ಈ ವರ್ಷ ಮತ್ತೆ ಬಂದಿದೆ ಜುಲಾಯಿ 26. ಪ್ರತಿ ವರ್ಷ ಬರತ್ತಪ್ಪ, ಅದ್ರಲ್ಲೇನು ಹೊಸತು ಅಂತ ಕೇಳ್ತೀರಾ? ಹತ್ತು ವರ್ಷಗಳ ಹಿಂದಿನ ಮಾತಿದು. ನಾವೆಲ್ಲಾ ಉಂಡಾಡಿಗುಂಡರಂತೆ ಚೆನ್ನಾಗಿ ತಿಂದುಂಡು, ಮಲಗಿದ್ದೆವು. ನಮ್ಮ ಭಾರತ ಸರಕಾರ ಪಾಕಿಸ್ಥಾನದೆದುರಿಗೆ ಶಾಂತಿ ಪ್ರಸ್ತಾವವನ್ನು ಮುಂದಿಟ್ಟಿತ್ತು. ಸ್ವತ: ಅಂದಿನ ಪ್ರಧಾನಿ ವಾಜಪೇಯಿಯವರು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ದೆಹಲಿ-ಲಾಹೋರ್ ಬಸ್ಸು ಯಾತ್ರೆಯನ್ನೂ ಶುರು ಮಾಡಿದ್ದರು. ಅಂಥದ್ರಲ್ಲಿ ಪಾಕಿಸ್ಥಾನ ನಂಬಿಕೆ ದ್ರೋಹ ಮಾಡುತ್ತೆ ಅಂತ ಯಾರು ತಾನೇ ಊಹಿಸಲಿಕ್ಕೆ ಸಾಧ್ಯ? ಇತ್ತ ವಾಜಪೇಯಿ ಲಾಹೋರಿನಿಂದ ದೆಹಲಿಗೆ ಮರಳಿದ್ರು. ಅತ್ತ ಜೆಹಾದಿಗಳು, ಪಾಕಿ ಸೈನಿಕರು ಅವರ ಬೆನ್ನ ಹಿಂದೆಯೇ ಲೈನ್ ಆಫ್ ಕಂಟ್ರೋಲ್ ದಾಟಿ ಭಾರತದ ಸೈನಿಕ ಬಂಕರುಗಳನ್ನು ಕಬಳಿಸಿ ಬಿಟ್ಟರು. ಹಿಮಾಲಯದ ತವರು ಕಾಶ್ಮೀರ. ಚಳಿಗಾಲದಲ್ಲಿ ಬೆನ್ನು ಮೂಳೆ ಕೊರೆಯುವ ಚಳಿಯನ್ನು ತಡೆಯುವುದು ಎಂಥವರಿಗೂ ಕಷ್ಟ ಸಾಧ್ಯ. ಅಂಥದ್ರಲ್ಲಿ ಹಿಮಚ್ಛಾದಿತ ಹಿಮಾಲಯದ ಬೆಟ್ಟ,ಕಣಿವೆಗಳಲ್ಲಿ ಚಳಿಯನ್ನು ಸಹಿಸುವುದಾದ್ರೂ ಹೇಗೆ? ವಾಡಿಕೆಯಂತೆ ಎರಡೂ ದೇಶಗಳು ತಮ್ಮ ಸೈನಿಕರನ್ನು ಚಳಿಗಾಲದಲ್ಲಿ ಕಾಶ್ಮೀರದ ಕಣಿವೆಗಳಲ್ಲಿರುವ ಕೆಲ ಫಾರ್ವರ್ಡ್ ಪೋಸ್ಟುಗಳಿಂದ ಕರೆಸುತ್ತವೆ. ಬೇಸಗೆಯಲ್ಲಿ ಮತ್ತೆ ತಮ್ಮ-ತಮ್ಮ ಬಂಕರುಗಳಿಗೆ ಸೈನಿಕರು ಮರಳುತ್ತಾರೆ. 1999ರ ಫೆಬ್ರವರಿ ವೇಳೆಗೆ ಪಾಕ್ ಸೈನಿಕರು ತಮ್ಮ ಬಂಕರುಗಳ ಜೊತೆಗೆ ಭಾರತೀಯ ಬಂಕರುಗಳನ್ನೂ ಆಕ್ರಮಿಸಿಕೊಂಡರು. ನಂಬಿದವರ ಬೆನ್ನು ತಿವಿಯುವುದಂದ್ರೆ ಇದೇ ಅಲ್ವಾ?
ಮೊದಮೊದಲು ಪಾಕಿಸ್ಥಾನೀಯರ ಅತಿಕ್ರಮಣ ಭಾರತೀಯ ಸೇನೆಗೆ ಗೊತ್ತಾಗಿರಲಿಲ್ಲ. ಅದಕ್ಕೆ ಕಾರಣಗಳು ಹಲವಾರು. ಅತಿಕ್ರಮಣಗೊಂಡ ಪ್ರದೇಶಗಳಿಗೆ ಭಾರತೀಯ ಸೇನೆ ಗಸ್ತು ಪಡೆಯನ್ನು ಕಳಿಸಿರಲಿಲ್ಲ. (ಪಾಕಿಸ್ಥಾನ ಹೀಗೆ ಮಾಡುತ್ತೆ ಅಂತ ಅವರು ಕನಸಿನಲ್ಲೂ ಊಹಿಸಿರಲ್ಲ ಅಲ್ವಾ?) ಗಸ್ತು ತಿರುಗಬೇಕಾದ್ರೆ ಪಾಕ್ ಸೈನಿಕರು ಜೆಹಾದಿಗಳಿಗೆ ಲೈನ್ ಆಫ್ ಕಂಟ್ರೋಲಿನ ಆ ಕಡೆಯಿಂದ ಕವರಿಂಗ್ ಫೈರ್ ನೀಡಿದ್ರು. ಸಹಜವಾಗಿ ನಮ್ಮ ಸೇನೆಯ ಗಮನವನ್ನು ಬೇರೆಡೆಗೆ ಸೆಳೆಯುವಲ್ಲಿ ಸಫಲವಾಗಿತ್ತು. ಮುಂದೆ ಮೇ ತಿಂಗಳ ಎರಡನೇ ವಾರದಲ್ಲಿ ಕುರಿ ಕಾಯುವ ಹುಡುಗನೊಬ್ಬ ನೀಡಿದ ಸುಳಿವಿನ ಮೇಲೆ ಕಾರ್ಯಾಚರಣೆ ಶುರು ಮಾಡಿತು ಕ್ಯಾ.ಸೌರಭ್ ಕಾಲಿಯಾ ನೇತೃತ್ವ
ದ ಪಡೆ. ಆವಾಗಲೇ ಸತ್ಯ ಬೆಳಕಿಗೆ ಬಂದದ್ದು. ಸುಮಾರು 200 ಸ್ಕ್ವೇರ್ ಕಿ.ಮೀ ಗಳಷ್ಟು ಭಾರತೀಯ ಭೂಮಿಯನ್ನು ಶತ್ರುಗಳು ಕಬಳಿಸಿದ್ದರು. (ಮುಂದೆ ಸೌರಭ್ ಕಾಲಿಯಾ ಮತ್ತು ಆತನ ಸೈನಿಕರನ್ನು ಪಾಕಿಸ್ಥಾನಿ ಪಡೆಗಳು ಯುದ್ಧಕೈದಿಗಳನ್ನಾಗಿಸಿ, ಇಪ್ಪತ್ತೆರಡು ದಿನಗಳಲ್ಲಿ ನೀಡಿದ ಬರ್ಬರ ದೈಹಿಕ, ಮಾನಸಿಕ ಯಾತನೆಗಳು ಎಂಥವರ ಕಣ್ಗಳಲ್ಲೂ ಕಣ್ಣೀರಿಳಿಸುತ್ತದೆ. ಯುದ್ಧ ಕೈದಿಗಳನ್ನು ಗೌರವದಿಂದ ಕಾಣುವ ಮಾನವೀಯ ಸೌಜನ್ಯವನ್ನೂ ಪಾಕಿಗಳು ತೋರಿಸಲಿಲ್ಲ.) ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಆಪರೇಶನ್ ವಿಜಯ್ ಕೈಗೆತ್ತಿಕೊಂಡಿತು. ಇದೇ ನಮಗೆಲ್ಲರಿಗೂ ನೆನಪಾಗುವ ಕಾರ್ಗಿಲ್ ಯುದ್ಧ.(ನೆನಪಿಲ್ಲವೆಂದಲ್ಲಿ ದಯವಿಟ್ಟು ಸ್ವಲ್ಪ ನೆನಪಿಸಿಕೊಳ್ಳಿ.)
ಆ ಮೇಲಿಂದು ಇತಿಹಾಸ. ನಮಗೆಲ್ಲಾ ತಿಳಿದೇ ಇದೆ. ಇದರಲ್ಲಿ ಮಾಧ್ಯಮಗಳ ಕೊಡುಗೆಯೂ ಅಪಾರ. ದುರ್ಗಮ ಪ್ರದೇಶದಲ್ಲಿ ನಡೆದ ಯುದ್ಧವನ್ನು ಮನೆಯಂಗಳಕ್ಕೆ ತಂದು ತೋರಿಸಿದ್ರು. ನಮ್ಮ ಸೈನಿಕರ ಕಷ್ಟಗಳನ್ನು, ಧೈರ್ಯವನ್ನು, ತ್ಯಾಗವನ್ನು ಜನರು ನೋಡುವ ಹಾಗಾಯಿತು. ಅವರ ಬಗ್ಗೆಗಿನ ಗೌರವ ನೂರ್ಮಡಿಸಿತು. ಹಾಗಂತ ಇದಕ್ಕಿಂತ ಮೊದಲು ಗೌರವ ಇರಲಿಲ್ಲ ಅಂತ ಅಲ್ಲ. ಮೊದಲು ಯುದ್ಧದ ಬಗ್ಗೆ ಓದುತ್ತಿದ್ವಿ. ಈ ಯುದ್ಧವನ್ನು ಪ್ರತ್ಯಕ್ಷವಾಗಿ ನೋಡುವ ಹಾಗಾಯಿತು. ಕಾರ್ಗಿಲ್-ನ ತಪ್ಪಲಿನಲ್ಲಿ ಬೋಫೋರ್ಸಿನ ಅಬ್ಬರ ಮೊಳಗಿತು. ಭಾರತೀಯ ವಾಯುಸೇನೆ ‘ಆಪರೇಶನ್ ಸಫೇದ್ ಸಾಗರ್’ ಹೆಸರಲ್ಲಿ ನಮ್ಮ ಭೂಸೇನೆಯ ಜೊತೆ ಕೈಜೋಡಿಸಿತು. ಸುಮಾರು ಒಂದೂವರೆ ತಿಂಗಳು ನಡೆದ ಯುದ್ಧದಲ್ಲಿ ನಮ್ಮ ಸೈನಿಕರು ತೋರಿಸಿದ ಸಾಹಸ ನಿಜಕ್ಕೂ ಶ್ಲಾಘನೀಯ. ಶತ್ರುಗಳು ಮೇಲ್ಗಡೆಯಿಂದ ಆಕ್ರಮಣ ಮಾಡ್ತಿದ್ರೆ ದುರ್ಗಮ ಕಣಿವೆಗಳನ್ನು ಹತ್ತಿಕೊಂಡು ಪ್ರತ್ಯಾಕ್ರಮಣ ಮಾಡುವುದು ಸುಲಭವೇನಲ್ಲ. ಕೆಲವೊಂದು ಪರ್ವತ ಶ್ರೇಣಿಗಳಂತೂ 5500 ಮೀಟರುಗಳಷ್ಟು ಎತ್ತರವಿದ್ದವು. ಮೈಕೊರೆಯವ ಚಳಿ ಬೇರೆ. ಅಷ್ಟೆತ್ತರದ ಪರ್ವತಗಳಲ್ಲಿ -15 ಡಿಗ್ರಿಯಷ್ಟು ಕೊರೆಯುವ ಚಳಿಯಲ್ಲಿ ಮೈಮರೆಯದೆ ಶತ್ರುವಿನೊಂದಿಗೆ ಸೆಣಸುವುದು ತಮಾಷೆಯ ಮಾತಲ್ಲ. ಹಗಲು ಹೊತ್ತಲ್ಲಿ ಕಾರ್ಯಾಚರಣೆ ನಡೆಸಿದ್ರೆ ಮೇಲೆ ಹೊಂಚು ಹಾಕಿ ಕುಳಿತ ಶತ್ರುವಿಗೆ ಸುಲಭವಾದ ಆಹಾರವಾಗುವುದು ಖಚಿತವಾಗಿತ್ತು. ಅದಕ್ಕಾಗಿ ರಾತ್ರೋರಾತ್ರಿ ಮೈಯೆಲ್ಲಾ ಕಣ್ಣಾಗಿ, ಕಣಿವೆ,ಕಂದರಗಳನ್ನು ದಾಟಿ, ಪರ್ವತ ಶಿಖರ ತಲುಪಬೇಕಿತ್ತು. ನೆನೆಸಿಕೊಂಡ್ರೇ ಮೈ ಜುಮ್ಮೆನ್ನುತ್ತೆ!!! ಟೈಗರ್ ಹಿಲ್ ನಂತಹ ಮುಖ್ಯ ಪ್ರದೇಶಗಳನ್ನು ನಮ್ಮ ಪಡೆಗಳು ವಶಪಡಿಸುತ್ತಾ ಹೋದವು. ಜುಲಾಯಿ ಮೊದಲ ವಾರಗಳಲ್ಲೇ ಪಾಕ್ ಸೇನೆ ಬಳಲಿತ್ತು. ಅದೂ ಅಲ್ಲದೆ ಜಾಗತಿಕ ಮಟ್ಟದ ಒತ್ತಡ ಪಾಕಿಸ್ಥಾನದ ಮೇಲಿತ್ತು. ಕೊನೆಗೂ ಪಾಕಿಸ್ಥಾನದ ಪ್ರಧಾನಿ ನವಾಜ್ ಶರೀಫ್ ಸೇನೆಯನ್ನು ಹಿಂದೆಗೆದರು. ಆದ್ರೆ ಜೆಹಾದಿಗಳು ಯುದ್ಧವನ್ನು ಮುಂದುವರೆಸಿದ್ರು. ಸ್ವಲ್ಪವೂ ಎದೆಗುಂದದೆ ಶತ್ರುವನ್ನೆದುರಿಸಿದ ನಮ್ಮ ಸೇನೆ ದ್ರಾಸ್ ಕಣಿವೆಯನ್ನು ಗೆಲ್ಲುವುದರೊಂದಿಗೆ ಯುದ್ಧ ಕೊನೆಗೊಂಡಿತು. ಅವತ್ತು ಜುಲಾಯಿ 26. ಆವತ್ತಿನಿಂದ ಈ ದಿನವನ್ನು ‘ವಿಜಯ್ ದಿವಸ್’ ಅಂತ ಆಚರಿಸಲಾಗುತ್ತದೆ. ದೇಶಕ್ಕಾಗಿ ಬಲಿದಾನಗೈದ ಸೈನಿಕರ ನೆನಪಿಗಾಗಿ. ನಮ್ಮ ನಾಳೆಗಳಿಗೆ ತಮ್ಮ ವರ್ತಮಾನವನ್ನು ಮುಡಿಪಾಗಿಟ್ಟ ಸೈನಿಕರೆಷ್ಟೊ. ಕ್ಯಾ. ಸೌರಭ್ ಕಾಲಿಯಾ, ಕ್ಯಾ.ವಿಕ್ರಮ್ ಭಾತ್ರ, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್, ಸ್ಕಾಡ್ರನ್ ಲೀಡರ್ ಅಜಯ್ ಅಹುಜಾ. . . ಒಬ್ಬೊಬ್ಬರ ಸಾಹಸ, ಧೈರ್ಯ ಮರೆಯಲಸಾಧ್ಯ!!! ಯುದ್ಧ ಮುಗಿದ ಮೇಲೆ ಪಾಕಿಸ್ಥಾನ ತನ್ನ ಸೈನಿಕರ ದೇಹವನ್ನೂ ಗುರುತಿಸಲೂ ಒಪ್ಪಲಿಲ್ಲ. ಇದಕ್ಕಿಂತ ನಾಚಿಕೆಗೇಡು ಇನ್ನೇನಿದೆ?
ಇವತ್ತು ಕಾರ್ಗಿಲ್ ಯುದ್ಧವಾಗಿ ಹತ್ತು ವರ್ಷಗಳೇ ಕಳೆದಿವೆ. ಬಲಿದಾನಗೈದ ಸೈನಿಕರು ಕಾಲಗರ್ಭ ಸೇರಿದ್ದಾರೆ. ಆದರೆ ಅವರ ಮನೆಯವರಿಗೆ, ಅಪ್ಪ-ಅಮ್ಮನಿಗೆ ಅವರು ಮಡಿಲಲ್ಲಿ, ಮನೆಯಂಗಳದಲ್ಲಿ ಆಡಿದ ಮಕ್ಕಳಲ್ಲವೇ? ಅವರಂತೂ ಈ ಧೈರ್ಯಶಾಲಿಗಳನ್ನು ದಿನನಿತ್ಯ ನೆನೆಸುತ್ತಿರಬಹುದು ಅಲ್ವಾ? ಕೊನೆ ಪಕ್ಷ ಇವತ್ತಾದ್ರೂ ಇವರನ್ನು, ಇವರ ಸಾಹಸವನ್ನು, ತ್ಯಾಗವನ್ನು ನೆನಪಿಸಿಕೊಳ್ಳದಿದ್ರೆ ನಾವು ಸ್ವಾರ್ಥಿಗಳಾಗುವುದಿಲ್ಲವೇ? ಕೃತಘ್ನರೆನಿಸುವುದಿಲ್ಲವೇ? ಕಾರ್ಗಿಲ್ ವಿಜಯ ಬಿಜೆಪಿಯ ವಿಜಯ, ದೇಶದ್ದಲ್ಲ ಅಂತ ಹೇಳಿಕೊಂಡು ಬಂದ ಕಾಂಗ್ರೆಸ್ ಕೊನೆಗೂ ವಿಜಯ ದಿವಸ್ ಆಚರಿಸಲು ಮುಂದಾಗಿದ್ದು ಸಂತೋಷದ ವಿಷಯ. ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಕೀಳುಮಟ್ಟದ ರಾಜಕೀಯವನ್ನು ಬದಿಗೊತ್ತಿ ಹುತಾತ್ಮರ ಬಲಿದಾನವನ್ನು ನೆನಪಿಸಿ, ಗೌರವಿಸಿದ್ರೆ ಅದಕ್ಕಿಂತ ಶ್ರೇಯಸ್ಕರ ಕೆಲಸ ಬೇರೆ ಇಲ್ಲ. ಹಾಗೆಯೇ ನಾವು ಲೋಕಸಭೆಗೆ ಆರಿಸಿ ಕಳಿಸಿದ್ದಕ್ಕೆ ನಮ್ಮ ಮೇಲೆ ಮಾಡುವ ಬಹುದೊಡ್ಡ ಉಪಕಾರ ಕೂಡ. "A man is not dead until he is forgotten" ಎಂಬ ಮಾತೊಂದಿದೆ. ನಮ್ಮ ಸೈನಿಕರನ್ನು ನಾವು ಯಾವತ್ತೂ ಮರೀಬಾರ್ದು. ಇವತ್ತು ನಾವು ಚೆನ್ನಾಗಿದ್ದೇವೆ, ಸುರಕ್ಷಿತವಾಗಿದ್ದೇವೆ ಅಂದ್ರೆ ಇವರಿಂದಲೇ. ದೇಶ ರಕ್ಷಣೆಯನ್ನು ಕೈಗೆತ್ತಿಕೊಂಡ ಸೈನಿಕರಿಗೆ ನಮ್ಮ ನಮನಗಳು.
2 comments:
hi sunil...its too good article...i like all of ur articles..love to read it...wish u all the best...keep it up.
ಧನ್ಯವಾದಗಳು... ಆಗಾಗ ಭೇಟಿ ಕೊಡ್ತಾ ಇರಿ... ಜೊತೆಗೆ 'ಕಮೆಂಟಿಸಿ'....
Post a Comment