ಸೂರ್ಯಾಸ್ತದ ಬಳಿಕ ಇಂದ್ರನ ಅಮರಾವತಿಯಂತಿರುವ ಲಂಕೆಯನ್ನು ಪ್ರವೇಸಿಸುತ್ತಿರುವಂತೆ ಲಂಕಿಣಿಯು ಹನುಮನನ್ನು ತಡೆಯುತ್ತಾಳೆ. ವಿಕಾರವಾಗಿ ಅರಚುತ್ತಾ ಲಂಕಿಣಿಯು ಪ್ರಬಲವಾದ ಹೊಡೆತವನ್ನು ಆಂಜನೇಯನಿಗೆ ಕೊಡುತ್ತಾಳೆ. ಇದರಿಂದ ಕೋಪಗೊಂಡ ವಾನರಶ್ರೇಷ್ಠನು ಲಂಕಿಣಿಗೆ ಬಲವಾದ ಗುದ್ದೊಂದನ್ನು ಕೊಡುತ್ತಾನೆ. ಇಷ್ಟಕ್ಕೇ ಧರೆಗುರುಳಿದ ಲಂಕಿಣಿಗೆ ‘ವಾನರೊಬ್ಬನ ಪ್ರಹಾರದಿಂದ ಘಾಸಿಗೊಂಡಾಗ ಲಂಕೆಯ ಅಂತ್ಯ ಸಮೀಪಿಸಿದೆಯೆಂದು ತಿಳಿ’ ಎಂಬ ಬ್ರಹ್ಮದೇವನ ಮಾತು ನೆನಪಿಗೆ ಬರುತ್ತದೆ. ವಾನರವೀರನನ್ನು ಲಂಕೆಯನ್ನು ಪ್ರವೇಶಿಸುವಂತೆ ಲಂಕಿಣಿಯು ಹೇಳುತ್ತಾಳೆ. ಸೀತೆಯನ್ನು ಹುಡುಕುತ್ತಾ ಹನುಮನು ರಾವಣನ ಅರಮನೆಯನ್ನು ಪ್ರವೇಶಿಸುತ್ತಾನೆ. ವಜ್ರ, ವೈಢೂರ್ಯ, ಮುತ್ತು, ಮಾಣಿಕ್ಯಗಳಿಂದ ಲಂಕೇಶನ ಅರಮನೆ ಶೋಭಿತವಾಗಿತ್ತು. ಹಿಂದೊಮ್ಮೆ ಕುಬೇರನ ವಶದಲ್ಲಿದ್ದ ಪುಷ್ಪಕವಿಮಾನವನ್ನೂ ಹನುಮನು ನೋಡುತ್ತಾನೆ. ಸಂಪೂರ್ಣ ಅರಮನೆಯನ್ನು ಹುಡುಕಿದರೂ ಸೀತೆಯ ಪತ್ತೆ ಇಲ್ಲ. ಕೊನೆಗೆ ವಾನರೇಂದ್ರನು ಅಶೋಕವನದಲ್ಲಿ ಮಾತೆ ಸೀತೆಯ ಹುಡುಕಾಟವನ್ನು ಮುಂದುವರಿಸುತ್ತಾನೆ. ಮಾವು, ಉದ್ದಾಲಕ, ಚಂಪಕ, ನಾಗ, ಅಶೋಕ ಮುಂತಾದ ಮರಗಳಿಂದ ತಂಬಿತ್ತು ಅಶೋಕವನ. ಅಶೋಕವನದ ಮೂಲೆ ಮೂಲೆ ಹುಡುಕಾಡಿದ ಹನುಮನಿಗೆ ಕೊನೆಗೂ ಮಾತೆ ಸೀತೆ ಕಾಣಿಸುತ್ತಾಳೆ. ಆಕೆಯ ಸುತ್ತವೂ ಭಯಂಕರವಾದ ರಾಕ್ಷಸಿಯರು ಕಾವಲಿದ್ದರು. ಕಾರ್ಮೋಡಗಳ ಮಧ್ಯೆ ಪೂರ್ಣಚಂದ್ರನಂತೆ ಸೀತೆ ಕಾಣಿಸಿದಳು.
ಇನ್ನೇನು ಸೂರ್ಯೋದಯಕ್ಕೆ ಕೆಲವೇ ಪ್ರಹರಗಳಿರಬೇಕಾದರೆ ರಾಕ್ಷಸೇಂದ್ರ ರಾವಣನು ತನ್ನ ಪರಿವಾರದೊಂದಿಗೆ ಸೀತೆಯನ್ನು ನೋಡಲು ಬರುತ್ತಾನೆ. ವನವಾಸಿ ರಾಮನನ್ನು ಮರೆತು ತನ್ನನ್ನು ವರಿಸುವಂತೆ ಸೀತೆಗೆ ಹೇಳುತ್ತಾನೆ, ಅದಕ್ಕೆ ಪ್ರತಿಯಾಗಿ ಸೀತೆಯು, ತಾನು ಪತಿವೃತೆಯೆಂದೂ, ಶ್ರೀರಾಮನೇ ತನ್ನ ಸರ್ವಸ್ವವೆಂದೂ ಹೇಳುತ್ತಾಳೆ. ಅಧರ್ಮಿಯಾದ ರಾವಣನನ್ನು ಕೊನೆಗಾಣಿಸಲು ಲಕ್ಷ್ಮಣ ಸಮೇತನಾಗಿ ರಾಮನು ಬರುವನೆಂದೂ ಸೀತೆಯು ಮರುತ್ತರ ಕೊಡುತ್ತಾಳೆ. ಸೀತೆಯ ಕಠಿಣ ಮಾತುಗಳಿಂದ ಕ್ರುದ್ಧನಾದ ಲಂಕೇಶನು ತನ್ನನ್ನು ವರಿಸಲು ಎರಡು ತಿಂಗಳ ಅವಧಿಯನ್ನು ಕೊಡುತ್ತಾನೆ. ಸೀತೆಯ ಮನವೊಲಿಸುವಂತೆ ರಾಕ್ಷಸಿಯರಿಗೆ ಹೇಳಿ ರಾವಣನು ವಾಟಿಕೆಯಿಂದ ನಿರ್ಗಮಿಸುತ್ತಾನೆ, ರಾಕ್ಷಸಿಯರು ರಾವಣನನ್ನು ವರಿಸುವಂತೆ ಸೀತೆಯನ್ನು ಪರಿಪರಿಯಾಗಿ ಪೀಡಿಸುತ್ತಿರುವುದನ್ನೂ, ರಾಮನ ಪ್ರತಿ ಸೀತೆಯ ಅಮಿತವಾದ ಪ್ರೀತಿಯನ್ನೂ ಹನುಮನು ಮರೆಯಲ್ಲಿ ನಿಂತು ಗಮನಿಸುತ್ತಿರುತ್ತಾನೆ.
ಸೀತೆಯ ಮುಂದೆ ಹೇಗೆ ಪ್ರಕಟವಾಗುವುದು? ತಾನು ಶ್ರೀರಾಮನ ಸೇವಕನೆಂದು ಹೇಗೆ ಆಕೆಗೆ ತಿಳಿಯಪಡಿಸುವುದು ಎಂಬ ಗೊಂದಲ ಕಪಿವೀರನನ್ನು ಕಾಡುತ್ತದೆ. ಹನುಮನು ಸೀತೆಗೆ ಕೇಳಿಸುವಂತೆ ರಾಮಕಥೆಯನ್ನು ಸುಶ್ರಾವ್ಯವಾಗಿ ಹಾಡುತ್ತಾನೆ. ರಾಮನ ಕಥೆಯನ್ನು ಕೇಳಿದ ಸೀತೆಯ ಮುಖಾರವಿಂದವು ಅರಳುತ್ತದೆ. ಹನುಮನನ್ನು ಕಂಡ ಸೀತೆಯು ಬೆದರಿಹೋಗುತ್ತಾಳೆ. ತನ್ನನ್ನು ಮೋಸ ಮಾಡಲು ರಾಕ್ಷಸನ್ಯಾರೋ ವಾನರರೂಪದಲ್ಲಿ ಬಂದಿದ್ದಾನೆಂದು ಭಾವಿಸುತ್ತಾಳೆ. ಇದನ್ನರಿತ ಕಪೀಶನು ವಿನಮ್ರವಾಗಿ ಸೀತೆಯ ಬಳಿ ಬಂದು ಆಕೆಯೇ ಮಾತೆ ಸೀತೆಯೆಂದು ತಿಳಿದುಕೊಳ್ಳುತ್ತಾನೆ, ತಾನು ರಾಮದೂತನೆಂದೂ, ವಾನರರಾಜ ಸುಗ್ರೀವನ ಆಜ್ಞೆಯಂತೆ ಸೀತೆಯನ್ನು ಹುಡುಕುತ್ತಾ ಲಂಕೆಗೆ ಬಂದೆನೆಂದೂ ಹೇಳುತ್ತಾನೆ. ಸೀತೆಗೆ ರಾಮನನ್ನು ಭೇಟಿಯಾದ ರೀತಿ, ಸುಗ್ರೀವ ಸಖ್ಯ, ವಾಲಿ ವಧೆ, ಸಾಗರೋಲ್ಲಂಘನ ಎಲ್ಲವನ್ನೂ ವಿವರಿಸಿ ಶ್ರೀರಾಮನ ಮುದ್ರೆಯುಂಗುರವನ್ನು ಕೊಡುತ್ತಾನೆ. ಅದನ್ನು ನೋಡಿ ಸೀತೆಯು ಅತ್ಯಂತ ಸಂತೋಷಿತಳಾಗುತ್ತಾಳೆ. ಹನುಮನ ಕೋರಿಕೆಯಂತೆ ಚೂಡಾಮಣಿಯನ್ನು ಆತನ ಕೈಗಿತ್ತು ರಾಮನಿಗೆ ಕೊಡುವಂತೆ ಹೇಳುತ್ತಾಳೆ. ಸ್ವಯಂ ರಾಮನೇ ಲಂಕೆಗೆ ಬಂದು ತನ್ನನ್ನು ಬಂಧನದಿಂದ ಬಿಡಿಸಬೇಕೆಂದೂ ಹೇಳುತ್ತಾಳೆ.
ರಾವಣನ ಸಾಮರ್ಥ್ಯವನ್ನು ಪರೀಕ್ಷಸಲೋಸುಗ ವಾನರೇಂದ್ರನು ಅಶೋಕವಾಟಿಕೆಯನ್ನು ಧ್ವಂಸಗೊಳಿಸುತ್ತಾನೆ. ತಡೆಯಲು ಬಂದ ಅಸುರರನ್ನು ಯಮಸದನಕ್ಕಟ್ಟುತ್ತಾನೆ ಕಪೀಶ. ರಾವಣನ ಆದೇಶದಂತೆ ಹನುಮನನ್ನು ಸೆರೆ ಹಿಡಿಯಲು ಬಂದ ಜಂಬುಮಾಲಿಯೂ ಕಾಲವಾಗುತ್ತಾನೆ. ಆತನ ಸಹಾಯಕ್ಕೆ ಧಾವಿಸಿದ ಆತನ ಮಕ್ಕಳೂ ಗತಿಸುತ್ತಾರೆ, ರಾವಣಸುತ ಅಕ್ಷಕುಮಾರನೂ ವೀರಾವೇಷದಿಂದ ಹೋರಾಡಿದರೂ ಮಾರುತಿಯ ಮುಂದೆ ಆತನ ಆಟವೇನೂ ನಡೆಯಲಿಲ್ಲ. ತಮ್ಮ ಅಕ್ಷಕುಮಾರನು ಅಸುನೀಗಿದ್ದನ್ನು ಕಂಡು ಸ್ವಯಂ ಮೇಘನಾದನೇ ಯುದ್ಧಕ್ಕೆ ಬರುತ್ತಾನೆ. ತನ್ನೆಲ್ಲಾ ಬಾಣಗಳೂ ಹನುಮನಿಂದ ನಿಷ್ಕ್ರಿಯಗೊಂಡಾಗ ಆತನೆಡೆಗೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುತ್ತಾನೆ. ಮಹಾಸ್ತ್ರಕ್ಕೆ ಗೌರವ ಸಲ್ಲಿಸಲೋಸುಗ ವಾನರಶ್ರೇಷ್ಠನು ತಾನಾಗಿಯೇ ಬಂಧಿತಗೊಳ್ಳುತ್ತಾನೆ. ಲಂಕೇಶನ ಅಸ್ಥಾನದಲ್ಲಿ ಯೋಗ್ಯವಾದ ಉಪಚಾರವೂ, ಆಸನವೂ ಸಿಗದೆ ತನ್ನದೇ ಬಾಲವನ್ನು ಸುರುಳಿಸಿ ಯೋಗ್ಯವಾದ ಆಸನವನ್ನು ಹನುಮನು ಸಿದ್ಧಗೊಳಿಸುತ್ತಾನೆ. ರಾವಣನು ಆಂಜನೇಯನ ಪರಿಚಯವನ್ನು ಕೇಳಲು, ತಾನು ಶ್ರೀರಾಮನು ದೂತನೆಂದೂ, ರಾವಣನು ಮಾಡಿದ ಸೀತಾಪಹರಣವು ಧರ್ಮೋಚಿತವಲ್ಲವೆಂದೂ, ಸೀತೆಯನ್ನು ರಾಮನಿಗೆ ಒಪ್ಪಿಸಿ ಕ್ಷಮೆಯಾಚಿಸಿದಲ್ಲಿ ಮಹಾ ಕರುಣಾಳುವಾದ ರಾಘವನು ಕ್ಷಮಿಸುವನೆಂದೂ ಹೇಳುತ್ತಾನೆ, ಇದರಿಂದ ಕ್ರುದ್ಧನಾದ ಲಂಕೇಶನು ಹನುಮನು ತೋರಿದ ಉದ್ಧಟತನಕ್ಕೆ ಮರಣದಂಡನೆಯನ್ನು ವಿಧಿಸುತ್ತಾನೆ. ಆದರೆ ಧರ್ಮಾತ್ಮನಾದ ವಿಭೀಷಣನು ದೂತನನ್ನು ಕೊಲ್ಲುವುದು ಧರ್ಮವಲ್ಲ. ಅದರ ಬದಲು ಯಾವುದಾದರೂ ಘೋರ ಶಿಕ್ಷೆಯನ್ನು ಕೊಡಬೇಕೆಂದು ಸಲಹೆ ನೀಡುತ್ತಾನೆ. ಅದರಂತೆ ರಾವಣನು ಕಪಿಗೆ ಪ್ರಿಯವಾದ ಬಾಲಕ್ಕೆ ಬೆಂಕಿಯಿಡುವಂತೆ ಆದೇಶಿಸುತ್ತಾನೆ.
ಇದರಿಂದ ಉತ್ಸಾಹಗೊಂಡ ರಾಕ್ಷಸರು ಹನುಮನ ಬಾಲಕ್ಕೆ ಬಟ್ಟೆ ಸುತ್ತುತ್ತಾರೆ. ಆದರೆ ಹನುಮನ ಬಾಲವು ಬೆಳೆಯುತ್ತಾ ಹೋಯಿತು. ಅರಮನೆಯ ಬಟ್ಟೆಯೆಲ್ಲಾ ಮುಗಿದು ಹೋದವು. ಅಸುರರ ಕೈಗಳು ಸೋತು ಸುಣ್ಣವಾದವು. ಕೊನೆಗೆ ಎಣ್ಣೆ ಸುರಿದು ಬಾಲಕ್ಕೆ ಬೆಂಕಿ ಹಚ್ಚುತ್ತಾರೆ. ಬಂಧನದಿಂದ ಮುಕ್ತಗೊಂಡು, ಛಂಗನೆ ಹಾರಿ ರಾಮದೂತನು ಲಂಕೆಯ ಆಯಕಟ್ಟಿನ ಜಾಗಗಳಿಗೆ ಅಗ್ನಿಸ್ಪರ್ಷ ಮಾಡುತ್ತಾನೆ. ಕ್ಷಣದಲ್ಲೇ ನಗರದ ಎಲ್ಲೆಡೆ ಅಗ್ನಿಯ ಕೆನ್ನಾಲಿಗೆಗಳು ಹೊರಚಾಚಿ ಎಲ್ಲವನ್ನೂ ದಹಿಸುತ್ತವೆ. ಲಂಕಾನಗರದಲ್ಲಿ ಜನರ ಹಾಹಾಕಾರ ಕೇಳತೊಡಗುತ್ತದೆ. ವಾನರವೀರನು ಸಾಗರದಲ್ಲಿ ತನ್ನ ಬಾಲವನ್ನದ್ದಿ ಬೆಂಕಿಯನ್ನು ಆರಿಸುತ್ತಾನೆ,
ಅಶೋಕವನಕ್ಕೆ ಮರಳಿ ಸೀತೆಯು ಸಕುಶಲವಾಗಿರುವುದನ್ನು ಕಂಡು ಸಂತೋಷಗೊಂಡು, ಸಾಗರದಾಚೆ ಇರುವ ವಾನರವೀರರನ್ನು ಸೇರಲು ಮರಳುತ್ತಾನೆ. ಮಾತಿನಂತೆ ಮೈನಾಕದ ಮೇಲೆ ವಿರಮಿಸಿ ಅಂಗದ, ಜಾಂಬವಂತಾದಿಗಳನ್ನು ಸೇರುತ್ತಾನೆ. ರಾಮಕಾರ್ಯ ಸಫಲವಾಗಿದ್ದರಿಂದ ವಾನರರೆಲ್ಲಾ ಅತೀವ ಸಂತೋಷಪಡುತ್ತಾರೆ. ಹನುಮನ ಸಾಹಸವನ್ನು ಆತನಿಂದ ಕೇಳಿ ತಿಳಿಯುತ್ತಾರೆ. ದಕ್ಷಿಣದೆಡೆಗೆ ಮರಳಿದ ವಾನರರೆಲ್ಲಾ ಶ್ರೀರಾಮನ ಜಯಕಾರ ಮಾಡುತ್ತಾ ಕಿಷ್ಕಿಂಧೆಗೆ ಮರಳುತ್ತಾರೆ. ತಾನು ಸೀತೆಯನ್ನು ಲಂಕೆಯಲ್ಲಿ ನೋಡಿರುವುದಾಗಿಯೂ, ಆಕೆಯನ್ನು ಭೇಟಿಯಾಗಿರುವುದಾಗಿಯೂ, ಅಲ್ಲಿ ನಡೆದ ಘಟನೆಗಳನ್ನೆಲ್ಲಾ ಸವಿಸ್ತಾರವಾಗಿ ಹನುಮನು ರಾಮನಿಗೆ ತಿಳಿಸುತ್ತಾನೆ. ಸೀತೆಯಾಡಿದ ಪ್ರತಿಯೊಂದು ಮಾತನ್ನು ತಪ್ಪದೆ ರಾಮನಿಗೆ ತಿಳಿಸುತ್ತಾ, ಸೀತಾ ಮಾತೆ ಕೊಟ್ಟಿರುವ ಚೂಡಾಮಣಿಯನ್ನು ರಾಮನ ಕೈಗಳಲ್ಲಿ ಇರಿಸುತ್ತಾನೆ ಕಪಿಶ್ರೇಷ್ಠ. ರಾಮನ ಕಣ್ಣಾಲಿಗಳು ತುಂಬಿ ಹನುಮನನ್ನು ಆಲಂಗಿಸಿಕೊಳ್ಳುತ್ತಾನೆ.
0 comments:
Post a Comment