Thursday, October 29, 2009

ಕಲಾವಿದನ ಕುಂಚದಲ್ಲಿ ರಾಮಾಯಣ: ಅರಣ್ಯಕಾಂಡ

ಚಿತ್ರಕೂಟವನ್ನು ಬಿಟ್ಟು ಬಂದ ರಾಮಾದಿಗಳು ದಂಡಕಾರಣ್ಯವನ್ನು ಪ್ರವೇಶಿಸುತ್ತಾರೆ. ಮಹಾತಪಸ್ವಿಗಳ, ಸಾಧು-ಸಂತರ ಬೀಡಾಗಿತ್ತು ದಂಡಕಾರಣ್ಯ. ದಟ್ಟ ಕಾನನದ ಗರ್ಭವನ್ನು ಪ್ರವೇಶಿಸುತ್ತಿದ್ದಂತೆ ಮಹಾಪರ್ವತಕಾಯನಾದ ದೈತ್ಯ ವಿರಾಧನು ಎದುರಾಗುತ್ತಾನೆ. ಸುಂದರವಾದ ಸೀತೆಯನ್ನು ನೋಡಿ ಆಕೆಯೆಡೆಗೆ ಮುನ್ನುಗ್ಗುತ್ತಾನೆ. ಕೂಡಲೇ ರಾಮ – ಲಕ್ಷ್ಮಣರು ಪ್ರತ್ಯಾಕ್ರಮ ಮಾಡಿ ತೀಕ್ಷ್ಣವಾದ ಬಾಣಗಳಿಂದ ವಿರಾಧನನ್ನು ಜರ್ಜರಿತಗೊಳಿಸುತ್ತಾರೆ. ಶ್ರೀರಾಮನು ವಿರಾಧನನ್ನು ವಧೆಗೈಯ್ಯುವ ಮೂಲಕ ಆತನನ್ನು ಶಾಪಮುಕ್ತಗೊಳಿಸುತ್ತಾನೆ (ಕುಬೇರನ ಶಾಪದಿಂದಾಗಿ ತಂಬುರನೆನ್ನುವ ಗಂಧರ್ವನು ದೈತ್ಯ ವಿರಾಧನಾಗಿ ದಂಡಕಾರಣ್ಯದಲ್ಲಿರುತ್ತಾನೆ).

ಬಳಿಕ ಶ್ರೀರಾಮ, ಲಕ್ಷ್ಮಣ, ಸೀತೆಯರು ಶರಭಂಗ, ಸುತೀಕ್ಷ್ಣ ಮೊದಲಾದ ತಪಸ್ವಿಗಳ ಆಶ್ರಮಗಳಿಗೆ ಭೇಟಿ ಮಾಡಿ ಆಶೀರ್ವಾದವನ್ನು ಪಡೆಯುತ್ತಾರೆ. ದಂಡಕ ಕಾಡಿನಲ್ಲಿನ ತಪಸ್ವಿಗಳ ಕೋರಿಕೆಯಂತೆ ಸಾಧುಜನರ ಸಾಧನೆಗೆ ಅಡ್ಡಿ ಮಾಡುವ ಅಸುರರನ್ನು ಸಂಹರಿಸುವುದಾಗಿ ಶ್ರೀರಾಮನು ಮಾತು ಕೊಡುತ್ತಾನೆ. ಮಹಾಮುನಿ ಸುತೀಕ್ಷ್ಣರ ಸಲಹೆಯಂತೆ ಜನಸ್ಥಾನದಿಂದ ಮಹರ್ಷಿ ಅಗಸ್ತ್ಯರ ಆಶ್ರಮದ ಕಡೆಗೆ ಸೀತಾ ಸಮೇತರಾಗಿ ರಾಮ, ಲಕ್ಷ್ಮಣರು ಪಯಣಿಸುತ್ತಾರೆ. ಅಗಸ್ತ್ಯ ಆಥಿತ್ಯವನ್ನು ಸ್ವೀಕರಿಸಿದ ರಾಮಾದಿಗಳು ವಾಸಕ್ಕೆ ಯೋಗ್ಯವಾದ ಸ್ಥಳವೊಂದನ್ನು ಸೂಚಿಸುವಂತೆ ಕೇಳುತ್ತಾರೆ. ಗೋದಾವರಿಯ ತಟದಲ್ಲಿರುವ ಪಂಚವಟಿಯನ್ನು ಸೂಚಿಸಿ ರಾಮ – ಲಕ್ಷ್ಮಣರಿಗೆ ಹಲವು ದಿವ್ಯಾಸ್ತ್ರಗಳನ್ನೂ ಮಹಾಮುನಿ ಅಗಸ್ತ್ಯರು ಕೊಡುತ್ತಾರೆ.

ಪಂಚವಟಿಯೆಡೆಗೆ ತೆರಳುವಾಗ ದಾರಿಯಲ್ಲಿ ಗೃಥರಾಜ ಜಟಾಯುವಿನ ಪರಿಚಯವಾಗುತ್ತದೆ. ಪಂಚವಟಿಯಲ್ಲಿ ಲಕ್ಷ್ಮಣನು ಸುಂದರವಾದ ಪರ್ಣಕುಟಿಯನ್ನು ತಯಾರಿಸುತ್ತಾನೆ. ರಾಮ – ಲಕ್ಷ್ಮಣ ಹಾಗೂ ಸೀತೆ ಸಂತೋಷದಿಂದ ಪಂಚವಟಿಯ ಸುಂದರ ಕಾನನದಲ್ಲಿ ತಮ್ಮ ವನವಾಸವನ್ನು ಕಳೆಯುತ್ತಾರೆ.

ಹೀಗಿರಬೇಕಾದರೆ ಒಂದು ದಿನ ಶೂರ್ಪನಖಿ ಎಂಬ ರಾಕ್ಷಸಿಯು ಪಂಚವಟಿಯಲ್ಲಿನ ಪರ್ಣಕುಟಿಯೆಡೆಗೆ ಬರುತ್ತಾಳೆ. ಸ್ಪುರದ್ರೂಪಿಯಾದ ರಾಮನನ್ನು ನೋಡಿ, ಮೋಹಿತಳಾಗಿ ಆತನನ್ನು ವರಿಸುವ ಉದ್ದೇಶದಿಂದ ಸುಂದರ ಕನ್ಯೆಯ ರೂಪವನ್ನು ಧರಿಸುತ್ತಾಳೆ. ತನ್ನನ್ನು ವಿವಾಹವಾಗುವಂತೆ ಶೂರ್ಪನಖಿಯು ರಾಮನನ್ನು ಕೇಳುತ್ತಾಳೆ. ತಾನು ವಿವಾಹಿತನೆಂದೂ, ಏಕಪತ್ನಿವ್ರತಸ್ತನೆಂದೂ ಹೇಳಿದ ರಾಮನು ತನ್ನಷ್ಟೇ ಸುಂದರನೂ, ಪರಾಕ್ರಮಿಯೂ ಆದ ಲಕ್ಷ್ಮಣನನ್ನು ಕೇಳುವಂತೆ ಹೇಳುತ್ತಾನೆ. ಲಕ್ಷ್ಮಣನಿಂದಲೂ ತಿರಸ್ಕೃತಳಾದಾಗ ಆಕೆ ತನ್ನ ನಿಜರೂಪಕ್ಕೆ ಮರಳುತ್ತಾಳೆ. ವಿಕಾರವಾಗಿ ಅರಚುತ್ತಾ ಇದಕ್ಕೆಲ್ಲಾ ಸೀತೆಯೇ ಕಾರಣಳೆಂದು ತಿಳಿದು ಆಕೆಯೆಡೆಗೆ ಮುನ್ನುಗ್ಗುತ್ತಾಳೆ. ರಾಮನ ಸಂಜ್ಞೆಯನ್ನರಿತ ಲಕ್ಷ್ಮಣನು ಹರಿತವಾದ ಖಡ್ಗದಿಂದ ಶೂರ್ಪನಖಳ ಮೂಗನ್ನೂ, ಕಿವಿಗಳನ್ನೂ ಕತ್ತರಿಸುತ್ತಾನೆ. ಅಪಮಾನಿತಳಾದ ಶೂರ್ಪನಖಳು ತನ್ನ ಅಣ್ಣನಾದ ಖರನ ಬಳಿ ಅಳಲನ್ನು ತೋಡಿಕೊಳ್ಳುತ್ತಾಳೆ. ಕೋಪಗೊಂಡು ಖರನು ತನ್ನ ಬಲಿಷ್ಟ ಸೈನಿಕರನ್ನು ಪಂಚವಟಿಗೆ ಕಳಿಹಿಸುತ್ತಾನೆ. ಆದರೆ ಶ್ರೀರಾಮನ ಪರಾಕ್ರಮದೆದುರು ರಾಕ್ಷಸರೆಲ್ಲಾ ಧೂಳಿಪಟವಾಗುತ್ತಾರೆ. ಇದರಿಂದ ಇನ್ನೂ ವ್ಯಗ್ರನಾದ ಖರನು ತನ್ನ ಅನುಜರಾದ ತ್ರಿಶಿರ ಮತ್ತು ದೂಷಣ ಹಾಗೂ ಹದಿಮೂರು ಸಾವಿರ ಸೈನಿಕರೊಂದಿಗೆ ಪಂಚವಟಿಗೆ ಬರುತ್ತಾರೆ. ಆದರೆ ಶ್ರೀರಾಮನೊಬ್ಬನೇ ಎಲ್ಲಾ ದೈತ್ಯರನ್ನು ಯಮಸದನಕ್ಕಟ್ಟುತ್ತಾನೆ.

ಲಂಕೆಯ ಅಧಿಪತಿ ರಾವಣ ಶೂರ್ಪನಖಳ ಅಣ್ಣ. ತನ್ನ ಅವಮಾನದ ಗಾಯವನ್ನು ಹೊತ್ತುಕೊಂಡು ಶೂರ್ಪನಖಿಯು ಲಂಕೆಗೆ ಬರುತ್ತಾಳೆ. ಸೀತೆಯ ಸೌಂದರ್ಯವನ್ನು ರಾವಣನಿಗೆ ಬಣ್ಣಿಸಿ ಆಕೆಯನ್ನು ಅಪಹರಿಸುವಂತೆ ಪ್ರೇರೇಪಿಸುತ್ತಾಳೆ. ಅಪಹರಣದ ಯೋಜನೆಯೊಂದಿಗೆ ರಾವಣನು ಮಾರೀಚನ ಬಳಿಗೆ ಬರುತ್ತಾನೆ. ರಾಮನ ಪರಾಕ್ರಮ, ಶೌರ್ಯದ ಪರಿಚಯವಿದ್ದ ಮಾರೀಚನು ಸೀತಾಪಹರಣದ ಯೋಜನೆಯನ್ನು ಬಿಡುವಂತೆ ಪರಿಪರಿಯಾಗಿ ರಾವಣನಿಗೆ ಬುದ್ಧಿವಾದವನ್ನು ಹೇಳುತ್ತಾನೆ. ಆದರೆ ಯಾವುದೇ ರೀತಿಯ ಬುದ್ಧಿವಾದವನ್ನು ಕೇಳಲು ರಾವಣ ಸಿದ್ಧನಿರಲಿಲ್ಲ. ಕೊನೆಗೆ ರಾವಣನ ಕೈಯಿಂದ ಸಾಯುವುದಕ್ಕಿಂತ ರಾಮನ ಬಾಣದಿಂದ ಮರಣಹೊಂದುವುದೇ ಲೇಸೆಂದು ಭಾವಿಸಿದ ಮಾರೀಚನು ರಾವಣನಿಗೆ ಸಹಾಯ ಮಾಡಲು ಒಪ್ಪತ್ತಾನೆ.

ಪರ್ಣಕುಟಿಯ ಬಳಿ ಕಾಣಿಸಿದ ಸ್ವರ್ಣ ಜಿಂಕೆಯನ್ನು ಹಿಡಿದು ತರುವಂತೆ ಸೀತೆ ರಾಮನನ್ನು ಕೇಳುತ್ತಾಳೆ. ಇದ್ಯಾವುದೋ ಕಪಟವಿರಬಹುದೆಂದು ರಾಮನಿಗೆ ಅನಿಸಿದರೂ ಸೀತೆಯ ಮನ ನೋಯಿಸಲು ಇಚ್ಚಿಸದೆ ಜಿಂಕೆಯನ್ನು ಹಿಡಿಯಲು ಅನುವಾಗುತ್ತಾನೆ. ಯಾವುದೇ ಕಾರಣಕ್ಕೂ ಸೀತೆಯನ್ನು ಬಿಟ್ಟು ಬರಬೇಡ ಎಂದು ಲಕ್ಷ್ಮಣನಿಗೆ ಹೇಳಿ ಶ್ರೀರಾಮನು ಜಿಂಕೆಯ ಬೆನ್ನಟ್ಟುತ್ತಾನೆ. ಇನ್ನೇನು ಕೈಗೆ ಸಿಗಬೇಕೆನ್ನುವಷ್ಟರಲ್ಲಿ ಜಿಂಕೆ ಛಂಗನೆ ಜಿಗಿದು ದೂರ ಹೋಗುತ್ತಿತ್ತು. ಕಾನನದಲ್ಲಿ ಬಹಳಷ್ಟು ದೂರ ಕ್ರಮಿಸಿದ ಬಳಿಕವೂ ಜಿಂಕೆ ಕೈಗೆ ಸಿಗದೆ ಶ್ರೀರಾಮನು ಅದರತ್ತ ಬಾಣವನ್ನು ಹೂಡುತ್ತಾನೆ. ಕೂಡಲೇ ಮಾಯಾ ಜಿಂಕೆಯ ರೂಪದಲ್ಲಿದ್ದ ಮಾರೀಚನು ಶ್ರೀರಾಮನ ದನಿಯಲ್ಲಿ ‘ಹಾ ಸೀತೆ… ಹಾ ಲಕ್ಷ್ಮಣ…’ ಎಂದು ಕೂಗಿ ಹತನಾಗುತ್ತಾನೆ. ಇದ್ಯಾವುದೋ ರಾಕ್ಷಸರ ಕಪಟವೆಂದು ಭಾವಿಸಿ ಪರ್ಣಕುಟಿಯೆಡೆಗೆ ಶೀಘ್ರವಾಗಿ ಮರಳುವ ಯತ್ನವನ್ನು ಶ್ರೀರಾಮನು ಮಾಡುತ್ತಾನೆ. ರಾಮನ ಆರ್ತನಾದ ಕೇಳಿ ವಿಚಲಿತಳಾದ ಸೀತೆ ರಾಮನ ಸಹಾಯಕ್ಕೆ ಹೋಗುವಂತೆ ಲಕ್ಷ್ಮಣನನ್ನು ಕೇಳುತ್ತಾಳೆ. ಲಕ್ಷ್ಮಣನ ಯಾವುದೇ ಸಾಂತ್ವನದ ಮಾತುಗಳನ್ನು ಕೇಳಲು ಸೀತೆ ಸಿದ್ಧಳಾಗಿರಲಿಲ್ಲ. ಉಪಾಯವಿಲ್ಲದೆ ಕುಟಿಯ ಸುತ್ತ ಲಕ್ಷ್ಮಣ ರೇಖೆಯನ್ನೆಳೆದು ಅದನ್ನು ದಾಟಬಾರದೆಂದು ವಿನಂತಿಸಿ ರಾಮನನ್ನು ಹುಡುಕಲು ಲಕ್ಷ್ಮಣನು ಹೊರಡುತ್ತಾನೆ.

ಇದೇ ಸುಸಂದರ್ಭವೆಂದು ಭಾವಿಸಿದ ಲಂಕೇಶನು ಸನ್ಯಾಸಿಯ ವೇಷ ಧರಿಸಿ ಪರ್ಣಕುಟಿಯ ಬಳಿಗೆ ಬಂದು ಭಿಕ್ಷೆಯನ್ನು ಕೇಳುತ್ತಾನೆ. ಲಕ್ಷ್ಮಣರೇಖೆಯನ್ನು ದಾಟಲಾಗದೆ ಅದರಿಂದ ಹೊರಬಂದು ಭಿಕ್ಷೆ ಕೊಡುವಂತೆ ಸೀತೆಯನ್ನು ಆಗ್ರಹಿಸುತ್ತಾನೆ. ಸನ್ಯಾಸಿಯ ಶಾಪಕ್ಕೆ ಹೆದರಿದ ಸೀತೆ, ಲಕ್ಷ್ಮಣರೇಖೆಯನ್ನು ದಾಟಿ ಬಂದ ಕೂಡಲೇ ತನ್ನ ನಿಜ ರೂಪವನ್ನು ಪ್ರಕಟಿಸಿದ ರಾವಣನು ಆಕೆಯನ್ನು ಅಪಹರಿಸಿ ತನ್ನ ಪುಷ್ಪಕವಿಮಾನದಲ್ಲಿ ಕೊಂಡೊಯ್ಯುತ್ತಾನೆ.

ಸೀತೆಯ ದುಃಖಭರಿತ ಕೂಗನ್ನು ಕೇಳಿದ ಗೃಥರಾಜ ಜಟಾಯುವು ಅವಳ ಸಹಾಯಕ್ಕೆ ಬರುತ್ತಾನೆ. ವಯಸ್ಸಾಗಿದ್ದರೂ ಭಾರೀ ವೀರಾವೇಶದಿಂದ ಜಟಾಯುವು ರಾವಣನೊಂದಿಗೆ ಹೋರಾಡುತ್ತಾನೆ. ಆದರೆ ರಾವಣನ ಚಂದ್ರಹಾಸ ಖಡ್ಗವು ಜಟಾಯುವಿನ ರೆಕ್ಕೆಯೊಂದನ್ನು ಕತ್ತರಿಸುವುದರೊಂದಿಗೆ ಗೃಥರಾಜನು ವಿವಷವಾಗಿ ಭೂಮಿಗೆ ಬೀಳುತ್ತಾನೆ.

ಋಷ್ಯಮೂಕ ಪರ್ವತದ ಮೇಲೆ ಪುಷ್ಪಕ ವಿಮಾನ ಸಾಗುತ್ತಿದ್ದಂತೆ ಸೀತೆ ತನ್ನೆಲ್ಲ ಆಭರಣಗಳನ್ನು ತೆಗೆದು ಸೀರೆಯ ಅಂಚೊಂದರಲ್ಲಿ ಇಟ್ಟು ಪರ್ವತ ಶಿಖರದ ಮೇಲೆ ಕುಳಿತ್ತಿದ್ದ ವಾನರರ ಕಡೆಗೆ ಎಸೆಯುತ್ತಾಳೆ. ಇತ್ತ ತನ್ನನ್ನು ಹುಡುಕಿಕೊಂಡು ಬಂದ ಲಕ್ಷ್ಮಣನನ್ನು ಕಂಡು ರಾಮನು ಬೆರಗಾಗುತ್ತಾನೆ. ಒಬ್ಬಂಟಿಯಾದ ಸೀತೆಯ ಕುರಿತು ಯೋಚಿಸಿ ಚಿಂತಿತನಾಗುತ್ತಾನೆ. ಇಬ್ಬರೂ ಪರ್ಣಕುಟಿಯೆಡೆಗೆ ದಾಪುಗಾಲು ಹಾಕುತ್ತಾರೆ. ಪಂಚವಟಿಯಲ್ಲಿ ಸೀತೆ ಕಾಣದಿರಲು ಶ್ರೀರಾಮನು ಅತಿ ದುಃಖಿತನಾಗುತ್ತಾನೆ. ತರು-ಲತೆಗಳಲ್ಲಿ, ಗಿಡ-ಮರಗಳಲ್ಲಿ, ಹಕ್ಕಿ-ಪಕ್ಷಿಗಳಲ್ಲಿ ನನ್ನ ಸೀತೆಯನ್ನು ನೋಡಿದಿರಾ ಅಂತ ಕೇಳುತ್ತಾನೆ. ಸೀತೆಯನ್ನು ಹುಡುಕುತ್ತಾ ಅರಣ್ಯವೆಲ್ಲಾ ತಿರುಗಾಡುತ್ತಾರೆ. ಸೀತೆಯು ಕಾಣದಿರಲು ರಾಮನ ಶೋಕ ಮುಗಿಲು ಮುಟ್ಟಿತು. ರೆಕ್ಕೆ ಕತ್ತರಿಸಿಕೊಂಡು ರಕ್ತಸಿಕ್ತವಾಗಿ ಬಿದ್ದ ಜಟಾಯುವು ಕಾಣಸಿಗುತ್ತಾನೆ. ಸೀತೆಯನ್ನು ಲಂಕೇಶ ರಾವಣನು ಅಪಹರಿಸಿರುವನೆಂದೂ, ವಿಮಾನದಲ್ಲಿ ದಕ್ಷಿಣದೆಡೆಗೆ ಹೋಗಿರುವನೆಂದೂ ಹೇಳಿ ಜಟಾಯುವು ಅಸುನೀಗುತ್ತಾನೆ. ಜಟಾಯುವಿನ ಅಂತ್ಯಸಂಸ್ಕಾರ ಮಾಡಿ ಸೀತೆಯನ್ನು ಹುಡುಕುತ್ತಾ ರಾಮನು ಲಕ್ಷ್ಮಣನೊಂದಿಗೆ ದಕ್ಷಿಣದೆಡೆಗೆ ಪಯಣಿಸುತ್ತಾನೆ.

ಗೊಂಡಾರಣ್ಯದಲ್ಲಿ ಸೀತೆಯನ್ನು ಹುಡುಕುತ್ತಿರಲು ಕಬಂದನೆಂಬ ದೈತ್ಯನ ಕೈಗಳು ರಾಮ ಲಕ್ಷ್ಮಣರನ್ನು ಬಂಧಿಸುತ್ತವೆ. ರಾಮ ಲಕ್ಷ್ಮಣರು ತಮ್ಮ ತೀಕ್ಷ್ಣವಾದ ಬಾಣಗಳಿಂದ ಕಬಂದನ ಕೈಗಳನ್ನು ಕತ್ತರಿಸುತ್ತಾರೆ. ಶ್ರೀರಾಮನು ಕಬಂದನ ಕೈಗಳನ್ನು ಕತ್ತರಿಸುವುದರೊಂದಿಗೆ ಆತನನ್ನು ಶಾಪ ಮುಕ್ತಗೊಳಿಸುತ್ತಾನೆ. ನಿಜರೂಪಕ್ಕೆ ಮರಳಿದ ಕಬಂದನು, ವಾನರ ವೀರ ಸುಗ್ರೀವನೊಂದಿಗೆ ಸಖ್ಯ ಬೆಳೆಸುವಂತೆ ಶ್ರೀರಾಮನಿಗೆ ಸಲಹೆ ನೀಡಿ ಋಷ್ಯಮೂಕ ಪರ್ವತದೆಡೆಗೆ ಸಾಗುವ ದಾರಿಯನ್ನು ತಿಳಿಸುತ್ತಾನೆ. ಋಷ್ಯಮೂಕದೆಡೆಗೆ ತೆರಳುವಾಗ ದಾರಿಯಲ್ಲಿ ಮತಂಗ ಮಹಾಮುನಿಯ ಆಶ್ರಮ ಸಿಗುತ್ತದೆ. ಮತಂಗ ಮುನಿಗಳ ಶಿಷ್ಯೆಯಾದ ಶಬರಿಯು ರಾಮನ ದಾರಿ ಕಾಯುತ್ತಿದ್ದಳು. ಶ್ರೀರಾಮನ ದರ್ಶನದಿಂದ ಶಬರಿಗಾದ ಆನಂದ ಅಷ್ಟಿಷ್ಟಲ್ಲ. ಶ್ರೀರಾಮನ ಬರವಿಗೆಂದೇ ಶಬರಿಯು ಕಾಯುತ್ತಿದ್ದಳು. ಶಬರಿಯ ಆಥಿತ್ಯವನ್ನು ಶ್ರೀರಾಮನು ಸಂತೋಷದಿಂದ ಸ್ವೀಕರಿಸುತ್ತಾನೆ. ಶ್ರೀರಾಮನ ದರ್ಶನದಿಂದ ಪಾವನಳಾದ ಶಬರಿಯು ಸ್ವರ್ಗಲೋಕಕ್ಕೆ ತೆರಳುತ್ತಾಳೆ. ಅಲ್ಲಿಂದ ಕಬಂದನ ಸಲಹೆಯಂತೆ ಪಂಪಾನದಿಯ ತಟಕ್ಕೆ ಬರುತ್ತಾರೆ.

ಚಿತ್ರಕೃಪೆ: www.masters-gallery.com

Friday, October 09, 2009

ಕಲಾವಿದನ ಕುಂಚದಲ್ಲಿ ರಾಮಾಯಣ: ಅಯೋಧ್ಯಾಕಾಂಡ

ರಾಮ – ಸೀತೆಯ ವಿವಾಹವಾಗಿ ಕೆಲವು ವರ್ಷಗಳೇ ಕಳೆದವು. ಅತ್ಯಂತ ಅಪರೂಪವೂ, ಅನುರೂಪವೂ ಆದ ಜೋಡಿ ಅವರದ್ದು. ರಾಮ–ಸೀತೆಯನ್ನು ಕಂಡಾಗ ಅಯೋಧ್ಯೆಯ ಜನರ ಪಾಲಿಗೆ ಸಾಕ್ಷಾತ್ ಲಕ್ಷ್ಮಿ–ನಾರಾಯಣರನ್ನು ನೋಡಿದಂತಾಗುತ್ತಿತ್ತು. ಮಹಾರಾಜ ದಶರಥನ ಮನಸ್ಸಲ್ಲಿ ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡಿ ಅಯೋಧ್ಯೆಯ ರಾಜನನ್ನಾಗಿಸುವ ಅಭಿಲಾಷೆಯಾಯಿತು. ಶ್ರೀರಾಮನು ಧರ್ಮನಿಷ್ಟನೂ, ಕರ್ತವ್ಯನಿಷ್ಟನೂ, ನ್ಯಾಯಪರನೂ ಆಗಿದ್ದನು. ರಾಜನಾಗುವ ಎಲ್ಲಾ ಗುಣಗಳು ತನಲ್ಲಿ ಸಮ್ಮಿಳಿತವಾಗಿದ್ದರಿಂದ ವಿಷಯವನ್ನು ತಿಳಿದ ಮಂತ್ರಿಗಣ ಸಹಜವಾಗಿ ತಮ್ಮ ಸಹಮತವನ್ನು ತಿಳಿಸಿ ಸಂತೋಷಪಟ್ಟರು. ಅಯೋಧ್ಯೆಯ ನಾಗರಿಕರ ಸಂಭ್ರಮ ಮುಗಿಲು ಮುಟ್ಟಿತು.

ಆದರೆ ಅಯೋಧ್ಯೆಯ ಜನರ ಸಂತೋಷವನ್ನು ಕೈಕೇಯಿಯ ದಾಸಿಯಾದ ಮಂಥರೆಗೆ ಸಹಿಸಲಾಗಲಿಲ್ಲ. ಭರತನ ಮೇಲೆ ಆಕೆಗೆ ಅಮಿತ ಪ್ರೀತಿ. ಭರತನನ್ನು ರಾಜನ ರೂಪದಲ್ಲಿ ನೋಡುವ ಇಚ್ಛೆಯಿಂದ ಮಹಾರಾಣಿ ಕೈಕೇಯಿ ಮನಸ್ಸು ಕದಡುತ್ತಾಳೆ. ಮೊದಮೊದಲು ಕೈಕೇಯಿ ಒಪ್ಪಲಿಲ್ಲವಾದರೂ ಮಂಥರೆಯ ದುರ್ಭೋದನೆಗೆ ಹಾವಾಡಿಗನ ಪುಂಗಿಗೆ ತಲೆದೂಗುವ ಹಾವಿನಂತೆ ಮಣಿಯುತ್ತಾಳೆ.

ಶ್ರೀರಾಮನ ಪಟ್ಟಾಭಿಷೇಕದ ಶುಭ ಸುದ್ದಿಯನ್ನು ತಿಳಿಸಲು ತನ್ನ ಅಂತ:ಪುರಕ್ಕೆ ಬಂದ ದಶರಥನಲ್ಲಿ, ಹಿಂದೊಮ್ಮೆ ದೇವಾಸುರ ಯುದ್ಧದ ಸಂದರ್ಭದಲ್ಲಿ ನೀಡಿದ ಎರಡು ವಚನಗಳನ್ನು ನೆರವೇರಿಸುವಂತೆ ಕೇಳುತ್ತಾಳೆ. ಭರತನಿಗೆ ಪಟ್ಟಾಭಿಷೇಕವಾಗಬೇಕೆಂಬುದು ಮೊದಲ ಬೇಡಿಕೆಯಾಗಿದ್ದರೆ, ಶ್ರೀರಾಮ ಹದಿನಾಲ್ಕು ವರ್ಷಗಳ ಕಾಲ ವನವಾಸವನ್ನು ಮಾಡಬೇಕೆಂಬುದು ಎರಡನೆಯ ಬೇಡಿಕೆಯಾಗಿತ್ತು. ಕೈಕೇಯಿ ಮಾತುಗಳನ್ನು ಕೇಳಿದಾಗ ದಶರಥನಿಗೆ ತನ್ನ ಪದತಲದಲ್ಲಿನ ಭೂಮಿಯೇ ಕುಸಿದಂತೆ ಭಾಸವಾಯಿತು. ಪರಿಪರಿಯಾಗಿ ಬೇಡಿಕೊಂಡರೂ ಕೈಕೇಯಿ ತನ್ನ ಪಟ್ಟು ಬಿಡಲಿಲ್ಲ.

ಪಿತೃ ವಾಕ್ಯ ಪರಿಪಾಲನೆಗಾಗಿ ಶ್ರೀರಾಮನು ಅರಣ್ಯಕ್ಕೆ ತೆರಳಲು ಅನುವಾಗುತ್ತಾನೆ. ಆತನ ಜೊತೆ ಸೀತೆಯೂ, ಲಕ್ಷ್ಮಣನೂ ಹೊರಡುತ್ತಾನೆ. ಸಂತೋಷದಿಂದ ನಳನಳಿಸುತ್ತಿದ್ದ ಅಯೋಧ್ಯೆಯಲ್ಲಿ ಈಗ ಸ್ಮಶಾನ ಮೌನ. ದಶರಥನಂತೂ “ರಾಮ ರಾಮ” ಎನ್ನುತ್ತಾ ಪ್ರಜ್ನಾಹೀನನಾಗುತ್ತಿದ್ದನು. ಶ್ರೀರಾಮ ಲಕ್ಷ್ಮಣರು ನಾರುಮಡಿಯನ್ನುಟ್ಟು, ಮಾತಾ-ಪಿತರ, ಹಾಗೂ ಗುರು ಹಿರಿಯರ ಆಶೀರ್ವಾದವನ್ನು ಪಡೆದು ಧನುರ್ದಾರಿಗಳಾಗಿ ಅರಣ್ಯಕ್ಕೆ ತೆರಳಲು ಸಿದ್ಧರಾಗುತ್ತಾರೆ. ರಾಮನಿಲ್ಲದ ಅಯೋಧ್ಯೆ ತಮಗೂ ಬೇಡವೆಂದು ಪ್ರಜಾಜನರು ರಾಮ, ಲಕ್ಷ್ಮಣ ಹಾಗೂ ಸೀತೆಯೊಂದಿಗೆ ಕಾಡಿಗೆ ತೆರಳಲು ಸಿದ್ಧರಾಗುತ್ತಾರೆ.

ಸುಮಂತ್ರನು ಸಾರಥಿಯಾಗಿರುವ ಶ್ರೀರಾಮನ ರಥವನ್ನು ಹಿಂಬಾಲಿಸುತ್ತಾರೆ. ರಾಮನ ಯಾವುದೇ ಸಾಂತ್ವನದ ಮಾತುಗಳನ್ನು ಕೇಳಲು ಸಿದ್ಧರಿರಲಿಲ್ಲ. ಹೀಗೆ ಅಯೋಧ್ಯೆಯನ್ನು ಪರಿತ್ಯಜಿಸಿದ ರಾಮ ಲಕ್ಷ್ಮಣ, ಸೀತೆ ಹಾಗೂ ಪ್ರಜೆಗಳು ಆ ರಾತ್ರಿಯನ್ನು ತಮಸಾ ನದಿಯ ದಡದಲ್ಲಿ ಕಳೆಯುತ್ತಾರೆ. ಮರುದಿನ ಬೆಳಗ್ಗೆ ಆರಣ್ಯದತ್ತ ತನ್ನ ಪ್ರಯಾಣವನ್ನು ಮುಂದುವರಿಸುತ್ತಾರೆ.

ದಾರಿಯಲ್ಲಿ ಗುಹನ ಆಥಿತ್ಯವನ್ನು ಸ್ವೀಕರಿಸಿ ಆತನ ಕೋರಿಕೆಯಂತೆ ಗಂಗೆಯ ತಟದಲ್ಲಿ ಉಳಿಯುತ್ತಾರೆ. ಮರುದಿನ ಗಂಗಾನದಿ ದಾಟುವ ಸಲುವಾಗಿ ಗುಹನು ದೋಣಿಯನ್ನು ಸಿದ್ಧ ಪಡಿಸುತ್ತಾನೆ. ಶ್ರೀರಾಮನು ಪ್ರಜಾಜನರಿಗೆ ಸಾಂತ್ವನ ಹೇಳಿ ಅಯೋಧ್ಯೆಗೆ ಮರಳುವಂತೆ ಹೇಳುತ್ತಾನೆ. ತನ್ನ ಜನ್ಮಭೂಮಿಯ ಧೂಳನ್ನು ಹಣೆಗೊತ್ತಿ ಪತ್ನಿ ಹಾಗೂ ಅನುಜನೊಂದಿಗೆ ಗಂಗಾನದಿಯನ್ನು ದಾಟುತ್ತಾನೆ. ಗಂಗಾ ಹಾಗೂ ಯಮುನೆಯ ಸಂಗಮದ ಬಳಿ ಇರುವ ಭಾರದ್ವಾಜ ಮುನಿಗಳ ಆಶ್ರಮಕ್ಕೆ ಭೇಟಿಕೊಟ್ಟು ವಾಸಕ್ಕೆ ಯೋಗ್ಯವಾದ ಒಂದು ಸ್ಥಳವನ್ನು ಸೂಚಿಸಬೇಕಾಗಿ ಕೇಳಿಕೊಳ್ಳುತ್ತಾರೆ. ಅತ್ಯಂತ ಸುಂದರವಾಗಿರುವ ಚಿತ್ರಕೂಟವು ಯೋಗ್ಯವಾದ ಸ್ಥಳವೆಂದು ಮುನಿವರ್ಯರು ಸಲಹೆ ನೀಡುತ್ತಾರೆ. ಮುನಿ ಭಾರದ್ವಾಜರ ಸಲಹೆಯಂತೆ ರಾಮ-ಲಕ್ಷ್ಮಣ ಸೀತಾದಿಗಳು ಚಿತ್ರಕೂಟಕ್ಕೆ ತೆರಳುತ್ತಾರೆ.

ಅಯೋಧ್ಯೆಗೆ ಮರಳಿದ ಸುಮಂತ್ರನು ರಾಮನ ಸಂದೇಶವನ್ನು ದು:ಖತಪ್ತನಾದ ದಶರಥನಿಗೂ, ಮೂವರು ರಾಣಿಯರಿಗೂ ತಿಳಿಸುತ್ತಾನೆ. ರಾಮನನ್ನು ತನ್ನ ಪ್ರಾಣಕ್ಕಿಂತಲೂ ಮಿಗಿಲಾಗಿ ಪ್ರೀತಿಸುವ ದಶರಥನಿಗೆ ಆತನ ಅಗಲಿಕೆಯನ್ನು ಸಹಿಸುವುದು ಸಾಧ್ಯವಾಗಲಿಲ್ಲ. ಶ್ರವಣ ಕುಮಾರನ ಅಂಧ ಮಾತಾಪಿತರ ಶಾಪದ ಪರಿಣಾಮವಾಗಿ ಪುತ್ರವಿಯೋಗ ಸಹಿಸಲಾರದೆ ದಶರಥನ ಪ್ರಾಣಪಕ್ಷಿ ಹಾರಿ ಹೋಗುತ್ತದೆ. ಕೇಕೇಯ ದೇಶಕ್ಕೆ ಹೋಗಿದ್ದ ಭರತ, ಶತೃಘ್ನರನ್ನು ಕುಲಗುರು ವಶಿಷ್ಠರು ಅಯೋಧ್ಯೆಗೆ ಕರೆಸುತ್ತಾರೆ. ರಾಜೋಚಿತವಾಗಿ ದಶರಥನ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುತ್ತದೆ. ರಾಮನ ಸ್ಥಾನವನ್ನು ಅಲಂಕರಿಸಲು ಇಚ್ಚಿಸದ ಭರತನು ಶ್ರೀರಾಮನನ್ನು ಕರೆತರಲು ಕಾಡಿಗೆ ತೆರಳುವುದಾಗಿ ಹೇಳುತ್ತಾನೆ. ಭರತನ ಭ್ರಾತೃಪ್ರೇಮವನ್ನು ಅಯೋಧ್ಯೆಗೆ ಅಯೋಧ್ಯೆಯೇ ಕೊಂಡಾಡುತ್ತದೆ. ಶ್ರೀರಾಮನು ಗುಹನ ಆಧಿತ್ಯವನ್ನು ಸ್ವೀಕರಿಸಿದ್ದು, ಗಂಗಾನದಿಯನ್ನು ದಾಟಿದ್ದು, ಭಾರದ್ವಾಜ ಮುನಿಗಳ ದರ್ಶನ ಪಡೆದ ವಿಷಯಾದಿಗಳನ್ನು ಗುಹನ ಮೂಲಕ ಭರತನು ತಿಳಿದುಕೊಳ್ಳುತ್ತಾನೆ. ಭಾರದ್ವಾಜರ ಆಥಿತ್ಯ ಸ್ವೀಕರಿಸಿದ ಭರತನು ಚಿತ್ರಕೂಟದೆಡೆಗೆ ಪ್ರಯಾಣ ಬೆಳೆಸುತ್ತಾನೆ.

ತನ್ನನ್ನು ಅರಸಿಕೊಂಡು ಬಂದ ಭರತನನ್ನು ನೋಡಿ ಶ್ರೀರಾಮನು ಆತನನ್ನು ಆಲಂಗಿಸಿ ಆನಂದಾಶ್ರುಗಳನ್ನು ಸುರಿಸುತ್ತಾನೆ. ಜೊತೆಗೆ ದಶರಥನ ಮರಣ ವಾರ್ತೆಯನ್ನು ಕೇಳಿ ದುಃಖತಪ್ತನಾಗುತ್ತಾನೆ. ಭರತನು ಪರಿ ಪರಿಯಾಗಿ ವಿನಂತಿಸಿದರೂ ಶ್ರೀರಾಮ ತನ್ನ ಅಚಲವಾದ ನಿರ್ದಾರದಿಂದ ಹಿಂದೆ ಸರಿಯಲೊಲ್ಲ. ಅಯೋಧ್ಯೆಯ ಸಿಂಹಾಸನವೇರಲು ಬಯಸದ ಭರತನು ರಾಮನಂತೆ ವನವಾಸಿ ಜೀವನ ನಡೆಸುವ ನಿರ್ಧಾರವನ್ನು ಕೈಗೊಳ್ಳುತ್ತಾನೆ.

ಅದರಂತೆ ನಾರುಮಡಿಯುಟ್ಟು, ದರ್ಭೆಯ ಮೇಲೆ ಪವಡಿಸುವ, ಕಂದ ಮೂಲಾದಿಗಳನ್ನು ತಿನ್ನವ ಮೂಲಕ ರಾಜ ಭೋಗವನ್ನು ತ್ಯಜಿಸುತ್ತಾನೆ. ಕೊನೆ ಪಕ್ಷ ರಾಮ ಮರಳದಿದ್ದರೆ ಆತನ ಪಾದುಕೆಯಾದರೂ ಕೊಡಬೇಕೆಂದು ಪ್ರಾರ್ಥಿಸುತ್ತಾನೆ. ಅಯೋಧ್ಯೆಯ ಹೊರಗೆ ನಂದಿಗ್ರಾಮದಲ್ಲಿ ಶ್ರೀರಾಮನ ಪಾದುಕೆಗಳನ್ನಿಟ್ಟು ರಾಜ್ಯಭಾರ ಮಾಡುವ ತನ್ನಿಚ್ಛೆಯನ್ನು ತಿಳಿಸುತ್ತಾನೆ. ಭರತನ ಭಾತೃಪ್ರೇಮಕ್ಕೆ ಮನಸೋತ ರಾಮನು ಆತನಿಗೆ ತನ್ನ ಪಾದುಕೆಗಳನ್ನು ನೀಡುತ್ತಾನೆ. ಜೊತೆಗೆ ರಾಜನೀತಿಯ ಅತ್ಯಮೂಲ್ಯ ಪಾಠವನ್ನು ತಿಳಿಸುತ್ತಾನೆ. ರಾಮನ ಪಾದುಕೆಗಳನ್ನು ತಲೆಯ ಮೇಲೆ ಹೊತ್ತುಕೊಂಡು ನಂದೀಗ್ರಾಮಕ್ಕೆ ಭರತನು ಮರಳುತ್ತಾನೆ.

ಶಾಂತವಾಗಿದ್ದ ಚಿತ್ರಕೂಟದ ವಾತಾವರಣ ಜನರ ಆಗಮನದಿಂದ ಅಶಾಂತವಾಗಿದ್ದು ಶ್ರೀರಾಮನ ವಾಸಸ್ಥಾನದ ಬಗ್ಗೆ ಜನರಿಗೆ ತಿಳಿದು ಮುಂದೆ ಅದು ತಪಸ್ವಿಗಳಿಗೂ, ಮುನಿಗಳಿಗೂ ತೊಂದರೆಯಾಗುವ ಸಾಧ್ಯತೆ ಇತ್ತು. ಇದನ್ನರಿತ ರಾಮಾದಿಗಳು ಚಿತ್ರಕೂಟವನ್ನು ತೊರೆದು ಮುಂದೆ ಸಾಗುವ ನಿರ್ಧಾರ ಮಾಡುತ್ತಾರೆ. ಅರಣ್ಯದಲ್ಲಿ ಅತ್ರಿ ಮುನಿಗಳ ಆಶ್ರಮಕ್ಕೆ ಭೇಟಿ ಕೊಡುತ್ತಾರೆ. ಅತ್ರಿ-ಅನಸೂಯರ ಆಥಿತ್ಯವನ್ನು ಸ್ವೀಕರಿಸುತ್ತಾರೆ. ಮಾತೆ ಅನಸೂಯೆಯು ಸೀತೆಗೆ ಪತಿವೃತಾ ಧರ್ಮದ ಮಹತ್ವವನ್ನು ತಿಳಿಸುತ್ತಾರೆ ಜೊತೆಗೆ ಬಗೆ ಬಗೆಯ ಆಭರಣಗಳನ್ನೂ, ಪರಿಮಳ ದ್ರವ್ಯಗಳನ್ನೂ, ಎಂದೂ ಮಲಿನವಾಗದೇ ಇರುವ ವಸ್ತ್ರಗಳನ್ನೂ, ಬಾಡದೇ ಇರುವ ಹೂವಿನಹಾರವನ್ನು ಪ್ರೀತಿಯಿಂದ ಉಡುಗೊರೆಯಾಗಿ ಕೊಡುತ್ತಾರೆ. ಅತ್ರಿ ಮುನಿಗಳ ಸಲಹೆಯಂತೆ ಗೋದಾವರಿಯ ತಟದಲ್ಲಿರುವ ಪಂಚವಟಿಯ ಕಡೆಗೆ ಪ್ರಯಾಣ ಬೆಳೆಸುತ್ತಾರೆ.

ಚಿತ್ರಕೃಪೆ: www.masters-gallery.com