Wednesday, September 01, 2010

ಸ್ವಾತಂತ್ರ್ಯದ ಸಂಭ್ರಮದಲ್ಲಿ (ಭಾರತೀಯ) ಅಮೇರಿಕಾದ ಕಂದಮ್ಮಗಳು...

‘ಸ್ವಾತಂತ್ರ್ಯೋತ್ಸವ’ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ. ಸಣ್ಣವರಿದ್ದಾಗ ಕಾತರದಿಂದ ಕಾಯುತ್ತಿದ್ದ ದಿನವದು. ಏನೋ ಸಂಭ್ರಮ, ಏನೋ ಖುಷಿ! ತ್ರಿವರ್ಣ ಧ್ವಜವನ್ನು ಹಿಡಿದು ಓಡಾಡುವುದೆಂದರೆ ಏನೋ ಹೆಮ್ಮೆ. ಎದೆಯುಬ್ಬಿಸಿ ‘ಜನಗಣಮನ’ ಹಾಡುತ್ತಿದ್ದ ಠೀವಿಯೇ ಬೇರೆ! ಆದ್ರೆ ಬೆಳೆಯುತ್ತಾ ಆ ಸಂಭ್ರಮವೆಲ್ಲೋ ಕಳೆದು ಹೋಯಿತು. ಹೈಸ್ಕೂಲು ಮೆಟ್ಟಿಲು ದಾಟಿದ ನಂತರ ಬಾಲ್ಯದಂತೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ ನೆನಪಿಲ್ಲ. ಕಣ್ಣ ಮುಂದೆಯೇ ಅದೊಂದು ವ್ಯಾಪಾರವಾ ಬಗೆಗೂ ದು:ಖವಿದೆ. ಖಾದಿಯ ಬದಲು ಪ್ಲಾಸ್ಟಿಕ್ ಬಾವುಟಗಳು ಬಂದವು. ಇವತ್ತು ಮಕ್ಕಳ ಕೈಗಳಲ್ಲಿ ಹಾರಾಡುತ್ತಿದ್ದ ಬಾವುಟ ಮರುದಿನ ಮಳೆನೀರಲ್ಲಿ ತೋಯ್ದು ಚರಂಡಿಯಲ್ಲಿ ಹರಿಯುವುದನ್ನೂ ನೋಡಿದ್ದೇನೆ. ಮುಂದೆ ಕೆಲಸ ಸಿಕ್ಕಿ, ದಿನನಿತ್ಯದ ಜಂಜಾಟದಲ್ಲಿ ಒದ್ದಾಡುತ್ತಿರಬೇಕಾದರೆ ಆಗಷ್ಟ್ 15 ಕೇವಲ ಒಂದು ರಜಾದಿನವಾಗಿ ಮಾರ್ಪಾಡಾಗಿದ್ದಕ್ಕೆ ಬೇಸರವೂ ಇದೆ. ನಮ್ಮ ಪೀಳಿಗೆಯೇ ಹೀಗಿದ್ರೆ ನಮ್ಮ ನಂತರದ ಮಕ್ಕಳಿಗೆ ‘ಸ್ವಾತಂತ್ರ್ಯೋತ್ಸವ’ ಅಂದ್ರೆ ಯಾವ ರೀತಿಯ ಸಂಭ್ರಮ ಇರಬಹುದೋ ಅನ್ನೋ ಕುತೂಹಲ ನನಗೆ. ದಿನಬೆಳಗಾದ್ರೆ ಶಾಲೆ, ಟ್ಯೂಷನ್, ಟಿವಿ, ಕಾರ್ಟೂನು, ಕಂಪ್ಯೂಟರ್ ಗೇಮ್ಸ್ ಅಂತ ಕೈ ತುಂಬಾ ‘ಕೆಲಸ’ವಿರುವ ಮಕ್ಕಳಿಗೆ ನಿಜವಾಗಲೂ ಸ್ವಾತಂತ್ರ್ಯೋತ್ಸವದ ಮಹತ್ವ ಗೊತ್ತೇ? ಸ್ವಾತಂತ್ರ್ಯ ಹೋರಾಟಗಾರರು ಯಾರು ಅಂತ ಕೇಳಿದ್ರೆ ಅದೇ ಗಾಂಧಿ, ಅದೇ ನೆಹರು ಹೆಸರು ಕೇಳಿ ಬರುತ್ತದೆ. ‘ಇವನ್ಯಾರೋ ಗಾಂಧಿ ಬಗ್ಗೆ ಇಷ್ಟು ಕೀಳಾಗಿ ಮಾತನಾಡ್ತಾ ಇದ್ದಾನೆ’ ಅಂತ ಅನ್ನಿಸಿದ್ರೆ ಕ್ಷಮಿಸಿ. ಮಹಾತ್ಮರ ಬಗ್ಗೆ ನನಗೆ ಅಪಾರ ಗೌರವ ಇದೆ. ಸಮಗ್ರ ಭಾರತೀಯರನ್ನು ಒಂದುಗೂಡಿಸಿದ ಮಹಾನ್ ನಾಯಕ ಅವರು. ಅವರ ಅಹಿಂಸಾತ್ಮಕ ಹೋರಾಟದಿಂದಲೇ ನಮ್ಮ ಸ್ವಾತಂತ್ರ್ಯ ಹೋರಾಟ ಇತರೆಲ್ಲ ದೇಶಗಳ ಹೋರಾಟಗಳಿಗಿಂತ ಭಿನ್ನ ಹಾಗೂ ವಿಶಿಷ್ಟ!! ಆದ್ರೂ ಸ್ವಾತಂತ್ರ್ಯ ಹೋರಾಟವನ್ನೇ ತಮ್ಮ ಜೀವನದ ಧ್ಯೇಯವನ್ನಾಗಿಸಿ, ಪ್ರಾಣಾರ್ಪಣೆಗೈದ ಅನೇಕ ಮಹಾನ್ ವೀರರಿದ್ದಾರೆ. ಗಾಂಧಿ, ನೆಹರುಗಳ ಮಧ್ಯೆ ಇವರು ಮೂಲೆಗುಂಪಾಗಿರುವುದು ಬೇಸರದ ಸಂಗತಿಯೇ ಸರಿ!!! ಸ್ವಾತಂತ್ರ್ಯವೀರ ಸಾವರ್ಕರ್, ಚಂದ್ರಶೇಖರ ಆಝಾದ್, ಮದನ್ ಲಾಲ್ ಧೀಂಗ್ರ, ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಕ್ ಉಲ್ಲಾ ಖಾನ್, ಖುದೀರಾಮ್ ಬೋಸ್, ಸುಭಾಷ್ ಚಂದ್ರ ಬೋಸ್ ಹೀಗೆ ಲೆಕ್ಕವಿಲ್ಲದಷ್ಟು ವೀರ ಸೇನಾನಿಗಳು ಕಾಲಚಕ್ರದೊಂದಿಗೆ ಕಳೆದು ಹೋಗಿದ್ದಾರೆ. ಪಠ್ಯಪುಸ್ತಕಗಳಲ್ಲಿ ಇವರ ಹೆಸರನ್ನು ಹುಡುಕುವುದು ವ್ಯರ್ಥ. ಮತ್ತೆ ಇಂದಿನ ಮಕ್ಕಳಿಂದ ಈ ವೀರರ ಹೆಸರುಗಳನ್ನು ನಿರೀಕ್ಷಿಸುವುದಾದರೂ ಹೇಗೆ? ಅಷ್ಟೇ ಯಾಕೆ ಸ್ವತ: ನನಗೇ ಗೊತ್ತಿರಲಿಲ್ಲ!!! ಯುಗಾವತಾರ, ಅಜೇಯ, ಆತ್ಮಾಹುತಿಯಂತಹ ಪುಸ್ತಕಗಳು ನನ್ನ ಕೈಗೆ ಸಿಕ್ಕಿರದಿದ್ದರೆ ನಾನೂ ಅಜ್ಞಾನಿಯಾಗಿಯೇ ಇರುತ್ತಿದ್ದೆ.

ಆದ್ರೆ ಈ ವರ್ಷದ ಸ್ವಾತಂತ್ರ್ಯೋತ್ಸವ ನನ್ನ ಪಾಲಿಗೆ ಸ್ವಲ್ಪ ಭಿನ್ನವಾಗಿತ್ತು. ಅದರಲ್ಲಿ ನಾನೊಬ್ಬ ಪ್ರೇಕ್ಷಕನಾದರೂ ಪಾಲ್ಗೊಂಡಿದ್ದಕ್ಕೆ ಅತೀವ ಖುಷಿಯಿದೆ. ಈ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ್ದು ನ್ಯೂಜೆರ್ಸಿಯ ಶ್ರೀಕೃಷ್ಣ ವೃಂದಾವನದಲ್ಲಿ. ನನ್ನ ಗೆಳೆಯರೊಬ್ಬರ ಮಗಳು ಗರ್ಲ್ಸ್ ಸ್ಕೌಟ್ ವತಿಯಿಂದ ಶ್ರೀಕೃಷ್ಣನ ಸನ್ನಿಧಿಯಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದಳು. ಪುತ್ತಿಗೆ ಮಠಾಧೀಶ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥರ ಆಶೀರ್ವಚನದೊಂದಿಗೆ ಶುರುವಾದ ಈ ಕಾರ್ಯಕ್ರಮದಲ್ಲಿ, ಪುಟ್ಟ ಪುಟ್ಟ ಮಕ್ಕಳು ಭಾರತ ಮಾತೆ, ರಾಣಿ ಚೆನ್ನಮ್ಮ, ರಾಣಿ ಲಕ್ಷ್ಮೀಬಾಯಿ, ಮಹಾತ್ಮಾ ಗಾಂಧಿ, ಜೀಜಾಬಾಯಿ ಹೀಗೆ ಹತ್ತು ಹಲವು ಸ್ವಾತಂತ್ರ್ಯಪೂರ್ವದ ವ್ಯಕ್ತಿಗಳಂತೆ ಕಾಣಿಸಿಕೊಂಡರು. ಈ ಪುಟ್ಟ ಮಕ್ಕಳು ತಮ್ಮ ಅಮೇರಿಕನ್ ಆಕ್ಸಂಟಿನಲ್ಲಿ ಮಹಾನ್ ವೀರರ ಪರಿಚಯ ಮಾಡಿಕೊಟ್ಟ ರೀತಿ ಮುದ್ದಾಗಿತ್ತು. ಭಾರತ ಹಾಗೂ ಅಮೇರಿಕಾದ ರಾಷ್ಟ್ರಗೀತೆಗಳೊಂದಿಗೆ ಸುಂದರವಾದ ಕಾರ್ಯಕ್ರಮವು ಮುಕ್ತಾಯವನ್ನು ಕಂಡಿತು. ಇದರಲ್ಲೇನು ವಿಶೇಷ ಅಂತೀರಾ? ಅಮೇರಿಕಾದಲ್ಲಿ ಹುಟ್ಟಿ ಬೆಳೆಯಿತ್ತಿರುವ ಈ ಕಂದಮ್ಮಗಳಿಗೆ ಡೋರಾ, ಬಾರ್ನಿ, ಬಾರ್ಬಿ, ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್-ಗಳು ಮಾತ್ರ ಗೊತ್ತು. ಅಂಥದ್ದರಲ್ಲಿ ಸ್ವಾತಂತ್ರ್ಯವೀರರು, ವಂದೇ ಮಾತರಂ, ಜನಗಣಮನ ಹೇಗೆ ತಾನೇ ಗೊತ್ತಿರಲು ಸಾಧ್ಯ? ಇವತ್ತು ಈ ಮಕ್ಕಳು ಸ್ವಾತಂತ್ರ್ಯವೀರರ ಬಗ್ಗೆ ಒಂದೆರಡು ಮಾತುಗಳನ್ನಾಡಿದ್ರೆ ಅದರ ಶ್ರೇಯಸ್ಸು ಅವರ ತಂದೆ-ತಾಯಿಯರಿಗೆ ಸಲ್ಲಬೇಕು. ಅವರು ತೋರಿಸಿದ ಪ್ರೋತ್ಸಾಹ, ಉತ್ಸಾಹಕ್ಕೆ ಎಷ್ಟು ಶ್ಲಾಘಿಸಿದರೂ ಸಾಲದು!!! ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಇವರು ತೋರಿಸುವ ಹಾದಿ, ಕೊಡುವ ಸಂಸ್ಕಾರ, ಸುಸಂಸ್ಕೃತ ಪೀಳಿಗೆಗೆ ನಾಂದಿ ಅಂದ್ರೆ ತಪ್ಪಾಗಲಿಕ್ಕೆ ಇಲ್ಲ ಅಲ್ವಾ?

ನಾನು ತೆಗೆದ ಒಂದೆರಡು ಚಿತ್ರಗಳು ನಿಮಗಾಗಿ...