Wednesday, May 06, 2009

ನಾವೇಕೆ ತಾತ್ಸಾರದ ಹೊದಿಕೆಯನ್ನು ಹೊದ್ದು ಮಲಗಿದ್ದೇವೆ???

ಕಳೆದ ವಾರ ಅಂತರ್ಜಾಲದಲ್ಲಿ (internet) ಏನನ್ನೋ ಹುಡುಕುತ್ತಿದ್ದಾಗ ಒಂದು ಲೇಖನ ನನ್ನ ಗಮನ ಸೆಳೆಯಿತು. ಲೇಖನವು ಸೀತೆಯ ಹಲವು ಮುಖಗಳನ್ನು ಓದುಗನಿಗೆ ತೆರೆದಿಡುತ್ತದೆ. ಅವಳ ಪತ್ನೀಧರ್ಮ, ತ್ಯಾಗ, ಆದರ್ಶ, ತಪಸ್ಸು, ಸಹನೆ, ನೋವು, ಮಾತೃತ್ವ ಹೀಗೆ ಹಲವು ಮುಖಗಳ ಪರಿಚಯ ಕೊಡುತ್ತಾನೆ ಅದರ ಲೇಖಕ. ಯಾವುದೇ ಯುಗದಲ್ಲಿ ಸೀತೆ ನಿಜವಾಗಿಯೂ ವಂದನೀಯ, ಪೂಜನೀಯ ಎಂಬುದರಲ್ಲಿ ಸಂಶಯವಿಲ್ಲ. ಆದರೆ ವಿಷಯ ಅದಲ್ಲ. ನನ್ನ ಕೆಟ್ಟ ಚಾಳಿ ಅಂದರೆ ಲೇಖನದ ಬಗ್ಗೆ ಜನರ ಪ್ರತಿಕ್ರಿಯೆ ತಿಳಿದುಕೊಳ್ಳುವುದು. ಅವರ ವಕ್ಕಣೆ ಏನು ಅಂತ ನೋಡುವುದು. ಒಬ್ಬ ಓದುಗನ ಪ್ರತಿಕ್ರಿಯೆ ಹೀಗಿದೆ “ಸೀತೆ ತುಂಬಾನೆ ಸುಂದರಿ ಆಗಿದ್ದಳು. ಅದೂ ಅಲ್ಲದೆ ಒಂದು ವರ್ಷ ರಾವಣನ ಸೆರೆಯಲ್ಲಿ ಇದ್ದಳು. ಅಂತಹ ಸುಂದರಿಯನ್ನು ಕಾಮಾತುರನಾದ ರಾವಣ ಮಾತ್ರವಲ್ಲ ಅವನ ರಾಜ್ಯದ ಗಂಡಸರೆಲ್ಲಾ ಭೋಗಿಸಿರಬಹುದು. ಅವಳ ಪಾತಿವೃತ್ಯಕ್ಕೆ ಏನೂ ಆಗಿಲ್ಲ ಅನ್ನುವುದು ಶುದ್ಧ ಸುಳ್ಳು”. ಇನ್ನೊಬ್ಬ ಓದುಗ ಶಿವನ ಬಗೆಗಿನ ಲೇಖನಕ್ಕೆ ವಕ್ಕಣೆ ಬರೆಯುತ್ತಾ ಹೇಳುತ್ತಾನೆ “ ಹಿಂದುಗಳ ಪುರಾಣಗಳೆಲ್ಲಾ ಗೊಡ್ಡು. ಅದರ ತುಂಬೆಲ್ಲಾ ಕಾಮವೇ ತುಂಬಿದೆ. ಕಾಮಕ್ಕೂ ದೈವೀಸ್ವರೂಪ ಕೊಟ್ಟು ತಮ್ಮಲ್ಲಿನ ಗೌಣಗಳನ್ನು ಮುಚ್ಚಲು ಧರ್ಮದ ಮೊರೆ ಹೋಗುತ್ತಾರೆ. ಇವರ ಪುರಾಣಗಳು ರಾತ್ರಿ ಹೊತ್ತು ಮಕ್ಕಳಿಗೆ ಕತೆ ಹೇಳುವುದಕ್ಕೇ ಸರಿ.” ಇವರದೇ ಅಲ್ಲ ಇಂತಹ ನೂರಾರು ವಕ್ಕಣೆಗಳು ಓದಲು ಸಿಗುತ್ತದೆ. ಇದನ್ನೆಲ್ಲಾ ಓದಿದಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಅಂತ ಏನೂ ತಿಳಿದುಕೊಳ್ಳದೆ, ಅರ್ಧ ಬೆಂದ ಜ್ಞಾನವನ್ನು ಉಪಯೋಗಿಸಿ ಹೀಗೆಲ್ಲ ಬರೆಯುವುದು ಎಷ್ಟು ಸರಿ?

ತಲತಲಾಂತರದಿಂದ ತಲೆಮಾರಿನಿಂದ ತಲೆಮಾರಿಗೆ ನಾವು ಈ ಕತೆಗಳನ್ನು ಕೇಳಿಕೊಂಡು ಬರುತ್ತಾ ಇದ್ದೇವೆ. ಇವುಗಳು ನಮ್ಮ ದಿನ ನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿವೆ. ನಾನು ಕೂಡ ಮಹಾಭಾರತ, ರಾಮಾಯಣವನ್ನು ಕೇಳಿ, ಓದಿ ಬೆಳೆದವನು. ಹಲವರು ಇವುಗಳನ್ನು ಪುರಾಣ ಅಂತ ಹೇಳುತ್ತಾರೆ. ನನಗೆ ಇವುಗಳು ಇತಿಹಾಸ. ನಮ್ಮ ದೇಶದಲ್ಲಿ ಘಟಿಸಿಹೋದ ಅಭೂತಪೂರ್ವ ಘಟನೆಗಳು, ನಮ್ಮ ಸಂಸ್ಕೃತಿಯ ಅಡಿಗಲ್ಲುಗಳು. ಐತಿಹಾಸಿಕವಾಗಿ ಮಾತ್ರವಲ್ಲ ವೈಜ್ನಾನಿಕವಾಗಿಯೂ ಅದ್ಭುತವಾಗಿವೆ. ಇವತ್ತಿನ ಆಧುನಿಕ ವಿಜ್ಞಾನ ಮಾಡಿ ತೋರಿಸಿದ ಆವಿಷ್ಕಾರಗಳ ತುಣುಕುಗಳನ್ನು ಕ್ರಿ.ಪೂ 3000 ಇಸವಿಗಿಂತಲೂ ಹಳೆಯದಾದ ಗ್ರಂಥಗಳಲ್ಲಿ ದಾಖಲಿಸಲಾಗಿದೆ. ಮಹಾಭಾರತದಲ್ಲಿ ಉಲ್ಲೇಖಿಸಿರುವ ಕೌರವರ ಜನನ ವೃತ್ತಾಂತವೇ ಇದಕ್ಕೊಂದು ಒಳ್ಳೆಯ ನಿದರ್ಶನ. ಮಹರ್ಷಿ ವ್ಯಾಸರು ಗರ್ಭಪಾತವಾದ ಗಾಂಧಾರಿಯ ಭ್ರೂಣವನ್ನು ನೂರ ಒಂದು ತುಪ್ಪದ ಗಡಿಗೆಗಳಲ್ಲಿ ತುಂಬಿಡುತ್ತಾರೆ. ಮುಂದೆ ಇವುಗಳಿಂದ ಕೌರವರ ಜನನವಾಗುತ್ತದೆ. ಇದು ಆಧುನಿಕ ವಿಜ್ಞಾನದ ನಳಿಕಾ ಶಿಶು (Test Tube Baby) ಪ್ರಯೋಗವನ್ನು ಹೋಲುವುದಿಲ್ಲವೇ? ರಾಮಾಯಣದಲ್ಲಿನ ಪುಷ್ಪಕ ವಿಮಾನ, ಯುದ್ಧಗಳಲ್ಲಿ ಬಳಸಿರುವ ದಿವ್ಯಾಸ್ತ್ರಗಳು ನಮ್ಮ ಪೂರ್ವಜರ ವೈಜ್ಞಾನಿಕ ಜ್ಞಾನಕ್ಕೆ, ಸಾಹಸಕ್ಕೆ ಹಿಡಿದ ಕನ್ನಡಿ. ಇಂದಿನ ಕ್ಷಿಪಣಿಗಳು ನಮ್ಮ ದಿವ್ಯಾಸ್ತ್ರಗಳ ತದ್ರೂಪಲ್ಲವೇ? ಭಾರದ್ವಾಜ ಮುನಿಗಳು ತಮ್ಮ ವೈಮಾನಿಕ ಗ್ರಂಥದಲ್ಲಿ ವಿಮಾನ ತಯಾರಿಸುವ ರೀತಿ, ಅದರ ಹಿಂದಿನ ವಿಜ್ಞಾನವನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ. ಅಗಸ್ತ್ಯ ಸಂಹಿತೆ ವಿದ್ಯುತ್ತನ್ನು ತಯಾರಿಸುವ ವಿಧಾನವನ್ನು ತಿಳಿಸುತ್ತದೆ. ರಕ್ತ ಬೀಜಾಸುರನ ಕತೆ ಕ್ಲೋನಿಂಗ್-ಗೆ ಒಳ್ಳೆಯ ಉದಾಹರಣೆ. ಇಂತಹ ಜ್ಞಾನಪೂರ್ಣ ಇತಿಹಾಸದ ಬಗ್ಗೆ ನಮಗೇಕೆ ಅಜ್ಞಾನ, ತಾತ್ಸಾರ, ಕೀಳರಿಮೆ?

ಮಕ್ಕಳಿಗೆ ಪಂಚತಂತ್ರದಲ್ಲಿ ಬರುವ ಪ್ರಾಣಿಗಳ ಕತೆ ಹೇಳಿ ಮನೋರಂಜಿಸುವುದಷ್ಟೇ ಅಲ್ಲ ಅದರಲ್ಲಿ ಬರುವ ನೀತಿಪಾಠ, ಧನಾತ್ಮಕ ಅಂಶಗಳನ್ನು ತಿಳಿಸಿ ಅವರ ವ್ವಕ್ತಿತ್ವ ವಿಕಾಸ ಮಾಡುವುದೂ ಆಗಿದೆ. ನಮ್ಮ ಇತಿಹಾಸವೂ ಯಾವುದೇ ನೀತಿಪಾಠಗಿಂತ ಕಡಿಮೆ ಇಲ್ಲ. ಅದರಲ್ಲಿ ಬರುವ ಸಂದರ್ಭಗಳು, ವ್ಯಕ್ತಿಗಳು, ಘಟನೆಗಳು ತೋರಿಸಿಕೊಟ್ಟ ಆದರ್ಶಗಳೇ ನಮ್ಮ ಸಂಸ್ಕೃತಿಯ ಬೇರುಗಳು. ನಮ್ಮ ವ್ಯಕ್ತಿ ವಿಕಸನದ ಮಾರ್ಗಗಳು. ವ್ಯಾಪಾರದ ಸೋಗಿನಲ್ಲಿ ಬಂದಿದ್ದ ಬ್ರಿಟಿಷರು ಇದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. 2-2-1835ರಂದು ಬ್ರಿಟಿಷ್ ಸಂಸತ್ತಿನಲ್ಲಿ ಮೆಕಾಲೆ ಇದನ್ನು ಸ್ಪಷ್ಟ ಪಡಿಸುತ್ತಾ ಹೇಳುತ್ತಾನೆ “ನಾನು ಭಾರತದ ಉದ್ದಗಲಗಳಲ್ಲಿ ಸಂಚರಿಸಿದ್ದೇನೆ. ಒಬ್ಬನೇ ಒಬ್ಬ ಬಿಕ್ಷುಕನನ್ನಾಗಲೀ, ಕಳ್ಳನನ್ನಾಗಲೀ ನೋಡಿಲ್ಲ. ಮಹಾನ್ ಸಂಪ್ಥರಿತವಾಗಿರುವ ಈ ದೇಶದ ಜನರ ನೈತಿಕ ನಡತೆ ಅದ್ವಿತೀಯ. ಈ ದೇಶವನ್ನು ಆಳಬೇಕಾದರೆ ಇದರ ಬೆನ್ನೆಲುಬಾದ ಆಧ್ಯಾತ್ಮ ಮತ್ತು ಸಂಸ್ಕೃತಿಯನ್ನು ಭೇದಿಸಬೇಕು. ಆದ್ದರಿಂದ ನನ್ನ ಸಲಹೆ ಏನೆಂದರೆ ಈ ದೇಶದ ಪ್ರಾಚೀನ ಗುರುಕುಲ ಶಿಕ್ಷಣ, ಸಾಂಸ್ಕೃತಿಕ ಸಂಪತ್ತುಗಳ ಬದಲಾಗಿ ವಿದೇಶೀಯ ಹಾಗೂ ಆಂಗ್ಲ ಶಿಕ್ಷಣ ಪದ್ದತಿ ತರಬೇಕು. ಇದು ಅವರ ಸಂಸ್ಕೃತಿಗಿಂತ ಬಲು ಶ್ರೇಷ್ಟ ಅನ್ನುವ ಭಾವನೆ ಮೂಡಿಸಬೇಕು. ಇದರಿಂದ ಭಾರತೀಯರ ಆತ್ಮಗೌರವ, ಅದ್ವಿತೀಯ ಸಂಸ್ಕೃತಿ ನಶಿಸಿಹೋಗುತ್ತದೆ. ಇಷ್ಟಾದ ಬಳಿಕ ಅವರನ್ನು ಪಳಗಿಸುವುದು ಸುಲಭ.” ಮಾಕ್ಸ್ ಮುಲ್ಲರ್-ನಂತಹ ಪಾಶ್ಚಿಮಾತ್ಯರು ಮಾಡಿದ್ದೂ ಅದನ್ನೇ. ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗಗಳಾದ ವೇದ, ಪುರಾಣ, ಸಂಸ್ಕೃತಗಳನ್ನು ನಮ್ಮದಲ್ಲ ಅಂತ ಹೇಳಿದರು. ಇದನ್ನು ಸಮರ್ಥಿಸಲು ಆರ್ಯ-ದ್ರಾವಿಡ ಸಿದ್ಧಾಂತವನ್ನು ತಂದರು. ನಮ್ಮಲ್ಲಿನ ಋಣಾತ್ಮಕ ಅಂಶಗಳಾದ ಸತೀ ಪದ್ದತಿ, ಬಾಲ್ಯ ವಿವಾಹ, ಜಾತೀಯತೆಗಳನ್ನು ಎತ್ತಿ ತೋರಿಸಿದರು. ಇದನ್ನಲ್ಲವೇ ನಮ್ಮ ಶಾಲಾ ಪುಸ್ತಕಗಳಲ್ಲಿ ಓದಿದ್ದು, ಓದುತ್ತಾ ಇರುವುದು.

ಇಂದೂ ಅಷ್ಟೆ ನಮಗೆ ಪಶ್ಚಿಮವೇ ಚಂದ, ಪಾಶ್ಚಿಮಾತ್ಯರೇ ಶ್ರೇಷ್ಠರು. ಒಂದು ವಿಷಯಕ್ಕೆ ಪಾಶ್ಚಿಮಾತ್ಯ ಇತಿಹಾಸಜ್ಞರ, ಪಾಶ್ಚಿಮಾತ್ಯ ವಿಜ್ಞಾನಿಗಳ, ಪಾಶ್ಚಿಮಾತ್ಯ ಮೂಲಗಳಿಂದ ಸಮರ್ಥನೆ ಸಿಕ್ಕರೆ ಮಾತ್ರ ಅದಕ್ಕೆ ಘನತೆ, ಗೌರವ. ಹಿತ್ತಿಲ ಗಿಡ ಮದ್ದಲ್ಲ ಅನ್ನುವ ಮಾತನ್ನು ಅಕ್ಷರಶಃ ನಾವು ಪಾಲಿಸುತ್ತೇವೆ. ನಮ್ಮದೊಂದು ಅರ್ಥವಿಲ್ಲದ ಗೊಡ್ಡು ಸಂಪ್ರದಾಯ, ನಾವು ತೀರಾ ಹಿಂದುಳಿದವರು ಅನ್ನುವಂತಹ ಭಾವನೆ ನಮ್ಮಲ್ಲಿ ಬಹಳ ಆಳವಾಗಿ ಮನೆ ಮಾಡಿದೆ. ನಮ್ಮ ಸಂಸ್ಕೃತಿ, ಇತಿಹಾಸದ ಬಗ್ಗೆಯೇ ಕೀಳರಿಮೆ ಬೆಳೆಸಿ ತಾತ್ಸಾರದ ಹೊದಿಕೆ ಹೊದ್ದು ಮಲಗಿದ್ದೇವೆ. ಇತ್ತೀಚೆಗೆ ಬಂದ “ಸ್ಲಮ್ ಡಾಗ್ ಮಿಲಿಯನೇರ್” ಚಲನಚಿತ್ರವನ್ನೇ ತಗೊಳ್ಳಿ. ಭಾರತವನ್ನು ಹಿಂದುಗಳನ್ನು ಎಷ್ಟು ಕೆಟ್ಟದಾಗಿ ಚಿತ್ರಿಸಬಹುದೋ ಅಷ್ಟು ಕೆಟ್ಟದಾಗಿ ಚಿತ್ರಿಸಿದ್ದಾರೆ. ಅದರ ಮೂಲಕತೆಯನ್ನು ಪಾಶ್ಚಿಮಾತ್ಯರಿಗೆ ಹೊಂದುವಂತೆ ಬದಲಾಯಿಸಿ, ಭಾರತವನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಜಗತ್ತಿಗೆ ಪ್ರದರ್ಶಿಸಿದ್ದಾರೆ. ನಮ್ಮ ಮಾನವನ್ನು ಜಗತ್ತಿನ ಮುಂದೆ ಹರಾಜು ಹಾಕುತ್ತಿದ್ದರೆ ನಾವು ಇದನ್ನು ತಲೆ ಮೇಲೆ ಹೊತ್ತುಕೊಂಡು ಓಡಾಡುತ್ತಿದ್ದೇವೆ. ನಮ್ಮನ್ನು ಆಳುವ ದೊರೆಗಳಿಗೂ ಇದರ ಬಗ್ಗೆ ಸ್ಚಲ್ಪವೂ ಕಾಳಜಿಯಾಗಲೀ, ಪರಿವೆಯಾಗಲೀ ಇಲ್ಲ. ಹಾಗಂತ ನಮ್ಮ ದೇಶದಲ್ಲಿ ಬಡತನವಿಲ್ಲ ಅಂತ ಹೇಳಿತ್ತಿಲ್ಲ. ದೇಶ ಅಂದಮೇಲೆ ಒಳ್ಳೆಯದು-ಕೆಟ್ಟದ್ದು, ಸಿರಿತನ-ಬಡತನ, ಎಲ್ಲವೂ ಇದ್ದದ್ದೆ. ಸ್ವಯಂ ಶ್ರೀರಾಮನ ಕಾಲದಲ್ಲಿ ಅಧರ್ಮಿ ರಾವಣ ಇರಲಿಲ್ಲವೇ? ಗೀತಾಚಾರ್ಯ ಶ್ರೀಕೃಷ್ಣನಿದ್ದಾಗ ದುರ್ಯೋಧನ, ದುಶ್ಯಾಸನರಂತಹ ಅಸಭ್ಯರಿರಲಿಲ್ಲವೇ? ಹಾಗೆಯೇ ನಮ್ಮಲ್ಲಿ ಋಣಾತ್ಮಕ ಅಂಶಗಳ ಜೊತೆಗೆ ಹಲವಾರು ಒಳ್ಳೆಯ ವಿಷಯಗಳೂ ಇವೆ. ವೇದಗಳು, ಯೋಗ, ಆಧ್ಯಾತ್ಮ, ಸಂಸ್ಕೃತಿ, ಆಯುರ್ವೇದ, ಶಿಲ್ಪಕಲೆ, ಭಾಷೆಗಳು ಇನ್ನೂ ಏನೇನೋ. ಬಡತನ ಇದೆ ಅಂದ ಮಾತ್ರಕ್ಕೆ ಅದನ್ನು ವೈಭವೀಕರಿಸಿ ಪ್ರದರ್ಶಿಸುವ ಅಗತ್ಯ ಏನಿದೆ? ಭಾರತವನ್ನು, ಭಾರತೀಯರನ್ನು ಅಪಮಾನಿಸುವುದೇ ಇವರ ಉದ್ದೇಶವಲ್ಲವೇ? ಆದರೆ ನಮಗೆ ಇದರ ಬಗ್ಗೆ ಚಿಂತಿಸಲು ಸಮಯವೆಲ್ಲಿದೆ? ಸಮಯವಿದ್ದರೂ ಇದೊಂದು ಚಿಂತನೆಗೊಳಪಡಿಸಬೇಕಾದ ಮಹತ್ವದ ವಿಷಯ, ಇದರ ವಿರುದ್ಧ ದನಿ ಎತ್ತಬೇಕು ಅಂತ ಅನ್ನಿಸುವುದೇ ಇಲ್ಲ. ನಮಗೇ ತಮ್ಮ ಸಂಸ್ಕೃತಿ, ಇತಿಹಾಸ, ದೇಶದ ಬಗ್ಗೆ ಗೌರವ, ಸ್ವಾಭಿಮಾನ ಇಲ್ಲವಾದಲ್ಲಿ ಇನ್ನೊಬ್ಬರನ್ನು ದೂರಿ ಏನು ಪ್ರಯೋಜನ??? ನಮ್ಮಲ್ಲೇಕೆ ಕೀಳರಿಮೆ? ನಮ್ಮಲ್ಲಿ ಸ್ವಾಭಿಮಾನ ಯಾಕಿಲ್ಲ? ನಾವೇಕೆ ತಾತ್ಸಾರದ ಹೊದಿಕೆಯನ್ನು ಹೊದ್ದು ಮಲಗಿದ್ದೇವೆ????

ಮುಗಿಸುವ ಮುನ್ನ – ಚತುರ್ವೇದ, ರಾಮಾಯಣ, ಮಹಾಭಾರತ, ಕುರಾನ್, ಬೈಬಲ್, ಗ್ರಂಥ್ ಸಾಹಿಬ್ ಯಾವುದೇ ಧರ್ಮ ಗ್ರಂಥ ಇರಲಿ. ಅದರಲ್ಲಿನ ವ್ಯಕ್ತಿಗಳು, ಸಂದೇಶಗಳು, ಘಟನೆಗಳು ಮೇಲ್ನೋಟಕ್ಕೆ ಕತೆಗಳಂತೆ ತೋರಬಹುಹು. ಆದರೆ ಅವುಗಳ ಒಳಾರ್ಥ, ಸಾರ ಬೇರೆಯೇ ಅರ್ಥವನ್ನು ಕೊಡುತ್ತದೆ. ಉದಾಹರಣೆಗೆ ‘ಕಾಮ’ದ ಅರ್ಥ ಬರೇ ದೈಹಿಕ ವಾಂಛೆಗಷ್ಟೇ ಸೀಮಿತವಲ್ಲ. ಅದು ಮನುಷ್ಯನ ಸರ್ವ ಆಸೆಗಳನ್ನು, ಅವನ ಪ್ರಾಪಂಚಿಕ ಮೋಹವನ್ನು ಬಿಂಬಿಸುತ್ತದೆ. ಅದನಲ್ಲವೇ ಬುದ್ಧ ‘ಆಸೆಯೇ ದುಃಖಕ್ಕೆ ಮೂಲ’ ಅಂತ ಹೇಳಿದ್ದು. ಹೇಗೆ ತುಂಬಿದ ಕೊಡ ತುಳುಕುದಿಲ್ಲವೋ ಹಾಗೆಯೇ ಸಂಪೂರ್ಣ ಜ್ಞಾನವನ್ನು ಗಳಿಸಿದವರು ತಿಳಿಗೇಡಿಯಂತೆ ವರ್ತಿಸಲಾರರು. ಒಂದು ವಿಷಯವನ್ನು ಚೆನ್ನಾಗಿ ಅರಿತು ಮಾತನಾಡಿದರಲ್ಲವೇ ಒಳ್ಳೆಯದು. ಅರ್ಧಂಬರ್ಧ ತಿಳಿದು ವಕ್ಕಣೆ ಬರೆಯುವುದು ಸರಿಯೇ?

7 comments:

Anonymous said...

Awesome dude! you should start publishing your blogs as articles in kannada magazines...should reach more people...keep it up.

Prashanth

Anonymous said...

ತು೦ಬಾ ಗಹನವಾದ ಲೇಖನ, ವೈಚಾರಿಕವಾದದ್ದು.. ಸರಾಗ ಓದಿಸುತ್ತಾ ಹೋಗುತ್ತದೆ ಯೋಚನಾ ಲಹರಿಯ೦ತೆ. ಬರೆಯುತ್ತಾ ಇರಿ

soorya said...

Friend, Good Artilce, you have written truth.

Anonymous said...

Bro..great job,every individual has to read this

soorya said...

This is not for article. The Blog Banner super, we are all welcome for your " SWAGATA " " MANADAMAATU ".

Shivanand said...

ಅದ್ಭುತವಾಗಿ ಬರೆದಿದ್ದೀರಿ. ತುಂಬಾ ವಿಷಯಗಳನ್ನು ಉದಾಹರಿಸಿ, ತುಲನೆ ಮಾಡಿ ಬರೆದಿದ್ದೀರಿ.

ಭಾರತೀಯ said...

ಲೇಖನ ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು.... ಆಗಾಗ ಭೇಟಿ ಕೊಡುತ್ತಿರಿ...