಸಿದ್ಧಳಾಗಿರಲಿಲ್ಲ. ಉಪಾಯವಿಲ್ಲದೆ ಕುಟಿಯ ಸುತ್ತ ಲಕ್ಷ್ಮಣ ರೇಖೆಯನ್ನೆಳೆದು ಅದನ್ನು ದಾಟಬಾರದೆಂದು ವಿನಂತಿಸಿ ರಾಮನನ್ನು ಹುಡುಕಲು ಲಕ್ಷ್ಮಣನು ಹೊರಡುತ್ತಾನೆ.

ಇದೇ ಸುಸಂದರ್ಭವೆಂದು ಭಾವಿಸಿದ ಲಂಕೇಶನು ಸನ್ಯಾಸಿಯ ವೇಷ ಧರಿಸಿ ಪರ್ಣಕುಟಿಯ ಬಳಿಗೆ ಬಂದು ಭಿಕ್ಷೆಯನ್ನು ಕೇಳುತ್ತಾನೆ. ಲಕ್ಷ್ಮಣರೇಖೆಯನ್ನು ದಾಟಲಾಗದೆ ಅದರಿಂದ ಹೊರಬಂದು ಭಿಕ್ಷೆ ಕೊಡುವಂತೆ ಸೀತೆಯನ್ನು ಆಗ್ರಹಿಸುತ್ತಾನೆ. ಸನ್ಯಾಸಿಯ ಶಾಪಕ್ಕೆ ಹೆದರಿದ ಸೀತೆ, ಲಕ್ಷ್ಮಣರೇಖೆಯನ್ನು ದಾಟಿ ಬಂದ ಕೂಡಲೇ ತನ್ನ ನಿಜ ರೂಪವನ್ನು ಪ್ರಕಟಿಸಿದ ರಾವಣನು ಆಕೆಯನ್ನು ಅಪಹರಿಸಿ ತನ್ನ ಪುಷ್ಪಕವಿಮಾನದಲ್ಲಿ ಕೊಂಡೊಯ್ಯುತ್ತಾನೆ.

ಸೀತೆಯ ದುಃಖಭರಿತ ಕೂಗನ್ನು ಕೇಳಿದ ಗೃಥರಾಜ ಜಟಾಯುವು ಅವಳ ಸಹಾಯಕ್ಕೆ ಬರುತ್ತಾನೆ. ವಯಸ್ಸಾಗಿದ್ದರೂ ಭಾರೀ ವೀರಾವೇಶದಿಂದ ಜಟಾಯುವು ರಾವಣನೊಂದಿಗೆ ಹೋರಾಡುತ್ತಾನೆ. ಆದರೆ ರಾವಣನ ಚಂದ್ರಹಾಸ ಖಡ್ಗವು ಜಟಾಯುವಿನ ರೆಕ್ಕೆಯೊಂದನ್ನು ಕತ್ತರಿಸುವುದರೊಂದಿಗೆ ಗೃಥರಾಜನು ವಿವಷವಾಗಿ ಭೂಮಿಗೆ ಬೀಳುತ್ತಾನೆ.

ಋಷ್ಯಮೂಕ ಪರ್ವತದ ಮೇಲೆ ಪುಷ್ಪಕ ವಿಮಾನ ಸಾಗುತ್ತಿದ್ದಂತೆ ಸೀತೆ ತನ್ನೆಲ್ಲ ಆಭರಣಗಳನ್ನು ತೆಗೆದು ಸೀರೆಯ ಅಂಚೊಂದರಲ್ಲಿ ಇಟ್ಟು ಪರ್ವತ ಶಿಖರದ ಮೇಲೆ ಕುಳಿತ್ತಿದ್ದ ವಾನರರ ಕಡೆಗೆ ಎಸೆಯುತ್ತಾಳೆ. ಇತ್ತ ತನ್ನನ್ನು ಹುಡುಕಿಕೊಂಡು ಬಂದ ಲಕ್ಷ್ಮಣನನ್ನು ಕಂಡು ರಾಮನು ಬೆರಗಾಗುತ್ತಾನೆ. ಒಬ್ಬಂಟಿಯಾದ ಸೀತೆಯ ಕುರಿತು ಯೋಚಿಸಿ ಚಿಂತಿತನಾಗುತ್ತಾನೆ. ಇಬ್ಬರೂ ಪರ್ಣಕುಟಿಯೆಡೆಗೆ ದಾಪುಗಾಲು ಹಾಕುತ್ತಾರೆ. ಪಂಚವಟಿಯಲ್ಲಿ ಸೀತೆ ಕಾಣದಿರಲು ಶ್ರೀರಾಮನು ಅತಿ ದುಃಖಿತನಾಗುತ್ತಾನೆ. ತರು-ಲತೆಗಳಲ್ಲಿ, ಗಿಡ-ಮರಗಳಲ್ಲಿ, ಹಕ್ಕಿ-ಪಕ್ಷಿಗಳಲ್ಲಿ ನನ್ನ ಸೀತೆಯನ್ನು ನೋಡಿದಿರಾ ಅಂತ ಕೇಳುತ್ತಾನೆ. ಸೀತೆಯನ್ನು ಹುಡುಕುತ್ತಾ ಅರಣ್ಯವೆಲ್ಲಾ ತಿರುಗಾಡುತ್ತಾರೆ. ಸೀತೆಯು ಕಾಣದಿರಲು ರಾಮನ ಶೋಕ ಮುಗಿಲು ಮುಟ್ಟಿತು. ರೆಕ್ಕೆ ಕತ್ತರಿಸಿಕೊಂಡು ರಕ್ತಸಿಕ್ತವಾಗಿ ಬಿದ್ದ ಜಟಾಯುವು ಕಾಣಸಿಗುತ್ತಾನೆ. ಸೀತೆಯನ್ನು ಲಂಕೇಶ ರಾವಣನು ಅಪಹರಿಸಿರುವನೆಂದೂ, ವಿಮಾನದಲ್ಲಿ ದಕ್ಷಿಣದೆಡೆಗೆ ಹೋಗಿರುವನೆಂದೂ ಹೇಳಿ ಜಟಾಯುವು ಅಸುನೀಗುತ್ತಾನೆ. ಜಟಾಯುವಿನ ಅಂತ್ಯಸಂಸ್ಕಾರ ಮಾಡಿ ಸೀತೆಯನ್ನು ಹುಡುಕುತ್ತಾ ರಾಮನು ಲಕ್ಷ್ಮಣನೊಂದಿಗೆ ದಕ್ಷಿಣದೆಡೆಗೆ ಪಯಣಿಸುತ್ತಾನೆ.

ಗೊಂಡಾರಣ್ಯದಲ್ಲಿ ಸೀತೆಯನ್ನು ಹುಡುಕುತ್ತಿರಲು ಕಬಂದನೆಂಬ ದೈತ್ಯನ ಕೈಗಳು ರಾಮ ಲಕ್ಷ್ಮಣರನ್ನು ಬಂಧಿಸುತ್ತವೆ. ರಾಮ ಲಕ್ಷ್ಮಣರು ತಮ್ಮ ತೀಕ್ಷ್ಣವಾದ ಬಾಣಗಳಿಂದ ಕಬಂದನ ಕೈಗಳನ್ನು ಕತ್ತರಿಸುತ್ತಾರೆ. ಶ್ರೀರಾಮನು ಕಬಂದನ ಕೈಗಳನ್ನು ಕತ್ತರಿಸುವುದರೊಂದಿಗೆ ಆತನನ್ನು ಶಾಪ ಮುಕ್ತಗೊಳಿಸುತ್ತಾನೆ. ನಿಜರೂಪಕ್ಕೆ ಮರಳಿದ ಕಬಂದನು, ವಾನರ ವೀರ ಸುಗ್ರೀವನೊಂದಿಗೆ ಸಖ್ಯ ಬೆಳೆಸುವಂತೆ ಶ್ರೀರಾಮನಿಗೆ ಸಲಹೆ ನೀಡಿ ಋಷ್ಯಮೂಕ ಪರ್ವತದೆಡೆಗೆ ಸಾಗುವ ದಾರಿಯನ್ನು ತಿಳಿಸುತ್ತಾನೆ. ಋಷ್ಯಮೂಕದೆಡೆಗೆ ತೆರಳುವಾಗ ದಾರಿಯಲ್ಲಿ ಮತಂಗ ಮಹಾಮುನಿಯ ಆಶ್ರಮ ಸಿಗುತ್ತದೆ. ಮತಂಗ ಮುನಿಗಳ ಶಿಷ್ಯೆಯಾದ ಶಬರಿಯು ರಾಮನ ದಾರಿ ಕಾಯುತ್ತಿದ್ದಳು. ಶ್ರೀರಾಮನ ದರ್ಶನದಿಂದ ಶಬರಿಗಾದ ಆನಂದ ಅಷ್ಟಿಷ್ಟಲ್ಲ. ಶ್ರೀರಾಮನ ಬರವಿಗೆಂದೇ ಶಬರಿಯು ಕಾಯುತ್ತಿದ್ದಳು. ಶಬರಿಯ ಆಥಿತ್ಯವನ್ನು ಶ್ರೀರಾಮನು ಸಂತೋಷದಿಂದ ಸ್ವೀಕರಿಸುತ್ತಾನೆ. ಶ್ರೀರಾಮನ ದರ್ಶನದಿಂದ ಪಾವನಳಾದ ಶಬರಿಯು ಸ್ವರ್ಗಲೋಕಕ್ಕೆ ತೆರಳುತ್ತಾಳೆ. ಅಲ್ಲಿಂದ ಕಬಂದನ ಸಲಹೆಯಂತೆ ಪಂಪಾನದಿಯ ತಟಕ್ಕೆ ಬರುತ್ತಾರೆ.

ಚಿತ್ರಕೃಪೆ: www.masters-gallery.com

Friday, October 09, 2009

ಕಲಾವಿದನ ಕುಂಚದಲ್ಲಿ ರಾಮಾಯಣ: ಅಯೋಧ್ಯಾಕಾಂಡ

ರಾಮ – ಸೀತೆಯ ವಿವಾಹವಾಗಿ ಕೆಲವು ವರ್ಷಗಳೇ ಕಳೆದವು. ಅತ್ಯಂತ ಅಪರೂಪವೂ, ಅನುರೂಪವೂ ಆದ ಜೋಡಿ ಅವರದ್ದು. ರಾಮ–ಸೀತೆಯನ್ನು ಕಂಡಾಗ ಅಯೋಧ್ಯೆಯ ಜನರ ಪಾಲಿಗೆ ಸಾಕ್ಷಾತ್ ಲಕ್ಷ್ಮಿ–ನಾರಾಯಣರನ್ನು ನೋಡಿದಂತಾಗುತ್ತಿತ್ತು. ಮಹಾರಾಜ ದಶರಥನ ಮನಸ್ಸಲ್ಲಿ ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡಿ ಅಯೋಧ್ಯೆಯ ರಾಜನನ್ನಾಗಿಸುವ ಅಭಿಲಾಷೆಯಾಯಿತು. ಶ್ರೀರಾಮನು ಧರ್ಮನಿಷ್ಟನೂ, ಕರ್ತವ್ಯನಿಷ್ಟನೂ, ನ್ಯಾಯಪರನೂ ಆಗಿದ್ದನು. ರಾಜನಾಗುವ ಎಲ್ಲಾ ಗುಣಗಳು ತನಲ್ಲಿ ಸಮ್ಮಿಳಿತವಾಗಿದ್ದರಿಂದ ವಿಷಯವನ್ನು ತಿಳಿದ ಮಂತ್ರಿಗಣ ಸಹಜವಾಗಿ ತಮ್ಮ ಸಹಮತವನ್ನು ತಿಳಿಸಿ ಸಂತೋಷಪಟ್ಟರು. ಅಯೋಧ್ಯೆಯ ನಾಗರಿಕರ ಸಂಭ್ರಮ ಮುಗಿಲು ಮುಟ್ಟಿತು.

ಆದರೆ ಅಯೋಧ್ಯೆಯ ಜನರ ಸಂತೋಷವನ್ನು ಕೈಕೇಯಿಯ ದಾಸಿಯಾದ ಮಂಥರೆಗೆ ಸಹಿಸಲಾಗಲಿಲ್ಲ. ಭರತನ ಮೇಲೆ ಆಕೆಗೆ ಅಮಿತ ಪ್ರೀತಿ. ಭರತನನ್ನು ರಾಜನ ರೂಪದಲ್ಲಿ ನೋಡುವ ಇಚ್ಛೆಯಿಂದ ಮಹಾರಾಣಿ ಕೈಕೇಯಿ ಮನಸ್ಸು ಕದಡುತ್ತಾಳೆ. ಮೊದಮೊದಲು ಕೈಕೇಯಿ ಒಪ್ಪಲಿಲ್ಲವಾದರೂ ಮಂಥರೆಯ ದುರ್ಭೋದನೆಗೆ ಹಾವಾಡಿಗನ ಪುಂಗಿಗೆ ತಲೆದೂಗುವ ಹಾವಿನಂತೆ ಮಣಿಯುತ್ತಾಳೆ.

ಶ್ರೀರಾಮನ ಪಟ್ಟಾಭಿಷೇಕದ ಶುಭ ಸುದ್ದಿಯನ್ನು ತಿಳಿಸಲು ತನ್ನ ಅಂತ:ಪುರಕ್ಕೆ ಬಂದ ದಶರಥನಲ್ಲಿ, ಹಿಂದೊಮ್ಮೆ ದೇವಾಸುರ ಯುದ್ಧದ ಸಂದರ್ಭದಲ್ಲಿ ನೀಡಿದ ಎರಡು ವಚನಗಳನ್ನು ನೆರವೇರಿಸುವಂತೆ ಕೇಳುತ್ತಾಳೆ. ಭರತನಿಗೆ ಪಟ್ಟಾಭಿಷೇಕವಾಗಬೇಕೆಂಬುದು ಮೊದಲ ಬೇಡಿಕೆಯಾಗಿದ್ದರೆ, ಶ್ರೀರಾಮ ಹದಿನಾಲ್ಕು ವರ್ಷಗಳ ಕಾಲ ವನವಾಸವನ್ನು ಮಾಡಬೇಕೆಂಬುದು ಎರಡನೆಯ ಬೇಡಿಕೆಯಾಗಿತ್ತು. ಕೈಕೇಯಿ ಮಾತುಗಳನ್ನು ಕೇಳಿದಾಗ ದಶರಥನಿಗೆ ತನ್ನ ಪದತಲದಲ್ಲಿನ ಭೂಮಿಯೇ ಕುಸಿದಂತೆ ಭಾಸವಾಯಿತು. ಪರಿಪರಿಯಾಗಿ ಬೇಡಿಕೊಂಡರೂ ಕೈಕೇಯಿ ತನ್ನ ಪಟ್ಟು ಬಿಡಲಿಲ್ಲ.

ಪಿತೃ ವಾಕ್ಯ ಪರಿಪಾಲನೆಗಾಗಿ ಶ್ರೀರಾಮನು ಅರಣ್ಯಕ್ಕೆ ತೆರಳಲು ಅನುವಾಗುತ್ತಾನೆ. ಆತನ ಜೊತೆ ಸೀತೆಯೂ, ಲಕ್ಷ್ಮಣನೂ ಹೊರಡುತ್ತಾನೆ. ಸಂತೋಷದಿಂದ ನಳನಳಿಸುತ್ತಿದ್ದ ಅಯೋಧ್ಯೆಯಲ್ಲಿ ಈಗ ಸ್ಮಶಾನ ಮೌನ. ದಶರಥನಂತೂ “ರಾಮ ರಾಮ” ಎನ್ನುತ್ತಾ ಪ್ರಜ್ನಾಹೀನನಾಗುತ್ತಿದ್ದನು. ಶ್ರೀರಾಮ ಲಕ್ಷ್ಮಣರು ನಾರುಮಡಿಯನ್ನುಟ್ಟು, ಮಾತಾ-ಪಿತರ, ಹಾಗೂ ಗುರು ಹಿರಿಯರ ಆಶೀರ್ವಾದವನ್ನು ಪಡೆದು ಧನುರ್ದಾರಿಗಳಾಗಿ ಅರಣ್ಯಕ್ಕೆ ತೆರಳಲು ಸಿದ್ಧರಾಗುತ್ತಾರೆ. ರಾಮನಿಲ್ಲದ ಅಯೋಧ್ಯೆ ತಮಗೂ ಬೇಡವೆಂದು ಪ್ರಜಾಜನರು ರಾಮ, ಲಕ್ಷ್ಮಣ ಹಾಗೂ ಸೀತೆಯೊಂದಿಗೆ ಕಾಡಿಗೆ ತೆರಳಲು ಸಿದ್ಧರಾಗುತ್ತಾರೆ.

ಸುಮಂತ್ರನು ಸಾರಥಿಯಾಗಿರುವ ಶ್ರೀರಾಮನ ರಥವನ್ನು ಹಿಂಬಾಲಿಸುತ್ತಾರೆ. ರಾಮನ ಯಾವುದೇ ಸಾಂತ್ವನದ ಮಾತುಗಳನ್ನು ಕೇಳಲು ಸಿದ್ಧರಿರಲಿಲ್ಲ. ಹೀಗೆ ಅಯೋಧ್ಯೆಯನ್ನು ಪರಿತ್ಯಜಿಸಿದ ರಾಮ ಲಕ್ಷ್ಮಣ, ಸೀತೆ ಹಾಗೂ ಪ್ರಜೆಗಳು ಆ ರಾತ್ರಿಯನ್ನು ತಮಸಾ ನದಿಯ ದಡದಲ್ಲಿ ಕಳೆಯುತ್ತಾರೆ. ಮರುದಿನ ಬೆಳಗ್ಗೆ ಆರಣ್ಯದತ್ತ ತನ್ನ ಪ್ರಯಾಣವನ್ನು ಮುಂದುವರಿಸುತ್ತಾರೆ.

ದಾರಿಯಲ್ಲಿ ಗುಹನ ಆಥಿತ್ಯವನ್ನು ಸ್ವೀಕರಿಸಿ ಆತನ ಕೋರಿಕೆಯಂತೆ ಗಂಗೆಯ ತಟದಲ್ಲಿ ಉಳಿಯುತ್ತಾರೆ. ಮರುದಿನ ಗಂಗಾನದಿ ದಾಟುವ ಸಲುವಾಗಿ ಗುಹನು ದೋಣಿಯನ್ನು ಸಿದ್ಧ ಪಡಿಸುತ್ತಾನೆ. ಶ್ರೀರಾಮನು ಪ್ರಜಾಜನರಿಗೆ ಸಾಂತ್ವನ ಹೇಳಿ ಅಯೋಧ್ಯೆಗೆ ಮರಳುವಂತೆ ಹೇಳುತ್ತಾನೆ. ತನ್ನ ಜನ್ಮಭೂಮಿಯ ಧೂಳನ್ನು ಹಣೆಗೊತ್ತಿ ಪತ್ನಿ ಹಾಗೂ ಅನುಜನೊಂದಿಗೆ ಗಂಗಾನದಿಯನ್ನು ದಾಟುತ್ತಾನೆ. ಗಂಗಾ ಹಾಗೂ ಯಮುನೆಯ ಸಂಗಮದ ಬಳಿ ಇರುವ ಭಾರದ್ವಾಜ ಮುನಿಗಳ ಆಶ್ರಮಕ್ಕೆ ಭೇಟಿಕೊಟ್ಟು ವಾಸಕ್ಕೆ ಯೋಗ್ಯವಾದ ಒಂದು ಸ್ಥಳವನ್ನು ಸೂಚಿಸಬೇಕಾಗಿ ಕೇಳಿಕೊಳ್ಳುತ್ತಾರೆ. ಅತ್ಯಂತ ಸುಂದರವಾಗಿರುವ ಚಿತ್ರಕೂಟವು ಯೋಗ್ಯವಾದ ಸ್ಥಳವೆಂದು ಮುನಿವರ್ಯರು ಸಲಹೆ ನೀಡುತ್ತಾರೆ. ಮುನಿ ಭಾರದ್ವಾಜರ ಸಲಹೆಯಂತೆ ರಾಮ-ಲಕ್ಷ್ಮಣ ಸೀತಾದಿಗಳು ಚಿತ್ರಕೂಟಕ್ಕೆ ತೆರಳುತ್ತಾರೆ.

ಅಯೋಧ್ಯೆಗೆ ಮರಳಿದ ಸುಮಂತ್ರನು ರಾಮನ ಸಂದೇಶವನ್ನು ದು:ಖತಪ್ತನಾದ ದಶರಥನಿಗೂ, ಮೂವರು ರಾಣಿಯರಿಗೂ ತಿಳಿಸುತ್ತಾನೆ. ರಾಮನನ್ನು ತನ್ನ ಪ್ರಾಣಕ್ಕಿಂತಲೂ ಮಿಗಿಲಾಗಿ ಪ್ರೀತಿಸುವ ದಶರಥನಿಗೆ ಆತನ ಅಗಲಿಕೆಯನ್ನು ಸಹಿಸುವುದು ಸಾಧ್ಯವಾಗಲಿಲ್ಲ. ಶ್ರವಣ ಕುಮಾರನ ಅಂಧ ಮಾತಾಪಿತರ ಶಾಪದ ಪರಿಣಾಮವಾಗಿ ಪುತ್ರವಿಯೋಗ ಸಹಿಸಲಾರದೆ ದಶರಥನ ಪ್ರಾಣಪಕ್ಷಿ ಹಾರಿ ಹೋಗುತ್ತದೆ. ಕೇಕೇಯ ದೇಶಕ್ಕೆ ಹೋಗಿದ್ದ ಭರತ, ಶತೃಘ್ನರನ್ನು ಕುಲಗುರು ವಶಿಷ್ಠರು ಅಯೋಧ್ಯೆಗೆ ಕರೆಸುತ್ತಾರೆ. ರಾಜೋಚಿತವಾಗಿ ದಶರಥನ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುತ್ತದೆ. ರಾಮನ ಸ್ಥಾನವನ್ನು ಅಲಂಕರಿಸಲು ಇಚ್ಚಿಸದ ಭರತನು ಶ್ರೀರಾಮನನ್ನು ಕರೆತರಲು ಕಾಡಿಗೆ ತೆರಳುವುದಾಗಿ ಹೇಳುತ್ತಾನೆ. ಭರತನ ಭ್ರಾತೃಪ್ರೇಮವನ್ನು ಅಯೋಧ್ಯೆಗೆ ಅಯೋಧ್ಯೆಯೇ ಕೊಂಡಾಡುತ್ತದೆ. ಶ್ರೀರಾಮನು ಗುಹನ ಆಧಿತ್ಯವನ್ನು ಸ್ವೀಕರಿಸಿದ್ದು, ಗಂಗಾನದಿಯನ್ನು ದಾಟಿದ್ದು, ಭಾರದ್ವಾಜ ಮುನಿಗಳ ದರ್ಶನ ಪಡೆದ ವಿಷಯಾದಿಗಳನ್ನು ಗುಹನ ಮೂಲಕ ಭರತನು ತಿಳಿದುಕೊಳ್ಳುತ್ತಾನೆ. ಭಾರದ್ವಾಜರ ಆಥಿತ್ಯ ಸ್ವೀಕರಿಸಿದ ಭರತನು ಚಿತ್ರಕೂಟದೆಡೆಗೆ ಪ್ರಯಾಣ ಬೆಳೆಸುತ್ತಾನೆ.

ತನ್ನನ್ನು ಅರಸಿಕೊಂಡು ಬಂದ ಭರತನನ್ನು ನೋಡಿ ಶ್ರೀರಾಮನು ಆತನನ್ನು ಆಲಂಗಿಸಿ ಆನಂದಾಶ್ರುಗಳನ್ನು ಸುರಿಸುತ್ತಾನೆ. ಜೊತೆಗೆ ದಶರಥನ ಮರಣ ವಾರ್ತೆಯನ್ನು ಕೇಳಿ ದುಃಖತಪ್ತನಾಗುತ್ತಾನೆ. ಭರತನು ಪರಿ ಪರಿಯಾಗಿ ವಿನಂತಿಸಿದರೂ ಶ್ರೀರಾಮ ತನ್ನ ಅಚಲವಾದ ನಿರ್ದಾರದಿಂದ ಹಿಂದೆ ಸರಿಯಲೊಲ್ಲ. ಅಯೋಧ್ಯೆಯ ಸಿಂಹಾಸನವೇರಲು ಬಯಸದ ಭರತನು ರಾಮನಂತೆ ವನವಾಸಿ ಜೀವನ ನಡೆಸುವ ನಿರ್ಧಾರವನ್ನು ಕೈಗೊಳ್ಳುತ್ತಾನೆ.

ಅದರಂತೆ ನಾರುಮಡಿಯುಟ್ಟು, ದರ್ಭೆಯ ಮೇಲೆ ಪವಡಿಸುವ, ಕಂದ ಮೂಲಾದಿಗಳನ್ನು ತಿನ್ನವ ಮೂಲಕ ರಾಜ ಭೋಗವನ್ನು ತ್ಯಜಿಸುತ್ತಾನೆ. ಕೊನೆ ಪಕ್ಷ ರಾಮ ಮರಳದಿದ್ದರೆ ಆತನ ಪಾದುಕೆಯಾದರೂ ಕೊಡಬೇಕೆಂದು ಪ್ರಾರ್ಥಿಸುತ್ತಾನೆ. ಅಯೋಧ್ಯೆಯ ಹೊರಗೆ ನಂದಿಗ್ರಾಮದಲ್ಲಿ ಶ್ರೀರಾಮನ ಪಾದುಕೆಗಳನ್ನಿಟ್ಟು ರಾಜ್ಯಭಾರ ಮಾಡುವ ತನ್ನಿಚ್ಛೆಯನ್ನು ತಿಳಿಸುತ್ತಾನೆ. ಭರತನ ಭಾತೃಪ್ರೇಮಕ್ಕೆ ಮನಸೋತ ರಾಮನು ಆತನಿಗೆ ತನ್ನ ಪಾದುಕೆಗಳನ್ನು ನೀಡುತ್ತಾನೆ. ಜೊತೆಗೆ ರಾಜನೀತಿಯ ಅತ್ಯಮೂಲ್ಯ ಪಾಠವನ್ನು ತಿಳಿಸುತ್ತಾನೆ. ರಾಮನ ಪಾದುಕೆಗಳನ್ನು ತಲೆಯ ಮೇಲೆ ಹೊತ್ತುಕೊಂಡು ನಂದೀಗ್ರಾಮಕ್ಕೆ ಭರತನು ಮರಳುತ್ತಾನೆ.

ಶಾಂತವಾಗಿದ್ದ ಚಿತ್ರಕೂಟದ ವಾತಾವರಣ ಜನರ ಆಗಮನದಿಂದ ಅಶಾಂತವಾಗಿದ್ದು ಶ್ರೀರಾಮನ ವಾಸಸ್ಥಾನದ ಬಗ್ಗೆ ಜನರಿಗೆ ತಿಳಿದು ಮುಂದೆ ಅದು ತಪಸ್ವಿಗಳಿಗೂ, ಮುನಿಗಳಿಗೂ ತೊಂದರೆಯಾಗುವ ಸಾಧ್ಯತೆ ಇತ್ತು. ಇದನ್ನರಿತ ರಾಮಾದಿಗಳು ಚಿತ್ರಕೂಟವನ್ನು ತೊರೆದು ಮುಂದೆ ಸಾಗುವ ನಿರ್ಧಾರ ಮಾಡುತ್ತಾರೆ. ಅರಣ್ಯದಲ್ಲಿ ಅತ್ರಿ ಮುನಿಗಳ ಆಶ್ರಮಕ್ಕೆ ಭೇಟಿ ಕೊಡುತ್ತಾರೆ. ಅತ್ರಿ-ಅನಸೂಯರ ಆಥಿತ್ಯವನ್ನು ಸ್ವೀಕರಿಸುತ್ತಾರೆ. ಮಾತೆ ಅನಸೂಯೆಯು ಸೀತೆಗೆ ಪತಿವೃತಾ ಧರ್ಮದ ಮಹತ್ವವನ್ನು ತಿಳಿಸುತ್ತಾರೆ ಜೊತೆಗೆ ಬಗೆ ಬಗೆಯ ಆಭರಣಗಳನ್ನೂ, ಪರಿಮಳ ದ್ರವ್ಯಗಳನ್ನೂ, ಎಂದೂ ಮಲಿನವಾಗದೇ ಇರುವ ವಸ್ತ್ರಗಳನ್ನೂ, ಬಾಡದೇ ಇರುವ ಹೂವಿನಹಾರವನ್ನು ಪ್ರೀತಿಯಿಂದ ಉಡುಗೊರೆಯಾಗಿ ಕೊಡುತ್ತಾರೆ. ಅತ್ರಿ ಮುನಿಗಳ ಸಲಹೆಯಂತೆ ಗೋದಾವರಿಯ ತಟದಲ್ಲಿರುವ ಪಂಚವಟಿಯ ಕಡೆಗೆ ಪ್ರಯಾಣ ಬೆಳೆಸುತ್ತಾರೆ.

ಚಿತ್ರಕೃಪೆ: www.masters-gallery.com