Wednesday, April 15, 2009

ಗೆಳತಿ. . . ಮಳೆ ತಂದ ನಿನ್ನ ನೆನಪು. .


ಮುಂಗಾರು ಮಳೆಯೇ. . . ಏನು ನಿನ್ನ ಹನಿಗಳ ಲೀಲೆ. . .

ನಿನ್ನ ಮುಗಿಲ ಸಾಲೇ. . . ಧರೆಯ ಕೊರಳ ಪ್ರೇಮದ ಮಾಲೆ. . .

ಯಾಕೆ ಈ ಹಾಡು ಗೊತ್ತಾ ಗುಬ್ಬಿ? ಬರೀ ಇಂಪಾಗಿದೆ ಅಂತ ಅಲ್ಲ. ಮಳೆ ಬಹಳಷ್ಟು ನೆನಪುಗಳನ್ನು ಹಸಿರಾಗಿಸುತ್ತದೆ. ಚುಮು-ಚುಮು ಮಳೆ ಬೆಚ್ಚನೆಯ ನೆನಪುಗಳ ಕಚಗುಳಿ ಇಡುತ್ತದೆ. ನಿಮಗೆ ನೆನಪಿದೆಯಾ? ಮಳೆಗಾಲದಲ್ಲೇ ನಾನು ನಿಮ್ಮ ಊರಿಗೆ ಬಂದದ್ದು, ನಿಮ್ಮನ್ನು ಹತ್ತಿರದಿಂದ ನೋಡಿದ್ದು, ಮನೆಯ ಹಜಾರದಲ್ಲಿ ಕುಳಿತು ಬೆಚ್ಚನೆಯ ಮಲೆನಾಡ ಕಾಫಿ ಸವಿಯುತ್ತಾ ಮಾತುಗಳನ್ನಾಡಿದ್ದು, ಗದ್ದೆ ಬದುವಿನಲ್ಲಿ ಕೈ ಕೈ ಹಿಡಿದು ಮಳೆಯಲ್ಲಿ ನೆನೆದದ್ದು, ನನಗೆ ಗೊತ್ತಿಲ್ಲದಂತೆ ನನ್ನ ಮನಸ್ಸಿನೊಳಗೆ ನೀವು ಇಣುಕಿದ್ದು!!! ಮತ್ತೊಮ್ಮೆಯೂ ನಾನು ನಿಮ್ಮೂರಿಗೆ ಬಂದದ್ದು ಜೂನ್ ತಿಂಗಳಲ್ಲಿ. ಮತ್ತದೇ ಮಳೆಯ ಸಂಭ್ರಮ, ನನಗೆ ನಿಮ್ಮನ್ನು ಕಾಣುವ ತವಕ. ಅದಕ್ಕೆ ಹೇಳಿದ್ದು ಮಳೆ ನನಗೆ ತುಂಬಾ ಇಷ್ಟ ಅಂತ. ಸವಿ ಸವಿ ನೆನಪುಗಳ ಬುತ್ತಿ ಬಿಚ್ಚಿ ಕುಳಿತುಕೊಳ್ಳುವಂತೆ ಮಾಡುತ್ತದೆ. ನನಗೆ ನೀವು ಹತ್ತಿರವಾದದ್ದೇ ಈ ಮಳೆಯಲ್ಲಿ.

ಇವತ್ತು ಮಳೆಯ ಬಗ್ಗೆ ಯಾಕೆ ಇಷ್ಟೊಂದು ಮಾತನಾಡುತ್ತಿದ್ದೇನೆ ಗೊತ್ತಾ ಗುಬ್ಬಿ? ನಿನ್ನೆ ಇಲ್ಲಿ ಧೋ ಅಂತ ಮಳೆ ಸುರಿಯಿತು ಕಣೋ. ಗುಡುಗು-ಮಿಂಚುಗಳ ಸಂಭ್ರಮದೊಂದಿಗೆ. ಥೇಟ್ ನಮ್ಮೂರಿನ ಮುಂಗಾರು ಮಳೆಯ ಹಾಗೆ. ಆದರೆ ಊರ ಮಣ್ಣಿನ ಸುವಾಸನೆ ಅದು ತರಲಿಲ್ಲ. ತರಲಿಕ್ಕೆ ಸಾಧ್ಯವೂ ಇಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ನೀವು ಇರಲಿಲ್ಲ. ನಿಮ್ಮನ್ನು ತುಂಬಾ ನೆನಪಿಸಿಕೊಂಡೆ.

ಇಲ್ಲಿ ಮನೆಯ ಪಕ್ಕ ಒಂದು ಸ್ತೆ ಇದೆ. ಅದರ ಎರಡು ಬದಿಗೆ ದಟ್ಟವಾದ ಮರಗಳು ಬೆಳೆದಿವೆ. ಮಳೆ ಬಂದು ಹೋದ ಮೇಲೆ ಹೊರಗಡೆಗೆ ನನ್ನ ದೃಷ್ಟಿ ಹಾಯಿಸಿದೆ. ಎಷ್ಟು ಚೆನ್ನಾಗಿತ್ತು ಗೊತ್ತಾ? ನೀವು ಜೊತೆಯಲ್ಲಿದ್ದರೆ ನಿಮ್ಮ ಕೈ ಹಿಡಿದುಕೊಂಡು ಆ ದಟ್ಟ ಕಾಡಿನ ಹಾದಿಯಲ್ಲಿ ನಿಮಗಿಷ್ಟವಾದ ಹಾಡು ಹಾಡಿಕೊಂಡು ನಡೆಯಬೇಕು, ಆ ಹಾಡು ಕೇಳಿ ನಿಮ್ಮ ಮುಖದಲ್ಲಿ ಅರಳುವ ನಗುವನ್ನು ಸವಿಯಬೇಕು ಅಂತ ಅನ್ನಿಸಿತು. ನಿಮ್ಮ ಜೊತೆ ಇಲ್ಲದಿದ್ದರೆ ಮನಸ್ಸಿಗೆ ಏನೂ ಹಿಡಿಸುವುದಿಲ್ಲ. ನಿನ್ನೆಯ ಮಳೆಯ ತಂಪೂ ನನ್ನನ್ನು ತುಂಬಾ ಸುಡುತ್ತಿತ್ತು. ಮರುದಿನ ಬೆಳಗ್ಗೆ ಕಾಡುದಾರಿಯ ಹಾದಿ ಹಿಡಿದಾಗ ಸೂರ್ಯನ ಎಳೆಯ ರಷ್ಮಿಗಳು ಮರಗಳನ್ನು ತೂರಿ ಇಬ್ಬನಿಯ ಮೇಲೆ ಬೀಳುತ್ತಿತ್ತು. ಎಳೆ ಬಿಸಿಲಿಗೆ ಮೈಯೊಡ್ಡಿ ಹರಡಿದ್ದ ಇಬ್ಬನಿಗಳ ಹೊಳಪು ಯಾವುದೆ ಮುತ್ತು-ರತ್ನಗಳಿಗೆ ಕಡಿಮೆ ಇರಲಿಲ್ಲ. ಅವನ್ನೆಲ್ಲ ಆಯ್ದು ಪೋಣಿಸುವ ಹಾಗಿದ್ದರೆ ನಿಮಗೆ ಉಡುಗೊರೆಯಾಗಿ ಕೊಡಬಹುದಿತ್ತು. ನನ್ನ ಯೋಚನೆಗೆ ಮನಸಲ್ಲೆ ನಕ್ಕು ಮುಂದೆ ಸಾಗಿದೆ.

ಪ್ರತಿ ಬಾರಿ ಮಳೆ ನಿಮ್ಮ ನೆನಪುಗಳನ್ನು ಹೊತ್ತು ತಂದು ನನ್ನನ್ನು ಕಾಡುತ್ತಾ ಇರುತ್ತದೆ. ನೀವು ಜೊತೆಗಾದರೂ ಇರಬಾರದೇ. . . ಮಲೆನಾಡಿನ ಮಳೆಯ ಹನಿಗಳಿಗೆ ಮುಖವೊಡ್ಡಿ ಖುಷಿ ಪಟ್ಟಿದ್ದು, ನಾ ಮುಂದು ತಾ ಮುಂದು ಅಂತ ಗಿಡಗಳನ್ನಾಡಿಸಿ ಮಳೆಯ ಹನಿಗಳನ್ನು ಉದುರಿಸಿ ನೆನೆಯಿಸಿದ್ದು, ನಾನು ಮೊದಲ ಬಾರಿ ನಿಮ್ಮನ್ನು ಸ್ಪರ್ಷಿಸಿದ್ದು, ಮಳೆಯಲ್ಲೇ ನೀವು ನನ್ನ ಮನಸ್ಸಿನ ವೀಣೆಯನ್ನು ಮೀಟಿದ್ದು. ಈ ಮಳೆ ಯಾಕೋ ನನ್ನ ಮನಸ್ಸಿನ ಅವಿಭಾಜ್ಯ ಅಂಗವಾಗಿ ಹೋಗಿದೆ. ಈ ಮಳೆ ಪ್ರತಿ ಬಾರಿ ಹಳೆಯ ಸಿಹಿ ನೆನಪುಗಳನ್ನು ಹರವಿ ಹಸಿರಾಗಿಸಿ ಖುಷಿ ಕೊಡುತ್ತದೆ. ಮಳೆಯ ಜೊತೆ ನೀವೂ ಬರುತ್ತೀರಾ…..

ಬಹುಶಃ ಬರುವ ಮುಂಗಾರಿನ ಮಳೆಗೆ ನಿಮ್ಮ ಜೊತೆ ಇರುತ್ತೇನೆ. ಮತ್ತೆ ಕೈ-ಕೈ ಹೊಸೆದು ಗದ್ದೆಯ ಬದುವಿನಲ್ಲಿ ನಡೆಯಬೇಕು. ತುಂತುರು ಹನಿಗಳಿಗೆ ಮುಖವೊಡ್ಡಿ ಸಂಭ್ರಮಿಸಬೇಕು. ನೀರ ತೊರೆಯ ಪಕ್ಕ ಕುಳಿತು ಕಾಗದದ ದೋಣಿಯಲ್ಲಿ ಸಂದೇಶ ಕಳುಹಿಸಬೇಕು. . . ಇನ್ನೂ ಏನೇನೋ. . . ಮುಂದಿನ ಮಳೆಯ ತನಕ ಕಾಯಬೇಕಾ?

Wednesday, April 08, 2009

ಮುನ್ನುಡಿ.....

ಪಾಂಡವರ ವನವಾಸದ ಸಮಯದಲ್ಲಿ ನೀರು ತರಲೆಂದು ಹೋದ ತಮ್ಮಂದಿರನ್ನು ಹುಡುಕಿಕೊಂಡು ಹೊರಟ ಯುಧಿಷ್ಠಿರನನ್ನು ಯಕ್ಷ ಕೇಳುತ್ತಾನೆ “ವಾಯುವಿಗಿಂತ ವೇಗವಾದದ್ದು ಯಾವುದು”? "ಮನಸ್ಸು" ಶಾಂತಚಿತ್ತನಾಗಿ ಉತ್ತರ ನೀಡುತ್ತಾನೆ ಧರ್ಮಜ. ಅದ್ಭುತವಾದ ಉತ್ತರ ಅಲ್ಲವೇ? ಒಂದು ಸಲ ಯೋಚಿಸಿ ನೋಡಿ ಮನಸ್ಸಿನ ವೇಗ ಎಂಥದ್ದು ಅಂತ. ಅದಕ್ಕೆ ಗಡಿಯಾಗಲೀ, ಎಲ್ಲೆಯಾಗಲೀ ಇಲ್ಲ. ತನ್ನ ಗಮ್ಯವನ್ನು ಕ್ಷಣಮಾತ್ರಕ್ಕೆ ತಲಪುತ್ತದೆ. ನಿರ್ದಿಷ್ಟವಾದ ದಿಕ್ಕು-ದಿಸೆಯೂ ಬೇಕಾಗಿಲ್ಲ. ಕಾಲ ಚಕ್ರದ ಗಣನೆಯೂ ಇಲ್ಲ. ಭವಿಷ್ಯವನ್ನೂ ಕಾಣಬಹುದು (ಹಗಲುಗನಸಿನ ರೀತಿ). ಭೂತಕಾಲದ ಗರ್ಭವನ್ನೂ ನುಸುಳಬಹುದು.

ಮನಸ್ಸಿನ ಪ್ರಸ್ತಾಪ ಇಲ್ಲಿ ಯಾಕೆ ಅಂದರೆ ನನ್ನಲ್ಲಿ ಮಾತು ಬಹಳ ಕಡಿಮೆ. ವಿಷಯ ಇಲ್ಲ ಅಂತಲ್ಲ. ನಾನು ಅಂತರ್ಮುಖಿ ಅಷ್ಟೆ. ಆಡು ಭಾಷೆಯಲ್ಲಿ ಹೇಳುವುದಾದರೆ ಮೂಡಿ ಮನುಷ್ಯ. ಆದರೂ ಮನಸ್ಸು ಸುಮ್ಮನಿರುತ್ತದೆಯೇ? ಕ್ಷಣಾರ್ಧದಲ್ಲಿ ನೂರಾರು ಯೋಚನೆಗಳು, ಚಿತ್ರಗಳು, ವ್ಯಕ್ತಿಗಳು, ಸುಳಿದು ಕತೆ ಕಟ್ಟಿ ಮಾಯವಾಗುತ್ತವೆ. ನನ್ನೊಳಗೆ ಹಲವಾರು ಪ್ರಶ್ನೆಗಳು ಹುಯ್ದಾಡುತ್ತವೆ. ಈ ಯೋಚನಾ ಲಹರಿಗೆ ಸಮಯದ ಪರಿವೆಯೂ ಇಲ್ಲ. ಸ್ನಾನಕ್ಕಿಳಿದಾಗ, ವ್ಯಾಯಾಮ ಮಾಡುವಾಗ, ಊಟದ ಮಧ್ಯದಲ್ಲಿ ಹೀಗೆ ಎಲ್ಲೆಂದರಲ್ಲಿ ಧುತ್ತನೆ ಪ್ರತ್ಯಕ್ಷವಾಗುತ್ತದೆ. ಹಲವು ಬಾರಿ ಈ ಯೋಚನೆಗಳು ಬರುವುದು ಜನ ಜಂಗುಳಿಯ ಮಧ್ಯದಲ್ಲಿ ಇರುವಾಗ!!! ಆಫೀಸ್ ಮೀಟಿಂಗ್-ಗಳಲ್ಲಿ, ಮದುವೆ ಮನೆಯಲ್ಲಿ, ಜಾತ್ರೆಯ ತೇರು ಎಳೆಯುವಲ್ಲಿ. ದೇಹ ತನ್ನ ಸ್ಥಾನ ಬಿಟ್ಟು ಕದಲುವುದಿಲ್ಲ. ಕಣ್ಣು ಬಿಟ್ಟು ಪರಮ ಯೋಗಿಯಂತೆ ಕುಳಿತುಕೊಂಡಿರುತ್ತೇನೆ, ವಾಸ್ತವದ ಅರಿವೇ ಇರುವುದಿಲ್ಲ. ಆದರೆ ಅಲ್ಲಿ ಮನಸ್ಸಿನ ಸುಳಿವೇ ಇರುವುದಿಲ್ಲ. ಅದು ತನ್ನದೇ ಯೋಚನೆಗಳ ಬಾಲ ಹಿಡಿದು ಯಾವುದರ ಪರಿವೆಯೇ ಇಲ್ಲದೆ ತನ್ನ ಜಾಡು ಹಿಡಿದಿರುತ್ತದೆ. ಹಾಗಂತ ಯೋಚನೆಗಳಿಗೆ ಇಂಥದ್ದೇ ಎಂಬ ನಿರ್ದಿಷ್ಟತೆ ಇಲ್ಲ. ದೇಶ, ಜನ, ಊರು, ಜಾತಿ-ಮತ, ಧರ್ಮ, ದೇವರು, ಜೀವನ, ಆಧ್ಯಾತ್ಮ, ಕೆಲಸ, ಪ್ರೀತಿ-ಪ್ರೇಮ, ಹಣಕಾಸು, ಕವಿತೆ, ಕತೆ, ಅಮ್ಮ ಹೀಗೆ ಲಗಾಮಿಲ್ಲದ ಕುದುರೆಯಂತೆ ಓತಪ್ರೋತವಾಗಿ ಸಾಗುತ್ತಾ ಇರುತ್ತದೆ. ಪ್ರತಿ ದಿನ ಉತ್ತರವಿರುವ, ಉತ್ತರವಿಲ್ಲದಿರುವ ಪ್ರಶ್ನೋತ್ತರಗಳ ಸಮುದ್ರ ಮಂಥನ ನಡೆಯುತ್ತಾ ಇರುತ್ತದೆ.

ಮನಸ್ಸಿನ ಸ್ವಚ್ಛಂದ ವಿಹಾರಕ್ಕೆ ಕಡಿವಾಣ ಹಾಕುವ ಹಂಬಲ ನನ್ನಲ್ಲಿ ಇಲ್ಲ. ಯಾಕೆಂದರೆ ಇದು ಬಹಳಷ್ಟು ಬಾರಿ ಬುಧ್ದಿಶಕ್ತಿಯನ್ನು ಒರೆಗೆ ಹಚ್ಚುತ್ತದೆ. ಹಾಗಂತ ಅದರ ಹೊರೆಯನ್ನು ಹೊತ್ತು ದಿನ ದೂಡುವುದು ಕಷ್ಟ. ಮನಸ್ಸಿನ ತುಮುಲಗಳು ಹಲವಾರು ಹೊಸ ಆಯಾಮಗಳಿಗೆ ಎಡೆ ಮಾಡಿಕೊಡುತ್ತವೆ. ಅಂಥಹ ಆಯಾಮವೇ ಈ ಸ್ವಗತ. ಅಂತರ್ಮುಖಿಯ ಸ್ವಗತಗಳನ್ನು ಹರವಿಟ್ಟು ಹಗುರವಾಗುವ ಪ್ರಯತ್ನವೇ ಈ ಸ್ವಗತ.