Monday, April 19, 2010

ಮನ ಹಿಡಿದ ಮನೆಯ ಜಾಡು...

ಭಾನುವಾರ ಸಂಜೆಯ ಮಾತು. ನನ್ನ ದೃಷ್ಟಿ ಕಿಟಕಿಯ ಮೂಲಕ ಹಾದು ಮನೆ ಎದುರಿದ್ದ ಗುಡ್ಡದ ಮೇಲೆ ನೆಟ್ಟಿತ್ತು. ಅದು ಗುಡ್ಡವೇನೂ ಅಲ್ಲ. ನನ್ನ ಮನೆ ಸ್ವಲ್ಪ ತಗ್ಗಿನಲ್ಲಿದೆ. ಅದಕ್ಕೆ ಗುಡ್ಡ ಅಂತ ಹೇಳಿದೆ ಅಷ್ಟೆ. ಸಂಜೆಯ ಸೂರ್ಯನ ಬಿಸಿಲು. ತಣ್ಣಗೆ ಬೀಸುವ ಗಾಳಿಗೆ ಗಿಡ ಮರಗಳು ತಲೆ ತೂಗ್ತಿದ್ದಾವೇನೋ ಅಂತ ಅನ್ನಿಸಿತು. ‘ನೋಡು ಹವಾಮಾನ ಚೆನ್ನಾಗಿದೆ. ಗಾಳಿ ಬೀಸ್ತಾ ಇದೆ. ಇಲ್ಲಿಂದ ನೋಡ್ತಾ ಇದ್ರೆ ಚೇವಾರಿನಲ್ಲಿದ್ದೇನೆ ಅಂತ ಅನ್ನಿಸ್ತಾ ಇದೆ’ ಅಂತ ನನ್ನಾಕೆಗೆ ಹೇಳಿದಾಗ ಅವಳೊಂದು ತುಂಟ ನಗೆ ಬೀರಿದಳು. ತಣ್ಣನೆ ಗಾಳಿ ಬೀಸಿದಾಗ, ಎಳೆ ಬಿಸಿಲು ಮೂಡಿದಾಗ, ಜಡಿ ಮಳೆ ಸುರಿದಾಗ ನಾನು ಚೇವಾರಿನ ಹಾಗೆ ಅಂದ್ರೆ ಆಕೆ ನನ್ನನ್ನು ಛೇಡಿಸುವ ರೀತಿಯಲ್ಲಿ ನಗ್ತಾ ಇರ್ತಾಳೆ. ಅಂದ ಹಾಗೆ ಚೇವಾರು ನನ್ನ ಊರಿನ ಹೆಸರು. ನನ್ನ ಅಮ್ಮನ ತವರು ಮನೆ. ಈಗ ಅಪ್ಪ, ಅಮ್ಮ ಅಜ್ಜಿಯ ಜೊತೆ ಅಲ್ಲೇ ಇದ್ದಾರೆ. ಯಕ್ಷಗಾನ, ಪಿತಾಮಹ ಪಾರ್ತಿಸುಬ್ಬನ ಕರ್ಮಭೂಮಿಯಾದ ಕುಂಬಳೆಯ ಪಕ್ಕದಲ್ಲಿದೆ ನನ್ನ ಚೇವಾರು. ಸಣ್ಣವನಿದ್ದಾಗ ನನ್ನೆಲ್ಲಾ ಬೇಸಿಗೆ ರಜೆಗಳನ್ನು ಕಳೆದದ್ದು ಇಲ್ಲಿಯೇ. ಪ್ರತಿಸಲ ಚೇವಾರಿಗೆ ಹೋದಾಗಲೂ ಏನೂ ವ್ಯತ್ಯಾಸ ಕಾಣ್ತಿರಲಿಲ್ಲ. ಈಗಲೂ ಅಷ್ಟೆ ಚೇವಾರು ಇದ್ದ ಹಾಗೆ ಇದೆ. ವಾಹನಗಳ ಜಂಜಾಟವಿಲ್ಲ, ದೊಡ್ಡ ದೊಡ್ಡ ಬಿಲ್ಡಿಂಗ್ ಗಳಿಲ್ಲ, ಮನೆಗಳೂ ಹಾಗೆಯೇ ಇವೆ. ಒಂದೇ ಒಂದು ವ್ಯತ್ಯಾಸ ಅಂದ್ರೆ ಎಲ್ಲರ ಕೈಯಲ್ಲೂ ಮೊಬೈಲ್ ಫೋನ್ ಗಳಿವೆ. ಬಿಎಸ್ ಎನ್ ಲ್, ಏರ್ ಟೆಲ್ ಸಿಗ್ನಲ್ ಗಳೂ ಸಕತ್ತಾಗಿವೆ. ಯಾಕೆ ಹೀಗೆ ಅನ್ನಿಸ್ತು ಅಂದ್ರೆ ನಾನು ಹೈಸ್ಕೂಲ್, ಪಿಯೂಸಿ ಓದಿದ್ದು ನನ್ನ ಅಪ್ಪನ ಮನೆಯಲ್ಲಿದ್ದು. ಅದು ವಿಟ್ಲ ಪಕ್ಕದ ಪುಣಚಾ ಗ್ರಾಮದಲ್ಲಿದೆ. ತುಂಬಾ ಸಣ್ಣವನಿದ್ದಾಗ ಇಲ್ಲಿಗೆ ಹೋಗಿದ್ದು ಬಹಳ ಅಪರೂಪ. ನನಗೆ ನೆನಪಿರುವ ಹಾಗೆ ಪರಿಯಾಲ್ತಡ್ಕದಲ್ಲಿ ಶಂಕರ ಭಟ್ರ ಅಂಗಡಿ, ಕೊಂಕಣ್ತಿಯಮ್ಮನ ಹೋಟೇಲು, ಒಂದು ಟೈಲರ್ ಅಂಗಡಿ, ಶಾಲೆ, ಸೊಸೈಟಿ ಇಷ್ಟೇ ಇದ್ದದ್ದು. ಒಂದೆರೆಡು ಹಳೆಯ ಲ್ಯಾಂಬಿ ರಿಕ್ಷಾ ಬಿಟ್ರೆ ಮನೆಗೆ ತಲುಪಲಿಕ್ಕೆ ನಟರಾಜ ಸರ್ವಿಸೇ ಮಾಡ್ಬೇಕಿತ್ತು. ಮೈ ಚಾಚಿ ಹೆಬ್ಬಾವಿನಂತೆ ಮಲಗಿರುವ ಕಚ್ಚಾ ಮಣ್ಣಿನ ರಸ್ತೆ. ಮನೆ ತಲುಪುವ ಹೊತ್ತಿಗೆ ಮೊಣಕಾಲಿನ ತನಕ ಎಲ್ಲವೂ ಕೆಂಪೇ!!! ಅಷ್ಟೊಂದು ಧೂಳು. ಆದ್ರೆ ಪ್ರತಿ ಬಾರಿ ಪರಿಯಾಲ್ತಡ್ಕ ಬದಲಾಗಿತ್ತು. ಎಷ್ಟೊಂದು ಬಿಲ್ಡಿಂಗ್ ಗಳು, ಮಳಿಗೆಗಳು, ನಾಲ್ಕೈದು ಡಾಕ್ಟರ್ ಕ್ಲಿನಿಕುಗಳು, ಬಗೆ ಬಗೆಯ ರಿಕ್ಷಾಗಳು, ಏನಿಲ್ಲ ಅಂದ್ರೆ ಕನಿಷ್ಟ ಇಪ್ಪತ್ತೈದು ಬಾಡಿಗೆ ಜೀಪುಗಳು. ನೋಡು ನೋಡುತ್ತಿದ್ದಂತೆಯೇ ಹಳ್ಳಿ ಸಣ್ಣ ಪೇಟೆಯಾಗಿ ಬೆಳೆದು ನಿಂತಿದೆ.

ಆದ್ರೆ ಚೇವಾರು ಹಾಗಲ್ಲ. ಏನೇನೂ ಬದಲಾಗಿಲ್ಲ. ಒಂದೆರಡು ಬದಲಾವಣೆಗಳಿದ್ದರೂ ಇಷ್ಟು ವರ್ಷಕ್ಕೆ ಅದೇನೂ ದೊಡ್ಡದನಿಸಲಿಲ್ಲ. ಮುಖಗಳೂ ಅಷ್ಟೆ ಅದೇ ಕಿಟ್ಟು, ಮೂಸೆ, ಮಮ್ಮದೆ, ನಾರಾಯಣ, ಹಾಂ… ಇವರೆಲ್ಲರ ತಲೆಗೂದಲು ಕಾಲಚಕ್ರದ ಹೊಡೆತಕ್ಕೆ ಬೆಳ್ಳಗಾಗಿದೆ, ಚರ್ಮ ಸ್ವಲ್ಪ ಸುಕ್ಕಾಗಿದೆ. ಬಸ್ಸಿಂದ ಇಳಿದ ಕೂಡಲೇ ಕಾಣುವುದು ನಾನು ಓದಿದ ಶಾಲೆ. ಶಾರದಾ ಪ್ರಾಥಮಿಕ ಶಾಲೆ. ಒಂದು ವರ್ಷ ಓದಿದ್ದೆ, ಅಜ್ಜನ ರೇಶನ್ ಸ್ಟೋರಲ್ಲಿ ತಂಟೆ ಮಾಡ್ತಾ ಇದ್ದೆ ಅಂತ ಶಾಲೆಗೆ ಕಳಿಸಿದ್ರು. ಆಗ ನನಗೆ ಬರೇ ನಾಲ್ಕು ವರ್ಷ. ನನಗಿಂತ ಒಂದೆರಡು ವರ್ಡ ದೊಡ್ಡ ಹುಡುಗರೊಂದಿಗೆ ಒಂದನೇ ಕ್ಲಾಸ್ ಓದಿದ್ದೆ. ಈಗಲೂ ಶಾಲೆ ಇನ್ನೂ ಹಾಗೆ ಇದೆ ಅನ್ನಿಸ್ತು. ರೂಪ ಆಕಾರದಲ್ಲಿ ಯಾವುದೇ ಬದಲಾವಣೆ ಕಾಣಿಸಲಿಲ್ಲ. ಗೋಡೆಯ ಬಣ್ಣಗಳು ಮಾಸಿದ್ದವು. ಬಹುಶಃ ಟೀಚರ್, ಮಾಸ್ಟ್ರುಗಳೂ ಬದಲಾಗಿರುವುದಿಲ್ಲ. ಈಶ್ವರ ಮಾಸ್ಟ್ರು, ವೆಂಕಟ್ರಮಣ ಮಾಸ್ಟ್ರು, ಹೆಲೆನ್ ಟೀಚರ್, ಲಕ್ಷ್ಮಿ ಟೀಚರ್ ಇವರೇ ಇರ್ಬೇಕು. ಮಳೆಗಾಲದಲ್ಲಿ ಮೊಳಕೆಯೊಡುವ ಅಣಬೆಗಳಂತೆ ಅಕ್ಕ-ಪಕ್ಕದಲ್ಲಿ ಇಂಗ್ಲಿಷ್ ಮೀಡಿಯಂ ಶಾಲೆಗಳು ಶುರುವಾಗಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಅಂತ ಈಶ್ವರ ಮಾಸ್ಟ್ರು ಹೇಳ್ತಾ ಇದ್ರು ಅಂತ ಅಮ್ಮ ಹೇಳಿದ ನೆನಪು.

ಶಾಲೆ ದಾಟಿ ಮುಂದೆ ಹೋದ್ರೆ ಅಜ್ಜನ ಹೆಸರಿನ ಪಂಚಾಯ್ತಿ ರಸ್ತೆ ಕಾಣಿಸುತ್ತದೆ. ‘ಚೇವಾರು ಜನಾರ್ಧನ ಕಾಮತ್ ರಸ್ತೆ’. ಪಂಚಾಯ್ತಿ ಉಪಾಧ್ಯಕ್ಷರಾಗಿ, ಯಕ್ಷಗಾನ ಹಿಮ್ಮೇಳ ಕಲಾವಿದರಾಗಿ ಅಜ್ಜ ಒಳ್ಳೆಯ ಹೆಸರನ್ನು ಮಾಡಿದ್ರು. ಊರ ಜನ ಅವರನ್ನು ‘ಚಂಡೆ ಕಮ್ತಿಯೆರ್’ ಅಂತಲೇ ಕರಿತಾ ಇದ್ರು. ನನ್ನ ಪರಿಚಯ ಹೇಳಬೇಕಾದ್ರು ಅಜ್ಜನ ಹೆಸರಿನ ಸರ್ಟಿಪಿಕೇಟು ಬೇಕಿತ್ತು. ಈಗ ಬ್ಯಾಂಕ್, ಅಂಗಡಿ, ಮನೆ ಸಾಮಾನು, ದೇವಸ್ಥಾನ ಅಂತ ಅಮ್ಮನದೇ ಕಾರುಬಾರು. ಸಹಜವಾಗಿ ಅಮ್ಮನ ಪರಿಚಯ ಊರವರಿಗೆಲ್ಲಾ ಇದೆ. ಈಗ ಸರಳಕ್ಕನ ಮಗ ಅಂದ್ರೆ ಎಲ್ಲರಿಗೂ ತಿಳಿಯುತ್ತದೆ. ಈ ರಸ್ತೆ ಎಷ್ಟು ದೂರ ಹೋಗತ್ತೆ ಅಂತ ನನಗೆ ಗೊತ್ತಿಲ್ಲ. ಹತ್ತು ಹೆಜ್ಜೆ ಇಡುವಷ್ಟರಲ್ಲಿ ಮನೆಯ ಕಡೆಗೆ ಹೋಗಲು ನಾನು ಕಾಲುದಾರಿ ಬಳಸಬೇಕು. ಕಾಲುದಾರಿಯಿಂದ ಸ್ವಲ್ಪ ತಲೆ ಎತ್ತಿ ನೋಡಿದರೆ ಗೋಪಾದನ ಹಳೆ ಮನೆ ಕಾಣಿಸುತ್ತದೆ. ಅದರ ಪಕ್ಕದಲ್ಲೇ ಅಜ್ಜನ ಸ್ಟೋರ್, ಮನೆ ಇದೆ. ಇದನ್ನು ಅಜ್ಜ ತುಂಬಾ ಹಿಂದೆಯೇ ಮಾರಿದ್ರು. ಗೋಪಾದ ಈಗ ಹೊಸ ಮನೆ ಕಟ್ಟಿಸಿದ್ದಾರೆ. ಸ್ಟೋರಿನ ಪಕ್ಕದಲ್ಲೇ ಗೋಪಾದನ ಗದ್ದೆಗಳಿವೆ. 70X200 ಅಡಿಯ ಗದ್ದೆಯೇ ನಮ್ಮ ಈಡನ್ ಗಾರ್ಡನ್. ಜೆಪಿ ಮಾಮ, ಮಾನ, ಅಭಿಯ ಜೊತೆ ಪ್ರತಿ ಸಂಜೆ ಕ್ರಿಕೆಟ್ ಆಡ್ತಾ ಇದ್ವಿ. ಗದ್ದೆ ನಾಟಿಯಿಂದಾಗಿ ಗದ್ದೆ ತುಂಬಾ ಪದಚಿಹ್ನೆಗಳಿರುತ್ತಿದ್ದವು. ಇದರಿಂದಾಗಿ ಫ್ಯಾಷನ್ ಟಿವಿಯಲ್ಲಿ ಬರುವ ರೂಪದರ್ಶಿಯಂತೆ ಥಳುಕುತ್ತಾ, ಬಳುಕುತ್ತಾ ಬರುವ ಚೆಂಡನ್ನು ಹೊಡೆಯುವುದೇ ಒಂದು ದೊಡ್ಡ ಕುಷಲತೆ!!! ಪಿಚ್ ಸಮತಟ್ಟಾಗಿ ಒಂದು ಹಂತಕ್ಕೆ ಬರುತ್ತಿರುವಂತೆ ನಮ್ಮ ಬೇಸಿಗೆ ರಜೆಗಳು ಮುಗಿಯುತ್ತಿದ್ದವು. ಅದೇನೇ ಇರಲಿ ಕ್ರಿಕೆಟ್ ಆಡುವ ಸಲುವಾಗಿ ಪ್ರತಿ ಸಂಜೆಗೆ ಕಾಯುತ್ತಿದ್ದುದು ಮಾತ್ರ ಸುಳ್ಳಲ್ಲ.

ಕಾಲುದಾರಿಯಲ್ಲಿ ಒಂದೆರಡು ಮನೆಗಳನ್ನು ದಾಟಿ ಗುಡ್ಡ ಇಳಿಯುತ್ತಿದ್ದಂತೆ ಸ್ವಲ್ಪ ದೂರ ತಗ್ಗಲ್ಲಿ ಮನೆಯ ಸೂರು ಕಾಣಿಸುತ್ತದೆ. ಬೇಸಿಗೆಯ ಹಗಲುಗಳನ್ನು ಅಜ್ಜ, ಅಜ್ಜಿಯ ಜೊತೆ ಈ ಗೇರು ಹಣ್ಣಿನ ಗುಡ್ಡದಲ್ಲಿ ಕಳೆಯುತ್ತಿದ್ದೆವು. ಮರದಿಂದ ಗೇರು ಹಣ್ಣು ಕೀಳುವ ಕೆಲಸ ಅಜ್ಜಂದು. ಹೆಕ್ಕುವ ಕೆಲಸ ನಮ್ಮದು. ಗೇರು ಬೀಜ ಹೆಕ್ಕುವುದು ಅಂಥ ಸುಲಭದ ಕೆಲಸವೇನಲ್ಲ!!! ಅದೊಂಥರಾ ಯುದ್ಧದ ಹಾಗೆ. ಕಡಲತೀರದ ಬೇಸಿಗೆಯ ಬಗ್ಗೆ ಬೇರೆ ಹೇಳಬೇಕಾಗಿಲ್ಲ. ಸೂರ್ಯನ ಪ್ರಖರ ಬಿಸಿಲನ್ನು ತಡೆಯಲಿಕ್ಕೆ ಟೋಪಿ ಬೇಕು. ಗೇರು ಹಣ್ಣಿನ ರಸ ಬಟ್ಟೆಯ ಮೇಲೆ ಬಿದ್ರೆ ಅದರ ಕಲೆ ಎಂಥ ಸೋಪಿಗೂ, ಬ್ಲೀಚಿಗೂ ಬಗ್ಗುವುದಿಲ್ಲ. ಅದಕ್ಕಾಗಿಯೇ ಗೇರು ಹಣ್ಣು ಹೆಕ್ಕಲಿಕ್ಕಂತ ಬೇರೆ ಅಂಗಿ, ಚಡ್ಡಿ. ಸೂರ್ಯ ನೆತ್ತಿಗೇರುವ ಮುನ್ನವೇ ಅರ್ಧದಷ್ಟು ಗುಡ್ಡ ಕ್ರಮಿಸಬೇಕು. ಅಜ್ಜ ಕಿತ್ತ ಗೇರುಹಣ್ಣು ಪೊದೆಯಲ್ಲಿ ಬಿದ್ದರೆ ಅದನ್ನು ಹೆಕ್ಕುವುದು ಇನ್ನೂ ದೊಡ್ಡ ಸಾಹಸ. ಪೊದೆಯಲ್ಲಿರುವ ಮುಳ್ಳುಗಳು ತರಚಿ ಕೈಯಲ್ಲಿ ಒಂದೆರಡು ಗೀರುಗಳಾಗದಿದ್ದರೆ ಸಾಹಸ ವ್ಯರ್ಥ!!! ಇನ್ನು ಬಿಸಿಲಿನ ಝಳಕ್ಕೆ ಗೇರು ಹಣ್ಣು ತಿನ್ನಲು ಬರುವ ದನ ಕರುಗಳ ಜೊತೆ ಬೇರೆ ಪೈಪೋಟಿ ಮಾಡಬೇಕಿತ್ತು. ಹಣ್ಣು ನೆಲಕ್ಕೆ ಬೀಳುವಷ್ಟರಲ್ಲಿ ಗಬಕ್ಕಂತ ಬಾಯಿ ಹಾಕಿ ಬೀಜ ಸಮೇತ ತಿನ್ನಲು ಶುರು ಮಾಡುತ್ತಿದ್ದವು. ದನಗಳೂ ಬಹಳ ಬುದ್ದಿವಂತಿಕೆಯಿಂದ ಬರೇ ಹಣ್ಣನ್ನು ಮಾತ್ರ ತಿಂದು ಬೀಜವನ್ನು ಉಗುಳುತ್ತವೆ. ಹೀಗಾದಗಲೆಲ್ಲಾ ದನಕರುಗಳು ಬೀಜವನ್ನು ಯಾವಾಗ ಉಗುಳುತ್ತವೆ ಅಂತ ಕಾಯುತ್ತಾ ಕೂರುತ್ತಿದ್ದೆವು. ಕೆಂಪು, ಹಳದಿ ಬಣ್ಣದ ಗೇರು ಹಣ್ಣಿನ ರುಚಿ ಬೇರೆ ಹೇಳಬೇಕಾಗಿಲ್ಲ. ಬೀಜ ಹೆಕ್ಕುತ್ತಾ ಐದು-ಹತ್ತು ಹಣ್ಣುಗಳನ್ನು ಗುಳುಂ ಮಾಡಿದ್ದುಂಟು. ಸ್ವಲ್ಪ ಒಗರು, ಸ್ವಲ್ಪ ಸಿಹಿ. ಅಬ್ಬಾ ಗೇರುಹಣ್ಣು ತಿನ್ನದೇ ವರ್ಷಗಳೇ ಉರುಳಿವೆ. ಕಡಿಮೆ ಅಂದ್ರೆ ಮೂರ್ನಾಲ್ಕು ಗಂಟೆಗಳಾದ್ರು ಬೇಕು ಇಡೀ ಗುಡ್ಡ ತಿರುಗಿ ಗೇರು ಬೀಜ ಹೆಕ್ಕಲಿಕ್ಕೆ. ಬೇಸಿಗೆಯ ಕೊನೆಯಲ್ಲಿ ಒಣಗಿನ ಗೇರು ಬೀಜಗಳನ್ನೆಲ್ಲಾ ಮಾರಿ ಅಜ್ಜನಿಂದ ನೂರೈವತ್ತೋ- ಇನ್ನೂರೋ ರುಪಾಯಿಗಳನ್ನು ಕಿಸೆಗಿಳಿಸುತ್ತಿದ್ದಾಗ ಆಗುತ್ತಿದ್ದ ಖುಷಿ ಅಷ್ಟಿಷ್ಟಲ್ಲ. ಕಲ್ಲು ಮುಳ್ಳಿನಿಂದಾದ ಗಾಯ, ದನಕರುಗಳ ಜೊತೆ ಕುಸ್ತಿ, ಬಿಸಿಲ ಝಳ ಎಲ್ಲಾ ನೂರೈವತ್ತು ರುಪಾಯಿಯ ಮುಂದೆ ಮಂಗಮಾಯ!!! ರಜೆ ಮುಗಿಸಿ ಮನೆಗೆ ಮರಳುವಾಗ ಅಜ್ಜಿಯ ಕೈಯಿಂದ ಮತ್ತೆ ಇಪ್ಪತ್ತು ರುಪಾಯಿ ಜೇಬಿಗಿಳಿಸಿದ್ದುದಲ್ಲದೆ, ಸುಟ್ಟ ಗೇರುಬೀಜದ ಪೊಟ್ಟಣ ಕೂಡಾ.

‘ಕಾಫಿ’ ಅಂತ ನನ್ನವಳು ಬಂದು ಹೆಗಲು ಮುಟ್ಟಿದಾಗಲೇ ನನ್ನ ಯೋಚನಾ ಲಹರಿಗೆ ಬ್ರೇಕ್ ಬಿದ್ದದ್ದು. ದೃಷ್ಟಿ ಇನ್ನೂ ಮನೆ ಎದುರಿನ ಗುಡ್ಡದ ಮೇಲೆ ನೆಟ್ಟಿತ್ತು. ಮನಸ್ಸಲ್ಲೇ ನೆನಪುಗಳನ್ನು ಮೆಲುಕು ಹಾಕ್ತಾ ಕಾಫಿ ಹೀರಲಿಕ್ಕೆ ಶುರುಮಾಡಿದೆ.

3 comments:

Anonymous said...

Geru hannina jothe mavina hannu hekkalu sudu bisilinalli maneya hindina guddakke odi hogtha eddidu innu kannige kattida hage ede..
Vaishali (Mank..)

Sun Light said...

En dude, Ravibelagare Stylali Baredeya, thumba Chenagede HaLeNenapu :)

PraDeepa said...

Hi Dear, Bhale, thumba chennagi Ballyada thuntatanada sihi nenapugalannu Mastagi varnane madi barediddiya.....! Sakatagide. Edu ninu odiruva Ravi Belegare pusthakagal 'Mahime' anisutta ede. Keep it up. God Bless U.