Wednesday, July 22, 2009

ಗುರುವಿನ ಗುಲಾಮನಾಗುವ ತನಕ. . .

‘ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಾಃ. . . ‘ ಅಂತ ದೇವೀ ಸದನ ಸಭಾಭವನದಲ್ಲಿ ಮಕ್ಕಳು ಮಾತಾಜಿಯ ಮುಂದೆ ಕೈ ಮುಗಿದು ಪ್ರಾರ್ಥನಾ ರೂಪದಲ್ಲಿ ಜೋರಾಗಿ ಹಾಡುತ್ತಿದ್ರು. ಅದರ ಪ್ರತಿಧ್ವನಿ ಪಕ್ಕದ ರಸ್ತೆಗೆ ಕೇಳ್ತಿತ್ತು. ಎಷ್ಟೋ ಬಾರಿ ರಸ್ತೆಯಲ್ಲಿ ನಡೆದು ಹೋಗ್ತಿದ್ದಾಗ ಇದನ್ನ ಕೇಳಿ ನನ್ನ ಕಿವಿಗಳು ನಿಮಿರುತ್ತಿದ್ದವು. ಅದು ನಮ್ಮೂರ ಶಾಲೆಯ ಸಭಾಭವನ. ಅಕ್ಕ-ಪಕ್ಕದ ಮನೆಯವರು ತಮ್ಮ ಮಕ್ಕಳನ್ನು ನಮ್ಮ ಶಾಲೆಯ ಅಂಗನವಾಡಿಗೆ ಕಳಿಸ್ತಿದ್ರು. ಮಾತಾಜಿ ಅಂದ್ರೆ ಸಾಧು, ಸನ್ಯಾಸಿನಿ ಅಂತ ತಿಳ್ಕೊಂಡ್ರೆ ಊಹೆ ತಪ್ಪಾಗುತ್ತೆ. ಮಾತಾಜಿ ಬೇರಾರು ಅಲ್ಲ ಅಂಗನವಾಡಿ ಟೀಚರ್!!! (ಕೃಷ್ಣನನ್ನು ಹಡೆದದ್ದು ದೇವಕಿಯಾದ್ರೂ ಲಾಲಿಸಿ ಪಾಲಿಸಿದ್ದು ಯಶೋದೆಯಲ್ಲವೆ???) ಇಡೀ ದಿನ ಪುಟ್ಟ ಮಕ್ಕಳೊಂದಿಗೆ ಬೆರೆತು, ಅವರ ಬೇಕು ಬೇಡಗಳನ್ನು ಪೂರೈಸಿ, ಒಂದಷ್ಟು ಶ್ಲೋಕಗಳು, ಹಾಡುಗಳು, ಕಥೆಗಳನ್ನು ಹೇಳಿಕೊಟ್ಟು ಪ್ರೀತಿಯಿಂದ ನೋಡಿಕೊಳ್ಳುವ ಆ ಟೀಚರನ್ನು ಮಾತಾಜಿ ಅಂತ ಸಂಭೋಧಿಸಿದ್ರೆ ಅವ್ರಿಗೆ ಕೊಡೋ ದೊಡ್ಡ ಗೌರವ ಅಲ್ವಾ??? ಸಣ್ಣದರಿಂದಲೇ ಕಲಿತು, ಪ್ರತಿದಿನ ಹೇಳ್ತಿದ್ದ ಈ ಮಂತ್ರವನ್ನು ಶಂಕರಾಚಾರ್ಯರು ರಚಿಸಿದ್ದು ಅಂತ ನನ್ಗೆ ನಿನ್ನೆಯ ವರೆಗೂ ಗೊತ್ತಿರ್ಲಿಲ್ಲ. ಗೂಗಲಾಯ ನಮಃ ಎಂದುಕೊಂಡು ಗೂಗಲ್ ಸರ್ಚಿಗೆ ಶರಣಾದಾಗ ಈ ವಿಷಯ ಗೊತ್ತಾಯಿತು. ನನಗೆ ಬಹಳಷ್ಟು ವಿಷಯಗಳು ಗೊತ್ತು ಎಂಬ ಜಂಭ ಜರ್ರಂತ ಇಳಿದು ಹೋಯಿತು. ಆದ್ರೆ ಒಂದು ಹೊಸ ವಿಷಯ ತಿಳೀತಲ್ಲ ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡೆ.

ಹೇಳಿ ಕೇಳಿ ನಮ್ಮದು ಸಾಧು, ಸಂತ, ಹರಿಕಾರರ ನಾಡು. ಅಸಂಖ್ಯ ಆಧ್ಯಾತ್ಮಿಕ ಗುರುಗಳು ತಮ್ಮ ಅಮಿತ ಜ್ಞಾನವನ್ನು ಕೊಟ್ಟು ಇಲ್ಲಿನ ಆಧ್ಯಾತ್ಮಿಕ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ. ನದಿ ಮೂಲ, ಋಷಿ ಮೂಲ ಹುಡುಕಬಾರ್ದಂತೆ. ಹಾಗೆಯೇ ನಾನು ಗುರುಮೂಲ ಹುಡುಕಲು ಹೋಗೋದಿಲ್ಲ. ಯಾರ್ಯಾರು ಏನೇನು ಭೋದನೆ ಕೊಟ್ಟಿದ್ದಾರಂತ ತಲೆಕೆಡಿಸಿಕೊಳ್ಳುವುದಿಲ್ಲ. ಏನೇ ಉಪದೇಶ ಕೊಟ್ರೂ ಒಳ್ಳೆಯದನ್ನೇ ಕೊಟ್ಟಿರ್ತಾರೆ. (ಅದೂ ಇಲ್ಲದೆ ಆಧ್ಯಾತ್ಮದ ಬಗ್ಗೆ ತುಂಬಾ ಚಿಂತಿಸುವಷ್ಟು ವಯಸ್ಸು ನನಗಾಗಿಲ್ಲ) ‘ಏನು ಗುರೂ… ಚೆನ್ನಾಗಿದ್ದೀಯಾ??’ ಅನ್ನೋದು ಬೆಂಗ್ಳೂರಲ್ಲಿ ಸರ್ವೇ ಸಾಮಾನ್ಯ. ನೀವೇನಾದ್ರು ಬೆಂಗ್ಳೂರಿಗೆ ಮೊಟ್ಟಮೊದಲ ಬಾರಿಗೆ ಹೋಗಿದ್ದು ಯಾರಾದ್ರೂ ಈ ರೀತಿ ಕೇಳಿದ್ರೆ ತಬ್ಬಿಬ್ಬಾಗಬೇಡಿ. ಬೆಂಗಳೂರಿನ ಮಾತಿನಲ್ಲಿ ‘ಗುರು-ಸಿಸ್ಯಾ’ ಪದಗಳ ಬಳಕೆ ಸಾಮಾನ್ಯ. ಗುರು ಅಂದ ಕೂಡಲೇ ನನ್ಗೆ ನೆನಪಾಗೋದು ಶಾಲೆಯಲ್ಲಿ ಪಾಠ ಹೇಳಿಕೊಟ್ಟ ಟೀಚರುಗಳು ಮತ್ತು ದ್ರೋಣಾಚಾರ್ಯರು. ಹೌದು ಸ್ವಾಮಿ ನಾನು ಹೇಳುತ್ತಿರುವುದು ಮಹಾಭಾರತದ ಕಾಲದ ದ್ರೋಣಾಚಾರ್ಯರ ಬಗ್ಗೆಯೇ… ಮಹಾಭಾರತ ನನ್ನ ಮೇಲೆ ಮಾಡಿರುವ ಮೋಡಿಯೇ ಅಂಥದ್ದು. ಕುರು ರಾಜಕುಮಾರರಿಗೆ ತನ್ನೆಲ್ಲಾ ಜ್ಞಾನವನ್ನು ಧಾರಯೆರೆದ ಮಹಾಗುರು ದ್ರೋಣಾಚಾರ್ಯರು. ಗುರುವಿಗೆ ತಕ್ಕಂತೆ ಏಕಲವ್ಯ, ಅರ್ಜುನನಂತಹ ಸಮರ್ಥ ಶಿಷ್ಯರೂ ದ್ರೋಣರ ಪಾಲಿಗಿದ್ದರು. ಇವತ್ತಿಗೂ ಭಾರತ ಸರಕಾರ ದ್ರೋಣಾಚಾರ್ಯ, ಅರ್ಜುನ ಮತ್ತು ಏಕಲವ್ಯ ಪ್ರಶಸ್ತಿಗಳನ್ನು ಕೊಡುತ್ತಿದೆ. (ಇದಕ್ಕೆ ಯಾವುದೇ ಧರ್ಮದ ಲೇಪನ ಬಾರದಿರುವುದು ನಮ್ಮ ಪುಣ್ಯ) ನಮ್ಮ ಇತಿಹಾಸ ಕಂಡ ಒಬ್ಬ ಶ್ರೇಷ್ಠ ಗುರುವನ್ನು ನೆನಪಿಸಿ ಆತನಿಗೆ ಸಲ್ಲಿಸುವ ಗುರುವಂದನೆಯೇ ಸರಿ.

ದಿ ಕರಾಟೆ ಕಿಡ್ ಅನ್ನೋ ಸಿನೆಮಾವೊಂದಿದೆ. ನಾನು ತುಂಬಾ ಇಷ್ಟ ಪಟ್ಟ ಸಿನೆಮಾಗಳಲ್ಲಿ ಇದೂ ಒಂದು. ಅದರಲ್ಲಿ ಡೇನಿಯಲ್ ಎಂಬ ಹುಡುಗ ತನಗೆ ಕರಾಟೆ ಕಲಿಸ್ಬೇಕೆಂದು ಒಬ್ಬ ಕರಾಟೆ ಟೀಚರನ್ನು ಕೇಳ್ತಾನೆ. (ಕರಾಟೆ ಕಲಿಸು ಅಂತ ಕರಾಟೆ ಟೀಚರನ್ನಲ್ಲದೆ ಡ್ಯಾನ್ಸ್ ಟೀಚರನ್ನು ಕೇಳಿಕ್ಕಾಗತ್ತಾ ಅಂತ ಬೈಕೋಬೇಡಿ.) ಕರಾಟೆ ಟೀಚರ್ ಹೆಸರು ಮಿಯಾಗಿ ಅಂತ. ಮೊದಲು ಮಿಯಾಗಿ ಕರಾಟೆ ಕಲಿಸ್ಲಿಕ್ಕೆ ಒಪ್ಪುವುದಿಲ್ಲ. ಕೊನೆಗೆ ಹುಡುಗನ ಗೋಗರೆತಕ್ಕೆ ಸೋತು ಮಿಯಾಗಿ ಒಪ್ಪುತ್ತಾನೆ ಆದ್ರೆ ಒಂದು ಶರತ್ತು ಹಾಕ್ತಾನೆ. ಶರತ್ತು ಏನಪ್ಪಾ ಅಂದ್ರೆ ಮಿಯಾಗಿ ಹೇಳಿದ ಕೆಲಸವನ್ನು ಮಾಡ್ಬೇಕು. ಯಾಕೆ, ಏನು ಅಂತ ಮರು ಪ್ರಶ್ನೆ ಮಾಡುವ ಹಾಗಿಲ್ಲ. ಕಲಿಯೋ ಆಸೆಯಿಂದ ಡೇನಿಯಲ್ ಸರಿ ಅಂತ ಗೋಣಾಡಿಸುತ್ತಾನೆ. ಮಿಯಾಗಿ ಕರಾಟೆ ಕಲಿಸೋ ಬದಲು ಪ್ರತಿ ದಿನ ತನ್ನ ಮನೆಗೆಲಸ ಮಾಡಿಸುತ್ತಾನೆ. ಒಂದು ದಿನ ಕಾರ್ ವಾಕ್ಸಿಂಗ್, ಮತ್ತೊಂದು ದಿನ ನೆಲದ ಸ್ಯಾಂಡ್ ಪಾಲಿಶಿಂಗ್, ಮಗದೊಂದು ದಿನ ಬೇಲಿಗೆ ಪೈಂಟಿಂಗ್… ಮನಸ್ಸಿನಲ್ಲಿ ಬೇಸರ, ಸಿಟ್ಟಿದ್ರೂ ಡೇನಿಯಲ್ ತುಟಿಕ್ ಪಿಟಿಕ್ ಅನ್ನದೇ ಹೇಳಿದ ಕೆಲಸವನ್ನೆಲ್ಲಾ ಮಾಡ್ತಾನೆ. ಒಂದು ದಿನ ತಾಳ್ಮೆ ಕಳೆದುಕೊಂಡು ಡೇನಿಯಲ್ ಮಿಯಾಗಿಯನ್ನು ಪ್ರಶ್ನಿಸಿಯೇ ಬಿಡ್ತಾನೆ. ಮನೆಗೆಲಸ ಮಾಡಿಸುವ ನೆಪದಲ್ಲಿ ಮಿಯಾಗಿ ತನಗೆ ಗೊತ್ತಿಲ್ಲದಂತೆಯೇ ಕರಾಟೆಯ ಬ್ಲಾಕುಗಳನ್ನು ಹೇಳಿಕೊಟ್ಟಿದ್ದಾನೆಂಬುದು ಡೇನಿಯಲ್ ಗೆ ಮನವರಿಕೆಯಾಗುತ್ತದೆ. ಗುರುವಿನ ಮೇಲೆ ಅಚಲವಾದ ನಂಬಿಕೆ ಇದ್ದಲ್ಲಿ ವಿದ್ಯೆ ತಂತಾನೆ ಬರುತ್ತದೆ ಅಲ್ವಾ? ಮತ್ತೆ ನಮ್ಮ ದಾಸರ ಪದ ಕೂಡ ಇದನ್ನೇ ಅಲ್ವಾ ಹೇಳೋದು “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣಾ ಮುಕುತಿ…” ಅಂತ. ಸಣ್ಣವನಾಗಿದ್ದಾಗ ನಾನು ಅಷ್ಟೆ. ಟೀಚರ್ ಹೇಳಿದ್ದೆ ವೇದವಾಕ್ಯ, ಪರಮ ಸತ್ಯ. ಎಷ್ಟೋ ಬಾರಿ ಅಪ್ಪ ಲೆಕ್ಕ ಹೇಳಿಕೊಡ್ತಿದ್ದಾಗ ‘ಹೀಗಲ್ಲ ನಮ್ಮ ಟೀಚರ್ ಹೇಳಿಕೊಟ್ಟದ್ದು’ ಅಂತ ವಾದ ಮಾಡಿ ಸಿಟ್ಟು ಬರಿಸ್ತಿದ್ದೆ.

ಗುರುವಿನ ವಿಷಯ ಬಂದಾಗ ಅಮ್ಮನನ್ನು ಹೇಗೆ ತಾನೆ ಮರೆಯಲು ಸಾಧ್ಯ? ‘ತಾಯಿಯೇ ಮೊದಲ ಗುರು’ ಅಂತ ತಿಳಿದವರು ಯಾರೋ ಹೇಳಿದ್ದಾರಲ್ವಾ? ಹೌದು. ಅಮ್ಮ ಮುದ್ದಿಸ್ತಾ ಎಲ್ಲಾ ಕಲಿಸ್ತಾಳೆ. ಭಾಷೆ, ಮಾತು, ಕತೆ, ಆಟ ಏನೇನೋ. ಕಾಗದ, ಪುಸ್ತಕ ತುಳೀಬಾರ್ದು, ದೆದ್ದು ಸಾಮಿ ಮಾಡು (ದೆದ್ದು ಅಂದ್ರೆ ದೇವ್ರು) ಅನ್ನೋ ಪುಟ್ಟ ಪುಟ್ಟ ವಿಷಯಗಳಿಂದ ಹಿಡಿದು ಗುರು ಹಿರಿಯರನ್ನು ಗೌರವಿಸಬೇಕೆಂಬ ಮೌಲ್ಯಗಳನ್ನೂ ಹೇಳಿಕೊಡ್ತಾಳೆ. ಒಟ್ಟಿನಲ್ಲಿ ಕಲಿಕೆಯೆಂಬುದು ಮನೆಯಿಂದಲೇ ಶುರುವಾಗುತ್ತದೆ. ಅಮ್ಮನೇ ಟೀಚರ್ ಆಗ್ತಾಳೆ.

ಮನೆಯಿಂದ ಹೊರಗಡೆ ಕಾಲಿಟ್ಟ ಮೇಲೆ ಸೇರಿದ್ದು ಶಾಲೆಗೆ. ಅಲ್ಲಿನ ವಾತಾವರಣ ಸ್ವಲ್ಪ ಭಿನ್ನ. ಒಬ್ಬೊಬ್ಬ ಟೀಚರುಗಳ ರೀತಿ ನೀತಿಗಳು ಬೇರೆ ಬೇರೆ. ಒಬ್ರು ತುಂಬಾ ಶಾಂತವಾಗಿದ್ರೆ, ಇನ್ನೊಬ್ರು ಭಯಂಕರ ಖಡಕ್. ಗುರುಭಕ್ತಿ, ಗೌರವ ಅನ್ನೋ ಪದಗಳು ಇನ್ನೂ ನನ್ನ ಡಿಕ್ಷನರಿನಲ್ಲೇ ಇರ್ಲಿಲ್ಲ. ಭಯದಿಂದ ಭಕ್ತಿಯೂ, ಗೌರವವೂ ಬರ್ತಾ ಇತ್ತು. ಮೊದಲಿಂದಲೂ ನನ್ಗೆ ಗಣಿತ ಕಬ್ಬಿಣದ ಕಡಲೆ ಇದ್ದ ಹಾಗೆ. ಲೆಕ್ಕ ತಪ್ಪು ಮಾಡಿದಾಗಲೆಲ್ಲಾ ರಾಜೀವಿ ಟೀಚರ್ ಫಟ್-ಫಟ್ ಅಂತ ಕೈ ಗಂಟಿಗೆ ಹೊಡೆಯೋರು. ಅಬ್ಬಾ ಏನಪ್ಪಾ ಈ ಟೀಚರು ಅಂತ ಬಹಳ ಬಾರಿ ಅನ್ನಿಸ್ತಿತ್ತು. ಆ ಶಾಲೆಯಲ್ಲಿದ್ದಾಗ, ಮುಂದೆಯೂ ನನ್ನ ಲೀಸ್ಟ್ ಫೇವರಿಟ್ ಟೀಚರ್ ಆಗಿದ್ದರು. ಬಹಳ ವರ್ಷಗಳ ನಂತರ ಭೇಟಿಯಾದಾಗ ಅವರು ಬರ ಮಾಡಿಸಿಕೊಂಡ ರೀತಿ, ಮಾತನಾಡಿಸಿದ ರೀತಿ ಅವರ ಮೇಲಿದ್ದ ನನ್ನ ಒಪಿನಿಯನ್ಗಳನ್ನೆಲ್ಲಾ ತಲೆಕೆಳಗಾಗಿಸಿತ್ತು. ಐದಾರು ವರ್ಷಗಳ ಬಳಿಕ ಭೇಟಿಯಾದಾಗಲೂ ಬಾಲ ಮಾಸ್ಟ್ರಿಗೆ ನನ್ನ ನೆನಪು ಚೆನ್ನಾಗಿಯೇ ಇತ್ತು. ಇಡೀ ಸ್ಟಾಫ್ ರೂಮಿಗೆ ಇವನು ನಮ್ಮ ಶಾಲೆಯಲ್ಲಿ ಓದಿದ್ದ ಹುಡುಗ ಅಂತ ಪರಿಚಯ ಮಾಡಿಸಿದ್ದರು. ಅವರು ತೋರಿಸಿದ ಪ್ರೀತಿಗೆ ಏನಂತ ಹೇಳೋದು? ಕುಮಾರ ವ್ಯಾಸನ ಹಳೆಗನ್ನಡ ಕಾವ್ಯ, ಕುವೆಂಪು,ಅಡಿಗರ ನವ್ಯ ಸಾಹಿತ್ಯಗಳನ್ನು ಮನ:ತಟ್ಟುವಂತೆ ಹೇಳಿಕೊಟ್ಟ ಗಂಗಮ್ಮ ಟೀಚರ್ (ಇವತ್ತು ನಾನು ತಪ್ಪಿಲ್ಲದೆ ಅಲ್ಪ ಸ್ವಲ್ಪ ಕನ್ನಡ ಗೀಚಿದ್ರೆ ಅದಕ್ಕೆ ಕಾರಣ ಇವರೇ. . ), ಇತಿಹಾಸವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿ ಇತಿಹಾಸಲ್ಲಿ ನನಗೆ ಆಸಕ್ತಿ ಮೂಡುವಂತೆ ಮಾಡಿದ ಪುರುಷೋತ್ತಮ ಮಾಸ್ಟ್ರು (ಅಂದ ಹಾಗೆ ಇತಿಹಾಸ, ಹಿಸ್ಟರಿ ಚಾನೆಲ್ ನಾನು ತುಂಬಾ ಇಷ್ಟ ಪಡುತ್ತೇನೆ), ಎಂಥದ್ದೇ ಕಷ್ಟದ ಸಮಯದಲ್ಲಿ ಅದರ ಲೈಟರ್ ಸೈಡ್ ನೋಡಿ ಅಂತ ಹೇಳಿಕೊಟ್ಟ, ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಿದ್ದ ಹಿಂದಿ ಮಾಸ್ಟ್ರು, ಇಡೀ ಶಾಲೆಯನ್ನು ರಾಮ, ಲಕ್ಷ್ಮಣ, ಭರತ, ಶತ್ರುಘ್ನ ಅಂತ ನಾಲ್ಕು ತಂಡಗಳನ್ನು ಮಾಡಿ, ನಮ್ಮ ಮಧ್ಯೆ ಆರೋಗ್ಯಕರ ಪೈಪೋಟಿ ಏರ್ಪಡಿಸಿ ಕ್ರೀಡಾಕೂಟವನ್ನು ಉತ್ಸವವಾಗಿ ಮಾರ್ಪಡಿಸುತ್ತಿದ್ದ ಪೀಟಿ ಮಾಸ್ಟ್ರು. ಹೀಗೆ ಪ್ರತಿಯೊಬ್ಬರೂ ನನ್ನನ್ನು ಒಳ್ಳೆಯ ವ್ಯಕ್ತಿಯನ್ನಾಗಿಸಿದ್ದಕ್ಕೆ ನೀಡಿದ ಮಾರ್ಗದರ್ಶನಕ್ಕೆ ನಾನೆಂದೂ ಋಣಿ. (ಕೊನೆ ಪಕ್ಷ ನಾನು ಸ್ವಲ್ಪನಾದ್ರೂ ಒಳ್ಳೆಯವನು ಅಂತ ಮನಸ್ಸು ಹೇಳತ್ತೆ) ಇವತ್ತು ನಾನು ಏನೇ ಆಗಿದ್ರೂ ಅದು ನನ್ನ ತಂದೆ ತಾಯಿಯಿಂದ, ನನ್ನ ಟೀಚರುಗಳಿಂದ, ನನ್ನ ಶಾಲೆಯಿಂದ. . . ಇವರೆಲ್ಲಾ ಹಾಕಿಕೊಟ್ಟ ಭದ್ರ ಅಡಿಪಾಯದ ಮೇಲೆ ಇವತ್ತು ನಾನು ನಿಂತಿದ್ದೇನೆ. ಶಾಲಾ ದಿನಗಳಲ್ಲಿದ್ದ ಗುರು-ಶಿಷ್ಯರ ಸಂಬಂಧವೇ ಅಂಥದ್ದು. ಅಲ್ಲಿ ತಪ್ಪಿಗೆ ದಂಡನೆಯೂ ಇತ್ತು, ಗುರುವಿನ ನಿಶ್ಕಲ್ಮಶ ಪ್ರೀತಿನೂ ಇತ್ತು, ಒಳ್ಳೆಯ ಕೆಲಸ ಮಾಡಿದಲ್ಲಿ ಕಣ್ಣಲ್ಲಿ ಮೆಚ್ಚುಗೆಯ ಸೂಚನೆಯಿತ್ತು, ಒಳ್ಳೆಯದನ್ನು ಮಾಡ್ಲಿಕ್ಕೆ ಪ್ರೋತ್ಸಾಹವೂ ಇತ್ತು. ತಿಂಗಳ ಕೊನೆಗೆ ಸಂಬಳ ಸಿಗತ್ತಪ್ಪಾ, ಅದವರ ಕೆಲಸ ಅಂತ ಅನಿಸಿದ್ರೂ ಅವರಿಗೆ ವಿದ್ಯಾರ್ಥಿಗಳ ಬಗ್ಗೆ ಒಂದು ರೀತಿಯ ಕಾಳಜಿ ಇತ್ತು, ಪ್ರೀತಿ ಇತ್ತು, ನಮ್ಮ ಶಾಲೆ ಮಕ್ಕಳು ಅನ್ನೋ ಹೆಮ್ಮೆ ಇತ್ತು. ಮುಂದೆ ಕಾಲೇಜು ಮೆಟ್ಟಿಲು ಹತ್ತಿದಾಗ ಈ ಗುರು-ಶಿಷ್ಯ ಸಂಬಂಧ ಕೇವಲ ವ್ಯಾವಹಾರಿಕವಾದದ್ದಕ್ಕೆ ಸ್ವಲ್ಪ ಬೇಸರವಿದೆ.

ಯಾಕೆ ಇಷ್ಟೆಲ್ಲಾ ಕುಯ್ತಾ ಇದ್ದೀನಿ ಅಂತ ಅನ್ನಿಸ್ತಿದೆಯಾ??? ಏನಿಲ್ಲ. ಆಷಾಡ ಮಾಸದ ಹುಣ್ಣಿಮೆಯನ್ನು ಸಾಮಾನ್ಯವಾಗಿ ಗುರು ಪೂರ್ಣಿಮೆ ಅಂತ ಆಚರಿಸ್ತಾರೆ. ವೇದಗಳನ್ನು ವಿಂಗಡಿಸಿ ಚತುರ್ವೇದಗಳನ್ನಾಗಿಸಿದ, ಮಹಾಭಾರತದ ಕರ್ತೃ ವೇದ ವ್ಯಾಸರ ಜನ್ಮದಿನವೂ ಹೌದು. ಅದಕ್ಕಾಗಿಯೇ ಈ ದಿನವನ್ನು ವ್ಯಾಸ ಪೂರ್ಣಿಮೆ ಅಂತಲೂ ಕರೆಯುತ್ತಾರೆ. ದೇಶದಾದ್ಯಂತ ಆಧ್ಯಾತ್ಮಿಕ ಗುರುಗಳಿಗೆ, ಮಠಾಧೀಶರಿಗೆ ಗುರುವಂದನೆ ಸಲ್ಲಿಸಲಾಗುತ್ತದೆ. ನಾವು ಎಷ್ಟು ಬ್ಯುಸಿ ಅಂದ್ರೆ ನಮ್ಮ ಟೀಚರುಗಳನ್ನು ನೆನಪಿಸುವಷ್ಟು ಪುರುಸೊತ್ತಿರುವುದಿಲ್ಲ. ನಮ್ಮದೇ ದಿನ ನಿತ್ಯದ ಜಂಜಾಟಗಳಲ್ಲಿ ಮುಳುಗಿದ್ದೇವೆ. ಅಸಂಖ್ಯ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ, ಒಳ್ಳೆಯ ನಾಗರಿಕರನ್ನಾಗಿ ರೂಪಿಸುವ ಎಲ್ಲಾ ಟೀಚರುಗಳಿಗೆ ಗುರುಪೂರ್ಣಿಮೆಯ ನೆಪದಲ್ಲಿ ನಾನು ಸಲ್ಲಿಸುವ ಗುರುವಂದನೆಗಳು.

2 comments:

Unknown said...

ಮನಮೋಹಕ! ಗುರುಗಳ ಮಾರ್ಗದರ್ಶನ ನಿಜವಾಗ್ಯೂ ಅತ್ಯಂತ ಶ್ರೇಷ್ಟ. ನಾವು ಇಂದು ಹೀಗೆ ಈ ಸಮಾಜದಲ್ಲಿರುವುದಕ್ಕೆ ಅವರುಗಳೇ ಕಾರಣ. ಇಂತಹ ಸುಂದರ ಲೇಖನಕ್ಕೆ ತುಂಬಾ ಧನ್ಯವಾದಗಳು ಕಣ್ರೀ!

ಭಾರತೀಯ said...

ಧನ್ಯವಾದಗಳು ಸತ್ಯ... ನಿಮ್ಮ ಮಾತು ನಿಜ... ನಾವು ಓದಿದ ಶಾಲೆ, ಆ ಶಾಲಾದಿನಗಳು ನಿಜಕ್ಕೂ ಮರೆಯಲಸಾಧ್ಯ!!!