ಋಷ್ಯಮೂಕದೆಡೆಗೆ ಬರುತ್ತಿರುವ ಜಟಾಧಾರಿ, ಧನುರ್ಧಾರಿ ವೀರರನ್ನು ನೋಡಿ ಸುಗ್ರೀವನು ಚಿಂತಿತನಾಗುತ್ತಾನೆ. ಮಹಾಮುನಿ ಮತಂಗರ ಶಾಪದ ಪರಿಣಾಮವಾಗಿ ಕಿಷ್ಕಿಂಧಾಪತಿ ವಾಲಿ ಋಷ್ಯಮೂಕಕ್ಕೆ ಕಾಲಿಡುವಂತಿರಲಿಲ್ಲ. ಇದರಿಂದಾಗಿ ತನ್ನ ವಧೆಗಾಗಿ ವಾಲಿಯು ಯೋಧರನ್ನು ಕಳುಹಿಸಿದ್ದಾನೆಂಬುದು ಸುಗ್ರೀವನ ಚಿಂತೆಗೆ ಕಾರಣ, ಅಪರಿಚಿತ ಧನುರ್ಧಾರಿಗಳ ಬಗ್ಗೆ ತಿಳಿದುಕೊಂಡು ಬರುವಂತೆ ತನ್ನ ಆಪ್ತನೂ, ಬುದ್ಧಿಶಾಲಿಯೂ ಆದ ಹನುಮಂತನಿಗೆ ಸುಗ್ರೀವನು ಹೇಳುತ್ತಾನೆ. ಅದರಂತೆ ಸನ್ಯಾಸಿಯ ವೇಷ ಧರಿಸಿ ಹನುಮನು ರಾಮ-ಲಕ್ಷ್ಮಣರ ಬಳಿಗೆ ಬರುತ್ತಾನೆ. ತನ್ನ ಪಾಂಡಿತ್ಯವನ್ನೂ, ಮಾತುಗಾರಿಕೆಯನ್ನೂ ಅತ್ಯಂತ ಕುಶಲವಾಗಿ ಬಳಸುತ್ತಾ ರಾಮ-ಲಕ್ಷ್ಮಣರ ಸಂಪೂರ್ಣ ವೃತ್ತಾಂತವನ್ನು ತಿಳಿದುಕೊಳ್ಳುತ್ತಾನೆ. ರಾಮ-ಲಕ್ಷ್ಮಣರು ಸುಗ್ರೀವನ ಸಖ್ಯವನ್ನು ಬೆಳೆಸುವ ಸಲುವಾಗಿ ಬಂದಿದ್ದಾರೆಂದು ತಿಳಿದು ಹನುಮನು ನಿರಾಳವಾಗುತ್ತಾನೆ. ಶ್ರೀರಾಮನ ಪರಮ ಭಕ್ತನಾದ ಮಾರುತಿಯು ಸಂತೋಷಗೊಂಡು ತನ್ನ ನಿಜರೂಪವನ್ನು ಪ್ರಕಟಿಸುತ್ತಾನೆ. ರಾಮ-ಲಕ್ಷ್ಮಣರನ್ನು ಆಲಂಗಿಸಿದ ಹನುಮನು ರಾಘವರನ್ನು ಋಷ್ಯಮೂಕಕ್ಕೆ ಕರೆದೊಯ್ಯುತ್ತಾನೆ.
ರಾಮ – ಲಕ್ಷ್ಮಣರನ್ನು ಸುಗ್ರೀವನಿಗೆ ಪರಿಚಯಿಸಿದ ಹನುಮನು, ಶ್ರೀರಾಮನೊಂದಿಗೆ ಸ್ನೇಹವನ್ನು ಬೆಳೆಸುವಂತೆ ಸಲಹೆ ನೀಡುತ್ತಾನೆ. ಅದರಂತೆ ಅಗ್ನಿಯನ್ನು ಸಾಕ್ಷಿಯನ್ನಾಗಿಸಿ ರಾಮ – ಸುಗ್ರೀವರು ಸ್ನೇಹಿತರಾಗುತ್ತಾರೆ. ಸ್ನೇಹಿತ ಧರ್ಮದಂತೆ ಅಧರ್ಮಿ ವಾಲಿಯನ್ನು ಕೊನೆಗಾಣಿಸಿ, ಸುಗ್ರೀವನನ್ನು ಕಿಷ್ಕಿಂಧೆಯ ರಾಜನನ್ನಾಗಿ ಸ್ಥಾಪಿಸುತ್ತೇನೆಂದು ರಾಮನು ಮಾತು ಕೊಡುತ್ತಾನೆ. ಪ್ರತಿಯಾಗಿ ಸೀತಾನ್ವೇಷಣೆಯ ಮಹತ್ಕಾರ್ಯವನ್ನು ಮಾಡುವುದಾಗಿ ಸುಗ್ರೀವನು ಶ್ರೀರಾಮನಿಗೆ ಮಾತು ಕೊಡುತ್ತಾನೆ. ಸೀತೆಯು ಸೀರೆಯಂಚಲ್ಲಿ ಆಭರಣಗಳನ್ನಿಟ್ಟು ಎಸೆದ ಪೊಟ್ಟಣವನ್ನು ಸುಗ್ರೀವನು ರಾಮನಿಗೆ ತೋರಿಸುತ್ತಾನೆ, ಅವುಗಳನ್ನು ನೋಡುತ್ತಿದ್ದಂತೆ ರಾಮನ ಕಣ್ಣಾಲಿಗಳು ತುಂಬಿ ದೃಷ್ಟಿ ಮಂದವಾಯಿತು. ಆಭರಣಗಳನ್ನು ಗುರುತಿಸುವಂತೆ ರಾಮನು ಲಕ್ಷ್ಮಣನನ್ನು ಕೇಳುತ್ತಾನೆ. “ಬಳೆಗಳಾಗಲೀ, ಕಿವಿಯೋಲೆಗಳಾಗಲೀ ನನಗೆ ತಿಳಿಯದು. ದಿನನಿತ್ಯ ಮಾತೆ ಸೀತೆಯ ಕಾಲಿಗೆ ನಮಸ್ಕರಿಸುತ್ತಿದ್ದರಿಂದ ಈ ಕಾಲಂದುಗೆಗಳು ಮಾತೆಯದ್ದೇ ಎಂದು ಖಚಿತವಾಗಿ ಹೇಳಬಲ್ಲೆ” ಎಂದು ಲಕ್ಷ್ಮಣನು ಹೇಳುತ್ತಾನೆ.
ಹಿಂದೊಮ್ಮೆ ವಾಲಿಯನ್ನು ಮಾಯಾವಿ ಎಂಬ ರಾಕ್ಷಸನು ಯುದ್ಧಕ್ಕೆ ಕೆಣಕಿದಾಗ ವಾಲಿಯು ಸುಗ್ರೀವನೊಂದಿಗೆ ಆತನನ್ನು ಬೆನ್ನಟ್ಟಿ ಹೋಗಿದ್ದನು. ಹೆದರಿದ ಮಾಯಾವಿಯು ಗುಹೆಯೊಂದರೊಳಗೆ ಅಡಗಿ ಕುಳಿತುಕೊಳ್ಳುತ್ತಾನೆ. ಗುಹೆಗೆ ಕಾವಲಿರುವಂತೆ ಸುಗ್ರೀವನಿಗೆ ಆದೇಶಿಸಿ ವಾಲಿಯು ಗುಹೆಯನ್ನು ಪ್ರವೇಶಿಸುತ್ತಾನೆ. ಹಲವು ವರ್ಷಗಳುರುಳಿದರೂ ವಾಲಿಯು ಹೊರಗೆ ಬರಲೇ ಇಲ್ಲ. ಕೊನೆಗೊಮ್ಮೆ ಗುಹೆಯ ಬಾಗಿಲಿನಿಂದ ರಕ್ತ ಬರುವುದನ್ನು ನೋಡಿ, ವಾಲಿಯು ಗತಿಸಿರಬಹುದೆಂದು ಸುಗ್ರೀವನು ಭಾವಿಸುತ್ತಾನೆ. ಗುಹೆಯ ಬಾಗಿಲಿಗೆ ದೊಡ್ಡದೊಂದು ಬಂಡೆಯನ್ನಿಟ್ಟು ಕಿಷ್ಕಿಂಧೆಗೆ ಮರಳತ್ತಾನೆ. ಮಂತ್ರಿಗಳು ಸುಗ್ರೀವನನ್ನು ರಾಜನನ್ನಾಗಿಸುತ್ತಾರೆ. ಆದರೆ ಮಾಯಾವಿಯನ್ನು ಸಂಹರಿಸಿ ಮರಳಿದ ವಾಲಿಯು ಇದನ್ನು ನೋಡಿ ಅತ್ಯಂತ ಕ್ರುದ್ಧನಾಗುತ್ತಾನೆ. ವಾಲಿಯೆದುರು ಸೆಣೆಸಲಾಗದೆ ಸುಗ್ರೀವನು ಋಷ್ಯಮೂಕದಲ್ಲಿ ಅಡಗಿ ಕುಳಿತುಕೊಳ್ಳುತ್ತಾನೆ. ವಾಲಿಯು ಮಾಯಾವಿಯ ಅಣ್ಣನಾದ ದುಂಧುಂಭಿಯನ್ನು ವಧಿಸಿ ಆತನ ಮೃತದೇಹವನ್ನು ಹಲವು ಯೋಜನ ದೂರಕ್ಕೆಸೆದಾಗ ಅದರಿಂದ ರಕ್ತದ ತುಣುಕುಗಳು ಮಹರ್ಷಿ ಮತಂಗರ ಆಶ್ರಮದ ಮೇಲೆ ಬಿದ್ದಿದ್ದವು. ಇದರಿಂದ ಕ್ರುದ್ಧರಾದ ಮತಂಗರು “ ಈ ಮಹಾಪಾಪವನ್ನು ಮಾಡಿದವರು ಯಾರೇ ಇರಲಿ, ನನ್ನ ಆಶ್ರಮಕ್ಕೆ ಕಾಲಿರಿಸಿದ ಕೂಡಲೇ ಸಾಯಲಿ” ಎಂದು ಶಪಿಸುತ್ತಾರೆ. ಇದೇ ಕಾರಣದಿಂದ ವಾಲಿಯು ಋಷ್ಯಮೂಕಕ್ಕೆ ಬರಲಾರ ಎಂದು ಸುಗ್ರೀವನು ರಾಘವರಿಗೆ ವಿವರಿಸುತ್ತಾನೆ.
ಯೋಜನೆಯಂತೆ ಸುಗ್ರೀವನು ವಾಲಿಯನ್ನು ಯುದ್ಧಕ್ಕೆ ಕರೆಯುತ್ತಾನೆ. ಯುದ್ಧಾಹ್ವಾನವನ್ನು ಸ್ವೀಕರಿಸಿದ ವಾಲಿಯು ಸುಗ್ರೀವನೊಂದಿಗೆ ಸೆಣೆಸುತ್ತಾನೆ. ಪರಾಕ್ರಮ, ಶೌರ್ಯ, ಸಾಹಸದಲ್ಲಿ ವಾಲಿ – ಸುಗ್ರೀವರು ಒಬ್ಬರಿಗೊಬ್ಬರು ಸರಿ ಸಮನಾಗಿದ್ದರು. ಮದಭರಿತ ಆನೆಗಳಂತೆ ವೀರಾವೇಶದಿಂದ ಹೋರಾಡುತ್ತಿದ್ದರು. ಶ್ರೀ ರಾಮನಿಗೆ ವಾಲಿಯನ್ನು ಗುರುತಿಸಲು ಸಾಧ್ಯವಾಗಲಿಲ್ಲ. ವಾಲಿಯೊಂದಿಗೆ ಸೆಣಸಲಾಗದೆ ಸುಗ್ರೀವನು ಪರಾಜಿತನಾಗಿ ಯುದ್ಧಭೂಮಿಯಿಂದ ಕಾಲ್ಕೀಳುತ್ತಾನೆ. ಸುಗ್ರೀವನಿಗೆ ಹೂವಿನ ಹಾರವನ್ನು ತೊಡಿಸಿ ಎರಡನೇ ಬಾರಿ ವಾಲಿಯನ್ನು ಯುದ್ಧಕ್ಕೆ ಕರೆಯುವಂತೆ ಶ್ರೀ ರಾಮನು ಹೇಳುತ್ತಾನೆ. ವಾಲಿ – ಸುಗ್ರೀವರ ಮಧ್ಯೆ ಘೋರ ಯುದ್ಧ ನಡೆಯುತ್ತದೆ. ಸುಗ್ರೀವನ ಶೌರ್ಯ ಕಳೆಗುಂದುವುದನ್ನು ನೋಡಿ ಶ್ರೀರಾಮನು ತೀಕ್ಷ್ಣವಾದ ಬಾಣವನ್ನು ವಾಲಿಯೆಡೆಗೆ ಹೂಡುತ್ತಾನೆ. ರಾಮಬಾಣವು ವಾಲಿಯ ಎದೆಯನ್ನು ಛೇಧಿಸುವುದರೊಂದಿಗೆ ಅಧರ್ಮಿ ವಾಲಿಯು ನೆಲಕ್ಕುರುಳುತ್ತಾನೆ. ಧರ್ಮಿಷ್ಟನಾದ ರಾಮನು ಹೀಗೆ ಮಾಡಿದ್ದು ಸರಿಯೇ ಎಂದು ವಾಲಿ ಕೇಳಿದಾಗ, ಶ್ರೀರಾಮನು ಕಿಷ್ಕಿಂಧಾಧೀಶನಿಗೆ ಧರ್ಮದ ಪರಿಕಲ್ಪನೆಯನ್ನು ತಿಳಿಸುತ್ತಾನೆ. ತನ್ನ ತಪ್ಪನ್ನು ಅರಿತ ವಾಲಿಯು ಕ್ಷಮೆಯಾಚಿಸಿ ದೇಹತ್ಯಾಗ ಮಾಡುತ್ತಾನೆ. ಸುಗ್ರೀವನಿಗೆ ಕಿಷ್ಕಿಂದೆಯ ರಾಜನನ್ನಾಗಿ ಪಟ್ಟಾಭಿಷೇಕ ಮಾಡುತ್ತಾರೆ. ವಾಲಿ – ತಾರೆಯರ ಮಗನಾದ ಅಂಗದನನ್ನು ಯುವರಾಜನನ್ನಾಗಿ ನೇಮಿಸಲಾಗುತ್ತದೆ.
ಕಿಷ್ಕಿಂದೆಯಲ್ಲಿ ಮಳೆಗಾಲ ಆರಂಭವಾಗುತ್ತದೆ. ಸುಗ್ರೀವನು ತನ್ನ ಅರಮನೆಯ ಸುಖದಲ್ಲಿ ಮೈಮರೆಯುತ್ತಾನೆ. ಮಳೆಗಾಲ ಕಳೆದು ಶರಧೃತು ಬಂದರೂ ಸುಗ್ರೀವನಿಗೆ ತನ್ನ ವಚನದ ಪರಿವೆಯಿರಲಿಲ್ಲ. ಸುಗ್ರೀವನ ಈ ವರ್ತನೆಯಿಂದ ಕ್ರುದ್ಧನಾದ ಲಕ್ಷ್ಮಣನು ಸ್ವಯಂ ಅರಮನೆಗೆ ಬರುತ್ತಾನೆ. ಹನುಮ, ತಾರೆಯರ ಸಲಹೆಯಿಂದ ಎಚ್ಚೆತ್ತ ಸುಗ್ರೀವನು, ತನ್ನನ್ನು ಕ್ಷಮಿಸುವಂತೆ ಲಕ್ಷ್ಮಣನಿಗೆ ಕೇಳುತ್ತಾನೆ. ಸೀತಾನ್ವೇಷಣೆಯ ಸಲುವಾಗಿ ಹಲವು ದಿಕ್ಕುಗಳಿಂದ ತನ್ನ ವಾನರವೀರರನ್ನು ಕಿಷ್ಕಿಂಧೆಗೆ ಕರೆಸುತ್ತಾನೆ. ಸುಗ್ರೀವನ ಆಜ್ಞೆಯ ಮೇರೆಗೆ ಕಿಷ್ಕಿಂಧೆಯಲ್ಲಿ ಸೇರಿದ ಕಪಿ ಸಾಗರವನ್ನು ನೋಡಿ ಶ್ರೀರಾಮನು ಹರ್ಷಿಸುತ್ತಾನೆ. ಹಲವು ಸಾಹಸಿ ಕಪಿವರ್ಯರ ನೇತೃತ್ವದಲ್ಲಿ ಕಪಿಸೈನ್ಯಗಳು ನಾಲ್ಕೂ ದಿಕ್ಕುಗಳಿಗೆ ಸೀತೆಯನ್ನು ಹುಡುಕಲು ಹೊರಡುತ್ತವೆ. ಮಹಾವೀರ ವಿನತನ ನೇತೃತ್ವದಲ್ಲಿ ಪೂರ್ವದೆಡೆಗೂ, ಮಹಾಪರಾಕ್ರಮಿ ಶತಬಲಿಯ ನೇತೃತ್ವದಲ್ಲಿ ಉತ್ತರದೆಡೆಗೂ, ವೀರ ಸುಶೇಣನ ಮಾರ್ಗದರ್ಶನದಲ್ಲಿ ಪಶ್ಚಿಮದೆಡೆಗೂ, ಯುವರಾಜ ಅಂಗದನ ಮುಂದಾಳುತ್ವದಲ್ಲಿ ದಕ್ಷಿಣದೆಡೆಗೆ ವಾನರವೀರರು ಶ್ರೀರಾಮನ ಜಯಕಾರ ಮಾಡುತ್ತಾ ಮಾತೆ ಸೀತೆಯ ಹುಡುಕಾಟಕ್ಕೆ ತೆರಳುತ್ತಾರೆ, ಶ್ರೀರಾಮನಿಗೆ ಹನುಮನ ಮೇಲೆ ಬಹಳಷ್ಟು ನಂಬಿಕೆ. ಆದ್ದರಿಂದಲೇ ತನ್ನ ಉಂಗುರವನ್ನು ಆತನಿಗಿತ್ತು, ಸೀತೆಯ ಸುಳಿವು ದೊರೆತರೆ ಆಕೆಗೆ ಕೊಡುವಂತೆ ಹೇಳುತ್ತಾನೆ.
ಉತ್ತರ, ಪೂರ್ವ ಹಾಗೂ ಪಶ್ಚಿಮ ದಿಕ್ಕಿಗೆ ಹೋಗಿದ್ದ ವಾನರ ವೀರರೆಲ್ಲಾ ಬರಿಗೈಯಲ್ಲಿ ಮರಳುತ್ತಾರೆ. ಕಾಡು, ನಾಡು, ಗುಡಿ, ಕಂದರ, ನದಿ, ಪಾತಾಳ ಹೀಗೆ ಎಲ್ಲಿ ಹುಡುಕಿದರೂ ಮಾತೆ ಸೀತೆಯ ಸುಳಿವು ಸಿಗಲಿಲ್ಲ. ಅಂಗದನ ನೇತೃತ್ವದಲ್ಲಿ ದಕ್ಷಿಣದೆಡೆಗೆ ಹೋದ ವಾನರ ಸೇನೆ ಇನ್ನೂ ಮರಳಿರಲಿಲ್ಲ. ಎಲ್ಲೆಲ್ಲಿ ಹುಡುಕಿದರೂ ಸೀತೆಯ ಸುಳಿವಿಲ್ಲದೆ ವಾನರ ಸೇನೆಯ ಉತ್ಸಾಹ ಕುಸಿದಿತ್ತು. ಅಂಗದನು ತನ್ನ ಸೈನ್ಯವನ್ನು ಹುರಿದುಂಬಿಸಿ ಹುಡುಕಾಟವನ್ನು ಮುಂದುವರಿಸುತ್ತಾನೆ. ರಾಮ ಕಾರ್ಯದಲ್ಲಿ ವಿಫಲರಾದೆವೆಂದು ಭಾವಿಸಿ ಅನ್ನ ತ್ಯಾಗ ಮಾಡಿ ಪ್ರಾಣಾರ್ಪಣೆ ಮಾಡಲು ಅಂಗದ ಹಾಗೂ ಮೊದಲಾದ ವಾನರರು ನಿಶ್ಚಯಿಸುತ್ತಾರೆ. ಅಲ್ಲೇ ಕುಳಿತಿದ್ದ ವೃದ್ಧ ಗಿಡುಗ ಸಂಪಾತಿಗೆ ವಾನರರು ಕಾಣಿಸುತ್ತಾರೆ. ತನ್ನ ತಮ್ಮನಾದ ಜಟಾಯುವಿನ ಮರಣ ವಾರ್ತೆಯನ್ನು ವಾನರರಿಂದ ತಿಳಿದು ಸಂಪಾತಿ ಅತೀವ ದುಃಖಿತನಾಗುತ್ತಾನೆ. ಸೀತೆಯನ್ನು ರಾವಣನು ಸಾಗರದಾಚೆಯ ಲಂಕೆಗೆ ಕೊಂಡೊಯ್ದಿದ್ದಾನೆ ಎಂದು ಸಂಪಾತಿ ತಿಳಿಸುತ್ತಾನೆ. ಹಿಂದೊಮ್ಮೆ ಸೂರ್ಯನ ಪ್ರಖರ ಕಿರಣಗಳಿಂದಾಗಿ ಸಂಪಾತಿಯ ರೆಕ್ಕೆಗಳೆರಡೂ ಸುಟ್ಟಿದ್ದವು. ಸೀತೆಯ ಸುಳಿವನ್ನು ವಾನರರಿಗೆ ತಿಳಿಸುತ್ತಿದ್ದಂತೆ ಹೊಸ ರೆಕ್ಕೆಗಳು ಚಿಗುರುತ್ತವೆ. ವಾನರರಿಗೆ ವಿಜಯಶ್ರೀಯನ್ನು ಹರಸಿ ಸಂಪಾತಿಯು ಗಗನಕ್ಕೆರುತ್ತಾನೆ. ಸಂಪಾತಿಯ ಸಲಹೆಯಂತೆ ದಕ್ಷಿಣದ ಸಾಗರ ತಟಕ್ಕೆ ವಾನರರು ಬರುತ್ತಾರೆ. ಅಗಾಧವಾದ ಸಾಗರವನ್ನು ನೋಡಿ ದಾಟುವುದು ಹೇಗೆ ಎಂಬ ಚಿಂತೆ ವಾನರವೀರರನ್ನು ಕಾಡುತ್ತದೆ. ಮಹಾವೀರರಾದ ಗಜ, ಗವಾಕ್ಷ, ಗವಯ, ಗಂಧಮಾದನ, ಶರಭ, ಮೈಂದ, ದ್ವಿವಿದ, ಸುಶೇಷಣ ಮತ್ತು ಜಾಂಬವಂತರು ತಮ್ಮ ಸಾಮರ್ಥ್ಯವನ್ನು ಅಂಗದನಿಗೆ ಹೇಳಿದರು. ಸ್ವಯಂ ಅಂಗದನು ತಾನು ಸಾಗರವನ್ನು ಲಂಘಿಸಬಲ್ಲೆನೆಂದೂ ಆದರೆ ಮರಳಿ ಬರುವೆನೆಂಬ ವಿಶ್ವಾಸವಿಲ್ಲವೆಂದು ಹೇಳುತ್ತಾನೆ. ಆದರೆ ಹನುಮನೊಬ್ಬನೆ ಅಗಾಧವಾದ ಸಾಗರವನ್ನು ದಿಟ್ಟಿಸುತ್ತಾ ಕುಳಿತಿದ್ದನು. ಬಾಲ್ಯದಲ್ಲಿ ಮುನಿಗಳ ಶಾಪದಿಂದ ತನ್ನ ಶಕ್ತಿ, ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ಮರೆತಿರುತ್ತಾನೆ. ಇದನ್ನು ಗಮನಿಸಿದ ಜಾಂಬವಂತನು ಆಂಜನೇಯನಿಗೆ ಆತನ ಶಕ್ತಿ, ಸಾಮರ್ಥ್ಯಗಳನ್ನು ನೆನಪಿಸುತ್ತಾನೆ.
ಚಿತ್ರಕೃಪೆ: www.masters-gallery.com
0 comments:
Post a Comment