ನಾನು ತೆಗೆದ ಒಂದೆರಡು ಚಿತ್ರಗಳು ನಿಮಗಾಗಿ...

ಭಾನುವಾರ ಸಂಜೆಯ ಮಾತು. ನನ್ನ ದೃಷ್ಟಿ ಕಿಟಕಿಯ ಮೂಲಕ ಹಾದು ಮನೆ ಎದುರಿದ್ದ ಗುಡ್ಡದ ಮೇಲೆ ನೆಟ್ಟಿತ್ತು. ಅದು ಗುಡ್ಡವೇನೂ ಅಲ್ಲ. ನನ್ನ ಮನೆ ಸ್ವಲ್ಪ ತಗ್ಗಿನಲ್ಲಿದೆ. ಅದಕ್ಕೆ ಗುಡ್ಡ ಅಂತ ಹೇಳಿದೆ ಅಷ್ಟೆ. ಸಂಜೆಯ ಸೂರ್ಯನ ಬಿಸಿಲು. ತಣ್ಣಗೆ ಬೀಸುವ ಗಾಳಿಗೆ ಗಿಡ ಮರಗಳು ತಲೆ ತೂಗ್ತಿದ್ದಾವೇನೋ ಅಂತ ಅನ್ನಿಸಿತು. ‘ನೋಡು ಹವಾಮಾನ ಚೆನ್ನಾಗಿದೆ. ಗಾಳಿ ಬೀಸ್ತಾ ಇದೆ. ಇಲ್ಲಿಂದ ನೋಡ್ತಾ ಇದ್ರೆ ಚೇವಾರಿನಲ್ಲಿದ್ದೇನೆ ಅಂತ ಅನ್ನಿಸ್ತಾ ಇದೆ’ ಅಂತ ನನ್ನಾಕೆಗೆ ಹೇಳಿದಾಗ ಅವಳೊಂದು ತುಂಟ ನಗೆ ಬೀರಿದಳು. ತಣ್ಣನೆ ಗಾಳಿ ಬೀಸಿದಾಗ, ಎಳೆ ಬಿಸಿಲು ಮೂಡಿದಾಗ, ಜಡಿ ಮಳೆ ಸುರಿದಾಗ ನಾನು ಚೇವಾರಿನ ಹಾಗೆ ಅಂದ್ರೆ ಆಕೆ ನನ್ನನ್ನು ಛೇಡಿಸುವ ರೀತಿಯಲ್ಲಿ ನಗ್ತಾ ಇರ್ತಾಳೆ. ಅಂದ ಹಾಗೆ ಚೇವಾರು ನನ್ನ ಊರಿನ ಹೆಸರು. ನನ್ನ ಅಮ್ಮನ ತವರು ಮನೆ. ಈಗ ಅಪ್ಪ, ಅಮ್ಮ ಅಜ್ಜಿಯ ಜೊತೆ ಅಲ್ಲೇ ಇದ್ದಾರೆ. ಯಕ್ಷಗಾನ, ಪಿತಾಮಹ ಪಾರ್ತಿಸುಬ್ಬನ ಕರ್ಮಭೂಮಿಯಾದ ಕುಂಬಳೆಯ ಪಕ್ಕದಲ್ಲಿದೆ ನನ್ನ ಚೇವಾರು. ಸಣ್ಣವನಿದ್ದಾಗ ನನ್ನೆಲ್ಲಾ ಬೇಸಿಗೆ ರಜೆಗಳನ್ನು ಕಳೆದದ್ದು ಇಲ್ಲಿಯೇ. ಪ್ರತಿಸಲ ಚೇವಾರಿಗೆ ಹೋದಾಗಲೂ ಏನೂ ವ್ಯತ್ಯಾಸ ಕಾಣ್ತಿರಲಿಲ್ಲ. ಈಗಲೂ ಅಷ್ಟೆ ಚೇವಾರು ಇದ್ದ ಹಾಗೆ ಇದೆ. ವಾಹನಗಳ ಜಂಜಾಟವಿಲ್ಲ, ದೊಡ್ಡ ದೊಡ್ಡ ಬಿಲ್ಡಿಂಗ್ ಗಳಿಲ್ಲ, ಮನೆಗಳೂ ಹಾಗೆಯೇ ಇವೆ. ಒಂದೇ ಒಂದು ವ್ಯತ್ಯಾಸ ಅಂದ್ರೆ ಎಲ್ಲರ ಕೈಯಲ್ಲೂ ಮೊಬೈಲ್ ಫೋನ್ ಗಳಿವೆ. ಬಿಎಸ್ ಎನ್ ಲ್, ಏರ್ ಟೆಲ್ ಸಿಗ್ನಲ್ ಗಳೂ ಸಕತ್ತಾಗಿವೆ. ಯಾಕೆ ಹೀಗೆ ಅನ್ನಿಸ್ತು ಅಂದ್ರೆ ನಾನು ಹೈಸ್ಕೂಲ್, ಪಿಯೂಸಿ ಓದಿದ್ದು ನನ್ನ ಅಪ್ಪನ ಮನೆಯಲ್ಲಿದ್ದು. ಅದು ವಿಟ್ಲ ಪಕ್ಕದ ಪುಣಚಾ ಗ್ರಾಮದಲ್ಲಿದೆ. ತುಂಬಾ ಸಣ್ಣವನಿದ್ದಾಗ ಇಲ್ಲಿಗೆ ಹೋಗಿದ್ದು ಬಹಳ ಅಪರೂಪ. ನನಗೆ ನೆನಪಿರುವ ಹಾಗೆ ಪರಿಯಾಲ್ತಡ್ಕದಲ್ಲಿ ಶಂಕರ ಭಟ್ರ ಅಂಗಡಿ, ಕೊಂಕಣ್ತಿಯಮ್ಮನ ಹೋಟೇಲು, ಒಂದು ಟೈಲರ್ ಅಂಗಡಿ, ಶಾಲೆ, ಸೊಸೈಟಿ ಇಷ್ಟೇ ಇದ್ದದ್ದು. ಒಂದೆರೆಡು ಹಳೆಯ ಲ್ಯಾಂಬಿ ರಿಕ್ಷಾ ಬಿಟ್ರೆ ಮನೆಗೆ ತಲುಪಲಿಕ್ಕೆ ನಟರಾಜ ಸರ್ವಿಸೇ ಮಾಡ್ಬೇಕಿತ್ತು. ಮೈ ಚಾಚಿ ಹೆಬ್ಬಾವಿನಂತೆ ಮಲಗಿರುವ ಕಚ್ಚಾ ಮಣ್ಣಿನ ರಸ್ತೆ. ಮನೆ ತಲುಪುವ ಹೊತ್ತಿಗೆ ಮೊಣಕಾಲಿನ ತನಕ ಎಲ್ಲವೂ ಕೆಂಪೇ!!! ಅಷ್ಟೊಂದು ಧೂಳು. ಆದ್ರೆ ಪ್ರತಿ ಬಾರಿ ಪರಿಯಾಲ್ತಡ್ಕ ಬದಲಾಗಿತ್ತು. ಎಷ್ಟೊಂದು ಬಿಲ್ಡಿಂಗ್ ಗಳು, ಮಳಿಗೆಗಳು, ನಾಲ್ಕೈದು ಡಾಕ್ಟರ್ ಕ್ಲಿನಿಕುಗಳು, ಬಗೆ ಬಗೆಯ ರಿಕ್ಷಾಗಳು, ಏನಿಲ್ಲ ಅಂದ್ರೆ ಕನಿಷ್ಟ ಇಪ್ಪತ್ತೈದು ಬಾಡಿಗೆ ಜೀಪುಗಳು. ನೋಡು ನೋಡುತ್ತಿದ್ದಂತೆಯೇ ಹಳ್ಳಿ ಸಣ್ಣ ಪೇಟೆಯಾಗಿ ಬೆಳೆದು ನಿಂತಿದೆ.
ಆದ್ರೆ ಚೇವಾರು ಹಾಗಲ್ಲ. ಏನೇನೂ ಬದಲಾಗಿಲ್ಲ. ಒಂದೆರಡು ಬದಲಾವಣೆಗಳಿದ್ದರೂ ಇಷ್ಟು ವರ್ಷಕ್ಕೆ ಅದೇನೂ ದೊಡ್ಡದನಿಸಲಿಲ್ಲ. ಮುಖಗಳೂ ಅಷ್ಟೆ ಅದೇ ಕಿಟ್ಟು, ಮೂಸೆ, ಮಮ್ಮದೆ, ನಾರಾಯಣ, ಹಾಂ… ಇವರೆಲ್ಲರ ತಲೆಗೂದಲು ಕಾಲಚಕ್ರದ ಹೊಡೆತಕ್ಕೆ ಬೆಳ್ಳಗಾಗಿದೆ, ಚರ್ಮ ಸ್ವಲ್ಪ ಸುಕ್ಕಾಗಿದೆ. ಬಸ್ಸಿಂದ ಇಳಿದ ಕೂಡಲೇ ಕಾಣುವುದು ನಾನು ಓದಿದ ಶಾಲೆ. ಶಾರದಾ ಪ್ರಾಥಮಿಕ ಶಾಲೆ. ಒಂದು ವರ್ಷ ಓದಿದ್ದೆ, ಅಜ್ಜನ ರೇಶನ್ ಸ್ಟೋರಲ್ಲಿ ತಂಟೆ ಮಾಡ್ತಾ ಇದ್ದೆ ಅಂತ ಶಾಲೆಗೆ ಕಳಿಸಿದ್ರು. ಆಗ ನನಗೆ ಬರೇ ನಾಲ್ಕು ವರ್ಷ. ನನಗಿಂತ ಒಂದೆರಡು ವರ್ಡ ದೊಡ್ಡ ಹುಡುಗರೊಂದಿಗೆ ಒಂದನೇ ಕ್ಲಾಸ್ ಓದಿದ್ದೆ. ಈಗಲೂ ಶಾಲೆ ಇನ್ನೂ ಹಾಗೆ ಇದೆ ಅನ್ನಿಸ್ತು. ರೂಪ ಆಕಾರದಲ್ಲಿ ಯಾವುದೇ ಬದಲಾವಣೆ ಕಾಣಿಸಲಿಲ್ಲ. ಗೋಡೆಯ ಬಣ್ಣಗಳು ಮಾಸಿದ್ದವು. ಬಹುಶಃ ಟೀಚರ್, ಮಾಸ್ಟ್ರುಗಳೂ ಬದಲಾಗಿರುವುದಿಲ್ಲ. ಈಶ್ವರ ಮಾಸ್ಟ್ರು, ವೆಂಕಟ್ರಮಣ ಮಾಸ್ಟ್ರು, ಹೆಲೆನ್ ಟೀಚರ್, ಲಕ್ಷ್ಮಿ ಟೀಚರ್ ಇವರೇ ಇರ್ಬೇಕು. ಮಳೆಗಾಲದಲ್ಲಿ ಮೊಳಕೆಯೊಡುವ ಅಣಬೆಗಳಂತೆ ಅಕ್ಕ-ಪಕ್ಕದಲ್ಲಿ ಇಂಗ್ಲಿಷ್ ಮೀಡಿಯಂ ಶಾಲೆಗಳು ಶುರುವಾಗಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಅಂತ ಈಶ್ವರ ಮಾಸ್ಟ್ರು ಹೇಳ್ತಾ ಇದ್ರು ಅಂತ ಅಮ್ಮ ಹೇಳಿದ ನೆನಪು.
ಶಾಲೆ ದಾಟಿ ಮುಂದೆ ಹೋದ್ರೆ ಅಜ್ಜನ ಹೆಸರಿನ ಪಂಚಾಯ್ತಿ ರಸ್ತೆ ಕಾಣಿಸುತ್ತದೆ. ‘ಚೇವಾರು ಜನಾರ್ಧನ ಕಾಮತ್ ರಸ್ತೆ’. ಪಂಚಾಯ್ತಿ ಉಪಾಧ್ಯಕ್ಷರಾಗಿ, ಯಕ್ಷಗಾನ ಹಿಮ್ಮೇಳ ಕಲಾವಿದರಾಗಿ ಅಜ್ಜ ಒಳ್ಳೆಯ ಹೆಸರನ್ನು ಮಾಡಿದ್ರು. ಊರ ಜನ ಅವರನ್ನು ‘ಚಂಡೆ ಕಮ್ತಿಯೆರ್’ ಅಂತಲೇ ಕರಿತಾ ಇದ್ರು. ನನ್ನ ಪರಿಚಯ ಹೇಳಬೇಕಾದ್ರು ಅಜ್ಜನ ಹೆಸರಿನ ಸರ್ಟಿಪಿಕೇಟು ಬೇಕಿತ್ತು. ಈಗ ಬ್ಯಾಂಕ್, ಅಂಗಡಿ, ಮನೆ ಸಾಮಾನು, ದೇವಸ್ಥಾನ ಅಂತ ಅಮ್ಮನದೇ ಕಾರುಬಾರು. ಸಹಜವಾಗಿ ಅಮ್ಮನ ಪರಿಚಯ ಊರವರಿಗೆಲ್ಲಾ ಇದೆ. ಈಗ ಸರಳಕ್ಕನ ಮಗ ಅಂದ್ರೆ ಎಲ್ಲರಿಗೂ ತಿಳಿಯುತ್ತದೆ. ಈ ರಸ್ತೆ ಎಷ್ಟು ದೂರ ಹೋಗತ್ತೆ ಅಂತ ನನಗೆ ಗೊತ್ತಿಲ್ಲ. ಹತ್ತು ಹೆಜ್ಜೆ ಇಡುವಷ್ಟರಲ್ಲಿ ಮನೆಯ ಕಡೆಗೆ ಹೋಗಲು ನಾನು ಕಾಲುದಾರಿ ಬಳಸಬೇಕು. ಕಾಲುದಾರಿಯಿಂದ ಸ್ವಲ್ಪ ತಲೆ ಎತ್ತಿ ನೋಡಿದರೆ ಗೋಪಾದನ ಹಳೆ ಮನೆ ಕಾಣಿಸುತ್ತದೆ. ಅದರ ಪಕ್ಕದಲ್ಲೇ ಅಜ್ಜನ ಸ್ಟೋರ್, ಮನೆ ಇದೆ. ಇದನ್ನು ಅಜ್ಜ ತುಂಬಾ ಹಿಂದೆಯೇ ಮಾರಿದ್ರು. ಗೋಪಾದ ಈಗ ಹೊಸ ಮನೆ ಕಟ್ಟಿಸಿದ್ದಾರೆ. ಸ್ಟೋರಿನ ಪಕ್ಕದಲ್ಲೇ ಗೋಪಾದನ ಗದ್ದೆಗಳಿವೆ. 70X200 ಅಡಿಯ ಗದ್ದೆಯೇ ನಮ್ಮ ಈಡನ್ ಗಾರ್ಡನ್. ಜೆಪಿ ಮಾಮ, ಮಾನ, ಅಭಿಯ ಜೊತೆ ಪ್ರತಿ ಸಂಜೆ ಕ್ರಿಕೆಟ್ ಆಡ್ತಾ ಇದ್ವಿ. ಗದ್ದೆ ನಾಟಿಯಿಂದಾಗಿ ಗದ್ದೆ ತುಂಬಾ ಪದಚಿಹ್ನೆಗಳಿರುತ್ತಿದ್ದವು. ಇದರಿಂದಾಗಿ ಫ್ಯಾಷನ್ ಟಿವಿಯಲ್ಲಿ ಬರುವ ರೂಪದರ್ಶಿಯಂತೆ ಥಳುಕುತ್ತಾ, ಬಳುಕುತ್ತಾ ಬರುವ ಚೆಂಡನ್ನು ಹೊಡೆಯುವುದೇ ಒಂದು ದೊಡ್ಡ ಕುಷಲತೆ!!! ಪಿಚ್ ಸಮತಟ್ಟಾಗಿ ಒಂದು ಹಂತಕ್ಕೆ ಬರುತ್ತಿರುವಂತೆ ನಮ್ಮ ಬೇಸಿಗೆ ರಜೆಗಳು ಮುಗಿಯುತ್ತಿದ್ದವು. ಅದೇನೇ ಇರಲಿ ಕ್ರಿಕೆಟ್ ಆಡುವ ಸಲುವಾಗಿ ಪ್ರತಿ ಸಂಜೆಗೆ ಕಾಯುತ್ತಿದ್ದುದು ಮಾತ್ರ ಸುಳ್ಳಲ್ಲ.
ಕಾಲುದಾರಿಯಲ್ಲಿ ಒಂದೆರಡು ಮನೆಗಳನ್ನು ದಾಟಿ ಗುಡ್ಡ ಇಳಿಯುತ್ತಿದ್ದಂತೆ ಸ್ವಲ್ಪ ದೂರ ತಗ್ಗಲ್ಲಿ ಮನೆಯ ಸೂರು ಕಾಣಿಸುತ್ತದೆ. ಬೇಸಿಗೆಯ ಹಗಲುಗಳನ್ನು ಅಜ್ಜ, ಅಜ್ಜಿಯ ಜೊತೆ ಈ ಗೇರು ಹಣ್ಣಿನ ಗುಡ್ಡದಲ್ಲಿ ಕಳೆಯುತ್ತಿದ್ದೆವು. ಮರದಿಂದ ಗೇರು ಹಣ್ಣು ಕೀಳುವ ಕೆಲಸ ಅಜ್ಜಂದು. ಹೆಕ್ಕುವ ಕೆಲಸ ನಮ್ಮದು. ಗೇರು ಬೀಜ ಹೆಕ್ಕುವುದು ಅಂಥ ಸುಲಭದ ಕೆಲಸವೇನಲ್ಲ!!! ಅದೊಂಥರಾ ಯುದ್ಧದ ಹಾಗೆ. ಕಡಲತೀರದ ಬೇಸಿಗೆಯ ಬಗ್ಗೆ ಬೇರೆ ಹೇಳಬೇಕಾಗಿಲ್ಲ. ಸೂರ್ಯನ ಪ್ರಖರ ಬಿಸಿಲನ್ನು ತಡೆಯಲಿಕ್ಕೆ ಟೋಪಿ ಬೇಕು. ಗೇರು ಹಣ್ಣಿನ ರಸ ಬಟ್ಟೆಯ ಮೇಲೆ ಬಿದ್ರೆ ಅದರ ಕಲೆ ಎಂಥ ಸೋಪಿಗೂ, ಬ್ಲೀಚಿಗೂ ಬಗ್ಗುವುದಿಲ್ಲ. ಅದಕ್ಕಾಗಿಯೇ ಗೇರು ಹಣ್ಣು ಹೆಕ್ಕಲಿಕ್ಕಂತ ಬೇರೆ ಅಂಗಿ, ಚಡ್ಡಿ. ಸೂರ್ಯ ನೆತ್ತಿಗೇರುವ ಮುನ್ನವೇ ಅರ್ಧದಷ್ಟು ಗುಡ್ಡ ಕ್ರಮಿಸಬೇಕು. ಅಜ್ಜ ಕಿತ್ತ ಗೇರುಹಣ್ಣು ಪೊದೆಯಲ್ಲಿ ಬಿದ್ದರೆ ಅದನ್ನು ಹೆಕ್ಕುವುದು ಇನ್ನೂ ದೊಡ್ಡ ಸಾಹಸ. ಪೊದೆಯಲ್ಲಿರುವ ಮುಳ್ಳುಗಳು ತರಚಿ ಕೈಯಲ್ಲಿ ಒಂದೆರಡು ಗೀರುಗಳಾಗದಿದ್ದರೆ ಸಾಹಸ ವ್ಯರ್ಥ!!! ಇನ್ನು ಬಿಸಿಲಿನ ಝಳಕ್ಕೆ ಗೇರು ಹಣ್ಣು ತಿನ್ನಲು ಬರುವ ದನ ಕರುಗಳ ಜೊತೆ ಬೇರೆ ಪೈಪೋಟಿ ಮಾಡಬೇಕಿತ್ತು. ಹಣ್ಣು ನೆಲಕ್ಕೆ ಬೀಳುವಷ್ಟರಲ್ಲಿ ಗಬಕ್ಕಂತ ಬಾಯಿ ಹಾಕಿ ಬೀಜ ಸಮೇತ ತಿನ್ನಲು ಶುರು ಮಾಡುತ್ತಿದ್ದವು. ದನಗಳೂ ಬಹಳ ಬುದ್ದಿವಂತಿಕೆಯಿಂದ ಬರೇ ಹಣ್ಣನ್ನು ಮಾತ್ರ ತಿಂದು ಬೀಜವನ್ನು ಉಗುಳುತ್ತವೆ. ಹೀಗಾದಗಲೆಲ್ಲಾ ದನಕರುಗಳು ಬೀಜವನ್ನು ಯಾವಾಗ ಉಗುಳುತ್ತವೆ ಅಂತ ಕಾಯುತ್ತಾ ಕೂರುತ್ತಿದ್ದೆವು. ಕೆಂಪು, ಹಳದಿ ಬಣ್ಣದ ಗೇರು ಹಣ್ಣಿನ ರುಚಿ ಬೇರೆ ಹೇಳಬೇಕಾಗಿಲ್ಲ. ಬೀಜ ಹೆಕ್ಕುತ್ತಾ ಐದು-ಹತ್ತು ಹಣ್ಣುಗಳನ್ನು ಗುಳುಂ ಮಾಡಿದ್ದುಂಟು. ಸ್ವಲ್ಪ ಒಗರು, ಸ್ವಲ್ಪ ಸಿಹಿ. ಅಬ್ಬಾ ಗೇರುಹಣ್ಣು ತಿನ್ನದೇ ವರ್ಷಗಳೇ ಉರುಳಿವೆ. ಕಡಿಮೆ ಅಂದ್ರೆ ಮೂರ್ನಾಲ್ಕು ಗಂಟೆಗಳಾದ್ರು ಬೇಕು ಇಡೀ ಗುಡ್ಡ ತಿರುಗಿ ಗೇರು ಬೀಜ ಹೆಕ್ಕಲಿಕ್ಕೆ. ಬೇಸಿಗೆಯ ಕೊನೆಯಲ್ಲಿ ಒಣಗಿನ ಗೇರು ಬೀಜಗಳನ್ನೆಲ್ಲಾ ಮಾರಿ ಅಜ್ಜನಿಂದ ನೂರೈವತ್ತೋ- ಇನ್ನೂರೋ ರುಪಾಯಿಗಳನ್ನು ಕಿಸೆಗಿಳಿಸುತ್ತಿದ್ದಾಗ ಆಗುತ್ತಿದ್ದ ಖುಷಿ ಅಷ್ಟಿಷ್ಟಲ್ಲ. ಕಲ್ಲು ಮುಳ್ಳಿನಿಂದಾದ ಗಾಯ, ದನಕರುಗಳ ಜೊತೆ ಕುಸ್ತಿ, ಬಿಸಿಲ ಝಳ ಎಲ್ಲಾ ನೂರೈವತ್ತು ರುಪಾಯಿಯ ಮುಂದೆ ಮಂಗಮಾಯ!!! ರಜೆ ಮುಗಿಸಿ ಮನೆಗೆ ಮರಳುವಾಗ ಅಜ್ಜಿಯ ಕೈಯಿಂದ ಮತ್ತೆ ಇಪ್ಪತ್ತು ರುಪಾಯಿ ಜೇಬಿಗಿಳಿಸಿದ್ದುದಲ್ಲದೆ, ಸುಟ್ಟ ಗೇರುಬೀಜದ ಪೊಟ್ಟಣ ಕೂಡಾ.
ಹನುಮನ ಸಾಹಸವನ್ನು ಕೊಂಡಾಡುತ್ತಾ ರಾಮನು ಆತನನ್ನು ಆಲಂಗಿಸುತ್ತಾನೆ. ರಾಮನ ಕೋರಿಕೆಯಂತೆ ಹನುಮನು ಸವಿಸ್ತಾರವಾಗಿ ಲಂಕೆಯ ವಿವರಣೆಯನ್ನು ಕೊಡುತ್ತಾನೆ. ಶತ್ರುವನ್ನು ಆಕ್ರಮಿಸುವ ಮೊದಲು ಆತನ ಬಲವನ್ನು ಅಳೆಯುವುದು ಅತ್ಯಗತ್ಯ. ಸೀತೆಯ ಸುಳಿವನ್ನಾಗಲೇ ಆಂಜನೇಯನು ತಂದಿದ್ದಾನೆ. ಶ್ರೀರಾಮನು ಯುದ್ಧಕ್ಕೆ ತೆರಳಲು ಸೂಕ್ತವಾದ ಸುಮುಹೂರ್ತವನ್ನು ಸೂಚಿಸುವುದರ ಜೊತೆಗೆ ನೀಲ, ಗಜ, ಗವಯ, ಗಜಾಕ್ಷ, ಕೇಸರಿ, ವಾಲಿಮುಖ, ರಭಸ, ಪ್ರಜಂಘ ಮೊದಲಾದ ವಾನರವೀರರಿಗೆ ಸೇನೆಯಲ್ಲಿ ಅವರ ಸ್ಥಾನವನ್ನೂ, ಅವರ ಜವಾಬ್ದಾರಿಯನ್ನೂ ತಿಳಿಸುತ್ತಾನೆ. ರಾಮನ ಆಣತಿಯಂತೆ ನೀಲನು ಸೇನೆಯ ಮುಂಭಾಗದ ನೇತೃತ್ವವನ್ನು ವಹಿಸಿದರೆ, ಕೇಸರಿ, ಪನಸ, ಗಜ ಇನ್ನೊಂದು ವಿಭಾಗದ ಹೊಣೆಯನ್ನು ಹೊರುತ್ತಾರೆ. ಮಹಾವೀರನಾದ ರಿಷಭನು ಸೇನೆಯ ಬಲಭಾಗವನ್ನೂ, ಗಂಧಮಾದನನು ಎಡಭಾಗದ ಸೇನೆಯ ನೇತೃತ್ವವನ್ನೂ ವಹಿಸಿಕೊಳ್ಳುತ್ತಾರೆ. ಭಲ್ಲೂಕಗಳ ರಾಜನಾದ ಜಾಂಬವಂತನು ಮಹಾಶಕ್ತಿಶಾಲಿಗಳಾದ ವೇಗದರ್ಶಿ ಹಾಗೂ ಸುಶೇಣರೊಂದಿಗೆ ಸೇನೆಯ ಉದರ ಭಾಗವನ್ನು ಮುನ್ನಡೆಸುತ್ತಾರೆ. ಅವರೊಂದಿಗೆ ಸ್ವಯಂ ಶ್ರೀರಾಮನು ಆಂಜನೇಯನ ಹೆಗಲ ಮೇಲೂ, ಲಕ್ಷ್ಮಣನು ಅಂಗದನ ಭುಜದ ಮೇಲೆ ಕುಳಿತು ಐರಾವತದ ಮೇಲೆ ಕುಳಿತ ಇಂದ್ರನಂತೆ ಶೋಭಿಸುತ್ತಾರೆ. ಸಹ್ಯ, ಮಲಯ ಪರ್ವತ ಶ್ರೇಣಿಗಳನ್ನು ದಾಟಿ ಭೋರ್ಗರೆಯುವ ಸಾಗರದ ತಟಕ್ಕೆ ವಾನರವೀರರು ತಲಪುತ್ತಾರೆ. ಶ್ರೀರಾಮನ ಸಾಗರ ತಟದ ಬಳಿಯೇ ಡೇರೆ ಹೂಡುವಂತೆ ಸುಗ್ರೀವನಿಗೆ ತಿಳಿಸುತ್ತಾನೆ,
ಇತ್ತ ಲಂಕೆಯಲ್ಲಿ ಲಂಕೇಶನು ತನ್ನ ಮಂತ್ರಿಗಳ ಜೊತೆ ಸಮಾಲೋಚನೆ ನಡೆಸುತ್ತಾನೆ. ಪ್ರಹಸ್ತ, ದುರ್ಮುಖ, ವಜ್ರದಂಶ್ಟ್ರ, ನಿಕುಂಭರಂತಹ ಮಹಾವೀರರು ಯುದ್ಧದ ಪ್ರತಿಯಾಗಿ ಮಾತುಗಳನ್ನಾಡಿ ರಾವಣನ ಮನೋಬಲವನ್ನು ಹೆಚ್ಚಿಸುತ್ತಾರೆ. ಆದರೆ ಧರ್ಮಿಷ್ಟನಾದ ವಿಭೀಷಣನು ರಾಮನೊಂದಿಗೆ ಸಂದಿ ಮಾಡಿಕೊಳ್ಳುವಂತೆಯೂ, ಸೀತೆಯನ್ನು ರಾಮನಿಗೆ ಗೌರವ ಪೂರ್ವಕವಾಗಿ ಮರಳಿಸುವಂತೆಯೂ ಸಲಹೆ ನೀಡುತ್ತಾನೆ. ಇದರಿಂದ ಕ್ರುದ್ಧಗೊಂಡ ಮೇಘನಾದನು ವಿಭೀಷಣನನ್ನು ತೀವ್ರವಾಗಿ ಟೀಕಿಸುತ್ತಾನೆ. ವಿಭೀಷಣನ ಮಾತಿಗೆ ಕಿವಿಕೊಡದ ಲಂಕೇಶನು ಆತನನ್ನು ದೇಶಭ್ರಷ್ಟಗೊಳಿಸಿ ಲಂಕೆಯಿಂದ ಹೊರಗಟ್ಟುತ್ತಾನೆ. ಶ್ರೀರಾಮನ ಪರಮಭಕ್ತನಾದ ವಿಭೀಷಣನು ರಾಮನಲ್ಲಿ ಶರಣುಹೋಗುತ್ತಾನೆ. ಲಂಕೇಶನು ಕಳುಹಿಸಿದ ಶುಕ, ಚಾರಣನೆಂಬ ಗೂಢಾಚಾರರು ಸುಗ್ರೀವನ ಪಡೆಯ ಬಂಧಿಯಾಗುತ್ತಾರೆ,
ಅಗಾಧವಾದ ಸಾಗರವನ್ನು ದಾಟುವುದೇ ಬಹಳ ಕ್ಲಿಷ್ಟಕರವಾದ ಕೆಲಸ. ಲಂಕೆಯನ್ನು ತಲುಪಲು ಈ ಮಹಾಸಾಗರವನ್ನು ದಾಟಲೇ ಬೇಕಿತ್ತು. ಸಮುದ್ರವನ್ನು ದಾಟುವ ಸಲುವಾಗಿ ಶ್ರೀರಾಮನು ಸ್ವಯಂ ಸಾಗರವನ್ನು ಪ್ರಕಟವಾಗಿ ದಾರಿ ತೋರಿಸುವಂತೆ ಪ್ರಾರ್ಥಿಸುತ್ತಾನೆ. ಆದರೆ ಸಾಗರನ ಅಶ್ರದ್ಧೆಯಿಂದ ಕ್ರೋಧಿತನಾದ ರಾಮನು ಆತನೆಡೆಗೆ ಪ್ರಖರವಾದ ಬಾಣವನ್ನು ಹೂಡಿ ಸಮಸ್ತ ನೀರನ್ನು ಇಂಗಿಸುವುದಾಗಿ ಹೇಳಿ ಮಹಾಘರ್ಜನೆಯನ್ನು ಮಾಡುತ್ತಾನೆ. ಕೂಡಲೇ ಸಾಗರ ಮಧ್ಯದಿಂದ ಸಾಗರನು ಪ್ರಕಟಗೊಂಡು ತನ್ನ ಉದ್ಧಟತನವನ್ನು ಕ್ಷಮಿಸಬೇಕೆಂದು ಕೇಳುತ್ತಾನೆ. ಕ್ಷಮಾಗುಣನಾದ ರಾಮನು ಸಾಗರನನ್ನು ಕ್ಷಮಿಸುತ್ತಾ ತಾನು ಹೆದೆಯೂಡಿದ ಬಾಣವು ನಿಷ್ಪ್ರಯೋಜಕವಾಗಬಾರದೆಂದೂ, ಅದಕ್ಕೆ ಯೋಗ್ಯವಾದ ಗುರಿಯೊಂದನ್ನು ತೋರಿಸುವಂತೆ ಹೇಳುತ್ತಾನೆ. ಅದಕ್ಕೆ ಪ್ರತಿಯಾಗಿ ಸಾಗರನು ತನ್ನ ಉತ್ತರಭಾಗದಲ್ಲಿರುವ ದ್ರುಮತುಲ್ಯವೆಂಬ ಸ್ಥಳವನ್ನು ಸೂಚಿಸುತ್ತಾನೆ. ಅದರಂತೆ ರಾಮನು ತನ್ನ ತೀಕ್ಷ್ಣವಾದ ಬಾಣವನ್ನು ಪ್ರಯೋಗಿಸುತ್ತಾನೆ. ಬಳಿಕ ಸಾಗರನು ರಾಮನನ್ನು ಉದ್ದೇಶಿಸುತ್ತಾ “ಹೇ ಪರಾಕ್ರಮಿ, ನಿನ್ನ ಸೇನೆಯಲ್ಲಿ ದೇವಶಿಲ್ಪಿಯಾದ ವಿಶ್ವಕರ್ಮನ ಮಗನಾದ ನಳನಿದ್ದಾನೆ. ತಂದೆಯಂತೆಯೇ ಆತನೂ ಕುಶಲ ಶಿಲ್ಪಿ. ಆತನಿಗೆ ಸಾಗರದ ಮೇಲೆ ಸೇತುವನ್ನು ನಿರ್ಮಿಸಲು ಹೇಳು” ಎಂದು ಹೇಳಿ ಅಂತರ್ಧಾನವಾಗುತ್ತಾನೆ. ನಳನು ಕಪಿಗಳ ಸಹಾಯದಿಂದ ಅದ್ಭುತವಾದ ಸೇತುವೆಯನ್ನು ನಿರ್ಮಿಸುತ್ತಾನೆ. ಗೂಢಾಚಾರರಾದ ಶುಕ-ಚಾರಣರನ್ನು ರಾಮನು ಬಂಧಮುಕ್ತಗೊಳಿಸುತ್ತಾನೆ. ಲಂಕೆಗೆ ಮರಳಿದ ಶುಕನು ಅಗಾಧವಾದ ವಾನರಸೇನೆಯ ಸಾಹಸವನ್ನೂ, ಪರಾಕ್ರಮವನ್ನೂ ಹೊಗಳುತ್ತಾನೆ. ಲಂಕೆಗೆ ತೆರಳುವ ಮುನ್ನ ಶ್ರೀರಾಮನು ಮಹಾದೇವನ ಪೂಜೆಯನ್ನು ಮಾಡುತ್ತಾನೆ. ಬಳಿಕ ಸಮಸ್ತ ವಾನರಸೇನೆಯೊಂದಿಗೆ ಸೇತುವಿನ ಮೂಲಕ ಲಂಕೆಗೆ ತೆರಳುತ್ತಾನೆ.
ಯುದ್ಧವನ್ನು ತಡೆಯುವ ಕೊನೆಯ ಪ್ರಯತ್ನವೆಂಬಂತೆ ರಾಮನು ಅಂಗದನನ್ನು ದೂತನಾಗಿ ಸಂಧಿಗೆ ಕಳುಹಿಸುತ್ತಾನೆ. ಆದರೆ ಆ ಪ್ರಯತ್ನ ಸಫಲವಾಗದೆ ಯುದ್ಧ ಅನಿವಾರ್ಯವಾಗುತ್ತದೆ, ರಾವಣನು ವಾನರಸೇನೆಯನ್ನು ಆಕ್ರಮಿಸುವಂತೆ ತನ್ನ ಸೇನೆಗೆ ಆದೇಶಿಸುತ್ತಾನೆ, ವಾನರವೀರರು ಮತ್ತು ಮಾಯಾವಿ ಅಸುರರ ಮಧ್ಯೆ ಘೋರ ಯುದ್ಧ ಆರಂಭವಾಗುತ್ತದೆ. ಇಂದ್ರಜಿತು-ಅಂಗದ, ಹನುಮ-ಜಂಬುಮಾಲಿ, ಗಜ-ತಪನ, ನೀಲ-ನಿಕುಂಭ, ಸುಗ್ರೀವ-ಪ್ರಘಸ, ಲಕ್ಷ್ಮಣ-ವಿರೂಪಾಕ್ಷ ಹೀಗೆ ಮೊದಲಾದ ವೀರರು ದ್ವಂಧ್ವಯುದ್ಧದಲ್ಲಿ ತೊಡಗುತ್ತಾರೆ. ಎಲ್ಲೆಲ್ಲೆ ನೋಡಿದರೂ ರಕ್ತದ ಓಕುಳಿ ಹರಿದಿತ್ತು. ಸೂರ್ಯಾಸ್ತವಾದರೂ ಯುದ್ಧ ಕೊನೆಗೊಳ್ಳಲಿಲ್ಲ. ಖಡ್ಗಗಳ ಝಳ, ಬಾಣಗಳ ವೇಗ, ಗದೆಗಳ ಪ್ರತಿಧ್ವನಿಗಳು ಚಂಡಮಾರುತದೊಂದಿಗೆ ಕಾಣುವ ಗುಡುಗು ಮಿಂಚುಗಳಂತಿತ್ತು. ರಾವಣನ ಮಗನಾದ ಇಂದ್ರಜಿತು ಮಹಾಪರಾಕ್ರಮಿಯೂ, ಮಾಯಾವಿ ಯುದ್ಧದಲ್ಲಿ ನಿಪುಣನೂ ಆಗಿದ್ದನು. ತನ್ನ ಮಾಯಾವಿ ಯುದ್ಧದಿಂದ ವಾನರವೀರರನ್ನು ಕಂಗೆಡಿಸುತ್ತಾನೆ, ನಾಗಪಾಶದಿಂದ ರಾಮ-ಲಕ್ಷ್ಮಣರನ್ನು ಮೂರ್ಛಿತಗೊಳ್ಳುತ್ತಾರೆ. ಮೇಘನಾದನ ಪೌರುಷವನ್ನು ನೋಡಿ ರಾವಣನು ಅತೀವ ಸಂತೋಷಗೊಳ್ಳುತ್ತಾನೆ. ಮೂರ್ಛಿತರಾದ ರಘುಕುಲ ತಿಲಕರನ್ನು ನೋಡಿ ವಾನರ ಸೇನೆ ಚಿಂತಿತವಾಗುತ್ತದೆ. ವಿಭೀಷಣನು ವಾನರಸೇನೆಯ ಮನೋಧೈರ್ಯ ತುಂಬುತ್ತಿದ್ದಂತೆ ವೈನತೇಯ ಗರುಡನು ಬಂದು ರಾಮ-ಲಕ್ಷ್ಮಣರನ್ನು ಪಾಶಮುಕ್ತಗೊಳಿಸುತ್ತಾನೆ. ವಾನರಸೇನೆಯ ಆನಂದಕ್ಕೆ ಪಾರವೇ ಇರಲಿಲ್ಲ. ಹೊಸ ಉತ್ಸಾಹದೊಂದಿಗೆ ವಾನರವೀರರು ಯುದ್ಧಕ್ಕೆ ಅಣಿಯಾಗುತ್ತಾರೆ. ರಾವಣನು ಭಯಂಕರ ಅತಿಭಯಂಕರ ರಾಕ್ಷಸವೀರರನ್ನು ಯುದ್ಧಭೂಮಿಗೆ ಕಳುಹಿಸುತ್ತಾನೆ. ಧೂಮ್ರಾಕ್ಷ, ವಜ್ರದಂಷ್ಟ್ರ, ಅಕಂಪನ, ಪ್ರಹಸ್ತ ಮೊದಲಾದ ವೀರರು ತಮ್ಮ ಪರಾಕ್ರಮವನ್ನು ಮೆರೆಯುತ್ತಾರೆ. ಆದರೆ ವಾನರವೀರರ ಮುಂದೆ ಅವರ ಸಾಹಸಗಳೆಲ್ಲಾ ಬತ್ತಿಹೋಗಿ ಕಾಲವಾಗುತ್ತಾರೆ. ಕೊನೆಗೆ ಸ್ವಯಂ ರಾವಣನೇ ಯುದ್ಧಭೂಮಿಗೆ ಬರುತ್ತಾನೆ, ಯುದ್ಧದಲ್ಲಿ ಶ್ರೀರಾಮ-ರಾವಣರ ಮುಖಾಮುಖಿಯಾಗಿ, ಇಬ್ಬರ ಮಧ್ಯೆ ಘೋರ ಯುಧ್ಧ ನಡೆದು, ಕೊನೆಗೆ ಬಸವಳಿದ ಲಂಕೇಶನಿಗೆ ಶ್ರೀರಾಮನು ಪ್ರಾಣ ಭಿಕ್ಷೆಯನ್ನು ನೀಡುತ್ತಾನೆ, ಅವಮಾನಿತನಾಗಿ ಲಂಕೆಗೆ ಮರಳಿದ ಲಂಕೇಶನು, ತನ್ನ ತಮ್ಮನಾದ ಕುಂಭಕರ್ಣನನ್ನು ನಿದ್ದೆಯಿಂದ ಎಬ್ಬಿಸುವಂತೆ ತನ್ನ ಸೈನಿಕರಿಗೆ ಆದೇಶಿಸುತ್ತಾನೆ. ಅತಿಪ್ರಯಾಸದಿಂದ ನಿದ್ದೆಯಿಂದ ಎಚ್ಚರಗೊಂಡ ಕುಂಭಕರ್ಣನು, ವೃತ್ತಾಂತವನ್ನೆಲ್ಲಾ ತಿಳಿದು ಯುದ್ಧಕ್ಕೆ ತೆರಳುತ್ತಾನೆ. ಮಹಾಕಾಯನಾದ ಕುಂಭಕರ್ಣನನ್ನು ನೋಡಿ ಹೆದರಿ ಓಡತೊಡಗಿದ ವಾನರರನ್ನು ತಡೆದು ಅಂಗದನು ಧೈರ್ಯ ತುಂಬುತ್ತಾನೆ. ರಾಮನೊಂದಿಗೆ ಭಯಂಕರ ಯುದ್ಧ ಮಾಡುತ್ತಾ ಕುಂಭಕರ್ಣನು ಕಾಲವಾಗುತ್ತಾನೆ. ಯುದ್ಧ ಮುಂದುವರಿದಂತೆ ರಾವಣನ ಮಕ್ಕಳು, ಸೇನಾಪತಿಗಳು, ಪರಿವಾರದವರು ರಣದೇವಿಗೆ ಆಹುತಿಯಾಗುತ್ತಾ ಹೋದರು. ನರಾಂತಕ, ದೇವಾಂತಕ, ತ್ರಿಶಿರ, ಮಹೋದರ ಮತ್ತು ಮಹಾಪಾರ್ಶ್ವರಂತಹ ವೀರ ಅಸುರರು ಹನುಮ, ಅಂಗದ ಮುಂತಾದ ಕಪಿವೀರರ ಕೈಯಲ್ಲಿ ವೀರಮರಣಹೊಂದಿದರು. ಲಕ್ಷ್ಮಣನು ರಾವಣನ ಮಗನಾದ ಮಹಾವೀರ ಅತಿಕಾಯನನ್ನು ಯಮಸದನಕ್ಕಟ್ಟುತ್ತಾನೆ.
ಪುತ್ರಶೋಕದಿಂದ ವ್ಯಾಕುಲನಾದ ಲಂಕೇಶನನ್ನು ನೋಡಿ ದುಃಖಿತನಾದ ಮೇಘನಾದನು, ರಾಘವರನ್ನು ಕೊನೆಗೊಳಿಸುವ ಸಲುವಾಗಿ ಯುದ್ಧಭೂಮಿಗೆ ತೆರಳುತ್ತಾನೆ. ತನ್ನ ಬಳಗದವರ ಮೃತ್ಯುವಿನಿಂದ ಅತ್ಯಂತ ಕ್ರುದ್ಧನಾದ ಇಂದ್ರಜಿತು ಭೀಕರವಾದ ಯುದ್ಧದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ. ತನ್ನ ಮಾಯಾವಿದ್ಯೆಯ ಕೌಶಲದಿಂದ ದಶದಿಕ್ಕುಗಳಿಂದ ಹಲವು ಬಗೆಯ ಶಸ್ತ್ರಾಸ್ತ್ರಗಳಿಂದ ವಾನರಸೈನ್ಯದ ಮೇಲೆ ಪ್ರಯೋಗಿಸುತ್ತಾನೆ, ಮೇಘನಾದನ ತೀಕ್ಷ್ಣ ಬಾಣಗಳು ಕಪಿವೀರರ ದೇಹಗಳನ್ನು ಜರ್ಜರಿತಗೊಳಿಸುತ್ತವೆ. ಆತನ ಪ್ರಖರವಾದ ಬಾಣಗಳಿಗೆ ಸ್ವಯಂ ರಾಘವರೇ ಮೂರ್ಛಿತರಾಗುತ್ತಾರೆ, ಬ್ರಹ್ಮಾಸ್ತ್ರದಿಂದ ಪ್ರಜ್ಞಾಹೀನರಾದ ರಾಮ-ಲಕ್ಷ್ಮಣರನ್ನು ಗುಣಪಡಿಸಲು ಹಿಮಾಲಯದಿಂದ ದಿವ್ಯ ಔಷಧಿಗಳನ್ನು ತರಬೇಕೆಂದು ಜಾಂಬವಂತನು ಹನುಮಂತನಿಗೆ ತಿಳಿಸುತ್ತಾನೆ. ತನ್ನ ದೇಹವನ್ನು ಹಿಗ್ಗಿಸಿ, ಸಾಕ್ಷಾತ್ ಗರುಡನಂತೆ ವಾಯುವಿನ ವೇಗದಲ್ಲಿ ಮಾರುತಿಯು ಹಿಮಾಲಯದೆಡೆಗೆ ಲಂಘಿಸುತ್ತಾನೆ, ಮೃತ ಸಂಜೀವಿನಿ, ವೈಶಾಲ್ಯ ಕರಣಿ, ಸುವರ್ಣಕರಣಿ, ಸಂಧಣಿ ಮುಂತಾದ ಗಿಡಮೂಲಿಕೆಗಳನ್ನು ಗುರುತಿಸಲಾರದೆ, ಪರ್ವತವನ್ನೇ ಬುಡಸಮೇತ ಕಿತ್ತು, ತನ್ನ ಅಂಗೈಯಲ್ಲಿರಿಸಿ ಲಂಕೆಗೆ ಮರಳುತ್ತಾನೆ. ಹನುಮನು ತಂದ ಔಷಧೀಯ ಸಸ್ಯಗಳಿಂದ ರಾಘವರೂ, ಕಪಿವೀರರೂ ಚೇತರಿಸಿಕೊಳ್ಳುತ್ತಾರೆ. ಕುಂಭ, ನಿಕುಂಭ, ಮಕರಾಕ್ಷ ಮೊದಲಾದ ವೀರರೊಂದಿಗೆ ಮೇಘನಾದನು ಮತ್ತೊಮ್ಮೆ ಯುದ್ಧಭೂಮಿಗೆ ಮರಳುತ್ತಾನೆ. ಇಂದ್ರಜಿತುವನ್ನು ಎದುರಿಸಿದ ಲಕ್ಷ್ಮಣನು ಭೀಕರವಾಗಿ ಹೋರಾಡಿ ಅಮೋಘವಾದ ಅಸ್ತ್ರವೊಂದರಿಂದ ಆತನ ಶಿರಚ್ಛೇದನ ಮಾಡುತ್ತಾನೆ. ಅಳಿದುಳಿದ ವೀರರೆಲ್ಲಾ ಕಾಲವಾದ ಮೇಲೆ ಸಾಕ್ಷಾತ್ ಲಂಕೇಶನೇ ಯುದ್ಧಭೂಮಿಗೆ ಬರುತ್ತಾನೆ. ರಾಮ-ರಾವಣರ ಯುದ್ಧವನ್ನು ನೋಡಲು, ದೇವ, ಗಂಧರ್ವ, ಯಕ್ಷ, ಕಿನ್ನರರೆಲ್ಲಾ ಕಾತರದಿಂದ ಕಾಯುತ್ತಿದ್ದರು. ಮಹಾಮುನಿ ಅಗಸ್ತ್ಯರು ‘ಆದಿತ್ಯಹೃದಯ’ವೆಂಬ ಮಂತ್ರವನ್ನು ರಾಮನಿಗೆ ಉಪದೇಶಿಸುತ್ತಾರೆ. ದೇವೇಂದ್ರನ ಸಾರಥಿಯಾದ ಮಾತಲಿಯು ದೈವೀಯ ರಥವನ್ನು ರಾಮನಿಗಾಗಿ ತರುತ್ತಾನೆ. ರಾಮ-ರಾವಣರ ಮಧ್ಯೆ ಭೀಕರವಾದ ಕಾಳಗ ನಡೆದು, ನರವ್ಯಾಘ್ರರಂತೆ ಒಬ್ಬರನ್ನೊಬ್ಬರು ಸೆಣಸುತ್ತಾರೆ. ಕೊನೆಗೆ ಮಾತಲಿಯ ಮಾತಿನಂತೆ ಶ್ರೀರಾಮನು ಮಹಾಪ್ರಳಯಾಂತಕವಾದ ಅಸ್ತ್ರವನ್ನು ರಾವಣನೆಡೆಗೆ ಪ್ರಯೋಗಿಸುತ್ತಾನೆ. ಪರಿಣಾಮವಾಗಿ ಅಧರ್ಮಿ ಲಂಕೇಶನು ಧರೆಗುರುಳುತ್ತಾನೆ. ಸಮಸ್ತ ದೇವ-ದೇವತೆಗಳು ಸಂತುಷ್ಟರಾಗಿ ಹೂವಿನ ಮಳೆಗರೆಯುತ್ತಾರೆ. ಲಂಕೇಶನ ಮರಣದಿಂದ ಶೋಕತಪ್ತರಾದ ಆತನ ರಾಣಿಯರಿಗೆ ವಿಭೀಷಣನು ಸಾಂತ್ವನದ ಮಾತುಗಳನ್ನು ಹೇಳುತ್ತಾನೆ. ರಾಮನ ಆದೇಶದಂತೆ ರಾಜ ಸನ್ಮಾನದೊಂದಿಗೆ ರಾವಣನ ಅಂತ್ಯಕ್ರಿಯೆಯನ್ನು ವಿಭೀಷಣನು ನೆರವೇರಿಸುತ್ತಾನೆ, ಬಳಿಕ ವಿಭೀಷಣನನ್ನು ಲಂಕೆಯ ರಾಜನನ್ನಾಗಿ ಪಟ್ಟಾಭಿಷೇಕ ಮಾಡುತ್ತಾರೆ.
ಲಂಕೆಯ ರಾಜನಾದ ವಿಭೀಷಣನು ಗೌರವ ಪೂರ್ವಕವಾಗಿ ಮಾತೆ ಸೀತೆಯನ್ನು ರಾಮನ ಬಳಿ ಕರೆ ತರುತ್ತಾನೆ. ಆದರೆ ಸೀತೆಯನ್ನು ಸ್ವೀಕರಿಸಲು ಬಯಸದ ರಾಘವನು ಆಕೆಗೆ ತನ್ನ ಸತಿತ್ವ ಪರೀಕ್ಷೆ ನೀಡಲು ಹೇಳುತ್ತಾನೆ. ಸೀತೆಯು ಅತ್ಯಂತ ಖೇದಗೊಂಡು, ಲಕ್ಷ್ಮಣನಿಗೆ ಅಗ್ನಿಯನ್ನು ಸಿದ್ದಪಡಿಸುವಂತೆ ಹೇಳುತ್ತಾಳೆ. ಭಾರವಾದ ಮನಸ್ಸಿನಿಂದ ಲಕ್ಷ್ಮಣನು ಅಗ್ನಿಯನ್ನು ಸಿದ್ಧ ಪಡಿಸುತ್ತಾನೆ, ಆದರೆ ಅಗ್ನಿ ಪ್ರವೇಶ ಮಾಡಿದ ಸೀತೆಯನ್ನು ಸ್ವಯೋ ಅಗ್ನಿದೇವನೇ ಸುರಕ್ಷಿತವಾಗಿ ಕರೆದು ತಂದು ರಾಮನಿಗೊಪ್ಪಿಸುತ್ತಾನೆ, ತನಗೆ ಸೀತೆಯ ಬಗ್ಗೆ ಎಳ್ಳಷ್ಟೂ ಅಪನಂಬಿಕೆ ಇಲ್ಲವೆಂದೂ, ಲೋಕದ ಜನರಿಗೆ ಸೀತೆಯ ಪಾವಿತ್ರ್ಯವನ್ನು ಸಾರಲು ಈ ರೀತಿ ಮಾಡಬೇಕಾಯಿತೆಂದೂ ರಾಮನು ಹೇಳುತ್ತಾನೆ, ವಿಭೀಷಣನನ್ನು ಬೀಳ್ಕೊಟ್ಟು ರಾಮನು ಸೀತಾದಿಗಳೊಂದಿಗೆ ಪುಷ್ಪಕ ವಿಮಾನದಲ್ಲಿ ಅಯೋಧ್ಯೆಗೆ ಮರಳುತ್ತಾನೆ. ರಾಮನ ಆಗಮನದಿಂದ ಪರಿವಾರ ಜನರೂ, ಪ್ರಜೆಗಳೂ ಹರ್ಷಚಿತ್ತರಾಗುತ್ತಾರೆ. ಭರತನ ಆನಂದಕ್ಕೆ ಪಾರವೇ ಇರಲಿಲ್ಲ. ಅಯೋಧ್ಯೆಯ ಸಿಂಹಾಸನವನ್ನು ಅಲಂಕರಿಸುವಂತೆ ರಾಮನಲ್ಲಿ ಆತನು ಕೇಳಿಕೊಳ್ಳುತ್ತಾನೆ. ಅದರಂತೆ ಭಾರೀ ಸಡಗರದಿಂದ ರಾಮನ ಪಟ್ಟಾಭಿಷೇಕವನ್ನು ಏರ್ಪಡಿಸಲಾಗುತ್ತದೆ.