ಶನಿವಾರ, ಜನವರಿ 24, 2009. ಮಟ-ಮಟ ಮಧ್ಯಾಹ್ನದ ಹೊತ್ತು. ಕಡಲತೀರದಲ್ಲಿರುವ ಮಂಗಳೂರಿನ ಬಿಸಿಲು ಎಂಥವರಿಗೂ ಬೆವರಿಳಿಸುತ್ತದೆ. ಡಾ.ಶಿವರಾಮ ಕಾರಂತ ರಸ್ತೆಯಲ್ಲಿರುವ ಅಮ್ನೇಶಿಯಾ ಪಬ್-ನಲ್ಲಿ ಮದಿರೆಯನ್ನು ಸವಿಯುತ್ತಾ, ಕಿವಿಗಡಚ್ಚಿಕ್ಕುವ ಅಬ್ಬರದ ಹಾಡುಗಳಿಗೆ headbang ಮಾಡುತ್ತಾ ಮೈಮರೆತಿದ್ದ ಜನರಿಗೆ ಅವತ್ತು ಹವಾನಿಯಂತ್ರಿತ ಪಬ್ಬೊಳಗೂ ಬೆವರಿಳಿದಿತ್ತು. ಏಕಾಏಕಿ ನುಗ್ಗಿದ ಸುಮಾರು ನಲುವತ್ತು ಜನರು ಹೆಣ್ಣುಮಕ್ಕಳ ಮೇಲೆ ಕೈ ಮಾಡಿದರು. ಒಬ್ಬನಂತೂ ದುಶ್ಯಾಸನನಂತೆ ಒಬ್ಬ ಹೆಣ್ಣು ಮಗಳ ಮುಡಿಯನ್ನು ಹಿಡಿದು ದರ-ದರನೆ ಎಳೆಯುತ್ತಿದ್ದ. ದೂರದರ್ಶನದಲ್ಲಿ ಅಸ್ಪಷ್ಟವಾಗಿ ಕಂಡ ಈ ದೃಶ್ಯಗಳನ್ನು ನೋಡಿ ಸ್ವತಃ ನಾನೇ ಹೌಹಾರಿದ್ದೆ!!! ಮನಸ್ಸು ಆ ಹೆಣ್ಣುಮಕ್ಕಳ ಅಸಹಾಯಕ ಪರಿಸ್ಥಿತಿಗೆ ಮರುಗಿದ್ದೂ ಹೌದು. ನಾನೆಂದೂ ಕೇಳರಿಯದ ಶ್ರೀರಾಮ ಸೇನೆಯ ಜನರಂತೆ. ಅವರು ದಾರಿ ತಪ್ಪಿದ, ತಪ್ಪುತ್ತಿರುವ ಯುವತಿಯರಿಗೆ ಸಂಸ್ಕೃತಿಯ ಪಾಠವನ್ನು ಹೇಳಿಕೊಡಲು ಹೊರಟವರಂತೆ!!! ಅವರ ಉದ್ದೇಶವೇನೋ ಸಾತ್ವಿಕವೇ ಆದರೆ ಕಾರ್ಯಸಾಧನೆಯ ಮಾರ್ಗ ಮಾತ್ರ ಎಂಥವರನ್ನೂ ನಾಚಿಸುವಂತೆ ಮಾಡಿತ್ತು. ಸಂಸ್ಕೃತಿಯ ಪಾಠ ಹೇಳಿಕೊಡಲು ಹೋದವರೇ ಶುದ್ಧ ಅಸಂಸ್ಕೃತರಂತೆ ವರ್ತಿಸಿದರು. ಏನೇ ಆಗಲಿ ಹೆಣ್ಣುಮಕ್ಕಳ ಮೇಲೆ ಕೈ ಮಾಡುವುದು ಸರಿಯಲ್ಲ. ಸದಾ ಸುದ್ದಿಯ ನಿರೀಕ್ಷೆಯಲ್ಲಿರುವ ಮಾಧ್ಯಮಗಳಿಗೆ ಇದು ಸುವರ್ಣಾವಕಾಶ!!! ‘ನ ಭೂತೋ ನ ಭವಿಷ್ಯತಿ’ ಎಂಬಂತೆ ಸುದ್ದಿಯನ್ನು ಪ್ರಕಟಿಸಿದವು. NDTV, CNN-IBN ಗಳಂತಹ ವಾರ್ತಾವಾಹಿನಿಗಳು ‘ಬುದ್ದಿಜೀವಿ’ಗಳನ್ನು ಕೂಡಿಸಿ ಚಿಂತನಾ ಕಾರ್ಯಕ್ರಮಗಳನ್ನು ಬಿತ್ತರಿದವು. ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆಯಾಗಿದ್ದ ರೇಣುಕಾ ಚೌಧರಿಯವರು ಭಾರತ ತಾಲಿಬಾನ್ ಆಗುತ್ತಿದೆ ಅಂತ ಅರಚಿದರು. ಮುಂದೆ ಹಲವು ದಿನಗಳ ತನಕ ಬಿಸಿ-ಬಿಸಿ ಸುದ್ದಿಯಲ್ಲಿದ್ದ ಈ ಘಟನೆ ಪಿಂಕ್ ಚಡ್ಡಿ, ಸೀರೆಗಳನ್ನು ಉಡುಗೊರೆಯನ್ನಾಗಿ ಕೊಡುವಷ್ಟು ಮುಂದುವರಿಯಿತು. ಅಗತ್ಯಕ್ಕಿಂತ ಹೆಚ್ಚಾಗಿಯೇ ಮಣೆ ಹಾಕಿದ ಮಾಧ್ಯಮಗಳು ಎಂದೂ ಕೇಳರಿಯದ ಶ್ರೀರಾಮ ಸೇನೆಗೆ ರಾಷ್ಟ್ರ ಮಟ್ಟದಲ್ಲಿ ಪುಕ್ಕಟೆ ಪ್ರಚಾರ ಒದಗಿಸಿದ್ದು ಸುಳ್ಳಲ್ಲ.
ವೇದಗಳ ಕಾಲದಿಂದಲೂ ನಮ್ಮ ಸಂಸ್ಕೃತಿ, ಸಮಾಜ ಹೆಣ್ಣುಮಕ್ಕಳಿಗೆ ಅತ್ಯಂತ ಗೌರವಯುತವಾದ ಸ್ಥಾನವನ್ನು ಕೊಡಮಾಡಿದೆ. ದುರ್ಗಾ, ಪಾರ್ವತಿ, ಲಕ್ಷ್ಮಿ, ಸರಸ್ವತಿ, ಗಾಯತ್ರಿ, ಕಾಳಿಯ ರೂಪಗಳಲ್ಲಿ ಸ್ತ್ರೀಯರು ಪೂಜಿಸಲ್ಪಡುತ್ತಾರೆ. ಜಗತ್ತಿನ ಯಾವುದೇ ಧರ್ಮ ಸ್ತ್ರೀಗೆ ಇಂಥಹ ಅತ್ಯುಚ್ಛ ಸ್ಥಾನವನ್ನು ಕೊಟ್ಟಿಲ್ಲ. ಒಂದು ಸಲ ನಮ್ಮ ದೇಶದಲ್ಲಿ ಹರಿಯುವ ಅಸಂಖ್ಯ ನದಿಗಳನ್ನು ನೆನಪಿಸಿ. ಗಂಗಾ, ಸಿಂಧೂ, ಯಮುನಾ, ಕಾವೇರಿ, ಕೃಷ್ಣಾ, ಕಾಳಿ, ಗೋದಾವರಿ, ಗೋಮತಿ, ಸರಯೂ, ನರ್ಮದಾ, ನಂದಿನಿ, ಅಘನಾಶಿನಿ, ತಪತಿ, ತುಂಗಾ, ತಮಸಾ, ತಾಮ್ರಪರ್ಣಿ ಒಂದೇ? ಎರಡೇ? ಪ್ರತಿ ನದಿಗೂ ಹೆಣ್ಣಿನ ಹೆಸರು. ಪವಿತ್ರವಾದ, ಜೀವನಸೆಲೆಯ ಸ್ತ್ರೋತವಾಗಿರುವ ಈ ನದಿಗಳು ನಮಗೆಂದೂ ಮಾತೃಸ್ವರೂಪಿ. ವಿಜ್ಞಾನದ ಕಣ್ಣಲ್ಲಿ ಕಲ್ಲು-ಮಣ್ಣಿನ ಭೂಗೋಳ ನಮ್ಮ ಪಾಲಿಗೆ ಭೂಮಿತಾಯಿ. ಕಲ್ಲು-ಮಣ್ಣಿನ ನಿರ್ಜೀವ ಭೂಮಿಗೆ ಮಾತೃ ಸ್ಥಾನ ಕಲ್ಪಿಸಿದ ಸಂಸ್ಕೃತಿ ನಮ್ಮದು. ಅಷ್ಟೇ ಯಾಕೆ ದೇಶವನ್ನು ತಾಯಿಯ ರೂಪದಲ್ಲಿ ಕಂಡು ಭಾರತ ಮಾತೆ ಎಂದು ಕರೆಯುತ್ತೇವೆ. ನಾರಿಯ ಔನ್ನತ್ಯವನ್ನು ಸ್ವಯಂ ನಮ್ಮ ಧರ್ಮವೇ ಸಾರುತ್ತವೆ. ‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’ ಅಂದರೆ ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ, ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂಚರಿಸಿತ್ತಾರೆ ಎಂಬುದೇ ಇದರ ಅರ್ಥ. ಇಷ್ಟೆಲ್ಲಾ ಇದ್ದು ಸಂಸ್ಕೃತಿಯ ಬಗ್ಗೆ ಪಾಠ ಹೇಳಲು ಮುಂದಾದ ಜನ ನಿಸ್ಸಹಾಯಕ ಹೆಣ್ಣುಮಕ್ಕಳ ಮೇಲೆ ಕೈ ಮಾಡಿದ್ದು ಸ್ವಲ್ಪವೂ ಸರಿಯಲ್ಲ.
ಆದರೆ ಅಕ್ಕ-ತಂಗಿಯರೇ ಈ ಸ್ಥಿತಿಯನ್ನು ನೀವಾಗಿಯೇ ತಂದುಕೊಂಡಿದ್ದಲ್ಲವೇ? ಅಮ್ಮ, ಅತ್ತೆ, ಚಿಕ್ಕಮ್ಮ, ಅಕ್ಕ, ತಂಗಿ, ಗೆಳತಿ, ಮಗಳು ಹೀಗೆ ಹಲವು ರೂಪಗಳಲ್ಲಿ ನಿಮ್ಮನ್ನು ಈ ಕೆಳಕಂಡ ರೂಪದಲ್ಲಿ ನಿಮ್ಮನ್ನು ನಾವು ನೋಡಿದ್ದಿಲ್ಲ. ಮೈ ಮೇಲೆ ಪ್ರಜ್ಞೆಯೇ ಇಲ್ಲದೆ ಮದಿರೆಯ ಮತ್ತಲ್ಲಿ ತೂರಾಡುತ್ತಿದ್ದರೆ ಹೇಗೆ ತಾನೆ ಗೌರವಿಸಲು ಸಾಧ್ಯ???
ನೀವು ಕಲ್ಪನಾ ಚಾವ್ಲಾ ಆದಾಗ, ಇಂದಿರಾ ಗಾಂಧಿಯಾದಾಗ, ಲತಾ ಮಂಗೇಶ್ಕರ್ ಆದಾಗ, ಪಿ.ಟಿ.ಉಷಾ, ಕರಣಂ ಮಲ್ಲೇಶ್ವರಿಯಾದಾಗ ನಮ್ಮ ಸಮಾಜ, ಜನ, ದೇಶ ನಿಮ್ಮ ಗೆಲುವನ್ನು ತಮ್ಮದೆಂಬಂತೆ ಆಚರಿಸಿ ನಿಮ್ಮ ಬೆನ್ನು ತಟ್ಟಿಲ್ಲವೇ? ನೀವು ಅತ್ಯಪೂರ್ಣ ಪ್ರೀತಿಗೆ, ಗೌರವಕ್ಕೆ ಭಾಜನರಾಗಿರಲಿಲ್ಲವೇ??? ಮನೆಮಗಳು ದುಶ್ಚಟಗಳಿಗೆ ಶರಣಾಗುವುದನ್ನು ನೋಡಿ ಹೇಗೆ ತಾನೇ ಸುಮ್ಮನಿರಲು ಸಾಧ್ಯ??? ಪುರುಷ-ಪ್ರಧಾನ ಸಮಾಜದಲ್ಲಿ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿ ಗಂಡಸರಿಗೆ ಸರಿ ಸಮಾನರಾಗಿ ನೀವು ನಡೆಯುತ್ತಿರುವುದು ನೋಡಿ ತಂಬಾ ಸಂತೋಷವಾಗುತ್ತದೆ. ಆದರೆ “ಗಂಡಸು ಕುಡಿಯುತ್ತಾನೆ, ಅನೈತಿಕ ಸಂಬಂಧಗಳನ್ನು ಇಟ್ಟುಕೊಳ್ಳುತ್ತಾನೆ. ಅಂಥದ್ದರಲ್ಲಿ ನಾವು ಮಾಡಿದರೆ ತಪ್ಪೇನು?” ಎಂಬ ನಿಮ್ಮ ವಾದ ತೀರ ಅಸಂಗತವೆನಿಸುವುದಿಲ್ಲವೇ? ಕುಡಿತ, ಚೆಲ್ಲಾಟ ಯಾರಿಗೂ ಒಳ್ಳೆಯದನ್ನು ಮಾಡಿಲ್ಲ. ನೀವು ಗೊತ್ತಿದ್ದೂ ಅದೇ ಹಾದಿ ತುಳಿದರೆ ನಿಮ್ಮ ಬೆನ್ನು ತಟ್ಟಿ ಪ್ರೋತ್ಸಾಹಿಸುವುದು ಸಾಧ್ಯವೇ??? ಒಬ್ಬ ಗಂಡಸಿಗೆ ಶಿಕ್ಷಣ ಕೊಡಿಸಿದರೆ ಅದರ ಲಾಭ ಅವನಿಗೆ ಮಾತ್ರ ಸೀಮಿತ. ಒಬ್ಬ ಹೆಣ್ಣುಮಗಳಿಗೆ ಶಿಕ್ಷಣ ಕೊಡಿಸಿದರೆ ಅದರ ಲಾಭ ಸಂಪೂರ್ಣ ಕುಟುಂಬಕ್ಕೆ ಎಂಬ ಮಾತೊಂದಿದೆ. ಅಂಥದ್ದರಲ್ಲಿ ಮನೆ ಬೆಳೆಸುವ ಮನೆಮಗಳೇ ತಪ್ಪು ಹಾದಿ ತುಳಿದರೆ ಆ ಮನೆಯ ಪಾಡೇನು? ಅಷ್ಟಕ್ಕೂ ನಿಮ್ಮ ಜೊತೆ ಕುಳಿತು ಮದಿರೆ ಸವಿಯುವ ಸಂಗಾತಿಯನ್ನು ಒಮ್ಮೆ ಕೇಳಿ ಅವನ ಜೀವನ ಸಂಗಾತಿ ಹೇಗಿರಬೇಕೆಂದು? ಎಲ್ಲಾ ಗಂಡಸರಂತೆ ಅವನಿಗೂ ಒಳ್ಳೆಯ ಮಕ್ಕಳನ್ನು ಹಡೆದು ಸನ್ಮಾರ್ಗದಲ್ಲಿ ಮುನ್ನಡೆಸುವ ಸುಸಂಸ್ಕೃತ ಮನೆಯ ಮಗಳೇ ಬೇಕು!!!
ನಾವೇನೋ ಇಪ್ಪತ್ತೊಂದನೇ ಶತಮಾನದಲ್ಲಿ ಇದ್ದೇವೆ. ವಿಜ್ಞಾನ, ತಂತ್ರಜ್ಞಾನಗಳಿಂದಾಗಿ ಇಡೀ ಜಗತ್ತು ಅತ್ಯದ್ಭುತ ಪ್ರಗತಿಯನ್ನು ಕಾಣುತ್ತಿದೆ. ಅಂಥದ್ದರಲ್ಲಿ ಧರ್ಮ, ಸಂಸ್ಕೃತಿ, ಗೌರವಗಳೆಂಬ ಓಬೀರಾಯನ ಕಾಲದ ಮೌಲ್ಯಗಳ ಬಗ್ಗೆ ಚಿಂತಿಸಲು ನಿಮಗೆಲ್ಲಿ ಸಮಯವಿದೆ? ‘Other side of the grass is always green’ ಎಂಬ ಮಾತೊಂದಿದೆ. ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅತ್ಯಂತ ಶ್ರೇಷ್ಠವೆಂದು ಭಾವಿಸಿ ಅನುಕರಿಸುವ ನಮಗೆ ಅದರ ಮುಕ್ತ ಸಮಾಜದ ಇನ್ನೊಂದು ಮಗ್ಗುಲು ತಿಳಿದೇ ಇಲ್ಲ!!! ಅತ್ಯಂತ ಹೆಚ್ಚಿನ ಸಂಖ್ಯೆಯ ಹದಿಹರೆಯದ ತಾಯಂದಿರು ಇರುವ ಗೌರವ ಪಾಶ್ಚಿಮಾತ್ಯ ದೇಶಗಳಿಗೆ ಸಲ್ಲುತ್ತದೆ!!! ಹದಿಹರೆಯದ ತಾಯಂದಿರ ಸರಾಸರಿ ವಯಸ್ಸು 15.5 ವರ್ಷ!!! ಮುಗ್ಧತೆ ಮರೆಮಾಚುವ ಮೊದಲೇ ಮಡಿಲಲ್ಲೊಂದು ಮಗು!!! ಮಾದಕ ದ್ರವ್ಯ, ಕುಡಿತ, ವಯಸ್ಸಿಗೆ ಬರುವ ಮುನ್ನವೇ ಅವ್ಯಾಹತ ದೈಹಿಕ ಸಂಬಂಧಗಳಿಂದ ನಲುಗುತ್ತಿರುವ ಪಾಶ್ಚಿಮಾತ್ಯರ ಮುಕ್ತ ಸಮಾಜದಲ್ಲಿ ಮಕ್ಕಳನ್ನು ಬೆಳೆಸುವ ಪರದಾಟವನ್ನು ಇವರ ಜೊತೆಗಿದ್ದು ಅರಿಯಬೇಕು. ಅವರ ಜೊತೆಗಿದ್ದು, ಹತ್ತಿರದಿಂದ ನೋಡಿರುವ ನನಗೆ ಇಲ್ಲಿನ ಮಕ್ಕಳ ತಂದೆ-ತಾಯಿಯರ ತುಮುಲ ಚೆನ್ನಾಗಿ ಅರ್ಥವಾಗುತ್ತದೆ. ಅಕ್ಕ-ತಂಗಿಯರೇ, ನಿಮ್ಮ ರೀತಿ-ನೀತಿಗಳು, ಆಚಾರ-ವಿಚಾರಗಳು ಅತ್ಯಂತ ವೇಗವಾಗಿ ಬದಲಾಗಿವೆ. ಆದರೆ ನಮ್ಮ ಸಮಾಜಕ್ಕೆ ಈ ನಾಗಲೋಟದ ವೇಗದೊಂದಿಗೆ ಹೊಂದಿಕೊಳ್ಳಲು ಇನ್ನೂ ಬಹಳಷ್ಟು ಸಮಯ ಬೇಕು. ನಮ್ಮ ಸಮಾಜದ ರೀತಿ-ನೀತಿಗಳು, ಆಚಾರ-ವಿಚಾರಗಳು ಆಧುನಿಕ ಜಗತ್ತಿಗೆ ಇನ್ನೂ ಮುಕ್ತವಾಗಿ ತೆರೆದುಕೊಂಡಿಲ್ಲ. ಮರವೇನೋ ದಷ್ಟ-ಪುಷ್ಟವಾಗಿ ಬಹಳ ಎತ್ತರವಾಗಿ ಬೆಳೆಯಬಹುದು. ಆದರೆ ಅದರ ಬೇರುಗಳು ಶಿಥಿಲವಾದಲ್ಲಿ ಬುಡಸಮೇತ ಉರುಳಿ ಬೀಳುವುದರಲ್ಲಿ ಸಂಶಯವಿಲ್ಲ. ಆಧುನಿಕತೆಯೊಂದಿಗೆ ಬಹಳ ವೇಗವಾಗಿ ಬೆಳೆಯುತ್ತಿರುವ ನೀವು ಸಂಸ್ಕೃತಿಯೆಂಬ ಬೇರನ್ನು ಮರೆಯದಿರಿ ಎಂಬುದೇ ನನ್ನ ಸದಾಶಯ.
0 comments:
Post a Comment