Wednesday, September 01, 2010

ಸ್ವಾತಂತ್ರ್ಯದ ಸಂಭ್ರಮದಲ್ಲಿ (ಭಾರತೀಯ) ಅಮೇರಿಕಾದ ಕಂದಮ್ಮಗಳು...

‘ಸ್ವಾತಂತ್ರ್ಯೋತ್ಸವ’ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ. ಸಣ್ಣವರಿದ್ದಾಗ ಕಾತರದಿಂದ ಕಾಯುತ್ತಿದ್ದ ದಿನವದು. ಏನೋ ಸಂಭ್ರಮ, ಏನೋ ಖುಷಿ! ತ್ರಿವರ್ಣ ಧ್ವಜವನ್ನು ಹಿಡಿದು ಓಡಾಡುವುದೆಂದರೆ ಏನೋ ಹೆಮ್ಮೆ. ಎದೆಯುಬ್ಬಿಸಿ ‘ಜನಗಣಮನ’ ಹಾಡುತ್ತಿದ್ದ ಠೀವಿಯೇ ಬೇರೆ! ಆದ್ರೆ ಬೆಳೆಯುತ್ತಾ ಆ ಸಂಭ್ರಮವೆಲ್ಲೋ ಕಳೆದು ಹೋಯಿತು. ಹೈಸ್ಕೂಲು ಮೆಟ್ಟಿಲು ದಾಟಿದ ನಂತರ ಬಾಲ್ಯದಂತೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ ನೆನಪಿಲ್ಲ. ಕಣ್ಣ ಮುಂದೆಯೇ ಅದೊಂದು ವ್ಯಾಪಾರವಾ ಬಗೆಗೂ ದು:ಖವಿದೆ. ಖಾದಿಯ ಬದಲು ಪ್ಲಾಸ್ಟಿಕ್ ಬಾವುಟಗಳು ಬಂದವು. ಇವತ್ತು ಮಕ್ಕಳ ಕೈಗಳಲ್ಲಿ ಹಾರಾಡುತ್ತಿದ್ದ ಬಾವುಟ ಮರುದಿನ ಮಳೆನೀರಲ್ಲಿ ತೋಯ್ದು ಚರಂಡಿಯಲ್ಲಿ ಹರಿಯುವುದನ್ನೂ ನೋಡಿದ್ದೇನೆ. ಮುಂದೆ ಕೆಲಸ ಸಿಕ್ಕಿ, ದಿನನಿತ್ಯದ ಜಂಜಾಟದಲ್ಲಿ ಒದ್ದಾಡುತ್ತಿರಬೇಕಾದರೆ ಆಗಷ್ಟ್ 15 ಕೇವಲ ಒಂದು ರಜಾದಿನವಾಗಿ ಮಾರ್ಪಾಡಾಗಿದ್ದಕ್ಕೆ ಬೇಸರವೂ ಇದೆ. ನಮ್ಮ ಪೀಳಿಗೆಯೇ ಹೀಗಿದ್ರೆ ನಮ್ಮ ನಂತರದ ಮಕ್ಕಳಿಗೆ ‘ಸ್ವಾತಂತ್ರ್ಯೋತ್ಸವ’ ಅಂದ್ರೆ ಯಾವ ರೀತಿಯ ಸಂಭ್ರಮ ಇರಬಹುದೋ ಅನ್ನೋ ಕುತೂಹಲ ನನಗೆ. ದಿನಬೆಳಗಾದ್ರೆ ಶಾಲೆ, ಟ್ಯೂಷನ್, ಟಿವಿ, ಕಾರ್ಟೂನು, ಕಂಪ್ಯೂಟರ್ ಗೇಮ್ಸ್ ಅಂತ ಕೈ ತುಂಬಾ ‘ಕೆಲಸ’ವಿರುವ ಮಕ್ಕಳಿಗೆ ನಿಜವಾಗಲೂ ಸ್ವಾತಂತ್ರ್ಯೋತ್ಸವದ ಮಹತ್ವ ಗೊತ್ತೇ? ಸ್ವಾತಂತ್ರ್ಯ ಹೋರಾಟಗಾರರು ಯಾರು ಅಂತ ಕೇಳಿದ್ರೆ ಅದೇ ಗಾಂಧಿ, ಅದೇ ನೆಹರು ಹೆಸರು ಕೇಳಿ ಬರುತ್ತದೆ. ‘ಇವನ್ಯಾರೋ ಗಾಂಧಿ ಬಗ್ಗೆ ಇಷ್ಟು ಕೀಳಾಗಿ ಮಾತನಾಡ್ತಾ ಇದ್ದಾನೆ’ ಅಂತ ಅನ್ನಿಸಿದ್ರೆ ಕ್ಷಮಿಸಿ. ಮಹಾತ್ಮರ ಬಗ್ಗೆ ನನಗೆ ಅಪಾರ ಗೌರವ ಇದೆ. ಸಮಗ್ರ ಭಾರತೀಯರನ್ನು ಒಂದುಗೂಡಿಸಿದ ಮಹಾನ್ ನಾಯಕ ಅವರು. ಅವರ ಅಹಿಂಸಾತ್ಮಕ ಹೋರಾಟದಿಂದಲೇ ನಮ್ಮ ಸ್ವಾತಂತ್ರ್ಯ ಹೋರಾಟ ಇತರೆಲ್ಲ ದೇಶಗಳ ಹೋರಾಟಗಳಿಗಿಂತ ಭಿನ್ನ ಹಾಗೂ ವಿಶಿಷ್ಟ!! ಆದ್ರೂ ಸ್ವಾತಂತ್ರ್ಯ ಹೋರಾಟವನ್ನೇ ತಮ್ಮ ಜೀವನದ ಧ್ಯೇಯವನ್ನಾಗಿಸಿ, ಪ್ರಾಣಾರ್ಪಣೆಗೈದ ಅನೇಕ ಮಹಾನ್ ವೀರರಿದ್ದಾರೆ. ಗಾಂಧಿ, ನೆಹರುಗಳ ಮಧ್ಯೆ ಇವರು ಮೂಲೆಗುಂಪಾಗಿರುವುದು ಬೇಸರದ ಸಂಗತಿಯೇ ಸರಿ!!! ಸ್ವಾತಂತ್ರ್ಯವೀರ ಸಾವರ್ಕರ್, ಚಂದ್ರಶೇಖರ ಆಝಾದ್, ಮದನ್ ಲಾಲ್ ಧೀಂಗ್ರ, ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಕ್ ಉಲ್ಲಾ ಖಾನ್, ಖುದೀರಾಮ್ ಬೋಸ್, ಸುಭಾಷ್ ಚಂದ್ರ ಬೋಸ್ ಹೀಗೆ ಲೆಕ್ಕವಿಲ್ಲದಷ್ಟು ವೀರ ಸೇನಾನಿಗಳು ಕಾಲಚಕ್ರದೊಂದಿಗೆ ಕಳೆದು ಹೋಗಿದ್ದಾರೆ. ಪಠ್ಯಪುಸ್ತಕಗಳಲ್ಲಿ ಇವರ ಹೆಸರನ್ನು ಹುಡುಕುವುದು ವ್ಯರ್ಥ. ಮತ್ತೆ ಇಂದಿನ ಮಕ್ಕಳಿಂದ ಈ ವೀರರ ಹೆಸರುಗಳನ್ನು ನಿರೀಕ್ಷಿಸುವುದಾದರೂ ಹೇಗೆ? ಅಷ್ಟೇ ಯಾಕೆ ಸ್ವತ: ನನಗೇ ಗೊತ್ತಿರಲಿಲ್ಲ!!! ಯುಗಾವತಾರ, ಅಜೇಯ, ಆತ್ಮಾಹುತಿಯಂತಹ ಪುಸ್ತಕಗಳು ನನ್ನ ಕೈಗೆ ಸಿಕ್ಕಿರದಿದ್ದರೆ ನಾನೂ ಅಜ್ಞಾನಿಯಾಗಿಯೇ ಇರುತ್ತಿದ್ದೆ.

ಆದ್ರೆ ಈ ವರ್ಷದ ಸ್ವಾತಂತ್ರ್ಯೋತ್ಸವ ನನ್ನ ಪಾಲಿಗೆ ಸ್ವಲ್ಪ ಭಿನ್ನವಾಗಿತ್ತು. ಅದರಲ್ಲಿ ನಾನೊಬ್ಬ ಪ್ರೇಕ್ಷಕನಾದರೂ ಪಾಲ್ಗೊಂಡಿದ್ದಕ್ಕೆ ಅತೀವ ಖುಷಿಯಿದೆ. ಈ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ್ದು ನ್ಯೂಜೆರ್ಸಿಯ ಶ್ರೀಕೃಷ್ಣ ವೃಂದಾವನದಲ್ಲಿ. ನನ್ನ ಗೆಳೆಯರೊಬ್ಬರ ಮಗಳು ಗರ್ಲ್ಸ್ ಸ್ಕೌಟ್ ವತಿಯಿಂದ ಶ್ರೀಕೃಷ್ಣನ ಸನ್ನಿಧಿಯಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದಳು. ಪುತ್ತಿಗೆ ಮಠಾಧೀಶ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥರ ಆಶೀರ್ವಚನದೊಂದಿಗೆ ಶುರುವಾದ ಈ ಕಾರ್ಯಕ್ರಮದಲ್ಲಿ, ಪುಟ್ಟ ಪುಟ್ಟ ಮಕ್ಕಳು ಭಾರತ ಮಾತೆ, ರಾಣಿ ಚೆನ್ನಮ್ಮ, ರಾಣಿ ಲಕ್ಷ್ಮೀಬಾಯಿ, ಮಹಾತ್ಮಾ ಗಾಂಧಿ, ಜೀಜಾಬಾಯಿ ಹೀಗೆ ಹತ್ತು ಹಲವು ಸ್ವಾತಂತ್ರ್ಯಪೂರ್ವದ ವ್ಯಕ್ತಿಗಳಂತೆ ಕಾಣಿಸಿಕೊಂಡರು. ಈ ಪುಟ್ಟ ಮಕ್ಕಳು ತಮ್ಮ ಅಮೇರಿಕನ್ ಆಕ್ಸಂಟಿನಲ್ಲಿ ಮಹಾನ್ ವೀರರ ಪರಿಚಯ ಮಾಡಿಕೊಟ್ಟ ರೀತಿ ಮುದ್ದಾಗಿತ್ತು. ಭಾರತ ಹಾಗೂ ಅಮೇರಿಕಾದ ರಾಷ್ಟ್ರಗೀತೆಗಳೊಂದಿಗೆ ಸುಂದರವಾದ ಕಾರ್ಯಕ್ರಮವು ಮುಕ್ತಾಯವನ್ನು ಕಂಡಿತು. ಇದರಲ್ಲೇನು ವಿಶೇಷ ಅಂತೀರಾ? ಅಮೇರಿಕಾದಲ್ಲಿ ಹುಟ್ಟಿ ಬೆಳೆಯಿತ್ತಿರುವ ಈ ಕಂದಮ್ಮಗಳಿಗೆ ಡೋರಾ, ಬಾರ್ನಿ, ಬಾರ್ಬಿ, ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್-ಗಳು ಮಾತ್ರ ಗೊತ್ತು. ಅಂಥದ್ದರಲ್ಲಿ ಸ್ವಾತಂತ್ರ್ಯವೀರರು, ವಂದೇ ಮಾತರಂ, ಜನಗಣಮನ ಹೇಗೆ ತಾನೇ ಗೊತ್ತಿರಲು ಸಾಧ್ಯ? ಇವತ್ತು ಈ ಮಕ್ಕಳು ಸ್ವಾತಂತ್ರ್ಯವೀರರ ಬಗ್ಗೆ ಒಂದೆರಡು ಮಾತುಗಳನ್ನಾಡಿದ್ರೆ ಅದರ ಶ್ರೇಯಸ್ಸು ಅವರ ತಂದೆ-ತಾಯಿಯರಿಗೆ ಸಲ್ಲಬೇಕು. ಅವರು ತೋರಿಸಿದ ಪ್ರೋತ್ಸಾಹ, ಉತ್ಸಾಹಕ್ಕೆ ಎಷ್ಟು ಶ್ಲಾಘಿಸಿದರೂ ಸಾಲದು!!! ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಇವರು ತೋರಿಸುವ ಹಾದಿ, ಕೊಡುವ ಸಂಸ್ಕಾರ, ಸುಸಂಸ್ಕೃತ ಪೀಳಿಗೆಗೆ ನಾಂದಿ ಅಂದ್ರೆ ತಪ್ಪಾಗಲಿಕ್ಕೆ ಇಲ್ಲ ಅಲ್ವಾ?

ನಾನು ತೆಗೆದ ಒಂದೆರಡು ಚಿತ್ರಗಳು ನಿಮಗಾಗಿ...

Monday, April 19, 2010

ಮನ ಹಿಡಿದ ಮನೆಯ ಜಾಡು...

ಭಾನುವಾರ ಸಂಜೆಯ ಮಾತು. ನನ್ನ ದೃಷ್ಟಿ ಕಿಟಕಿಯ ಮೂಲಕ ಹಾದು ಮನೆ ಎದುರಿದ್ದ ಗುಡ್ಡದ ಮೇಲೆ ನೆಟ್ಟಿತ್ತು. ಅದು ಗುಡ್ಡವೇನೂ ಅಲ್ಲ. ನನ್ನ ಮನೆ ಸ್ವಲ್ಪ ತಗ್ಗಿನಲ್ಲಿದೆ. ಅದಕ್ಕೆ ಗುಡ್ಡ ಅಂತ ಹೇಳಿದೆ ಅಷ್ಟೆ. ಸಂಜೆಯ ಸೂರ್ಯನ ಬಿಸಿಲು. ತಣ್ಣಗೆ ಬೀಸುವ ಗಾಳಿಗೆ ಗಿಡ ಮರಗಳು ತಲೆ ತೂಗ್ತಿದ್ದಾವೇನೋ ಅಂತ ಅನ್ನಿಸಿತು. ‘ನೋಡು ಹವಾಮಾನ ಚೆನ್ನಾಗಿದೆ. ಗಾಳಿ ಬೀಸ್ತಾ ಇದೆ. ಇಲ್ಲಿಂದ ನೋಡ್ತಾ ಇದ್ರೆ ಚೇವಾರಿನಲ್ಲಿದ್ದೇನೆ ಅಂತ ಅನ್ನಿಸ್ತಾ ಇದೆ’ ಅಂತ ನನ್ನಾಕೆಗೆ ಹೇಳಿದಾಗ ಅವಳೊಂದು ತುಂಟ ನಗೆ ಬೀರಿದಳು. ತಣ್ಣನೆ ಗಾಳಿ ಬೀಸಿದಾಗ, ಎಳೆ ಬಿಸಿಲು ಮೂಡಿದಾಗ, ಜಡಿ ಮಳೆ ಸುರಿದಾಗ ನಾನು ಚೇವಾರಿನ ಹಾಗೆ ಅಂದ್ರೆ ಆಕೆ ನನ್ನನ್ನು ಛೇಡಿಸುವ ರೀತಿಯಲ್ಲಿ ನಗ್ತಾ ಇರ್ತಾಳೆ. ಅಂದ ಹಾಗೆ ಚೇವಾರು ನನ್ನ ಊರಿನ ಹೆಸರು. ನನ್ನ ಅಮ್ಮನ ತವರು ಮನೆ. ಈಗ ಅಪ್ಪ, ಅಮ್ಮ ಅಜ್ಜಿಯ ಜೊತೆ ಅಲ್ಲೇ ಇದ್ದಾರೆ. ಯಕ್ಷಗಾನ, ಪಿತಾಮಹ ಪಾರ್ತಿಸುಬ್ಬನ ಕರ್ಮಭೂಮಿಯಾದ ಕುಂಬಳೆಯ ಪಕ್ಕದಲ್ಲಿದೆ ನನ್ನ ಚೇವಾರು. ಸಣ್ಣವನಿದ್ದಾಗ ನನ್ನೆಲ್ಲಾ ಬೇಸಿಗೆ ರಜೆಗಳನ್ನು ಕಳೆದದ್ದು ಇಲ್ಲಿಯೇ. ಪ್ರತಿಸಲ ಚೇವಾರಿಗೆ ಹೋದಾಗಲೂ ಏನೂ ವ್ಯತ್ಯಾಸ ಕಾಣ್ತಿರಲಿಲ್ಲ. ಈಗಲೂ ಅಷ್ಟೆ ಚೇವಾರು ಇದ್ದ ಹಾಗೆ ಇದೆ. ವಾಹನಗಳ ಜಂಜಾಟವಿಲ್ಲ, ದೊಡ್ಡ ದೊಡ್ಡ ಬಿಲ್ಡಿಂಗ್ ಗಳಿಲ್ಲ, ಮನೆಗಳೂ ಹಾಗೆಯೇ ಇವೆ. ಒಂದೇ ಒಂದು ವ್ಯತ್ಯಾಸ ಅಂದ್ರೆ ಎಲ್ಲರ ಕೈಯಲ್ಲೂ ಮೊಬೈಲ್ ಫೋನ್ ಗಳಿವೆ. ಬಿಎಸ್ ಎನ್ ಲ್, ಏರ್ ಟೆಲ್ ಸಿಗ್ನಲ್ ಗಳೂ ಸಕತ್ತಾಗಿವೆ. ಯಾಕೆ ಹೀಗೆ ಅನ್ನಿಸ್ತು ಅಂದ್ರೆ ನಾನು ಹೈಸ್ಕೂಲ್, ಪಿಯೂಸಿ ಓದಿದ್ದು ನನ್ನ ಅಪ್ಪನ ಮನೆಯಲ್ಲಿದ್ದು. ಅದು ವಿಟ್ಲ ಪಕ್ಕದ ಪುಣಚಾ ಗ್ರಾಮದಲ್ಲಿದೆ. ತುಂಬಾ ಸಣ್ಣವನಿದ್ದಾಗ ಇಲ್ಲಿಗೆ ಹೋಗಿದ್ದು ಬಹಳ ಅಪರೂಪ. ನನಗೆ ನೆನಪಿರುವ ಹಾಗೆ ಪರಿಯಾಲ್ತಡ್ಕದಲ್ಲಿ ಶಂಕರ ಭಟ್ರ ಅಂಗಡಿ, ಕೊಂಕಣ್ತಿಯಮ್ಮನ ಹೋಟೇಲು, ಒಂದು ಟೈಲರ್ ಅಂಗಡಿ, ಶಾಲೆ, ಸೊಸೈಟಿ ಇಷ್ಟೇ ಇದ್ದದ್ದು. ಒಂದೆರೆಡು ಹಳೆಯ ಲ್ಯಾಂಬಿ ರಿಕ್ಷಾ ಬಿಟ್ರೆ ಮನೆಗೆ ತಲುಪಲಿಕ್ಕೆ ನಟರಾಜ ಸರ್ವಿಸೇ ಮಾಡ್ಬೇಕಿತ್ತು. ಮೈ ಚಾಚಿ ಹೆಬ್ಬಾವಿನಂತೆ ಮಲಗಿರುವ ಕಚ್ಚಾ ಮಣ್ಣಿನ ರಸ್ತೆ. ಮನೆ ತಲುಪುವ ಹೊತ್ತಿಗೆ ಮೊಣಕಾಲಿನ ತನಕ ಎಲ್ಲವೂ ಕೆಂಪೇ!!! ಅಷ್ಟೊಂದು ಧೂಳು. ಆದ್ರೆ ಪ್ರತಿ ಬಾರಿ ಪರಿಯಾಲ್ತಡ್ಕ ಬದಲಾಗಿತ್ತು. ಎಷ್ಟೊಂದು ಬಿಲ್ಡಿಂಗ್ ಗಳು, ಮಳಿಗೆಗಳು, ನಾಲ್ಕೈದು ಡಾಕ್ಟರ್ ಕ್ಲಿನಿಕುಗಳು, ಬಗೆ ಬಗೆಯ ರಿಕ್ಷಾಗಳು, ಏನಿಲ್ಲ ಅಂದ್ರೆ ಕನಿಷ್ಟ ಇಪ್ಪತ್ತೈದು ಬಾಡಿಗೆ ಜೀಪುಗಳು. ನೋಡು ನೋಡುತ್ತಿದ್ದಂತೆಯೇ ಹಳ್ಳಿ ಸಣ್ಣ ಪೇಟೆಯಾಗಿ ಬೆಳೆದು ನಿಂತಿದೆ.

ಆದ್ರೆ ಚೇವಾರು ಹಾಗಲ್ಲ. ಏನೇನೂ ಬದಲಾಗಿಲ್ಲ. ಒಂದೆರಡು ಬದಲಾವಣೆಗಳಿದ್ದರೂ ಇಷ್ಟು ವರ್ಷಕ್ಕೆ ಅದೇನೂ ದೊಡ್ಡದನಿಸಲಿಲ್ಲ. ಮುಖಗಳೂ ಅಷ್ಟೆ ಅದೇ ಕಿಟ್ಟು, ಮೂಸೆ, ಮಮ್ಮದೆ, ನಾರಾಯಣ, ಹಾಂ… ಇವರೆಲ್ಲರ ತಲೆಗೂದಲು ಕಾಲಚಕ್ರದ ಹೊಡೆತಕ್ಕೆ ಬೆಳ್ಳಗಾಗಿದೆ, ಚರ್ಮ ಸ್ವಲ್ಪ ಸುಕ್ಕಾಗಿದೆ. ಬಸ್ಸಿಂದ ಇಳಿದ ಕೂಡಲೇ ಕಾಣುವುದು ನಾನು ಓದಿದ ಶಾಲೆ. ಶಾರದಾ ಪ್ರಾಥಮಿಕ ಶಾಲೆ. ಒಂದು ವರ್ಷ ಓದಿದ್ದೆ, ಅಜ್ಜನ ರೇಶನ್ ಸ್ಟೋರಲ್ಲಿ ತಂಟೆ ಮಾಡ್ತಾ ಇದ್ದೆ ಅಂತ ಶಾಲೆಗೆ ಕಳಿಸಿದ್ರು. ಆಗ ನನಗೆ ಬರೇ ನಾಲ್ಕು ವರ್ಷ. ನನಗಿಂತ ಒಂದೆರಡು ವರ್ಡ ದೊಡ್ಡ ಹುಡುಗರೊಂದಿಗೆ ಒಂದನೇ ಕ್ಲಾಸ್ ಓದಿದ್ದೆ. ಈಗಲೂ ಶಾಲೆ ಇನ್ನೂ ಹಾಗೆ ಇದೆ ಅನ್ನಿಸ್ತು. ರೂಪ ಆಕಾರದಲ್ಲಿ ಯಾವುದೇ ಬದಲಾವಣೆ ಕಾಣಿಸಲಿಲ್ಲ. ಗೋಡೆಯ ಬಣ್ಣಗಳು ಮಾಸಿದ್ದವು. ಬಹುಶಃ ಟೀಚರ್, ಮಾಸ್ಟ್ರುಗಳೂ ಬದಲಾಗಿರುವುದಿಲ್ಲ. ಈಶ್ವರ ಮಾಸ್ಟ್ರು, ವೆಂಕಟ್ರಮಣ ಮಾಸ್ಟ್ರು, ಹೆಲೆನ್ ಟೀಚರ್, ಲಕ್ಷ್ಮಿ ಟೀಚರ್ ಇವರೇ ಇರ್ಬೇಕು. ಮಳೆಗಾಲದಲ್ಲಿ ಮೊಳಕೆಯೊಡುವ ಅಣಬೆಗಳಂತೆ ಅಕ್ಕ-ಪಕ್ಕದಲ್ಲಿ ಇಂಗ್ಲಿಷ್ ಮೀಡಿಯಂ ಶಾಲೆಗಳು ಶುರುವಾಗಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಅಂತ ಈಶ್ವರ ಮಾಸ್ಟ್ರು ಹೇಳ್ತಾ ಇದ್ರು ಅಂತ ಅಮ್ಮ ಹೇಳಿದ ನೆನಪು.

ಶಾಲೆ ದಾಟಿ ಮುಂದೆ ಹೋದ್ರೆ ಅಜ್ಜನ ಹೆಸರಿನ ಪಂಚಾಯ್ತಿ ರಸ್ತೆ ಕಾಣಿಸುತ್ತದೆ. ‘ಚೇವಾರು ಜನಾರ್ಧನ ಕಾಮತ್ ರಸ್ತೆ’. ಪಂಚಾಯ್ತಿ ಉಪಾಧ್ಯಕ್ಷರಾಗಿ, ಯಕ್ಷಗಾನ ಹಿಮ್ಮೇಳ ಕಲಾವಿದರಾಗಿ ಅಜ್ಜ ಒಳ್ಳೆಯ ಹೆಸರನ್ನು ಮಾಡಿದ್ರು. ಊರ ಜನ ಅವರನ್ನು ‘ಚಂಡೆ ಕಮ್ತಿಯೆರ್’ ಅಂತಲೇ ಕರಿತಾ ಇದ್ರು. ನನ್ನ ಪರಿಚಯ ಹೇಳಬೇಕಾದ್ರು ಅಜ್ಜನ ಹೆಸರಿನ ಸರ್ಟಿಪಿಕೇಟು ಬೇಕಿತ್ತು. ಈಗ ಬ್ಯಾಂಕ್, ಅಂಗಡಿ, ಮನೆ ಸಾಮಾನು, ದೇವಸ್ಥಾನ ಅಂತ ಅಮ್ಮನದೇ ಕಾರುಬಾರು. ಸಹಜವಾಗಿ ಅಮ್ಮನ ಪರಿಚಯ ಊರವರಿಗೆಲ್ಲಾ ಇದೆ. ಈಗ ಸರಳಕ್ಕನ ಮಗ ಅಂದ್ರೆ ಎಲ್ಲರಿಗೂ ತಿಳಿಯುತ್ತದೆ. ಈ ರಸ್ತೆ ಎಷ್ಟು ದೂರ ಹೋಗತ್ತೆ ಅಂತ ನನಗೆ ಗೊತ್ತಿಲ್ಲ. ಹತ್ತು ಹೆಜ್ಜೆ ಇಡುವಷ್ಟರಲ್ಲಿ ಮನೆಯ ಕಡೆಗೆ ಹೋಗಲು ನಾನು ಕಾಲುದಾರಿ ಬಳಸಬೇಕು. ಕಾಲುದಾರಿಯಿಂದ ಸ್ವಲ್ಪ ತಲೆ ಎತ್ತಿ ನೋಡಿದರೆ ಗೋಪಾದನ ಹಳೆ ಮನೆ ಕಾಣಿಸುತ್ತದೆ. ಅದರ ಪಕ್ಕದಲ್ಲೇ ಅಜ್ಜನ ಸ್ಟೋರ್, ಮನೆ ಇದೆ. ಇದನ್ನು ಅಜ್ಜ ತುಂಬಾ ಹಿಂದೆಯೇ ಮಾರಿದ್ರು. ಗೋಪಾದ ಈಗ ಹೊಸ ಮನೆ ಕಟ್ಟಿಸಿದ್ದಾರೆ. ಸ್ಟೋರಿನ ಪಕ್ಕದಲ್ಲೇ ಗೋಪಾದನ ಗದ್ದೆಗಳಿವೆ. 70X200 ಅಡಿಯ ಗದ್ದೆಯೇ ನಮ್ಮ ಈಡನ್ ಗಾರ್ಡನ್. ಜೆಪಿ ಮಾಮ, ಮಾನ, ಅಭಿಯ ಜೊತೆ ಪ್ರತಿ ಸಂಜೆ ಕ್ರಿಕೆಟ್ ಆಡ್ತಾ ಇದ್ವಿ. ಗದ್ದೆ ನಾಟಿಯಿಂದಾಗಿ ಗದ್ದೆ ತುಂಬಾ ಪದಚಿಹ್ನೆಗಳಿರುತ್ತಿದ್ದವು. ಇದರಿಂದಾಗಿ ಫ್ಯಾಷನ್ ಟಿವಿಯಲ್ಲಿ ಬರುವ ರೂಪದರ್ಶಿಯಂತೆ ಥಳುಕುತ್ತಾ, ಬಳುಕುತ್ತಾ ಬರುವ ಚೆಂಡನ್ನು ಹೊಡೆಯುವುದೇ ಒಂದು ದೊಡ್ಡ ಕುಷಲತೆ!!! ಪಿಚ್ ಸಮತಟ್ಟಾಗಿ ಒಂದು ಹಂತಕ್ಕೆ ಬರುತ್ತಿರುವಂತೆ ನಮ್ಮ ಬೇಸಿಗೆ ರಜೆಗಳು ಮುಗಿಯುತ್ತಿದ್ದವು. ಅದೇನೇ ಇರಲಿ ಕ್ರಿಕೆಟ್ ಆಡುವ ಸಲುವಾಗಿ ಪ್ರತಿ ಸಂಜೆಗೆ ಕಾಯುತ್ತಿದ್ದುದು ಮಾತ್ರ ಸುಳ್ಳಲ್ಲ.

ಕಾಲುದಾರಿಯಲ್ಲಿ ಒಂದೆರಡು ಮನೆಗಳನ್ನು ದಾಟಿ ಗುಡ್ಡ ಇಳಿಯುತ್ತಿದ್ದಂತೆ ಸ್ವಲ್ಪ ದೂರ ತಗ್ಗಲ್ಲಿ ಮನೆಯ ಸೂರು ಕಾಣಿಸುತ್ತದೆ. ಬೇಸಿಗೆಯ ಹಗಲುಗಳನ್ನು ಅಜ್ಜ, ಅಜ್ಜಿಯ ಜೊತೆ ಈ ಗೇರು ಹಣ್ಣಿನ ಗುಡ್ಡದಲ್ಲಿ ಕಳೆಯುತ್ತಿದ್ದೆವು. ಮರದಿಂದ ಗೇರು ಹಣ್ಣು ಕೀಳುವ ಕೆಲಸ ಅಜ್ಜಂದು. ಹೆಕ್ಕುವ ಕೆಲಸ ನಮ್ಮದು. ಗೇರು ಬೀಜ ಹೆಕ್ಕುವುದು ಅಂಥ ಸುಲಭದ ಕೆಲಸವೇನಲ್ಲ!!! ಅದೊಂಥರಾ ಯುದ್ಧದ ಹಾಗೆ. ಕಡಲತೀರದ ಬೇಸಿಗೆಯ ಬಗ್ಗೆ ಬೇರೆ ಹೇಳಬೇಕಾಗಿಲ್ಲ. ಸೂರ್ಯನ ಪ್ರಖರ ಬಿಸಿಲನ್ನು ತಡೆಯಲಿಕ್ಕೆ ಟೋಪಿ ಬೇಕು. ಗೇರು ಹಣ್ಣಿನ ರಸ ಬಟ್ಟೆಯ ಮೇಲೆ ಬಿದ್ರೆ ಅದರ ಕಲೆ ಎಂಥ ಸೋಪಿಗೂ, ಬ್ಲೀಚಿಗೂ ಬಗ್ಗುವುದಿಲ್ಲ. ಅದಕ್ಕಾಗಿಯೇ ಗೇರು ಹಣ್ಣು ಹೆಕ್ಕಲಿಕ್ಕಂತ ಬೇರೆ ಅಂಗಿ, ಚಡ್ಡಿ. ಸೂರ್ಯ ನೆತ್ತಿಗೇರುವ ಮುನ್ನವೇ ಅರ್ಧದಷ್ಟು ಗುಡ್ಡ ಕ್ರಮಿಸಬೇಕು. ಅಜ್ಜ ಕಿತ್ತ ಗೇರುಹಣ್ಣು ಪೊದೆಯಲ್ಲಿ ಬಿದ್ದರೆ ಅದನ್ನು ಹೆಕ್ಕುವುದು ಇನ್ನೂ ದೊಡ್ಡ ಸಾಹಸ. ಪೊದೆಯಲ್ಲಿರುವ ಮುಳ್ಳುಗಳು ತರಚಿ ಕೈಯಲ್ಲಿ ಒಂದೆರಡು ಗೀರುಗಳಾಗದಿದ್ದರೆ ಸಾಹಸ ವ್ಯರ್ಥ!!! ಇನ್ನು ಬಿಸಿಲಿನ ಝಳಕ್ಕೆ ಗೇರು ಹಣ್ಣು ತಿನ್ನಲು ಬರುವ ದನ ಕರುಗಳ ಜೊತೆ ಬೇರೆ ಪೈಪೋಟಿ ಮಾಡಬೇಕಿತ್ತು. ಹಣ್ಣು ನೆಲಕ್ಕೆ ಬೀಳುವಷ್ಟರಲ್ಲಿ ಗಬಕ್ಕಂತ ಬಾಯಿ ಹಾಕಿ ಬೀಜ ಸಮೇತ ತಿನ್ನಲು ಶುರು ಮಾಡುತ್ತಿದ್ದವು. ದನಗಳೂ ಬಹಳ ಬುದ್ದಿವಂತಿಕೆಯಿಂದ ಬರೇ ಹಣ್ಣನ್ನು ಮಾತ್ರ ತಿಂದು ಬೀಜವನ್ನು ಉಗುಳುತ್ತವೆ. ಹೀಗಾದಗಲೆಲ್ಲಾ ದನಕರುಗಳು ಬೀಜವನ್ನು ಯಾವಾಗ ಉಗುಳುತ್ತವೆ ಅಂತ ಕಾಯುತ್ತಾ ಕೂರುತ್ತಿದ್ದೆವು. ಕೆಂಪು, ಹಳದಿ ಬಣ್ಣದ ಗೇರು ಹಣ್ಣಿನ ರುಚಿ ಬೇರೆ ಹೇಳಬೇಕಾಗಿಲ್ಲ. ಬೀಜ ಹೆಕ್ಕುತ್ತಾ ಐದು-ಹತ್ತು ಹಣ್ಣುಗಳನ್ನು ಗುಳುಂ ಮಾಡಿದ್ದುಂಟು. ಸ್ವಲ್ಪ ಒಗರು, ಸ್ವಲ್ಪ ಸಿಹಿ. ಅಬ್ಬಾ ಗೇರುಹಣ್ಣು ತಿನ್ನದೇ ವರ್ಷಗಳೇ ಉರುಳಿವೆ. ಕಡಿಮೆ ಅಂದ್ರೆ ಮೂರ್ನಾಲ್ಕು ಗಂಟೆಗಳಾದ್ರು ಬೇಕು ಇಡೀ ಗುಡ್ಡ ತಿರುಗಿ ಗೇರು ಬೀಜ ಹೆಕ್ಕಲಿಕ್ಕೆ. ಬೇಸಿಗೆಯ ಕೊನೆಯಲ್ಲಿ ಒಣಗಿನ ಗೇರು ಬೀಜಗಳನ್ನೆಲ್ಲಾ ಮಾರಿ ಅಜ್ಜನಿಂದ ನೂರೈವತ್ತೋ- ಇನ್ನೂರೋ ರುಪಾಯಿಗಳನ್ನು ಕಿಸೆಗಿಳಿಸುತ್ತಿದ್ದಾಗ ಆಗುತ್ತಿದ್ದ ಖುಷಿ ಅಷ್ಟಿಷ್ಟಲ್ಲ. ಕಲ್ಲು ಮುಳ್ಳಿನಿಂದಾದ ಗಾಯ, ದನಕರುಗಳ ಜೊತೆ ಕುಸ್ತಿ, ಬಿಸಿಲ ಝಳ ಎಲ್ಲಾ ನೂರೈವತ್ತು ರುಪಾಯಿಯ ಮುಂದೆ ಮಂಗಮಾಯ!!! ರಜೆ ಮುಗಿಸಿ ಮನೆಗೆ ಮರಳುವಾಗ ಅಜ್ಜಿಯ ಕೈಯಿಂದ ಮತ್ತೆ ಇಪ್ಪತ್ತು ರುಪಾಯಿ ಜೇಬಿಗಿಳಿಸಿದ್ದುದಲ್ಲದೆ, ಸುಟ್ಟ ಗೇರುಬೀಜದ ಪೊಟ್ಟಣ ಕೂಡಾ.

‘ಕಾಫಿ’ ಅಂತ ನನ್ನವಳು ಬಂದು ಹೆಗಲು ಮುಟ್ಟಿದಾಗಲೇ ನನ್ನ ಯೋಚನಾ ಲಹರಿಗೆ ಬ್ರೇಕ್ ಬಿದ್ದದ್ದು. ದೃಷ್ಟಿ ಇನ್ನೂ ಮನೆ ಎದುರಿನ ಗುಡ್ಡದ ಮೇಲೆ ನೆಟ್ಟಿತ್ತು. ಮನಸ್ಸಲ್ಲೇ ನೆನಪುಗಳನ್ನು ಮೆಲುಕು ಹಾಕ್ತಾ ಕಾಫಿ ಹೀರಲಿಕ್ಕೆ ಶುರುಮಾಡಿದೆ.

Sunday, February 07, 2010

ಕಲಾವಿದನ ಕುಂಚದಲ್ಲಿ ರಾಮಾಯಣ: ಯುದ್ಧಕಾಂಡ

ಹನುಮನ ಸಾಹಸವನ್ನು ಕೊಂಡಾಡುತ್ತಾ ರಾಮನು ಆತನನ್ನು ಆಲಂಗಿಸುತ್ತಾನೆ. ರಾಮನ ಕೋರಿಕೆಯಂತೆ ಹನುಮನು ಸವಿಸ್ತಾರವಾಗಿ ಲಂಕೆಯ ವಿವರಣೆಯನ್ನು ಕೊಡುತ್ತಾನೆ. ಶತ್ರುವನ್ನು ಆಕ್ರಮಿಸುವ ಮೊದಲು ಆತನ ಬಲವನ್ನು ಅಳೆಯುವುದು ಅತ್ಯಗತ್ಯ. ಸೀತೆಯ ಸುಳಿವನ್ನಾಗಲೇ ಆಂಜನೇಯನು ತಂದಿದ್ದಾನೆ. ಶ್ರೀರಾಮನು ಯುದ್ಧಕ್ಕೆ ತೆರಳಲು ಸೂಕ್ತವಾದ ಸುಮುಹೂರ್ತವನ್ನು ಸೂಚಿಸುವುದರ ಜೊತೆಗೆ ನೀಲ, ಗಜ, ಗವಯ, ಗಜಾಕ್ಷ, ಕೇಸರಿ, ವಾಲಿಮುಖ, ರಭಸ, ಪ್ರಜಂಘ ಮೊದಲಾದ ವಾನರವೀರರಿಗೆ ಸೇನೆಯಲ್ಲಿ ಅವರ ಸ್ಥಾನವನ್ನೂ, ಅವರ ಜವಾಬ್ದಾರಿಯನ್ನೂ ತಿಳಿಸುತ್ತಾನೆ. ರಾಮನ ಆಣತಿಯಂತೆ ನೀಲನು ಸೇನೆಯ ಮುಂಭಾಗದ ನೇತೃತ್ವವನ್ನು ವಹಿಸಿದರೆ, ಕೇಸರಿ, ಪನಸ, ಗಜ ಇನ್ನೊಂದು ವಿಭಾಗದ ಹೊಣೆಯನ್ನು ಹೊರುತ್ತಾರೆ. ಮಹಾವೀರನಾದ ರಿಷಭನು ಸೇನೆಯ ಬಲಭಾಗವನ್ನೂ, ಗಂಧಮಾದನನು ಎಡಭಾಗದ ಸೇನೆಯ ನೇತೃತ್ವವನ್ನೂ ವಹಿಸಿಕೊಳ್ಳುತ್ತಾರೆ. ಭಲ್ಲೂಕಗಳ ರಾಜನಾದ ಜಾಂಬವಂತನು ಮಹಾಶಕ್ತಿಶಾಲಿಗಳಾದ ವೇಗದರ್ಶಿ ಹಾಗೂ ಸುಶೇಣರೊಂದಿಗೆ ಸೇನೆಯ ಉದರ ಭಾಗವನ್ನು ಮುನ್ನಡೆಸುತ್ತಾರೆ. ಅವರೊಂದಿಗೆ ಸ್ವಯಂ ಶ್ರೀರಾಮನು ಆಂಜನೇಯನ ಹೆಗಲ ಮೇಲೂ, ಲಕ್ಷ್ಮಣನು ಅಂಗದನ ಭುಜದ ಮೇಲೆ ಕುಳಿತು ಐರಾವತದ ಮೇಲೆ ಕುಳಿತ ಇಂದ್ರನಂತೆ ಶೋಭಿಸುತ್ತಾರೆ. ಸಹ್ಯ, ಮಲಯ ಪರ್ವತ ಶ್ರೇಣಿಗಳನ್ನು ದಾಟಿ ಭೋರ್ಗರೆಯುವ ಸಾಗರದ ತಟಕ್ಕೆ ವಾನರವೀರರು ತಲಪುತ್ತಾರೆ. ಶ್ರೀರಾಮನ ಸಾಗರ ತಟದ ಬಳಿಯೇ ಡೇರೆ ಹೂಡುವಂತೆ ಸುಗ್ರೀವನಿಗೆ ತಿಳಿಸುತ್ತಾನೆ,

ಇತ್ತ ಲಂಕೆಯಲ್ಲಿ ಲಂಕೇಶನು ತನ್ನ ಮಂತ್ರಿಗಳ ಜೊತೆ ಸಮಾಲೋಚನೆ ನಡೆಸುತ್ತಾನೆ. ಪ್ರಹಸ್ತ, ದುರ್ಮುಖ, ವಜ್ರದಂಶ್ಟ್ರ, ನಿಕುಂಭರಂತಹ ಮಹಾವೀರರು ಯುದ್ಧದ ಪ್ರತಿಯಾಗಿ ಮಾತುಗಳನ್ನಾಡಿ ರಾವಣನ ಮನೋಬಲವನ್ನು ಹೆಚ್ಚಿಸುತ್ತಾರೆ. ಆದರೆ ಧರ್ಮಿಷ್ಟನಾದ ವಿಭೀಷಣನು ರಾಮನೊಂದಿಗೆ ಸಂದಿ ಮಾಡಿಕೊಳ್ಳುವಂತೆಯೂ, ಸೀತೆಯನ್ನು ರಾಮನಿಗೆ ಗೌರವ ಪೂರ್ವಕವಾಗಿ ಮರಳಿಸುವಂತೆಯೂ ಸಲಹೆ ನೀಡುತ್ತಾನೆ. ಇದರಿಂದ ಕ್ರುದ್ಧಗೊಂಡ ಮೇಘನಾದನು ವಿಭೀಷಣನನ್ನು ತೀವ್ರವಾಗಿ ಟೀಕಿಸುತ್ತಾನೆ. ವಿಭೀಷಣನ ಮಾತಿಗೆ ಕಿವಿಕೊಡದ ಲಂಕೇಶನು ಆತನನ್ನು ದೇಶಭ್ರಷ್ಟಗೊಳಿಸಿ ಲಂಕೆಯಿಂದ ಹೊರಗಟ್ಟುತ್ತಾನೆ. ಶ್ರೀರಾಮನ ಪರಮಭಕ್ತನಾದ ವಿಭೀಷಣನು ರಾಮನಲ್ಲಿ ಶರಣುಹೋಗುತ್ತಾನೆ. ಲಂಕೇಶನು ಕಳುಹಿಸಿದ ಶುಕ, ಚಾರಣನೆಂಬ ಗೂಢಾಚಾರರು ಸುಗ್ರೀವನ ಪಡೆಯ ಬಂಧಿಯಾಗುತ್ತಾರೆ,

ಅಗಾಧವಾದ ಸಾಗರವನ್ನು ದಾಟುವುದೇ ಬಹಳ ಕ್ಲಿಷ್ಟಕರವಾದ ಕೆಲಸ. ಲಂಕೆಯನ್ನು ತಲುಪಲು ಈ ಮಹಾಸಾಗರವನ್ನು ದಾಟಲೇ ಬೇಕಿತ್ತು. ಸಮುದ್ರವನ್ನು ದಾಟುವ ಸಲುವಾಗಿ ಶ್ರೀರಾಮನು ಸ್ವಯಂ ಸಾಗರವನ್ನು ಪ್ರಕಟವಾಗಿ ದಾರಿ ತೋರಿಸುವಂತೆ ಪ್ರಾರ್ಥಿಸುತ್ತಾನೆ. ಆದರೆ ಸಾಗರನ ಅಶ್ರದ್ಧೆಯಿಂದ ಕ್ರೋಧಿತನಾದ ರಾಮನು ಆತನೆಡೆಗೆ ಪ್ರಖರವಾದ ಬಾಣವನ್ನು ಹೂಡಿ ಸಮಸ್ತ ನೀರನ್ನು ಇಂಗಿಸುವುದಾಗಿ ಹೇಳಿ ಮಹಾಘರ್ಜನೆಯನ್ನು ಮಾಡುತ್ತಾನೆ. ಕೂಡಲೇ ಸಾಗರ ಮಧ್ಯದಿಂದ ಸಾಗರನು ಪ್ರಕಟಗೊಂಡು ತನ್ನ ಉದ್ಧಟತನವನ್ನು ಕ್ಷಮಿಸಬೇಕೆಂದು ಕೇಳುತ್ತಾನೆ. ಕ್ಷಮಾಗುಣನಾದ ರಾಮನು ಸಾಗರನನ್ನು ಕ್ಷಮಿಸುತ್ತಾ ತಾನು ಹೆದೆಯೂಡಿದ ಬಾಣವು ನಿಷ್ಪ್ರಯೋಜಕವಾಗಬಾರದೆಂದೂ, ಅದಕ್ಕೆ ಯೋಗ್ಯವಾದ ಗುರಿಯೊಂದನ್ನು ತೋರಿಸುವಂತೆ ಹೇಳುತ್ತಾನೆ. ಅದಕ್ಕೆ ಪ್ರತಿಯಾಗಿ ಸಾಗರನು ತನ್ನ ಉತ್ತರಭಾಗದಲ್ಲಿರುವ ದ್ರುಮತುಲ್ಯವೆಂಬ ಸ್ಥಳವನ್ನು ಸೂಚಿಸುತ್ತಾನೆ. ಅದರಂತೆ ರಾಮನು ತನ್ನ ತೀಕ್ಷ್ಣವಾದ ಬಾಣವನ್ನು ಪ್ರಯೋಗಿಸುತ್ತಾನೆ. ಬಳಿಕ ಸಾಗರನು ರಾಮನನ್ನು ಉದ್ದೇಶಿಸುತ್ತಾ “ಹೇ ಪರಾಕ್ರಮಿ, ನಿನ್ನ ಸೇನೆಯಲ್ಲಿ ದೇವಶಿಲ್ಪಿಯಾದ ವಿಶ್ವಕರ್ಮನ ಮಗನಾದ ನಳನಿದ್ದಾನೆ. ತಂದೆಯಂತೆಯೇ ಆತನೂ ಕುಶಲ ಶಿಲ್ಪಿ. ಆತನಿಗೆ ಸಾಗರದ ಮೇಲೆ ಸೇತುವನ್ನು ನಿರ್ಮಿಸಲು ಹೇಳು” ಎಂದು ಹೇಳಿ ಅಂತರ್ಧಾನವಾಗುತ್ತಾನೆ. ನಳನು ಕಪಿಗಳ ಸಹಾಯದಿಂದ ಅದ್ಭುತವಾದ ಸೇತುವೆಯನ್ನು ನಿರ್ಮಿಸುತ್ತಾನೆ. ಗೂಢಾಚಾರರಾದ ಶುಕ-ಚಾರಣರನ್ನು ರಾಮನು ಬಂಧಮುಕ್ತಗೊಳಿಸುತ್ತಾನೆ. ಲಂಕೆಗೆ ಮರಳಿದ ಶುಕನು ಅಗಾಧವಾದ ವಾನರಸೇನೆಯ ಸಾಹಸವನ್ನೂ, ಪರಾಕ್ರಮವನ್ನೂ ಹೊಗಳುತ್ತಾನೆ. ಲಂಕೆಗೆ ತೆರಳುವ ಮುನ್ನ ಶ್ರೀರಾಮನು ಮಹಾದೇವನ ಪೂಜೆಯನ್ನು ಮಾಡುತ್ತಾನೆ. ಬಳಿಕ ಸಮಸ್ತ ವಾನರಸೇನೆಯೊಂದಿಗೆ ಸೇತುವಿನ ಮೂಲಕ ಲಂಕೆಗೆ ತೆರಳುತ್ತಾನೆ.

ಯುದ್ಧವನ್ನು ತಡೆಯುವ ಕೊನೆಯ ಪ್ರಯತ್ನವೆಂಬಂತೆ ರಾಮನು ಅಂಗದನನ್ನು ದೂತನಾಗಿ ಸಂಧಿಗೆ ಕಳುಹಿಸುತ್ತಾನೆ. ಆದರೆ ಆ ಪ್ರಯತ್ನ ಸಫಲವಾಗದೆ ಯುದ್ಧ ಅನಿವಾರ್ಯವಾಗುತ್ತದೆ, ರಾವಣನು ವಾನರಸೇನೆಯನ್ನು ಆಕ್ರಮಿಸುವಂತೆ ತನ್ನ ಸೇನೆಗೆ ಆದೇಶಿಸುತ್ತಾನೆ, ವಾನರವೀರರು ಮತ್ತು ಮಾಯಾವಿ ಅಸುರರ ಮಧ್ಯೆ ಘೋರ ಯುದ್ಧ ಆರಂಭವಾಗುತ್ತದೆ. ಇಂದ್ರಜಿತು-ಅಂಗದ, ಹನುಮ-ಜಂಬುಮಾಲಿ, ಗಜ-ತಪನ, ನೀಲ-ನಿಕುಂಭ, ಸುಗ್ರೀವ-ಪ್ರಘಸ, ಲಕ್ಷ್ಮಣ-ವಿರೂಪಾಕ್ಷ ಹೀಗೆ ಮೊದಲಾದ ವೀರರು ದ್ವಂಧ್ವಯುದ್ಧದಲ್ಲಿ ತೊಡಗುತ್ತಾರೆ. ಎಲ್ಲೆಲ್ಲೆ ನೋಡಿದರೂ ರಕ್ತದ ಓಕುಳಿ ಹರಿದಿತ್ತು. ಸೂರ್ಯಾಸ್ತವಾದರೂ ಯುದ್ಧ ಕೊನೆಗೊಳ್ಳಲಿಲ್ಲ. ಖಡ್ಗಗಳ ಝಳ, ಬಾಣಗಳ ವೇಗ, ಗದೆಗಳ ಪ್ರತಿಧ್ವನಿಗಳು ಚಂಡಮಾರುತದೊಂದಿಗೆ ಕಾಣುವ ಗುಡುಗು ಮಿಂಚುಗಳಂತಿತ್ತು. ರಾವಣನ ಮಗನಾದ ಇಂದ್ರಜಿತು ಮಹಾಪರಾಕ್ರಮಿಯೂ, ಮಾಯಾವಿ ಯುದ್ಧದಲ್ಲಿ ನಿಪುಣನೂ ಆಗಿದ್ದನು. ತನ್ನ ಮಾಯಾವಿ ಯುದ್ಧದಿಂದ ವಾನರವೀರರನ್ನು ಕಂಗೆಡಿಸುತ್ತಾನೆ, ನಾಗಪಾಶದಿಂದ ರಾಮ-ಲಕ್ಷ್ಮಣರನ್ನು ಮೂರ್ಛಿತಗೊಳ್ಳುತ್ತಾರೆ. ಮೇಘನಾದನ ಪೌರುಷವನ್ನು ನೋಡಿ ರಾವಣನು ಅತೀವ ಸಂತೋಷಗೊಳ್ಳುತ್ತಾನೆ. ಮೂರ್ಛಿತರಾದ ರಘುಕುಲ ತಿಲಕರನ್ನು ನೋಡಿ ವಾನರ ಸೇನೆ ಚಿಂತಿತವಾಗುತ್ತದೆ. ವಿಭೀಷಣನು ವಾನರಸೇನೆಯ ಮನೋಧೈರ್ಯ ತುಂಬುತ್ತಿದ್ದಂತೆ ವೈನತೇಯ ಗರುಡನು ಬಂದು ರಾಮ-ಲಕ್ಷ್ಮಣರನ್ನು ಪಾಶಮುಕ್ತಗೊಳಿಸುತ್ತಾನೆ. ವಾನರಸೇನೆಯ ಆನಂದಕ್ಕೆ ಪಾರವೇ ಇರಲಿಲ್ಲ. ಹೊಸ ಉತ್ಸಾಹದೊಂದಿಗೆ ವಾನರವೀರರು ಯುದ್ಧಕ್ಕೆ ಅಣಿಯಾಗುತ್ತಾರೆ. ರಾವಣನು ಭಯಂಕರ ಅತಿಭಯಂಕರ ರಾಕ್ಷಸವೀರರನ್ನು ಯುದ್ಧಭೂಮಿಗೆ ಕಳುಹಿಸುತ್ತಾನೆ. ಧೂಮ್ರಾಕ್ಷ, ವಜ್ರದಂಷ್ಟ್ರ, ಅಕಂಪನ, ಪ್ರಹಸ್ತ ಮೊದಲಾದ ವೀರರು ತಮ್ಮ ಪರಾಕ್ರಮವನ್ನು ಮೆರೆಯುತ್ತಾರೆ. ಆದರೆ ವಾನರವೀರರ ಮುಂದೆ ಅವರ ಸಾಹಸಗಳೆಲ್ಲಾ ಬತ್ತಿಹೋಗಿ ಕಾಲವಾಗುತ್ತಾರೆ. ಕೊನೆಗೆ ಸ್ವಯಂ ರಾವಣನೇ ಯುದ್ಧಭೂಮಿಗೆ ಬರುತ್ತಾನೆ, ಯುದ್ಧದಲ್ಲಿ ಶ್ರೀರಾಮ-ರಾವಣರ ಮುಖಾಮುಖಿಯಾಗಿ, ಇಬ್ಬರ ಮಧ್ಯೆ ಘೋರ ಯುಧ್ಧ ನಡೆದು, ಕೊನೆಗೆ ಬಸವಳಿದ ಲಂಕೇಶನಿಗೆ ಶ್ರೀರಾಮನು ಪ್ರಾಣ ಭಿಕ್ಷೆಯನ್ನು ನೀಡುತ್ತಾನೆ, ಅವಮಾನಿತನಾಗಿ ಲಂಕೆಗೆ ಮರಳಿದ ಲಂಕೇಶನು, ತನ್ನ ತಮ್ಮನಾದ ಕುಂಭಕರ್ಣನನ್ನು ನಿದ್ದೆಯಿಂದ ಎಬ್ಬಿಸುವಂತೆ ತನ್ನ ಸೈನಿಕರಿಗೆ ಆದೇಶಿಸುತ್ತಾನೆ. ಅತಿಪ್ರಯಾಸದಿಂದ ನಿದ್ದೆಯಿಂದ ಎಚ್ಚರಗೊಂಡ ಕುಂಭಕರ್ಣನು, ವೃತ್ತಾಂತವನ್ನೆಲ್ಲಾ ತಿಳಿದು ಯುದ್ಧಕ್ಕೆ ತೆರಳುತ್ತಾನೆ. ಮಹಾಕಾಯನಾದ ಕುಂಭಕರ್ಣನನ್ನು ನೋಡಿ ಹೆದರಿ ಓಡತೊಡಗಿದ ವಾನರರನ್ನು ತಡೆದು ಅಂಗದನು ಧೈರ್ಯ ತುಂಬುತ್ತಾನೆ. ರಾಮನೊಂದಿಗೆ ಭಯಂಕರ ಯುದ್ಧ ಮಾಡುತ್ತಾ ಕುಂಭಕರ್ಣನು ಕಾಲವಾಗುತ್ತಾನೆ. ಯುದ್ಧ ಮುಂದುವರಿದಂತೆ ರಾವಣನ ಮಕ್ಕಳು, ಸೇನಾಪತಿಗಳು, ಪರಿವಾರದವರು ರಣದೇವಿಗೆ ಆಹುತಿಯಾಗುತ್ತಾ ಹೋದರು. ನರಾಂತಕ, ದೇವಾಂತಕ, ತ್ರಿಶಿರ, ಮಹೋದರ ಮತ್ತು ಮಹಾಪಾರ್ಶ್ವರಂತಹ ವೀರ ಅಸುರರು ಹನುಮ, ಅಂಗದ ಮುಂತಾದ ಕಪಿವೀರರ ಕೈಯಲ್ಲಿ ವೀರಮರಣಹೊಂದಿದರು. ಲಕ್ಷ್ಮಣನು ರಾವಣನ ಮಗನಾದ ಮಹಾವೀರ ಅತಿಕಾಯನನ್ನು ಯಮಸದನಕ್ಕಟ್ಟುತ್ತಾನೆ.

ಪುತ್ರಶೋಕದಿಂದ ವ್ಯಾಕುಲನಾದ ಲಂಕೇಶನನ್ನು ನೋಡಿ ದುಃಖಿತನಾದ ಮೇಘನಾದನು, ರಾಘವರನ್ನು ಕೊನೆಗೊಳಿಸುವ ಸಲುವಾಗಿ ಯುದ್ಧಭೂಮಿಗೆ ತೆರಳುತ್ತಾನೆ. ತನ್ನ ಬಳಗದವರ ಮೃತ್ಯುವಿನಿಂದ ಅತ್ಯಂತ ಕ್ರುದ್ಧನಾದ ಇಂದ್ರಜಿತು ಭೀಕರವಾದ ಯುದ್ಧದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ. ತನ್ನ ಮಾಯಾವಿದ್ಯೆಯ ಕೌಶಲದಿಂದ ದಶದಿಕ್ಕುಗಳಿಂದ ಹಲವು ಬಗೆಯ ಶಸ್ತ್ರಾಸ್ತ್ರಗಳಿಂದ ವಾನರಸೈನ್ಯದ ಮೇಲೆ ಪ್ರಯೋಗಿಸುತ್ತಾನೆ, ಮೇಘನಾದನ ತೀಕ್ಷ್ಣ ಬಾಣಗಳು ಕಪಿವೀರರ ದೇಹಗಳನ್ನು ಜರ್ಜರಿತಗೊಳಿಸುತ್ತವೆ. ಆತನ ಪ್ರಖರವಾದ ಬಾಣಗಳಿಗೆ ಸ್ವಯಂ ರಾಘವರೇ ಮೂರ್ಛಿತರಾಗುತ್ತಾರೆ, ಬ್ರಹ್ಮಾಸ್ತ್ರದಿಂದ ಪ್ರಜ್ಞಾಹೀನರಾದ ರಾಮ-ಲಕ್ಷ್ಮಣರನ್ನು ಗುಣಪಡಿಸಲು ಹಿಮಾಲಯದಿಂದ ದಿವ್ಯ ಔಷಧಿಗಳನ್ನು ತರಬೇಕೆಂದು ಜಾಂಬವಂತನು ಹನುಮಂತನಿಗೆ ತಿಳಿಸುತ್ತಾನೆ. ತನ್ನ ದೇಹವನ್ನು ಹಿಗ್ಗಿಸಿ, ಸಾಕ್ಷಾತ್ ಗರುಡನಂತೆ ವಾಯುವಿನ ವೇಗದಲ್ಲಿ ಮಾರುತಿಯು ಹಿಮಾಲಯದೆಡೆಗೆ ಲಂಘಿಸುತ್ತಾನೆ, ಮೃತ ಸಂಜೀವಿನಿ, ವೈಶಾಲ್ಯ ಕರಣಿ, ಸುವರ್ಣಕರಣಿ, ಸಂಧಣಿ ಮುಂತಾದ ಗಿಡಮೂಲಿಕೆಗಳನ್ನು ಗುರುತಿಸಲಾರದೆ, ಪರ್ವತವನ್ನೇ ಬುಡಸಮೇತ ಕಿತ್ತು, ತನ್ನ ಅಂಗೈಯಲ್ಲಿರಿಸಿ ಲಂಕೆಗೆ ಮರಳುತ್ತಾನೆ. ಹನುಮನು ತಂದ ಔಷಧೀಯ ಸಸ್ಯಗಳಿಂದ ರಾಘವರೂ, ಕಪಿವೀರರೂ ಚೇತರಿಸಿಕೊಳ್ಳುತ್ತಾರೆ. ಕುಂಭ, ನಿಕುಂಭ, ಮಕರಾಕ್ಷ ಮೊದಲಾದ ವೀರರೊಂದಿಗೆ ಮೇಘನಾದನು ಮತ್ತೊಮ್ಮೆ ಯುದ್ಧಭೂಮಿಗೆ ಮರಳುತ್ತಾನೆ. ಇಂದ್ರಜಿತುವನ್ನು ಎದುರಿಸಿದ ಲಕ್ಷ್ಮಣನು ಭೀಕರವಾಗಿ ಹೋರಾಡಿ ಅಮೋಘವಾದ ಅಸ್ತ್ರವೊಂದರಿಂದ ಆತನ ಶಿರಚ್ಛೇದನ ಮಾಡುತ್ತಾನೆ. ಅಳಿದುಳಿದ ವೀರರೆಲ್ಲಾ ಕಾಲವಾದ ಮೇಲೆ ಸಾಕ್ಷಾತ್ ಲಂಕೇಶನೇ ಯುದ್ಧಭೂಮಿಗೆ ಬರುತ್ತಾನೆ. ರಾಮ-ರಾವಣರ ಯುದ್ಧವನ್ನು ನೋಡಲು, ದೇವ, ಗಂಧರ್ವ, ಯಕ್ಷ, ಕಿನ್ನರರೆಲ್ಲಾ ಕಾತರದಿಂದ ಕಾಯುತ್ತಿದ್ದರು. ಮಹಾಮುನಿ ಅಗಸ್ತ್ಯರು ‘ಆದಿತ್ಯಹೃದಯ’ವೆಂಬ ಮಂತ್ರವನ್ನು ರಾಮನಿಗೆ ಉಪದೇಶಿಸುತ್ತಾರೆ. ದೇವೇಂದ್ರನ ಸಾರಥಿಯಾದ ಮಾತಲಿಯು ದೈವೀಯ ರಥವನ್ನು ರಾಮನಿಗಾಗಿ ತರುತ್ತಾನೆ. ರಾಮ-ರಾವಣರ ಮಧ್ಯೆ ಭೀಕರವಾದ ಕಾಳಗ ನಡೆದು, ನರವ್ಯಾಘ್ರರಂತೆ ಒಬ್ಬರನ್ನೊಬ್ಬರು ಸೆಣಸುತ್ತಾರೆ. ಕೊನೆಗೆ ಮಾತಲಿಯ ಮಾತಿನಂತೆ ಶ್ರೀರಾಮನು ಮಹಾಪ್ರಳಯಾಂತಕವಾದ ಅಸ್ತ್ರವನ್ನು ರಾವಣನೆಡೆಗೆ ಪ್ರಯೋಗಿಸುತ್ತಾನೆ. ಪರಿಣಾಮವಾಗಿ ಅಧರ್ಮಿ ಲಂಕೇಶನು ಧರೆಗುರುಳುತ್ತಾನೆ. ಸಮಸ್ತ ದೇವ-ದೇವತೆಗಳು ಸಂತುಷ್ಟರಾಗಿ ಹೂವಿನ ಮಳೆಗರೆಯುತ್ತಾರೆ. ಲಂಕೇಶನ ಮರಣದಿಂದ ಶೋಕತಪ್ತರಾದ ಆತನ ರಾಣಿಯರಿಗೆ ವಿಭೀಷಣನು ಸಾಂತ್ವನದ ಮಾತುಗಳನ್ನು ಹೇಳುತ್ತಾನೆ. ರಾಮನ ಆದೇಶದಂತೆ ರಾಜ ಸನ್ಮಾನದೊಂದಿಗೆ ರಾವಣನ ಅಂತ್ಯಕ್ರಿಯೆಯನ್ನು ವಿಭೀಷಣನು ನೆರವೇರಿಸುತ್ತಾನೆ, ಬಳಿಕ ವಿಭೀಷಣನನ್ನು ಲಂಕೆಯ ರಾಜನನ್ನಾಗಿ ಪಟ್ಟಾಭಿಷೇಕ ಮಾಡುತ್ತಾರೆ.


ಲಂಕೆಯ ರಾಜನಾದ ವಿಭೀಷಣನು ಗೌರವ ಪೂರ್ವಕವಾಗಿ ಮಾತೆ ಸೀತೆಯನ್ನು ರಾಮನ ಬಳಿ ಕರೆ ತರುತ್ತಾನೆ. ಆದರೆ ಸೀತೆಯನ್ನು ಸ್ವೀಕರಿಸಲು ಬಯಸದ ರಾಘವನು ಆಕೆಗೆ ತನ್ನ ಸತಿತ್ವ ಪರೀಕ್ಷೆ ನೀಡಲು ಹೇಳುತ್ತಾನೆ. ಸೀತೆಯು ಅತ್ಯಂತ ಖೇದಗೊಂಡು, ಲಕ್ಷ್ಮಣನಿಗೆ ಅಗ್ನಿಯನ್ನು ಸಿದ್ದಪಡಿಸುವಂತೆ ಹೇಳುತ್ತಾಳೆ. ಭಾರವಾದ ಮನಸ್ಸಿನಿಂದ ಲಕ್ಷ್ಮಣನು ಅಗ್ನಿಯನ್ನು ಸಿದ್ಧ ಪಡಿಸುತ್ತಾನೆ, ಆದರೆ ಅಗ್ನಿ ಪ್ರವೇಶ ಮಾಡಿದ ಸೀತೆಯನ್ನು ಸ್ವಯೋ ಅಗ್ನಿದೇವನೇ ಸುರಕ್ಷಿತವಾಗಿ ಕರೆದು ತಂದು ರಾನಿಗೊಪ್ಪಿಸುತ್ತಾನೆ, ತನಗೆ ಸೀತೆಯ ಬಗ್ಗೆ ಎಳ್ಳಷ್ಟೂ ಅಪನಂಬಿಕೆ ಇಲ್ಲವೆಂದೂ, ಲೋಕದ ಜನರಿಗೆ ಸೀತೆಯ ಪಾವಿತ್ರ್ಯವನ್ನು ಸಾರಲು ಈ ರೀತಿ ಮಾಡಬೇಕಾಯಿತೆಂದೂ ರಾಮನು ಹೇಳುತ್ತಾನೆ, ವಿಭೀಷಣನನ್ನು ಬೀಳ್ಕೊಟ್ಟು ರಾಮನು ಸೀತಾದಿಗಳೊಂದಿಗೆ ಪುಷ್ಪಕ ವಿಮಾನದಲ್ಲಿ ಅಯೋಧ್ಯೆಗೆ ಮರಳುತ್ತಾನೆ. ರಾಮನ ಆಗಮನದಿಂದ ಪರಿವಾರ ಜನರೂ, ಪ್ರಜೆಗಳೂ ಹರ್ಷಚಿತ್ತರಾಗುತ್ತಾರೆ. ಭರತನ ಆನಂದಕ್ಕೆ ಪಾರವೇ ಇರಲಿಲ್ಲ. ಅಯೋಧ್ಯೆಯ ಸಿಂಹಾಸನವನ್ನು ಅಲಂಕರಿಸುವಂತೆ ರಾಮನಲ್ಲಿ ಆತನು ಕೇಳಿಕೊಳ್ಳುತ್ತಾನೆ. ಅದರಂತೆ ಭಾರೀ ಸಡರದಿಂದ ರಾಮನ ಪಟ್ಟಾಭಿಷೇಕವನ್ನು ಏರ್ಪಡಿಸಲಾಗುತ್ತದೆ.

ಚಿತ್ರಕೃಪೆ: www.masters-gallery.com

Monday, December 21, 2009

ಕಲಾವಿದನ ಕುಂಚದಲ್ಲಿ ರಾಮಾಯಣ: ಸುಂದರಕಾಂಡ

ಜಾಂಬವಂತನ ಮಾತುಗಳಿಂದ ಆಂಜನೇಯನಲ್ಲಿ ಹೊಸ ಉತ್ಸಾಹ ಹೊಮ್ಮುತ್ತದೆ. ಬಾಲ್ಯದಲ್ಲಿ ಸೂರ್ಯನನ್ನು ಹಣ್ಣೆಂದು ಭಾವಿಸಿ ಆತನನ್ನು ತಿನ್ನಲು ಗಗನಕ್ಕೆ ಹಾರಿದ್ದು, ಇಂದ್ರನ ವಜ್ರದಿಂದ ಹನುವು ಘಾಸಿಗೊಂಡು ಭೂಮಿಗೆರಗಿದ್ದು, ದೇವತೆಗಳೆಲ್ಲರಿಂದ ವಿವಿಧ ಶಕ್ತಿಗಳನ್ನು ಆಶೀರ್ವಾದ ರೂಪದಲ್ಲಿ ಪಡೆದದ್ದು, ಸಾಕ್ಷಾತ್ ಸೂರ್ಯನಾರಾಯಣನ ಶಿಷ್ಯನಾಗಿ ಸರ್ವವೇದಶಾಸ್ತ್ರ ಪಾರಂಗತನಾಗಿದ್ದ ವಿಷಯಗಳೆಲ್ಲವೆನ್ನೂ ಜಾಂಬವಂತನು ಆಂಜನೀಪುತ್ರನಿಗೆ ತಿಳಿಸುತ್ತಾನೆ. ರಾಮಕಾರ್ಯ ಸಾಧಿಸುವ ಉತ್ಸಾಹ ಹನುಮನಲ್ಲಿ ನೂರ್ಮಡಿಗೊಳ್ಳುತ್ತದೆ. ಸಾಗರವನ್ನು ಲಂಘಿಸಿ ಲಂಕೆಗೆ ಹೋಗಿ ಬರುವುದಾಗಿ ವಾನರವೀರರಿಗೆ ಆಶ್ವಾಸನೆ ಕೊಡುತ್ತಾನೆ. ತನ್ನ ದೇಹವನ್ನು ಆಕಾಶದೆತ್ತರಕ್ಕೆ ಹಿಗ್ಗಿಸಿ, ‘ಜೈ ಶ್ರೀರಾಮ್’ ಎಂದು ಜಯಘೋಷ ಮಾಡಿ ಗಗನಕ್ಕೆ ಚಿಮ್ಮುತ್ತಾನೆ. ಹನುಮನು ಚಿಮ್ಮಿದ ರಭಸಕ್ಕೆ ಮಹೇಂದ್ರ ಪರ್ವತವೇ ಅಲ್ಲಾಡಿತು. ವಿಷ್ಣುವಿನ ವಾಹನನಾದ ಗರುಡನಂತೆ ಆಂಜನೇಯನು ಸಾಗರದ ಮೇಲೆ ಹಾರುತ್ತಿದ್ದನು. ಆತನಿಗೆ ದಣಿವಾಗದಿರಲೆಂದು ದೇವತೆಗಳು ಮೈನಾಕವನ್ನು ಕಳುಹಿಸುತ್ತಾರೆ. ಸಾಗರದ ಮಧ್ಯದಿಂದ ಎದ್ದು ಬಂದ ಮೈನಾಕ ಪರ್ವತದ ಕೋರಿಕೆಯನ್ನು ವಿನಮ್ರವಾಗಿ ನಿರಾಕರಿಸಿದ ಆಂಜನೇಯನು ಸ್ವಾಮಿಕಾರ್ಯ ಸಂಪೂರ್ಣಗೊಳಿಸುವ ತನಕ ವಿರಮಿಸುವುದಿಲ್ಲವೆಂದು ಹೇಳಿ ಮುಂದೆ ಸಾಗುತ್ತಾನೆ. ವಾಯುವಿನ ವೇಗದಲ್ಲಿ ಹಾರುತ್ತಿರುವ ಆಂಜನೇಯನ್ನು ಪರೀಕ್ಷಿಸಲೆಂದು ದೇವತೆಗಳು ನಾಗಮಾತೆ ಸುರಸೆಯನ್ನು ಕಳುಹಿಸುತ್ತಾರೆ. ರಾಕ್ಷಸಿರೂಪವನ್ನು ಧರಿಸಿ ಸುರಸೆಯು ಆಂಜನೇಯನ್ನು ತಡೆಯುತ್ತಾಳೆ. ತನಗೆ ಹಸಿವಾಗಿದೆಯೆಂದೂ, ತನಗೆ ಆಹಾರವಾಗಬೇಕೆಂದೂ ಹನುಮನಿಗೆ ಸುರಸೆಯು ಹೇಳುತ್ತಾಳೆ. ಅದಕ್ಕೆ ಹನುಮನು ರಾಮಕಾರ್ಯಕ್ಕಾಗಿ ಹೋಗುತ್ತಿರುವೆನೆಂದೂ, ಲಂಕೆಯಿಂದ ಮರಳುವಾಗ ಆಕೆಯ ಇಚ್ಛೆಯನ್ನು ನೆರವೇರಿಸುವುದಾಗಿ ಹೇಳುತ್ತಾನೆ. ಆದರೆ ಇದನ್ನೊಪ್ಪದ ಸುರಸೆಯು ತನ್ನ ಹಸಿವನ್ನು ಈಗಲೇ ನೀಗಿಸಬೇಕೆಂದು ಹೇಳುತ್ತಾಳೆ. ಸಂದಿಗ್ದತೆಯಲ್ಲಿ ಸಿಲುಕಿದ ಹನುಮನು ಸುರಸೆಯ ಬೇಡಿಕೆಯನ್ನು ಮನ್ನಿಸಲು ತನ್ನ ದೇಹದ ಗಾತ್ರವನ್ನು ಬೆಳೆಸುತ್ತಾನೆ. ಅದರ ದುಪ್ಪಟ್ಟು ಗಾತ್ರಕ್ಕೆ ಸುರಸೆಯು ತನ್ನ ಬಾಯಿಯನ್ನು ಹಿಗ್ಗಿಸುತ್ತಾಳೆ. ಕೂಡಲೇ ಹನುಮನು ಅಣುರೂಪ ಧರಿಸಿ ಸುರಸೆಯ ಬಾಯಿಯ ಮೂಲಕ ಆಕೆಯ ಉದರವನ್ನು ಪ್ರವೇಶಿಸಿ ಹೊರಬರುತ್ತಾನೆ, ಹನುಮನ ಬುದ್ಧಿಮತ್ತೆಯನ್ನು ಪ್ರಶಂಸಿಸಿದ ಸುರಸೆಯು ಆತನನ್ನು ಹರಸುತ್ತಾಳೆ. ಸಾಕ್ಷಾತ್ ಗರುಡನಂತೆ ವಾಯುವಿನ ವೇಗದಲ್ಲಿ ಹನುಮನು ಲಂಕೆಯೆಡೆಗೆ ಗಮಿಸುತ್ತಿರುವಂತೆ ಆತನನ್ನು ಯಾರೋ ತಡೆದಂತೆ ಭಾಸವಾಗುತ್ತದೆ. ಸಿಂಹಿಕೆಯೆಂಬ ರಾಕ್ಷಸಿಯು ಹನುಮನ ನೆರಳನ್ನು ಹಿಡಿದು ಆತನನ್ನು ತಡೆಯುತ್ತಾಳೆ. ತನ್ನ ದೇಹವನ್ನು ಕುಗ್ಗಿಸಿ, ಆಕೆಯ ಉದರಕ್ಕಿಳಿದು ದೇಹವನ್ನು ಹಿಗ್ಗಿಸುತ್ತಾನೆ, ಪರಿಣಾಮವಾಗಿ ಸಿಂಹಿಕೆಯು ಅಸುನೀಗುತ್ತಾಳೆ. ವೇಗವಾಗಿ ಸಾಗರವನ್ನು ಕ್ರಮಿಸಿ ಹನುಮನು ಸ್ವರ್ಣಲಂಕೆ ತಲುಪುತ್ತಾನೆ. ವಿಶ್ವಕರ್ಮ ನಿರ್ಮಿತ ಲಂಕೆಯು ನಾಲ್ಕೂ ದಿಕ್ಕುಗಳಿಂದ ಸಾಗರದಿಂದ ಆವೃತವಾಗಿತ್ತು. ಕೇತಕ, ಉದ್ದಾಲಕ, ನಾರೀಕೇಳ ವೃಕ್ಷಗಳಿಂದ ಹಸಿರು ನಳನಳಿಸುತ್ತಿತ್ತು. ನಗರದ ಸುತ್ತಲೂ ಕಟ್ಟಿರುವ ಬಲಿಷ್ಠವಾದ ಕೋಟೆಯನ್ನು ಭಯಂಕರರಾದ ರಾಕ್ಷಸರು ಕಾಯುತ್ತಿದ್ದರು. ಲಂಕೆಯ ಹೆಬ್ಬಾಗಿಲನ್ನು ಸಾಕ್ಷಾತ್ ಲಂಕಿಣಿಯೇ ಕಾಯುತ್ತಿದ್ದಳು. ನೈಸರ್ಗಿಕವಾಗಿ ಸುರಕ್ಷಿತವಾಗಿರುವ ಲಂಕೆಯನ್ನು ಗೆಲ್ಲುವುದು ದೇವತೆಗಳಿಗೂ ಅಸಾಧ್ಯ! ಲಂಕೇಶನು ಮಾತೆ ಸೀತೆಯನ್ನು ಇಲ್ಲೇ ಅಡಗಿಸಿರಬಹುದೆಂದು ಭಾವಿಸುತ್ತಾ, ಸೂರ್ಯಾಸ್ತವಾಗುವುದನ್ನು ಆಂಜನೇಯನು ಕಾಯುತ್ತಿದ್ದನು.

ಸೂರ್ಯಾಸ್ತದ ಬಳಿಕ ಇಂದ್ರನ ಅಮರಾವತಿಯಂತಿರುವ ಲಂಕೆಯನ್ನು ಪ್ರವೇಸಿಸುತ್ತಿರುವಂತೆ ಲಂಕಿಣಿಯು ಹನುಮನನ್ನು ತಡೆಯುತ್ತಾಳೆ. ವಿಕಾರವಾಗಿ ಅರಚುತ್ತಾ ಲಂಕಿಣಿಯು ಪ್ರಬಲವಾದ ಹೊಡೆತವನ್ನು ಆಂಜನೇಯನಿಗೆ ಕೊಡುತ್ತಾಳೆ. ಇದರಿಂದ ಕೋಪಗೊಂಡ ವಾನರಶ್ರೇಷ್ಠನು ಲಂಕಿಣಿಗೆ ಬಲವಾದ ಗುದ್ದೊಂದನ್ನು ಕೊಡುತ್ತಾನೆ. ಇಷ್ಟಕ್ಕೇ ಧರೆಗುರುಳಿದ ಲಂಕಿಣಿಗೆ ‘ವಾನರೊಬ್ಬನ ಪ್ರಹಾರದಿಂದ ಘಾಸಿಗೊಂಡಾಗ ಲಂಕೆಯ ಅಂತ್ಯ ಸಮೀಪಿಸಿದೆಯೆಂದು ತಿಳಿ’ ಎಂಬ ಬ್ರಹ್ಮದೇವನ ಮಾತು ನೆನಪಿಗೆ ಬರುತ್ತದೆ. ವಾನರವೀರನನ್ನು ಲಂಕೆಯನ್ನು ಪ್ರವೇಶಿಸುವಂತೆ ಲಂಕಿಣಿಯು ಹೇಳುತ್ತಾಳೆ. ಸೀತೆಯನ್ನು ಹುಡುಕುತ್ತಾ ಹನುಮನು ರಾವಣನ ಅರಮನೆಯನ್ನು ಪ್ರವೇಶಿಸುತ್ತಾನೆ. ವಜ್ರ, ವೈಢೂರ್ಯ, ಮುತ್ತು, ಮಾಣಿಕ್ಯಗಳಿಂದ ಲಂಕೇಶನ ಅರಮನೆ ಶೋಭಿತವಾಗಿತ್ತು. ಹಿಂದೊಮ್ಮೆ ಕುಬೇರನ ವಶದಲ್ಲಿದ್ದ ಪುಷ್ಪಕವಿಮಾನವನ್ನೂ ಹನುಮನು ನೋಡುತ್ತಾನೆ. ಸಂಪೂರ್ಣ ಅರಮನೆಯನ್ನು ಹುಡುಕಿದರೂ ಸೀತೆಯ ಪತ್ತೆ ಇಲ್ಲ. ಕೊನೆಗೆ ವಾನರೇಂದ್ರನು ಅಶೋಕವನದಲ್ಲಿ ಮಾತೆ ಸೀತೆಯ ಹುಡುಕಾಟವನ್ನು ಮುಂದುವರಿಸುತ್ತಾನೆ. ಮಾವು, ಉದ್ದಾಲಕ, ಚಂಪಕ, ನಾಗ, ಅಶೋಕ ಮುಂತಾದ ಮರಗಳಿಂದ ತಂಬಿತ್ತು ಅಶೋಕವನ. ಅಶೋಕವನದ ಮೂಲೆ ಮೂಲೆ ಹುಡುಕಾಡಿದ ಹನುಮನಿಗೆ ಕೊನೆಗೂ ಮಾತೆ ಸೀತೆ ಕಾಣಿಸುತ್ತಾಳೆ. ಆಕೆಯ ಸುತ್ತವೂ ಭಯಂಕರವಾದ ರಾಕ್ಷಸಿಯರು ಕಾವಲಿದ್ದರು. ಕಾರ್ಮೋಡಗಳ ಮಧ್ಯೆ ಪೂರ್ಣಚಂದ್ರನಂತೆ ಸೀತೆ ಕಾಣಿಸಿದಳು.

ಇನ್ನೇನು ಸೂರ್ಯೋದಯಕ್ಕೆ ಕೆಲವೇ ಪ್ರಹರಗಳಿರಬೇಕಾದರೆ ರಾಕ್ಷಸೇಂದ್ರ ರಾವಣನು ತನ್ನ ಪರಿವಾರದೊಂದಿಗೆ ಸೀತೆಯನ್ನು ನೋಡಲು ಬರುತ್ತಾನೆ. ವನವಾಸಿ ರಾಮನನ್ನು ಮರೆತು ತನ್ನನ್ನು ವರಿಸುವಂತೆ ಸೀತೆಗೆ ಹೇಳುತ್ತಾನೆ, ಅದಕ್ಕೆ ಪ್ರತಿಯಾಗಿ ಸೀತೆಯು, ತಾನು ಪತಿವೃತೆಯೆಂದೂ, ಶ್ರೀರಾಮನೇ ತನ್ನ ಸರ್ವಸ್ವವೆಂದೂ ಹೇಳುತ್ತಾಳೆ. ಅಧರ್ಮಿಯಾದ ರಾವಣನನ್ನು ಕೊನೆಗಾಣಿಸಲು ಲಕ್ಷ್ಮಣ ಸಮೇತನಾಗಿ ರಾಮನು ಬರುವನೆಂದೂ ಸೀತೆಯು ಮರುತ್ತರ ಕೊಡುತ್ತಾಳೆ. ಸೀತೆಯ ಕಠಿಣ ಮಾತುಗಳಿಂದ ಕ್ರುದ್ಧನಾದ ಲಂಕೇಶನು ತನ್ನನ್ನು ವರಿಸಲು ಎರಡು ತಿಂಗಳ ಅವಧಿಯನ್ನು ಕೊಡುತ್ತಾನೆ. ಸೀತೆಯ ಮನವೊಲಿಸುವಂತೆ ರಾಕ್ಷಸಿಯರಿಗೆ ಹೇಳಿ ರಾವಣನು ವಾಟಿಕೆಯಿಂದ ನಿರ್ಗಮಿಸುತ್ತಾನೆ, ರಾಕ್ಷಸಿಯರು ರಾವಣನನ್ನು ವರಿಸುವಂತೆ ಸೀತೆಯನ್ನು ಪರಿಪರಿಯಾಗಿ ಪೀಡಿಸುತ್ತಿರುವುದನ್ನೂ, ರಾಮನ ಪ್ರತಿ ಸೀತೆಯ ಅಮಿತವಾದ ಪ್ರೀತಿಯನ್ನೂ ಹನುಮನು ಮರೆಯಲ್ಲಿ ನಿಂತು ಗಮನಿಸುತ್ತಿರುತ್ತಾನೆ.

ಸೀತೆಯ ಮುಂದೆ ಹೇಗೆ ಪ್ರಕಟವಾಗುವುದು? ತಾನು ಶ್ರೀರಾಮನ ಸೇವಕನೆಂದು ಹೇಗೆ ಆಕೆಗೆ ತಿಳಿಯಪಡಿಸುವುದು ಎಂಬ ಗೊಂದಲ ಕಪಿವೀರನನ್ನು ಕಾಡುತ್ತದೆ. ಹನುಮನು ಸೀತೆಗೆ ಕೇಳಿಸುವಂತೆ ರಾಮಕಥೆಯನ್ನು ಸುಶ್ರಾವ್ಯವಾಗಿ ಹಾಡುತ್ತಾನೆ. ರಾಮನ ಕಥೆಯನ್ನು ಕೇಳಿದ ಸೀತೆಯ ಮುಖಾರವಿಂದವು ಅರಳುತ್ತದೆ. ಹನುಮನನ್ನು ಕಂಡ ಸೀತೆಯು ಬೆದರಿಹೋಗುತ್ತಾಳೆ. ತನ್ನನ್ನು ಮೋಸ ಮಾಡಲು ರಾಕ್ಷಸನ್ಯಾರೋ ವಾನರರೂಪದಲ್ಲಿ ಬಂದಿದ್ದಾನೆಂದು ಭಾವಿಸುತ್ತಾಳೆ. ಇದನ್ನರಿತ ಕಪೀಶನು ವಿನಮ್ರವಾಗಿ ಸೀತೆಯ ಬಳಿ ಬಂದು ಆಕೆಯೇ ಮಾತೆ ಸೀತೆಯೆಂದು ತಿಳಿದುಕೊಳ್ಳುತ್ತಾನೆ, ತಾನು ರಾಮದೂತನೆಂದೂ, ವಾನರರಾಜ ಸುಗ್ರೀವನ ಆಜ್ಞೆಯಂತೆ ಸೀತೆಯನ್ನು ಹುಡುಕುತ್ತಾ ಲಂಕೆಗೆ ಬಂದೆನೆಂದೂ ಹೇಳುತ್ತಾನೆ. ಸೀತೆಗೆ ರಾಮನನ್ನು ಭೇಟಿಯಾದ ರೀತಿ, ಸುಗ್ರೀವ ಸಖ್ಯ, ವಾಲಿ ವಧೆ, ಸಾಗರೋಲ್ಲಂಘನ ಎಲ್ಲವನ್ನೂ ವಿವರಿಸಿ ಶ್ರೀರಾಮನ ಮುದ್ರೆಯುಂಗುರವನ್ನು ಕೊಡುತ್ತಾನೆ. ಅದನ್ನು ನೋಡಿ ಸೀತೆಯು ಅತ್ಯಂತ ಸಂತೋಷಿತಳಾಗುತ್ತಾಳೆ. ಹನುಮನ ಕೋರಿಕೆಯಂತೆ ಚೂಡಾಮಣಿಯನ್ನು ಆತನ ಕೈಗಿತ್ತು ರಾಮನಿಗೆ ಕೊಡುವಂತೆ ಹೇಳುತ್ತಾಳೆ. ಸ್ವಯಂ ರಾಮನೇ ಲಂಕೆಗೆ ಬಂದು ತನ್ನನ್ನು ಬಂಧನದಿಂದ ಬಿಡಿಸಬೇಕೆಂದೂ ಹೇಳುತ್ತಾಳೆ.

ರಾವಣನ ಸಾಮರ್ಥ್ಯವನ್ನು ಪರೀಕ್ಷಸಲೋಸುಗ ವಾನರೇಂದ್ರನು ಅಶೋಕವಾಟಿಕೆಯನ್ನು ಧ್ವಂಸಗೊಳಿಸುತ್ತಾನೆ. ತಡೆಯಲು ಬಂದ ಅಸುರರನ್ನು ಯಮಸದನಕ್ಕಟ್ಟುತ್ತಾನೆ ಕಪೀಶ. ರಾವಣನ ಆದೇಶದಂತೆ ಹನುಮನನ್ನು ಸೆರೆ ಹಿಡಿಯಲು ಬಂದ ಜಂಬುಮಾಲಿಯೂ ಕಾಲವಾಗುತ್ತಾನೆ. ಆತನ ಸಹಾಯಕ್ಕೆ ಧಾವಿಸಿದ ಆತನ ಮಕ್ಕಳೂ ಗತಿಸುತ್ತಾರೆ, ರಾವಣಸುತ ಅಕ್ಷಕುಮಾರನೂ ವೀರಾವೇಷದಿಂದ ಹೋರಾಡಿದರೂ ಮಾರುತಿಯ ಮುಂದೆ ಆತನ ಆಟವೇನೂ ನಡೆಯಲಿಲ್ಲ. ತಮ್ಮ ಅಕ್ಷಕುಮಾರನು ಅಸುನೀಗಿದ್ದನ್ನು ಕಂಡು ಸ್ವಯಂ ಮೇಘನಾದನೇ ಯುದ್ಧಕ್ಕೆ ಬರುತ್ತಾನೆ. ತನ್ನೆಲ್ಲಾ ಬಾಣಗಳೂ ಹನುಮನಿಂದ ನಿಷ್ಕ್ರಿಯಗೊಂಡಾಗ ಆತನೆಡೆಗೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುತ್ತಾನೆ. ಮಹಾಸ್ತ್ರಕ್ಕೆ ಗೌರವ ಸಲ್ಲಿಸಲೋಸುಗ ವಾನರಶ್ರೇಷ್ಠನು ತಾನಾಗಿಯೇ ಬಂಧಿತಗೊಳ್ಳುತ್ತಾನೆ. ಲಂಕೇಶನ ಅಸ್ಥಾನದಲ್ಲಿ ಯೋಗ್ಯವಾದ ಉಪಚಾರವೂ, ಆಸನವೂ ಸಿಗದೆ ತನ್ನದೇ ಬಾಲವನ್ನು ಸುರುಳಿಸಿ ಯೋಗ್ಯವಾದ ಆಸನವನ್ನು ಹನುಮನು ಸಿದ್ಧಗೊಳಿಸುತ್ತಾನೆ. ರಾವಣನು ಆಂಜನೇಯನ ಪರಿಚಯವನ್ನು ಕೇಳಲು, ತಾನು ಶ್ರೀರಾಮನು ದೂತನೆಂದೂ, ರಾವಣನು ಮಾಡಿದ ಸೀತಾಪಹರಣವು ಧರ್ಮೋಚಿತವಲ್ಲವೆಂದೂ, ಸೀತೆಯನ್ನು ರಾಮನಿಗೆ ಒಪ್ಪಿಸಿ ಕ್ಷಮೆಯಾಚಿಸಿದಲ್ಲಿ ಮಹಾ ಕರುಣಾಳುವಾದ ರಾಘವನು ಕ್ಷಮಿಸುವನೆಂದೂ ಹೇಳುತ್ತಾನೆ, ಇದರಿಂದ ಕ್ರುದ್ಧನಾದ ಲಂಕೇಶನು ಹನುಮನು ತೋರಿದ ಉದ್ಧಟತನಕ್ಕೆ ಮರಣದಂಡನೆಯನ್ನು ವಿಧಿಸುತ್ತಾನೆ. ಆದರೆ ಧರ್ಮಾತ್ಮನಾದ ವಿಭೀಷಣನು ದೂತನನ್ನು ಕೊಲ್ಲುವುದು ಧರ್ಮವಲ್ಲ. ಅದರ ಬದಲು ಯಾವುದಾದರೂ ಘೋರ ಶಿಕ್ಷೆಯನ್ನು ಕೊಡಬೇಕೆಂದು ಸಲಹೆ ನೀಡುತ್ತಾನೆ. ಅದರಂತೆ ರಾವಣನು ಕಪಿಗೆ ಪ್ರಿಯವಾದ ಬಾಲಕ್ಕೆ ಬೆಂಕಿಯಿಡುವಂತೆ ಆದೇಶಿಸುತ್ತಾನೆ.

ಇದರಿಂದ ಉತ್ಸಾಹಗೊಂಡ ರಾಕ್ಷಸರು ಹನುಮನ ಬಾಲಕ್ಕೆ ಬಟ್ಟೆ ಸುತ್ತುತ್ತಾರೆ. ಆದರೆ ಹನುಮನ ಬಾಲವು ಬೆಳೆಯುತ್ತಾ ಹೋಯಿತು. ಅರಮನೆಯ ಬಟ್ಟೆಯೆಲ್ಲಾ ಮುಗಿದು ಹೋದವು. ಅಸುರರ ಕೈಗಳು ಸೋತು ಸುಣ್ಣವಾದವು. ಕೊನೆಗೆ ಎಣ್ಣೆ ಸುರಿದು ಬಾಲಕ್ಕೆ ಬೆಂಕಿ ಹಚ್ಚುತ್ತಾರೆ. ಬಂಧನದಿಂದ ಮುಕ್ತಗೊಂಡು, ಛಂಗನೆ ಹಾರಿ ರಾಮದೂತನು ಲಂಕೆಯ ಆಯಕಟ್ಟಿನ ಜಾಗಗಳಿಗೆ ಅಗ್ನಿಸ್ಪರ್ಷ ಮಾಡುತ್ತಾನೆ. ಕ್ಷಣದಲ್ಲೇ ನಗರದ ಎಲ್ಲೆಡೆ ಅಗ್ನಿಯ ಕೆನ್ನಾಲಿಗೆಗಳು ಹೊರಚಾಚಿ ಎಲ್ಲವನ್ನೂ ದಹಿಸುತ್ತವೆ. ಲಂಕಾನಗರದಲ್ಲಿ ಜನರ ಹಾಹಾಕಾರ ಕೇಳತೊಡಗುತ್ತದೆ. ವಾನರವೀರನು ಸಾಗರದಲ್ಲಿ ತನ್ನ ಬಾಲವನ್ನದ್ದಿ ಬೆಂಕಿಯನ್ನು ಆರಿಸುತ್ತಾನೆ,

ಅಶೋಕವನಕ್ಕೆ ಮರಳಿ ಸೀತೆಯು ಸಕುಶಲವಾಗಿರುವುದನ್ನು ಕಂಡು ಸಂತೋಷಗೊಂಡು, ಸಾಗರದಾಚೆ ಇರುವ ವಾನರವೀರರನ್ನು ಸೇರಲು ಮರಳುತ್ತಾನೆ. ಮಾತಿನಂತೆ ಮೈನಾಕದ ಮೇಲೆ ವಿರಮಿಸಿ ಅಂಗದ, ಜಾಂಬವಂತಾದಿಗಳನ್ನು ಸೇರುತ್ತಾನೆ. ರಾಮಕಾರ್ಯ ಸಫಲವಾಗಿದ್ದರಿಂದ ವಾನರರೆಲ್ಲಾ ಅತೀವ ಸಂತೋಷಪಡುತ್ತಾರೆ. ಹನುಮನ ಸಾಹಸವನ್ನು ಆತನಿಂದ ಕೇಳಿ ತಿಳಿಯುತ್ತಾರೆ. ದಕ್ಷಿಣದೆಡೆಗೆ ಮರಳಿದ ವಾನರರೆಲ್ಲಾ ಶ್ರೀರಾಮನ ಜಯಕಾರ ಮಾಡುತ್ತಾ ಕಿಷ್ಕಿಂಧೆಗೆ ಮರಳುತ್ತಾರೆ. ತಾನು ಸೀತೆಯನ್ನು ಲಂಕೆಯಲ್ಲಿ ನೋಡಿರುವುದಾಗಿಯೂ, ಆಕೆಯನ್ನು ಭೇಟಿಯಾಗಿರುವುದಾಗಿಯೂ, ಅಲ್ಲಿ ನಡೆದ ಘಟನೆಗಳನ್ನೆಲ್ಲಾ ಸವಿಸ್ತಾರವಾಗಿ ಹನುಮನು ರಾಮನಿಗೆ ತಿಳಿಸುತ್ತಾನೆ. ಸೀತೆಯಾಡಿದ ಪ್ರತಿಯೊಂದು ಮಾತನ್ನು ತಪ್ಪದೆ ರಾಮನಿಗೆ ತಿಳಿಸುತ್ತಾ, ಸೀತಾ ಮಾತೆ ಕೊಟ್ಟಿರುವ ಚೂಡಾಮಣಿಯನ್ನು ರಾಮನ ಕೈಗಳಲ್ಲಿ ಇರಿಸುತ್ತಾನೆ ಕಪಿಶ್ರೇಷ್ಠ. ರಾಮನ ಕಣ್ಣಾಲಿಗಳು ತುಂಬಿ ಹನುಮನನ್ನು ಆಲಂಗಿಸಿಕೊಳ್ಳುತ್ತಾನೆ.

ಚಿತ್ರಕೃಪೆ: www.masters-gallery.com

Wednesday, November 18, 2009

ಕಲಾವಿದನ ಕುಂಚದಲ್ಲಿ ರಾಮಾಯಣ: ಕಿಷ್ಕಿಂಧಾಕಾಂಡ

ಋಷ್ಯಮೂಕದೆಡೆಗೆ ಬರುತ್ತಿರುವ ಜಟಾಧಾರಿ, ಧನುರ್ಧಾರಿ ವೀರರನ್ನು ನೋಡಿ ಸುಗ್ರೀವನು ಚಿಂತಿತನಾಗುತ್ತಾನೆ. ಮಹಾಮುನಿ ಮತಂಗರ ಶಾಪದ ಪರಿಣಾಮವಾಗಿ ಕಿಷ್ಕಿಂಧಾಪತಿ ವಾಲಿ ಋಷ್ಯಮೂಕಕ್ಕೆ ಕಾಲಿಡುವಂತಿರಲಿಲ್ಲ. ಇದರಿಂದಾಗಿ ತನ್ನ ವಧೆಗಾಗಿ ವಾಲಿಯು ಯೋಧರನ್ನು ಕಳುಹಿಸಿದ್ದಾನೆಂಬುದು ಸುಗ್ರೀವನ ಚಿಂತೆಗೆ ಕಾರಣ, ಅಪರಿಚಿತ ಧನುರ್ಧಾರಿಗಳ ಬಗ್ಗೆ ತಿಳಿದುಕೊಂಡು ಬರುವಂತೆ ತನ್ನ ಆಪ್ತನೂ, ಬುದ್ಧಿಶಾಲಿಯೂ ಆದ ಹನುಮಂತನಿಗೆ ಸುಗ್ರೀವನು ಹೇಳುತ್ತಾನೆ. ಅದರಂತೆ ಸನ್ಯಾಸಿಯ ವೇಷ ಧರಿಸಿ ಹನುಮನು ರಾಮ-ಲಕ್ಷ್ಮಣರ ಬಳಿಗೆ ಬರುತ್ತಾನೆ. ತನ್ನ ಪಾಂಡಿತ್ಯವನ್ನೂ, ಮಾತುಗಾರಿಕೆಯನ್ನೂ ಅತ್ಯಂತ ಕುಶಲವಾಗಿ ಬಳಸುತ್ತಾ ರಾಮ-ಲಕ್ಷ್ಮಣರ ಸಂಪೂರ್ಣ ವೃತ್ತಾಂತವನ್ನು ತಿಳಿದುಕೊಳ್ಳುತ್ತಾನೆ. ರಾಮ-ಲಕ್ಷ್ಮಣರು ಸುಗ್ರೀವನ ಸಖ್ಯವನ್ನು ಬೆಳೆಸುವ ಸಲುವಾಗಿ ಬಂದಿದ್ದಾರೆಂದು ತಿಳಿದು ಹನುಮನು ನಿರಾಳವಾಗುತ್ತಾನೆ. ಶ್ರೀರಾಮನ ಪರಮ ಭಕ್ತನಾದ ಮಾರುತಿಯು ಸಂತೋಷಗೊಂಡು ತನ್ನ ನಿಜರೂಪವನ್ನು ಪ್ರಕಟಿಸುತ್ತಾನೆ. ರಾಮ-ಲಕ್ಷ್ಮಣರನ್ನು ಆಲಂಗಿಸಿದ ಹನುಮನು ರಾಘವರನ್ನು ಋಷ್ಯಮೂಕಕ್ಕೆ ಕರೆದೊಯ್ಯುತ್ತಾನೆ.

ರಾಮ – ಲಕ್ಷ್ಮಣರನ್ನು ಸುಗ್ರೀವನಿಗೆ ಪರಿಚಯಿಸಿದ ಹನುಮನು, ಶ್ರೀರಾಮನೊಂದಿಗೆ ಸ್ನೇಹವನ್ನು ಬೆಳೆಸುವಂತೆ ಸಲಹೆ ನೀಡುತ್ತಾನೆ. ಅದರಂತೆ ಅಗ್ನಿಯನ್ನು ಸಾಕ್ಷಿಯನ್ನಾಗಿಸಿ ರಾಮ – ಸುಗ್ರೀವರು ಸ್ನೇಹಿತರಾಗುತ್ತಾರೆ. ಸ್ನೇಹಿತ ಧರ್ಮದಂತೆ ಅಧರ್ಮಿ ವಾಲಿಯನ್ನು ಕೊನೆಗಾಣಿಸಿ, ಸುಗ್ರೀವನನ್ನು ಕಿಷ್ಕಿಂಧೆಯ ರಾಜನನ್ನಾಗಿ ಸ್ಥಾಪಿಸುತ್ತೇನೆಂದು ರಾಮನು ಮಾತು ಕೊಡುತ್ತಾನೆ. ಪ್ರತಿಯಾಗಿ ಸೀತಾನ್ವೇಷಣೆಯ ಮಹತ್ಕಾರ್ಯವನ್ನು ಮಾಡುವುದಾಗಿ ಸುಗ್ರೀವನು ಶ್ರೀರಾಮನಿಗೆ ಮಾತು ಕೊಡುತ್ತಾನೆ. ಸೀತೆಯು ಸೀರೆಯಂಚಲ್ಲಿ ಆಭರಣಗಳನ್ನಿಟ್ಟು ಎಸೆದ ಪೊಟ್ಟಣವನ್ನು ಸುಗ್ರೀವನು ರಾಮನಿಗೆ ತೋರಿಸುತ್ತಾನೆ, ಅವುಗಳನ್ನು ನೋಡುತ್ತಿದ್ದಂತೆ ರಾಮನ ಕಣ್ಣಾಲಿಗಳು ತುಂಬಿ ದೃಷ್ಟಿ ಮಂದವಾಯಿತು. ಆಭರಣಗಳನ್ನು ಗುರುತಿಸುವಂತೆ ರಾಮನು ಲಕ್ಷ್ಮಣನನ್ನು ಕೇಳುತ್ತಾನೆ. “ಬಳೆಗಳಾಗಲೀ, ಕಿವಿಯೋಲೆಗಳಾಗಲೀ ನನಗೆ ತಿಳಿಯದು. ದಿನನಿತ್ಯ ಮಾತೆ ಸೀತೆಯ ಕಾಲಿಗೆ ನಮಸ್ಕರಿಸುತ್ತಿದ್ದರಿಂದ ಈ ಕಾಲಂದುಗೆಗಳು ಮಾತೆಯದ್ದೇ ಎಂದು ಖಚಿತವಾಗಿ ಹೇಳಬಲ್ಲೆ” ಎಂದು ಲಕ್ಷ್ಮಣನು ಹೇಳುತ್ತಾನೆ.

ಹಿಂದೊಮ್ಮೆ ವಾಲಿಯನ್ನು ಮಾಯಾವಿ ಎಂಬ ರಾಕ್ಷಸನು ಯುದ್ಧಕ್ಕೆ ಕೆಣಕಿದಾಗ ವಾಲಿಯು ಸುಗ್ರೀವನೊಂದಿಗೆ ಆತನನ್ನು ಬೆನ್ನಟ್ಟಿ ಹೋಗಿದ್ದನು. ಹೆದರಿದ ಮಾಯಾವಿಯು ಗುಹೆಯೊಂದರೊಳಗೆ ಅಡಗಿ ಕುಳಿತುಕೊಳ್ಳುತ್ತಾನೆ. ಗುಹೆಗೆ ಕಾವಲಿರುವಂತೆ ಸುಗ್ರೀವನಿಗೆ ಆದೇಶಿಸಿ ವಾಲಿಯು ಗುಹೆಯನ್ನು ಪ್ರವೇಶಿಸುತ್ತಾನೆ. ಹಲವು ವರ್ಷಗಳುರುಳಿದರೂ ವಾಲಿಯು ಹೊರಗೆ ಬರಲೇ ಇಲ್ಲ. ಕೊನೆಗೊಮ್ಮೆ ಗುಹೆಯ ಬಾಗಿಲಿನಿಂದ ರಕ್ತ ಬರುವುದನ್ನು ನೋಡಿ, ವಾಲಿಯು ಗತಿಸಿರಬಹುದೆಂದು ಸುಗ್ರೀವನು ಭಾವಿಸುತ್ತಾನೆ. ಗುಹೆಯ ಬಾಗಿಲಿಗೆ ದೊಡ್ಡದೊಂದು ಬಂಡೆಯನ್ನಿಟ್ಟು ಕಿಷ್ಕಿಂಧೆಗೆ ಮರಳತ್ತಾನೆ. ಮಂತ್ರಿಗಳು ಸುಗ್ರೀವನನ್ನು ರಾಜನನ್ನಾಗಿಸುತ್ತಾರೆ. ಆದರೆ ಮಾಯಾವಿಯನ್ನು ಸಂಹರಿಸಿ ಮರಳಿದ ವಾಲಿಯು ಇದನ್ನು ನೋಡಿ ಅತ್ಯಂತ ಕ್ರುದ್ಧನಾಗುತ್ತಾನೆ. ವಾಲಿಯೆದುರು ಸೆಣೆಸಲಾಗದೆ ಸುಗ್ರೀವನು ಋಷ್ಯಮೂಕದಲ್ಲಿ ಅಡಗಿ ಕುಳಿತುಕೊಳ್ಳುತ್ತಾನೆ. ವಾಲಿಯು ಮಾಯಾವಿಯ ಅಣ್ಣನಾದ ದುಂಧುಂಭಿಯನ್ನು ವಧಿಸಿ ಆತನ ಮೃತದೇಹವನ್ನು ಹಲವು ಯೋಜನ ದೂರಕ್ಕೆಸೆದಾಗ ಅದರಿಂದ ರಕ್ತದ ತುಣುಕುಗಳು ಮಹರ್ಷಿ ಮತಂಗರ ಆಶ್ರಮದ ಮೇಲೆ ಬಿದ್ದಿದ್ದವು. ಇದರಿಂದ ಕ್ರುದ್ಧರಾದ ಮತಂಗರು “ ಈ ಮಹಾಪಾಪವನ್ನು ಮಾಡಿದವರು ಯಾರೇ ಇರಲಿ, ನನ್ನ ಆಶ್ರಮಕ್ಕೆ ಕಾಲಿರಿಸಿದ ಕೂಡಲೇ ಸಾಯಲಿ” ಎಂದು ಶಪಿಸುತ್ತಾರೆ. ಇದೇ ಕಾರಣದಿಂದ ವಾಲಿಯು ಋಷ್ಯಮೂಕಕ್ಕೆ ಬರಲಾರ ಎಂದು ಸುಗ್ರೀವನು ರಾಘವರಿಗೆ ವಿವರಿಸುತ್ತಾನೆ.

ಯೋಜನೆಯಂತೆ ಸುಗ್ರೀವನು ವಾಲಿಯನ್ನು ಯುದ್ಧಕ್ಕೆ ಕರೆಯುತ್ತಾನೆ. ಯುದ್ಧಾಹ್ವಾನವನ್ನು ಸ್ವೀಕರಿಸಿದ ವಾಲಿಯು ಸುಗ್ರೀವನೊಂದಿಗೆ ಸೆಣೆಸುತ್ತಾನೆ. ಪರಾಕ್ರಮ, ಶೌರ್ಯ, ಸಾಹಸದಲ್ಲಿ ವಾಲಿ – ಸುಗ್ರೀವರು ಒಬ್ಬರಿಗೊಬ್ಬರು ಸರಿ ಸಮನಾಗಿದ್ದರು. ಮದಭರಿತ ಆನೆಗಳಂತೆ ವೀರಾವೇಶದಿಂದ ಹೋರಾಡುತ್ತಿದ್ದರು. ಶ್ರೀ ರಾಮನಿಗೆ ವಾಲಿಯನ್ನು ಗುರುತಿಸಲು ಸಾಧ್ಯವಾಗಲಿಲ್ಲ. ವಾಲಿಯೊಂದಿಗೆ ಸೆಣಸಲಾಗದೆ ಸುಗ್ರೀವನು ಪರಾಜಿತನಾಗಿ ಯುದ್ಧಭೂಮಿಯಿಂದ ಕಾಲ್ಕೀಳುತ್ತಾನೆ. ಸುಗ್ರೀವನಿಗೆ ಹೂವಿನ ಹಾರವನ್ನು ತೊಡಿಸಿ ಎರಡನೇ ಬಾರಿ ವಾಲಿಯನ್ನು ಯುದ್ಧಕ್ಕೆ ಕರೆಯುವಂತೆ ಶ್ರೀ ರಾಮನು ಹೇಳುತ್ತಾನೆ. ವಾಲಿ – ಸುಗ್ರೀವರ ಮಧ್ಯೆ ಘೋರ ಯುದ್ಧ ನಡೆಯುತ್ತದೆ. ಸುಗ್ರೀವನ ಶೌರ್ಯ ಕಳೆಗುಂದುವುದನ್ನು ನೋಡಿ ಶ್ರೀರಾಮನು ತೀಕ್ಷ್ಣವಾದ ಬಾಣವನ್ನು ವಾಲಿಯೆಡೆಗೆ ಹೂಡುತ್ತಾನೆ. ರಾಮಬಾಣವು ವಾಲಿಯ ಎದೆಯನ್ನು ಛೇಧಿಸುವುದರೊಂದಿಗೆ ಅಧರ್ಮಿ ವಾಲಿಯು ನೆಲಕ್ಕುರುಳುತ್ತಾನೆ. ಧರ್ಮಿಷ್ಟನಾದ ರಾಮನು ಹೀಗೆ ಮಾಡಿದ್ದು ಸರಿಯೇ ಎಂದು ವಾಲಿ ಕೇಳಿದಾಗ, ಶ್ರೀರಾಮನು ಕಿಷ್ಕಿಂಧಾಧೀಶನಿಗೆ ಧರ್ಮದ ಪರಿಕಲ್ಪನೆಯನ್ನು ತಿಳಿಸುತ್ತಾನೆ. ತನ್ನ ತಪ್ಪನ್ನು ಅರಿತ ವಾಲಿಯು ಕ್ಷಮೆಯಾಚಿಸಿ ದೇಹತ್ಯಾಗ ಮಾಡುತ್ತಾನೆ. ಸುಗ್ರೀವನಿಗೆ ಕಿಷ್ಕಿಂದೆಯ ರಾಜನನ್ನಾಗಿ ಪಟ್ಟಾಭಿಷೇಕ ಮಾಡುತ್ತಾರೆ. ವಾಲಿ – ತಾರೆಯರ ಮಗನಾದ ಅಂಗದನನ್ನು ಯುವರಾಜನನ್ನಾಗಿ ನೇಮಿಸಲಾಗುತ್ತದೆ.

ಕಿಷ್ಕಿಂದೆಯಲ್ಲಿ ಮಳೆಗಾಲ ಆರಂಭವಾಗುತ್ತದೆ. ಸುಗ್ರೀವನು ತನ್ನ ಅರಮನೆಯ ಸುಖದಲ್ಲಿ ಮೈಮರೆಯುತ್ತಾನೆ. ಮಳೆಗಾಲ ಕಳೆದು ಶರಧೃತು ಬಂದರೂ ಸುಗ್ರೀವನಿಗೆ ತನ್ನ ವಚನದ ಪರಿವೆಯಿರಲಿಲ್ಲ. ಸುಗ್ರೀವನ ಈ ವರ್ತನೆಯಿಂದ ಕ್ರುದ್ಧನಾದ ಲಕ್ಷ್ಮಣನು ಸ್ವಯಂ ಅರಮನೆಗೆ ಬರುತ್ತಾನೆ. ಹನುಮ, ತಾರೆಯರ ಸಲಹೆಯಿಂದ ಎಚ್ಚೆತ್ತ ಸುಗ್ರೀವನು, ತನ್ನನ್ನು ಕ್ಷಮಿಸುವಂತೆ ಲಕ್ಷ್ಮಣನಿಗೆ ಕೇಳುತ್ತಾನೆ. ಸೀತಾನ್ವೇಷಣೆಯ ಸಲುವಾಗಿ ಹಲವು ದಿಕ್ಕುಗಳಿಂದ ತನ್ನ ವಾನರವೀರರನ್ನು ಕಿಷ್ಕಿಂಧೆಗೆ ಕರೆಸುತ್ತಾನೆ. ಸುಗ್ರೀವನ ಆಜ್ಞೆಯ ಮೇರೆಗೆ ಕಿಷ್ಕಿಂಧೆಯಲ್ಲಿ ಸೇರಿದ ಕಪಿ ಸಾಗರವನ್ನು ನೋಡಿ ಶ್ರೀರಾಮನು ಹರ್ಷಿಸುತ್ತಾನೆ. ಹಲವು ಸಾಹಸಿ ಕಪಿವರ್ಯರ ನೇತೃತ್ವದಲ್ಲಿ ಕಪಿಸೈನ್ಯಗಳು ನಾಲ್ಕೂ ದಿಕ್ಕುಗಳಿಗೆ ಸೀತೆಯನ್ನು ಹುಡುಕಲು ಹೊರಡುತ್ತವೆ. ಮಹಾವೀರ ವಿನತನ ನೇತೃತ್ವದಲ್ಲಿ ಪೂರ್ವದೆಡೆಗೂ, ಮಹಾಪರಾಕ್ರಮಿ ಶತಬಲಿಯ ನೇತೃತ್ವದಲ್ಲಿ ಉತ್ತರದೆಡೆಗೂ, ವೀರ ಸುಶೇಣನ ಮಾರ್ಗದರ್ಶನದಲ್ಲಿ ಪಶ್ಚಿಮದೆಡೆಗೂ, ಯುವರಾಜ ಅಂಗದನ ಮುಂದಾಳುತ್ವದಲ್ಲಿ ದಕ್ಷಿಣದೆಡೆಗೆ ವಾನರವೀರರು ಶ್ರೀರಾಮನ ಜಯಕಾರ ಮಾಡುತ್ತಾ ಮಾತೆ ಸೀತೆಯ ಹುಡುಕಾಟಕ್ಕೆ ತೆರಳುತ್ತಾರೆ, ಶ್ರೀರಾಮನಿಗೆ ಹನುಮನ ಮೇಲೆ ಬಹಳಷ್ಟು ನಂಬಿಕೆ. ಆದ್ದರಿಂದಲೇ ತನ್ನ ಉಂಗುರವನ್ನು ಆತನಿಗಿತ್ತು, ಸೀತೆಯ ಸುಳಿವು ದೊರೆತರೆ ಆಕೆಗೆ ಕೊಡುವಂತೆ ಹೇಳುತ್ತಾನೆ.

ಉತ್ತರ, ಪೂರ್ವ ಹಾಗೂ ಪಶ್ಚಿಮ ದಿಕ್ಕಿಗೆ ಹೋಗಿದ್ದ ವಾನರ ವೀರರೆಲ್ಲಾ ಬರಿಗೈಯಲ್ಲಿ ಮರಳುತ್ತಾರೆ. ಕಾಡು, ನಾಡು, ಗುಡಿ, ಕಂದರ, ನದಿ, ಪಾತಾಳ ಹೀಗೆ ಎಲ್ಲಿ ಹುಡುಕಿದರೂ ಮಾತೆ ಸೀತೆಯ ಸುಳಿವು ಸಿಗಲಿಲ್ಲ. ಅಂಗದನ ನೇತೃತ್ವದಲ್ಲಿ ದಕ್ಷಿಣದೆಡೆಗೆ ಹೋದ ವಾನರ ಸೇನೆ ಇನ್ನೂ ಮರಳಿರಲಿಲ್ಲ. ಎಲ್ಲೆಲ್ಲಿ ಹುಡುಕಿದರೂ ಸೀತೆಯ ಸುಳಿವಿಲ್ಲದೆ ವಾನರ ಸೇನೆಯ ಉತ್ಸಾಹ ಕುಸಿದಿತ್ತು. ಅಂಗದನು ತನ್ನ ಸೈನ್ಯವನ್ನು ಹುರಿದುಂಬಿಸಿ ಹುಡುಕಾಟವನ್ನು ಮುಂದುವರಿಸುತ್ತಾನೆ. ರಾಮ ಕಾರ್ಯದಲ್ಲಿ ವಿಫಲರಾದೆವೆಂದು ಭಾವಿಸಿ ಅನ್ನ ತ್ಯಾಗ ಮಾಡಿ ಪ್ರಾಣಾರ್ಪಣೆ ಮಾಡಲು ಅಂಗದ ಹಾಗೂ ಮೊದಲಾದ ವಾನರರು ನಿಶ್ಚಯಿಸುತ್ತಾರೆ. ಅಲ್ಲೇ ಕುಳಿತಿದ್ದ ವೃದ್ಧ ಗಿಡುಗ ಸಂಪಾತಿಗೆ ವಾನರರು ಕಾಣಿಸುತ್ತಾರೆ. ತನ್ನ ತಮ್ಮನಾದ ಜಟಾಯುವಿನ ಮರಣ ವಾರ್ತೆಯನ್ನು ವಾನರರಿಂದ ತಿಳಿದು ಸಂಪಾತಿ ಅತೀವ ದುಃಖಿತನಾಗುತ್ತಾನೆ. ಸೀತೆಯನ್ನು ರಾವಣನು ಸಾಗರದಾಚೆಯ ಲಂಕೆಗೆ ಕೊಂಡೊಯ್ದಿದ್ದಾನೆ ಎಂದು ಸಂಪಾತಿ ತಿಳಿಸುತ್ತಾನೆ. ಹಿಂದೊಮ್ಮೆ ಸೂರ್ಯನ ಪ್ರಖರ ಕಿರಣಗಳಿಂದಾಗಿ ಸಂಪಾತಿಯ ರೆಕ್ಕೆಗಳೆರಡೂ ಸುಟ್ಟಿದ್ದವು. ಸೀತೆಯ ಸುಳಿವನ್ನು ವಾನರರಿಗೆ ತಿಳಿಸುತ್ತಿದ್ದಂತೆ ಹೊಸ ರೆಕ್ಕೆಗಳು ಚಿಗುರುತ್ತವೆ. ವಾನರರಿಗೆ ವಿಜಯಶ್ರೀಯನ್ನು ಹರಸಿ ಸಂಪಾತಿಯು ಗಗನಕ್ಕೆರುತ್ತಾನೆ. ಸಂಪಾತಿಯ ಸಲಹೆಯಂತೆ ದಕ್ಷಿಣದ ಸಾಗರ ತಟಕ್ಕೆ ವಾನರರು ಬರುತ್ತಾರೆ. ಅಗಾಧವಾದ ಸಾಗರವನ್ನು ನೋಡಿ ದಾಟುವುದು ಹೇಗೆ ಎಂಬ ಚಿಂತೆ ವಾನರವೀರರನ್ನು ಕಾಡುತ್ತದೆ. ಮಹಾವೀರರಾದ ಗಜ, ಗವಾಕ್ಷ, ಗವಯ, ಗಂಧಮಾದನ, ಶರಭ, ಮೈಂದ, ದ್ವಿವಿದ, ಸುಶೇಷಣ ಮತ್ತು ಜಾಂಬವಂತರು ತಮ್ಮ ಸಾಮರ್ಥ್ಯವನ್ನು ಅಂಗದನಿಗೆ ಹೇಳಿದರು. ಸ್ವಯಂ ಅಂಗದನು ತಾನು ಸಾಗರವನ್ನು ಲಂಘಿಸಬಲ್ಲೆನೆಂದೂ ಆದರೆ ಮರಳಿ ಬರುವೆನೆಂಬ ವಿಶ್ವಾಸವಿಲ್ಲವೆಂದು ಹೇಳುತ್ತಾನೆ. ಆದರೆ ಹನುಮನೊಬ್ಬನೆ ಅಗಾಧವಾದ ಸಾಗರವನ್ನು ದಿಟ್ಟಿಸುತ್ತಾ ಕುಳಿತಿದ್ದನು. ಬಾಲ್ಯದಲ್ಲಿ ಮುನಿಗಳ ಶಾಪದಿಂದ ತನ್ನ ಶಕ್ತಿ, ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ಮರೆತಿರುತ್ತಾನೆ. ಇದನ್ನು ಗಮನಿಸಿದ ಜಾಂಬವಂತನು ಆಂಜನೇಯನಿಗೆ ಆತನ ಶಕ್ತಿ, ಸಾಮರ್ಥ್ಯಗಳನ್ನು ನೆನಪಿಸುತ್ತಾನೆ.

ಚಿತ್ರಕೃಪೆ: www.masters-gallery.com