ಪಾಂಡವರ ವನವಾಸದ ಸಮಯದಲ್ಲಿ ನೀರು ತರಲೆಂದು ಹೋದ ತಮ್ಮಂದಿರನ್ನು ಹುಡುಕಿಕೊಂಡು ಹೊರಟ ಯುಧಿಷ್ಠಿರನನ್ನು ಯಕ್ಷ ಕೇಳುತ್ತಾನೆ “ವಾಯುವಿಗಿಂತ ವೇಗವಾದದ್ದು ಯಾವುದು”? "ಮನಸ್ಸು" ಶಾಂತಚಿತ್ತನಾಗಿ ಉತ್ತರ ನೀಡುತ್ತಾನೆ ಧರ್ಮಜ. ಅದ್ಭುತವಾದ ಉತ್ತರ ಅಲ್ಲವೇ? ಒಂದು ಸಲ ಯೋಚಿಸಿ ನೋಡಿ ಮನಸ್ಸಿನ ವೇಗ ಎಂಥದ್ದು ಅಂತ. ಅದಕ್ಕೆ ಗಡಿಯಾಗಲೀ, ಎಲ್ಲೆಯಾಗಲೀ ಇಲ್ಲ. ತನ್ನ ಗಮ್ಯವನ್ನು ಕ್ಷಣಮಾತ್ರಕ್ಕೆ ತಲಪುತ್ತದೆ. ನಿರ್ದಿಷ್ಟವಾದ ದಿಕ್ಕು-ದಿಸೆಯೂ ಬೇಕಾಗಿಲ್ಲ. ಕಾಲ ಚಕ್ರದ ಗಣನೆಯೂ ಇಲ್ಲ. ಭವಿಷ್ಯವನ್ನೂ ಕಾಣಬಹುದು (ಹಗಲುಗನಸಿನ ರೀತಿ). ಭೂತಕಾಲದ ಗರ್ಭವನ್ನೂ ನುಸುಳಬಹುದು.
ಮನಸ್ಸಿನ ಪ್ರಸ್ತಾಪ ಇಲ್ಲಿ ಯಾಕೆ ಅಂದರೆ ನನ್ನಲ್ಲಿ ಮಾತು ಬಹಳ ಕಡಿಮೆ. ವಿಷಯ ಇಲ್ಲ ಅಂತಲ್ಲ. ನಾನು ಅಂತರ್ಮುಖಿ ಅಷ್ಟೆ. ಆಡು ಭಾಷೆಯಲ್ಲಿ ಹೇಳುವುದಾದರೆ ಮೂಡಿ ಮನುಷ್ಯ. ಆದರೂ ಮನಸ್ಸು ಸುಮ್ಮನಿರುತ್ತದೆಯೇ? ಕ್ಷಣಾರ್ಧದಲ್ಲಿ ನೂರಾರು ಯೋಚನೆಗಳು, ಚಿತ್ರಗಳು, ವ್ಯಕ್ತಿಗಳು, ಸುಳಿದು ಕತೆ ಕಟ್ಟಿ ಮಾಯವಾಗುತ್ತವೆ. ನನ್ನೊಳಗೆ ಹಲವಾರು ಪ್ರಶ್ನೆಗಳು ಹುಯ್ದಾಡುತ್ತವೆ. ಈ ಯೋಚನಾ ಲಹರಿಗೆ ಸಮಯದ ಪರಿವೆಯೂ ಇಲ್ಲ. ಸ್ನಾನಕ್ಕಿಳಿದಾಗ, ವ್ಯಾಯಾಮ ಮಾಡುವಾಗ, ಊಟದ ಮಧ್ಯದಲ್ಲಿ ಹೀಗೆ ಎಲ್ಲೆಂದರಲ್ಲಿ ಧುತ್ತನೆ ಪ್ರತ್ಯಕ್ಷವಾಗುತ್ತದೆ. ಹಲವು ಬಾರಿ ಈ ಯೋಚನೆಗಳು ಬರುವುದು ಜನ ಜಂಗುಳಿಯ ಮಧ್ಯದಲ್ಲಿ ಇರುವಾಗ!!! ಆಫೀಸ್ ಮೀಟಿಂಗ್-ಗಳಲ್ಲಿ, ಮದುವೆ ಮನೆಯಲ್ಲಿ, ಜಾತ್ರೆಯ ತೇರು ಎಳೆಯುವಲ್ಲಿ. ದೇಹ ತನ್ನ ಸ್ಥಾನ ಬಿಟ್ಟು ಕದಲುವುದಿಲ್ಲ. ಕಣ್ಣು ಬಿಟ್ಟು ಪರಮ ಯೋಗಿಯಂತೆ ಕುಳಿತುಕೊಂಡಿರುತ್ತೇನೆ, ವಾಸ್ತವದ ಅರಿವೇ ಇರುವುದಿಲ್ಲ. ಆದರೆ ಅಲ್ಲಿ ಮನಸ್ಸಿನ ಸುಳಿವೇ ಇರುವುದಿಲ್ಲ. ಅದು ತನ್ನದೇ ಯೋಚನೆಗಳ ಬಾಲ ಹಿಡಿದು ಯಾವುದರ ಪರಿವೆಯೇ ಇಲ್ಲದೆ ತನ್ನ ಜಾಡು ಹಿಡಿದಿರುತ್ತದೆ. ಹಾಗಂತ ಯೋಚನೆಗಳಿಗೆ ಇಂಥದ್ದೇ ಎಂಬ ನಿರ್ದಿಷ್ಟತೆ ಇಲ್ಲ. ದೇಶ, ಜನ, ಊರು, ಜಾತಿ-ಮತ, ಧರ್ಮ, ದೇವರು, ಜೀವನ, ಆಧ್ಯಾತ್ಮ, ಕೆಲಸ, ಪ್ರೀತಿ-ಪ್ರೇಮ, ಹಣಕಾಸು, ಕವಿತೆ, ಕತೆ, ಅಮ್ಮ ಹೀಗೆ ಲಗಾಮಿಲ್ಲದ ಕುದುರೆಯಂತೆ ಓತಪ್ರೋತವಾಗಿ ಸಾಗುತ್ತಾ ಇರುತ್ತದೆ. ಪ್ರತಿ ದಿನ ಉತ್ತರವಿರುವ, ಉತ್ತರವಿಲ್ಲದಿರುವ ಪ್ರಶ್ನೋತ್ತರಗಳ ಸಮುದ್ರ ಮಂಥನ ನಡೆಯುತ್ತಾ ಇರುತ್ತದೆ.
ಮನಸ್ಸಿನ ಸ್ವಚ್ಛಂದ ವಿಹಾರಕ್ಕೆ ಕಡಿವಾಣ ಹಾಕುವ ಹಂಬಲ ನನ್ನಲ್ಲಿ ಇಲ್ಲ. ಯಾಕೆಂದರೆ ಇದು ಬಹಳಷ್ಟು ಬಾರಿ ಬುಧ್ದಿಶಕ್ತಿಯನ್ನು ಒರೆಗೆ ಹಚ್ಚುತ್ತದೆ. ಹಾಗಂತ ಅದರ ಹೊರೆಯನ್ನು ಹೊತ್ತು ದಿನ ದೂಡುವುದು ಕಷ್ಟ. ಮನಸ್ಸಿನ ತುಮುಲಗಳು ಹಲವಾರು ಹೊಸ ಆಯಾಮಗಳಿಗೆ ಎಡೆ ಮಾಡಿಕೊಡುತ್ತವೆ. ಅಂಥಹ ಆಯಾಮವೇ ಈ ಸ್ವಗತ. ಅಂತರ್ಮುಖಿಯ ಸ್ವಗತಗಳನ್ನು ಹರವಿಟ್ಟು ಹಗುರವಾಗುವ ಪ್ರಯತ್ನವೇ ಈ ಸ್ವಗತ.
2 comments:
ಸುನೀಲ್,
ನೀವು ಮೂಡಿ ಅಂತ ನನಗೆ ಯಾವತ್ತೂ ಅನ್ನಿಸಿಲ್ಲ.
ಚೆನ್ನಾಗಿ ಬರ್ದಿದ್ದೀರಿ.
ನಿಮ್ಮ ಯೋಚನಾ ಲಹರಿ ಜೋಗ ಜಲಪಾತದಂತೆ ಧುಮ್ಮಿಕ್ಕಿ ಹರಿಯಲಿ.
ಆದನ್ನು ಸವಿಯುವ ಭಾಗ್ಯ ನಮ್ಮದಾಗಲಿ.
ಬರೆಯುತ್ತಾ ಇರಿ.
ಶುಭಂ
ಎಸ್. ಶಿವಾನಂದ ಗವಳ್ಕರ್
(www.ssgavalkar.blogspot.com)
ಧನ್ಯವಾದಗಳು...ಶಿವಾನಂದ...ಮೂಡಿ ಅನ್ನೋದಕ್ಕಿಂತ ಬಹಳಷ್ಟು ವಿಷಯಗಳನ್ನು ಮನಸ್ಸಲ್ಲೇ ಮಾತನಾಡಿಕೊಳ್ಳುತ್ತಿರುತ್ತೇನೆ...ಮನಸ್ಸಲ್ಲೇ ಇದ್ರೆ ಅಜೀರ್ಣ ಆಗತ್ತೆ.... ಅದನ್ನು ಇಲ್ಲಿ ಚೆಲ್ಲುವ ಒಂದು ಪ್ರಯತ್ನ ಅಷ್ಟೆ.... ಆಗಾಗ ಭೇಟಿ ಕೊಡ್ತಾ ಇರಿ....
Post a Comment