Monday, July 27, 2009

ಯೇ ಮೇರೆ ವತನ್ ಕೆ ಲೋಗೋ. . .ಜರಾ ಯಾದ್ ಕರೋ ಕುರ್ಬಾನಿ. . .

ಈ ವರ್ಷ ಮತ್ತೆ ಬಂದಿದೆ ಜುಲಾಯಿ 26. ಪ್ರತಿ ವರ್ಷ ಬರತ್ತಪ್ಪ, ಅದ್ರಲ್ಲೇನು ಹೊಸತು ಅಂತ ಕೇಳ್ತೀರಾ? ಹತ್ತು ವರ್ಷಗಳ ಹಿಂದಿನ ಮಾತಿದು. ನಾವೆಲ್ಲಾ ಉಂಡಾಡಿಗುಂಡರಂತೆ ಚೆನ್ನಾಗಿ ತಿಂದುಂಡು, ಮಲಗಿದ್ದೆವು. ನಮ್ಮ ಭಾರತ ಸರಕಾರ ಪಾಕಿಸ್ಥಾನದೆದುರಿಗೆ ಶಾಂತಿ ಪ್ರಸ್ತಾವವನ್ನು ಮುಂದಿಟ್ಟಿತ್ತು. ಸ್ವತ: ಅಂದಿನ ಪ್ರಧಾನಿ ವಾಜಪೇಯಿಯವರು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ದೆಹಲಿ-ಲಾಹೋರ್ ಬಸ್ಸು ಯಾತ್ರೆಯನ್ನೂ ಶುರು ಮಾಡಿದ್ದರು. ಅಂಥದ್ರಲ್ಲಿ ಪಾಕಿಸ್ಥಾನ ನಂಬಿಕೆ ದ್ರೋಹ ಮಾಡುತ್ತೆ ಅಂತ ಯಾರು ತಾನೇ ಊಹಿಸಲಿಕ್ಕೆ ಸಾಧ್ಯ? ಇತ್ತ ವಾಜಪೇಯಿ ಲಾಹೋರಿನಿಂದ ದೆಹಲಿಗೆ ಮರಳಿದ್ರು. ಅತ್ತ ಜೆಹಾದಿಗಳು, ಪಾಕಿ ಸೈನಿಕರು ಅವರ ಬೆನ್ನ ಹಿಂದೆಯೇ ಲೈನ್ ಆಫ್ ಕಂಟ್ರೋಲ್ ದಾಟಿ ಭಾರತದ ಸೈನಿಕ ಬಂಕರುಗಳನ್ನು ಕಬಳಿಸಿ ಬಿಟ್ಟರು. ಹಿಮಾಲಯದ ತವರು ಕಾಶ್ಮೀರ. ಚಳಿಗಾಲದಲ್ಲಿ ಬೆನ್ನು ಮೂಳೆ ಕೊರೆಯುವ ಚಳಿಯನ್ನು ತಡೆಯುವುದು ಎಂಥವರಿಗೂ ಕಷ್ಟ ಸಾಧ್ಯ. ಅಂಥದ್ರಲ್ಲಿ ಹಿಮಚ್ಛಾದಿತ ಹಿಮಾಲಯದ ಬೆಟ್ಟ,ಕಣಿವೆಗಳಲ್ಲಿ ಚಳಿಯನ್ನು ಸಹಿಸುವುದಾದ್ರೂ ಹೇಗೆ? ವಾಡಿಕೆಯಂತೆ ಎರಡೂ ದೇಶಗಳು ತಮ್ಮ ಸೈನಿಕರನ್ನು ಚಳಿಗಾಲದಲ್ಲಿ ಕಾಶ್ಮೀರದ ಕಣಿವೆಗಳಲ್ಲಿರುವ ಕೆಲ ಫಾರ್ವರ್ಡ್ ಪೋಸ್ಟುಗಳಿಂದ ಕರೆಸುತ್ತವೆ. ಬೇಸಗೆಯಲ್ಲಿ ಮತ್ತೆ ತಮ್ಮ-ತಮ್ಮ ಬಂಕರುಗಳಿಗೆ ಸೈನಿಕರು ಮರಳುತ್ತಾರೆ. 1999ರ ಫೆಬ್ರವರಿ ವೇಳೆಗೆ ಪಾಕ್ ಸೈನಿಕರು ತಮ್ಮ ಬಂಕರುಗಳ ಜೊತೆಗೆ ಭಾರತೀಯ ಬಂಕರುಗಳನ್ನೂ ಆಕ್ರಮಿಸಿಕೊಂಡರು. ನಂಬಿದವರ ಬೆನ್ನು ತಿವಿಯುವುದಂದ್ರೆ ಇದೇ ಅಲ್ವಾ?

ಮೊದಮೊಲು ಪಾಕಿಸ್ಥಾನೀಯರ ಅತಿಕ್ರಮಣ ಭಾರತೀಯ ಸೇನೆಗೆ ಗೊತ್ತಾಗಿರಲಿಲ್ಲ. ಅದಕ್ಕೆ ಕಾರಣಗಳು ಹಲವಾರು. ಅತಿಕ್ರಮಣಗೊಂಡ ಪ್ರದೇಶಗಳಿಗೆ ಭಾತೀ ಸೇನೆ ಗಸ್ತು ಪಡೆಯನ್ನು ಕಳಿಸಿರಲಿಲ್ಲ. (ಪಾಕಿಸ್ಥಾನ ಹೀಗೆ ಮಾಡುತ್ತೆ ಅಂತ ಅವರು ಕನಸಿನಲ್ಲೂ ಊಹಿಸಿರಲ್ಲ ಅಲ್ವಾ?) ಸ್ತು ತಿರುಗಬೇಕಾದ್ರೆ ಪಾಕ್ ಸೈನಿಕರು ಜೆಹಾದಿಗಳಿಗೆ ಲೈನ್ ಆಫ್ ಕಂಟ್ರೋಲಿನ ಆ ಕಡೆಯಿಂದ ಕವರಿಂಗ್ ಫೈರ್ ನೀಡಿದ್ರು. ಸಹಜವಾಗಿ ನಮ್ಮ ಸೇನೆಯ ಗಮನವನ್ನು ಬೇರೆಡೆಗೆ ಸೆಳೆಯುವಲ್ಲಿ ಸಫಲವಾಗಿತ್ತು. ಮುಂದೆ ಮೇ ತಿಂಗಳ ಎರಡನೇ ವಾರದಲ್ಲಿ ಕುರಿ ಕಾಯುವ ಹುಡುಗನೊಬ್ಬ ನೀಡಿದ ಸುಳಿವಿನ ಮೇಲೆ ಕಾರ್ಯಾಚರಣೆ ಶುರು ಮಾಡಿತು ಕ್ಯಾ.ಸೌರಭ್ ಕಾಲಿಯಾ ನೇತೃತ್ವದ ಪಡೆ. ಆವಾಗಲೇ ಸತ್ಯ ಬೆಳಕಿಗೆ ಬಂದದ್ದು. ಸುಮಾರು 200 ಸ್ಕ್ವೇರ್ ಕಿ.ಮೀ ಗಳಷ್ಟು ಭಾರತೀಯ ಭೂಮಿಯನ್ನು ಶತ್ರುಗಳು ಕಬಳಿಸಿದ್ದರು. (ಮುಂದೆ ಸೌರಭ್ ಕಾಲಿಯಾ ಮತ್ತು ಆತನ ಸೈನಿಕರನ್ನು ಪಾಕಿಸ್ಥಾನಿ ಪಡೆಗಳು ಯುದ್ಧಕೈದಿಗಳನ್ನಾಗಿಸಿ, ಇಪ್ಪತ್ತೆರಡು ದಿನಗಳಲ್ಲಿ ನೀಡಿದ ಬರ್ಬರ ದೈಹಿಕ, ಮಾನಸಿಕ ಯಾತನೆಗಳು ಎಂಥವರ ಕಣ್ಗಳಲ್ಲೂ ಕಣ್ಣೀರಿಳಿಸುತ್ತದೆ. ಯುದ್ಧ ಕೈದಿಗಳನ್ನು ಗೌರವದಿಂದ ಕಾಣುವ ಮಾನವೀಯ ಸೌಜನ್ಯವನ್ನೂ ಪಾಕಿಗಳು ತೋರಿಸಲಿಲ್ಲ.) ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಆಪರೇಶನ್ ವಿಜಯ್ ಕೈಗೆತ್ತಿಕೊಂಡಿತು. ಇದೇ ನಮಗೆಲ್ಲರಿಗೂ ನೆನಪಾಗುವ ಕಾರ್ಗಿಲ್ ಯುದ್ಧ.(ನೆನಪಿಲ್ಲವೆಂದಲ್ಲಿ ದಯವಿಟ್ಟು ಸ್ವಲ್ಪ ನೆನಪಿಸಿಕೊಳ್ಳಿ.)

ಆ ಮೇಲಿಂದು ಇತಿಹಾಸ. ನಮಗೆಲ್ಲಾ ತಿಳಿದೇ ಇದೆ. ಇದರಲ್ಲಿ ಮಾಧ್ಯಮಗಳ ಕೊಡುಗೆಯೂ ಅಪಾರ. ದುರ್ಗಮ ಪ್ರದೇಶದಲ್ಲಿ ನಡೆದ ಯುದ್ಧವನ್ನು ಮನೆಯಂಗಳಕ್ಕೆ ತಂದು ತೋರಿಸಿದ್ರು. ನಮ್ಮ ಸೈನಿಕರ ಕಷ್ಟಗಳನ್ನು, ಧೈರ್ಯವನ್ನು, ತ್ಯಾಗವನ್ನು ಜನರು ನೋಡುವ ಹಾಗಾಯಿತು. ಅವರ ಬಗ್ಗೆಗಿನ ಗೌರವ ನೂರ್ಮಡಿಸಿತು. ಹಾಗಂತ ಇದಕ್ಕಿಂತ ಮೊದಲು ಗೌರವ ಇರಲಿಲ್ಲ ಅಂತ ಅಲ್ಲ. ಮೊದಲು ಯುದ್ಧದ ಬಗ್ಗೆ ಓದುತ್ತಿದ್ವಿ. ಈ ಯುದ್ಧವನ್ನು ಪ್ರತ್ಯಕ್ಷವಾಗಿ ನೋಡುವ ಹಾಗಾಯಿತು. ಕಾರ್ಗಿಲ್-ನ ತಪ್ಪಲಿನಲ್ಲಿ ಬೋಫೋರ್ಸಿನ ಅಬ್ಬರ ಮೊಳಗಿತು. ಭಾರತೀಯ ವಾಯುಸೇನೆ ‘ಆಪರೇಶನ್ ಸಫೇದ್ ಸಾಗರ್’ ಹೆಸರಲ್ಲಿ ನಮ್ಮ ಭೂಸೇನೆಯ ಜೊತೆ ಕೈಜೋಡಿಸಿತು. ಸುಮಾರು ಒಂದೂವರೆ ತಿಂಗಳು ನಡೆದ ಯುದ್ಧದಲ್ಲಿ ನಮ್ಮ ಸೈನಿಕರು ತೋರಿಸಿದ ಸಾಹಸ ನಿಜಕ್ಕೂ ಶ್ಲಾಘನೀಯ. ಶತ್ರುಗಳು ಮೇಲ್ಗಡೆಯಿಂದ ಆಕ್ರಮಣ ಮಾಡ್ತಿದ್ರೆ ದುರ್ಗಮ ಕಣಿವೆಗಳನ್ನು ಹತ್ತಿಕೊಂಡು ಪ್ರತ್ಯಾಕ್ರಮಣ ಮಾಡುವುದು ಸುಲಭವೇನಲ್ಲ. ಕೆಲವೊಂದು ಪರ್ವತ ಶ್ರೇಣಿಗಳಂತೂ 5500 ಮೀಟರುಗಳಷ್ಟು ಎತ್ತರವಿದ್ದವು. ಮೈಕೊರೆಯವ ಚಳಿ ಬೇರೆ. ಅಷ್ಟೆತ್ತರದ ಪರ್ವತಗಳಲ್ಲಿ -15 ಡಿಗ್ರಿಯಷ್ಟು ಕೊರೆಯುವ ಚಳಿಯಲ್ಲಿ ಮೈಮರೆಯದೆ ಶತ್ರುವಿನೊಂದಿಗೆ ಸೆಣಸುವುದು ತಮಾಷೆಯ ಮಾತಲ್ಲ. ಹಗಲು ಹೊತ್ತಲ್ಲಿ ಕಾರ್ಯಾಚರಣೆ ನಡೆಸಿದ್ರೆ ಮೇಲೆ ಹೊಂಚು ಹಾಕಿ ಕುಳಿತ ಶತ್ರುವಿಗೆ ಸುಲಭವಾದ ಆಹಾರವಾಗುವುದು ಖಚಿತವಾಗಿತ್ತು. ಅದಕ್ಕಾಗಿ ರಾತ್ರೋರಾತ್ರಿ ಮೈಯೆಲ್ಲಾ ಕಣ್ಣಾಗಿ, ಕಣಿವೆ,ಕಂದರಗಳನ್ನು ದಾಟಿ, ಪರ್ವತ ಶಿಖರ ತಲುಪಬೇಕಿತ್ತು. ನೆನೆಸಿಕೊಂಡ್ರೇ ಮೈ ಜುಮ್ಮೆನ್ನುತ್ತೆ!!! ಟೈಗರ್ ಹಿಲ್ ನಂತಹ ಮುಖ್ಯ ಪ್ರದೇಶಗಳನ್ನು ನಮ್ಮ ಪಡೆಗಳು ವಶಪಡಿಸುತ್ತಾ ಹೋದವು. ಜುಲಾಯಿ ಮೊದಲ ವಾರಗಳಲ್ಲೇ ಪಾಕ್ ಸೇನೆ ಬಳಲಿತ್ತು. ಅದೂ ಅಲ್ಲದೆ ಜಾಗತಿಕ ಮಟ್ಟದ ಒತ್ತಡ ಪಾಕಿಸ್ಥಾನದ ಮೇಲಿತ್ತು. ಕೊನೆಗೂ ಪಾಕಿಸ್ಥಾನದ ಪ್ರಧಾನಿ ನವಾಜ್ ಶರೀಫ್ ಸೇನೆಯನ್ನು ಹಿಂದೆಗೆದರು. ಆದ್ರೆ ಜೆಹಾದಿಗಳು ಯುದ್ಧವನ್ನು ಮುಂದುವರೆಸಿದ್ರು. ಸ್ವಲ್ಪವೂ ಎದೆಗುಂದದೆ ಶತ್ರುವನ್ನೆದುರಿಸಿದ ನಮ್ಮ ಸೇನೆ ದ್ರಾಸ್ ಕಣಿವೆಯನ್ನು ಗೆಲ್ಲುವುದರೊಂದಿಗೆ ಯುದ್ಧ ಕೊನೆಗೊಂಡಿತು. ಅವತ್ತು ಜುಲಾಯಿ 26. ಆವತ್ತಿನಿಂದ ಈ ದಿನವನ್ನು ‘ವಿಜಯ್ ದಿವಸ್’ ಅಂತ ಆಚರಿಸಲಾಗುತ್ತದೆ. ದೇಶಕ್ಕಾಗಿ ಬಲಿದಾನಗೈದ ಸೈನಿಕರ ನೆನಪಿಗಾಗಿ. ನಮ್ಮ ನಾಳೆಗಳಿಗೆ ತಮ್ಮ ವರ್ತಮಾನವನ್ನು ಮುಡಿಪಾಗಿಟ್ಟ ಸೈನಿಕರೆಷ್ಟೊ. ಕ್ಯಾ. ಸೌರಭ್ ಕಾಲಿಯಾ, ಕ್ಯಾ.ವಿಕ್ರಮ್ ಭಾತ್ರ, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್, ಸ್ಕಾಡ್ರನ್ ಲೀಡರ್ ಅಜಯ್ ಅಹುಜಾ. . . ಒಬ್ಬೊಬ್ಬರ ಸಾಹಸ, ಧೈರ್ಯ ಮರೆಯಲಸಾಧ್ಯ!!! ಯುದ್ಧ ಮುಗಿದ ಮೇಲೆ ಪಾಕಿಸ್ಥಾನ ತನ್ನ ಸೈನಿಕರ ದೇಹವನ್ನೂ ಗುರುತಿಸಲೂ ಒಪ್ಪಲಿಲ್ಲ. ಇದಕ್ಕಿಂತ ನಾಚಿಕೆಗೇಡು ಇನ್ನೇನಿದೆ?

ಇವತ್ತು ಕಾರ್ಗಿಲ್ ಯುದ್ಧವಾಗಿ ಹತ್ತು ವರ್ಷಗಳೇ ಕಳೆದಿವೆ. ಬಲಿದಾನಗೈದ ಸೈನಿಕರು ಕಾಲಗರ್ಭ ಸೇರಿದ್ದಾರೆ. ಆದರೆ ಅವರ ಮನೆಯವರಿಗೆ, ಅಪ್ಪ-ಅಮ್ಮನಿಗೆ ಅವರು ಮಡಿಲಲ್ಲಿ, ಮನೆಯಂಗಳದಲ್ಲಿ ಆಡಿದ ಮಕ್ಕಳಲ್ಲವೇ? ಅವರಂತೂ ಈ ಧೈರ್ಯಶಾಲಿಗಳನ್ನು ದಿನನಿತ್ಯ ನೆನೆಸುತ್ತಿರಬಹುದು ಅಲ್ವಾ? ಕೊನೆ ಪಕ್ಷ ಇವತ್ತಾದ್ರೂ ಇವರನ್ನು, ಇವರ ಸಾಹಸವನ್ನು, ತ್ಯಾಗವನ್ನು ನೆನಪಿಸಿಕೊಳ್ಳದಿದ್ರೆ ನಾವು ಸ್ವಾರ್ಥಿಗಳಾಗುವುದಿಲ್ಲವೇ? ಕೃತಘ್ನರೆನಿಸುವುದಿಲ್ಲವೇ? ಕಾರ್ಗಿಲ್ ವಿಜಯ ಬಿಜೆಪಿಯ ವಿಜಯ, ದೇಶದ್ದಲ್ಲ ಅಂತ ಹೇಳಿಕೊಂಡು ಬಂದ ಕಾಂಗ್ರೆಸ್ ಕೊನೆಗೂ ವಿಜಯ ದಿವಸ್ ಆಚರಿಸಲು ಮುಂದಾಗಿದ್ದು ಸಂತೋಷದ ವಿಷಯ. ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಕೀಳುಮಟ್ಟದ ರಾಜಕೀಯವನ್ನು ಬದಿಗೊತ್ತಿ ಹುತಾತ್ಮರ ಬಲಿದಾನವನ್ನು ನೆನಪಿಸಿ, ಗೌರವಿಸಿದ್ರೆ ಅದಕ್ಕಿಂತ ಶ್ರೇಯಸ್ಕರ ಕೆಲಸ ಬೇರೆ ಇಲ್ಲ. ಹಾಗೆಯೇ ನಾವು ಲೋಕಸಭೆಗೆ ಆರಿಸಿ ಕಳಿಸಿದ್ದಕ್ಕೆ ನಮ್ಮ ಮೇಲೆ ಮಾಡುವ ಬಹುದೊಡ್ಡ ಉಪಕಾರ ಕೂಡ. "A man is not dead until he is forgotten" ಎಂಬ ಮಾತೊಂದಿದೆ. ನಮ್ಮ ಸೈನಿಕರನ್ನು ನಾವು ಯಾವತ್ತೂ ಮರೀಬಾರ್ದು. ಇವತ್ತು ನಾವು ಚೆನ್ನಾಗಿದ್ದೇವೆ, ಸುರಕ್ಷಿತವಾಗಿದ್ದೇವೆ ಅಂದ್ರೆ ಇವರಿಂದಲೇ. ದೇಶ ರಕ್ಷಣೆಯನ್ನು ಕೈಗೆತ್ತಿಕೊಂಡ ಸೈನಿಕರಿಗೆ ನಮ್ಮ ನಮನಗಳು.

Wednesday, July 22, 2009

ಗುರುವಿನ ಗುಲಾಮನಾಗುವ ತನಕ. . .

‘ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಾಃ. . . ‘ ಅಂತ ದೇವೀ ಸದನ ಸಭಾಭವನದಲ್ಲಿ ಮಕ್ಕಳು ಮಾತಾಜಿಯ ಮುಂದೆ ಕೈ ಮುಗಿದು ಪ್ರಾರ್ಥನಾ ರೂಪದಲ್ಲಿ ಜೋರಾಗಿ ಹಾಡುತ್ತಿದ್ರು. ಅದರ ಪ್ರತಿಧ್ವನಿ ಪಕ್ಕದ ರಸ್ತೆಗೆ ಕೇಳ್ತಿತ್ತು. ಎಷ್ಟೋ ಬಾರಿ ರಸ್ತೆಯಲ್ಲಿ ನಡೆದು ಹೋಗ್ತಿದ್ದಾಗ ಇದನ್ನ ಕೇಳಿ ನನ್ನ ಕಿವಿಗಳು ನಿಮಿರುತ್ತಿದ್ದವು. ಅದು ನಮ್ಮೂರ ಶಾಲೆಯ ಸಭಾಭವನ. ಅಕ್ಕ-ಪಕ್ಕದ ಮನೆಯವರು ತಮ್ಮ ಮಕ್ಕಳನ್ನು ನಮ್ಮ ಶಾಲೆಯ ಅಂಗನವಾಡಿಗೆ ಕಳಿಸ್ತಿದ್ರು. ಮಾತಾಜಿ ಅಂದ್ರೆ ಸಾಧು, ಸನ್ಯಾಸಿನಿ ಅಂತ ತಿಳ್ಕೊಂಡ್ರೆ ಊಹೆ ತಪ್ಪಾಗುತ್ತೆ. ಮಾತಾಜಿ ಬೇರಾರು ಅಲ್ಲ ಅಂಗನವಾಡಿ ಟೀಚರ್!!! (ಕೃಷ್ಣನನ್ನು ಹಡೆದದ್ದು ದೇವಕಿಯಾದ್ರೂ ಲಾಲಿಸಿ ಪಾಲಿಸಿದ್ದು ಯಶೋದೆಯಲ್ಲವೆ???) ಇಡೀ ದಿನ ಪುಟ್ಟ ಮಕ್ಕಳೊಂದಿಗೆ ಬೆರೆತು, ಅವರ ಬೇಕು ಬೇಡಗಳನ್ನು ಪೂರೈಸಿ, ಒಂದಷ್ಟು ಶ್ಲೋಕಗಳು, ಹಾಡುಗಳು, ಕಥೆಗಳನ್ನು ಹೇಳಿಕೊಟ್ಟು ಪ್ರೀತಿಯಿಂದ ನೋಡಿಕೊಳ್ಳುವ ಆ ಟೀಚರನ್ನು ಮಾತಾಜಿ ಅಂತ ಸಂಭೋಧಿಸಿದ್ರೆ ಅವ್ರಿಗೆ ಕೊಡೋ ದೊಡ್ಡ ಗೌರವ ಅಲ್ವಾ??? ಸಣ್ಣದರಿಂದಲೇ ಕಲಿತು, ಪ್ರತಿದಿನ ಹೇಳ್ತಿದ್ದ ಈ ಮಂತ್ರವನ್ನು ಶಂಕರಾಚಾರ್ಯರು ರಚಿಸಿದ್ದು ಅಂತ ನನ್ಗೆ ನಿನ್ನೆಯ ವರೆಗೂ ಗೊತ್ತಿರ್ಲಿಲ್ಲ. ಗೂಗಲಾಯ ನಮಃ ಎಂದುಕೊಂಡು ಗೂಗಲ್ ಸರ್ಚಿಗೆ ಶರಣಾದಾಗ ಈ ವಿಷಯ ಗೊತ್ತಾಯಿತು. ನನಗೆ ಬಹಳಷ್ಟು ವಿಷಯಗಳು ಗೊತ್ತು ಎಂಬ ಜಂಭ ಜರ್ರಂತ ಇಳಿದು ಹೋಯಿತು. ಆದ್ರೆ ಒಂದು ಹೊಸ ವಿಷಯ ತಿಳೀತಲ್ಲ ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡೆ.

ಹೇಳಿ ಕೇಳಿ ನಮ್ಮದು ಸಾಧು, ಸಂತ, ಹರಿಕಾರರ ನಾಡು. ಅಸಂಖ್ಯ ಆಧ್ಯಾತ್ಮಿಕ ಗುರುಗಳು ತಮ್ಮ ಅಮಿತ ಜ್ಞಾನವನ್ನು ಕೊಟ್ಟು ಇಲ್ಲಿನ ಆಧ್ಯಾತ್ಮಿಕ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ. ನದಿ ಮೂಲ, ಋಷಿ ಮೂಲ ಹುಡುಕಬಾರ್ದಂತೆ. ಹಾಗೆಯೇ ನಾನು ಗುರುಮೂಲ ಹುಡುಕಲು ಹೋಗೋದಿಲ್ಲ. ಯಾರ್ಯಾರು ಏನೇನು ಭೋದನೆ ಕೊಟ್ಟಿದ್ದಾರಂತ ತಲೆಕೆಡಿಸಿಕೊಳ್ಳುವುದಿಲ್ಲ. ಏನೇ ಉಪದೇಶ ಕೊಟ್ರೂ ಒಳ್ಳೆಯದನ್ನೇ ಕೊಟ್ಟಿರ್ತಾರೆ. (ಅದೂ ಇಲ್ಲದೆ ಆಧ್ಯಾತ್ಮದ ಬಗ್ಗೆ ತುಂಬಾ ಚಿಂತಿಸುವಷ್ಟು ವಯಸ್ಸು ನನಗಾಗಿಲ್ಲ) ‘ಏನು ಗುರೂ… ಚೆನ್ನಾಗಿದ್ದೀಯಾ??’ ಅನ್ನೋದು ಬೆಂಗ್ಳೂರಲ್ಲಿ ಸರ್ವೇ ಸಾಮಾನ್ಯ. ನೀವೇನಾದ್ರು ಬೆಂಗ್ಳೂರಿಗೆ ಮೊಟ್ಟಮೊದಲ ಬಾರಿಗೆ ಹೋಗಿದ್ದು ಯಾರಾದ್ರೂ ಈ ರೀತಿ ಕೇಳಿದ್ರೆ ತಬ್ಬಿಬ್ಬಾಗಬೇಡಿ. ಬೆಂಗಳೂರಿನ ಮಾತಿನಲ್ಲಿ ‘ಗುರು-ಸಿಸ್ಯಾ’ ಪದಗಳ ಬಳಕೆ ಸಾಮಾನ್ಯ. ಗುರು ಅಂದ ಕೂಡಲೇ ನನ್ಗೆ ನೆನಪಾಗೋದು ಶಾಲೆಯಲ್ಲಿ ಪಾಠ ಹೇಳಿಕೊಟ್ಟ ಟೀಚರುಗಳು ಮತ್ತು ದ್ರೋಣಾಚಾರ್ಯರು. ಹೌದು ಸ್ವಾಮಿ ನಾನು ಹೇಳುತ್ತಿರುವುದು ಮಹಾಭಾರತದ ಕಾಲದ ದ್ರೋಣಾಚಾರ್ಯರ ಬಗ್ಗೆಯೇ… ಮಹಾಭಾರತ ನನ್ನ ಮೇಲೆ ಮಾಡಿರುವ ಮೋಡಿಯೇ ಅಂಥದ್ದು. ಕುರು ರಾಜಕುಮಾರರಿಗೆ ತನ್ನೆಲ್ಲಾ ಜ್ಞಾನವನ್ನು ಧಾರಯೆರೆದ ಮಹಾಗುರು ದ್ರೋಣಾಚಾರ್ಯರು. ಗುರುವಿಗೆ ತಕ್ಕಂತೆ ಏಕಲವ್ಯ, ಅರ್ಜುನನಂತಹ ಸಮರ್ಥ ಶಿಷ್ಯರೂ ದ್ರೋಣರ ಪಾಲಿಗಿದ್ದರು. ಇವತ್ತಿಗೂ ಭಾರತ ಸರಕಾರ ದ್ರೋಣಾಚಾರ್ಯ, ಅರ್ಜುನ ಮತ್ತು ಏಕಲವ್ಯ ಪ್ರಶಸ್ತಿಗಳನ್ನು ಕೊಡುತ್ತಿದೆ. (ಇದಕ್ಕೆ ಯಾವುದೇ ಧರ್ಮದ ಲೇಪನ ಬಾರದಿರುವುದು ನಮ್ಮ ಪುಣ್ಯ) ನಮ್ಮ ಇತಿಹಾಸ ಕಂಡ ಒಬ್ಬ ಶ್ರೇಷ್ಠ ಗುರುವನ್ನು ನೆನಪಿಸಿ ಆತನಿಗೆ ಸಲ್ಲಿಸುವ ಗುರುವಂದನೆಯೇ ಸರಿ.

ದಿ ಕರಾಟೆ ಕಿಡ್ ಅನ್ನೋ ಸಿನೆಮಾವೊಂದಿದೆ. ನಾನು ತುಂಬಾ ಇಷ್ಟ ಪಟ್ಟ ಸಿನೆಮಾಗಳಲ್ಲಿ ಇದೂ ಒಂದು. ಅದರಲ್ಲಿ ಡೇನಿಯಲ್ ಎಂಬ ಹುಡುಗ ತನಗೆ ಕರಾಟೆ ಕಲಿಸ್ಬೇಕೆಂದು ಒಬ್ಬ ಕರಾಟೆ ಟೀಚರನ್ನು ಕೇಳ್ತಾನೆ. (ಕರಾಟೆ ಕಲಿಸು ಅಂತ ಕರಾಟೆ ಟೀಚರನ್ನಲ್ಲದೆ ಡ್ಯಾನ್ಸ್ ಟೀಚರನ್ನು ಕೇಳಿಕ್ಕಾಗತ್ತಾ ಅಂತ ಬೈಕೋಬೇಡಿ.) ಕರಾಟೆ ಟೀಚರ್ ಹೆಸರು ಮಿಯಾಗಿ ಅಂತ. ಮೊದಲು ಮಿಯಾಗಿ ಕರಾಟೆ ಕಲಿಸ್ಲಿಕ್ಕೆ ಒಪ್ಪುವುದಿಲ್ಲ. ಕೊನೆಗೆ ಹುಡುಗನ ಗೋಗರೆತಕ್ಕೆ ಸೋತು ಮಿಯಾಗಿ ಒಪ್ಪುತ್ತಾನೆ ಆದ್ರೆ ಒಂದು ಶರತ್ತು ಹಾಕ್ತಾನೆ. ಶರತ್ತು ಏನಪ್ಪಾ ಅಂದ್ರೆ ಮಿಯಾಗಿ ಹೇಳಿದ ಕೆಲಸವನ್ನು ಮಾಡ್ಬೇಕು. ಯಾಕೆ, ಏನು ಅಂತ ಮರು ಪ್ರಶ್ನೆ ಮಾಡುವ ಹಾಗಿಲ್ಲ. ಕಲಿಯೋ ಆಸೆಯಿಂದ ಡೇನಿಯಲ್ ಸರಿ ಅಂತ ಗೋಣಾಡಿಸುತ್ತಾನೆ. ಮಿಯಾಗಿ ಕರಾಟೆ ಕಲಿಸೋ ಬದಲು ಪ್ರತಿ ದಿನ ತನ್ನ ಮನೆಗೆಲಸ ಮಾಡಿಸುತ್ತಾನೆ. ಒಂದು ದಿನ ಕಾರ್ ವಾಕ್ಸಿಂಗ್, ಮತ್ತೊಂದು ದಿನ ನೆಲದ ಸ್ಯಾಂಡ್ ಪಾಲಿಶಿಂಗ್, ಮಗದೊಂದು ದಿನ ಬೇಲಿಗೆ ಪೈಂಟಿಂಗ್… ಮನಸ್ಸಿನಲ್ಲಿ ಬೇಸರ, ಸಿಟ್ಟಿದ್ರೂ ಡೇನಿಯಲ್ ತುಟಿಕ್ ಪಿಟಿಕ್ ಅನ್ನದೇ ಹೇಳಿದ ಕೆಲಸವನ್ನೆಲ್ಲಾ ಮಾಡ್ತಾನೆ. ಒಂದು ದಿನ ತಾಳ್ಮೆ ಕಳೆದುಕೊಂಡು ಡೇನಿಯಲ್ ಮಿಯಾಗಿಯನ್ನು ಪ್ರಶ್ನಿಸಿಯೇ ಬಿಡ್ತಾನೆ. ಮನೆಗೆಲಸ ಮಾಡಿಸುವ ನೆಪದಲ್ಲಿ ಮಿಯಾಗಿ ತನಗೆ ಗೊತ್ತಿಲ್ಲದಂತೆಯೇ ಕರಾಟೆಯ ಬ್ಲಾಕುಗಳನ್ನು ಹೇಳಿಕೊಟ್ಟಿದ್ದಾನೆಂಬುದು ಡೇನಿಯಲ್ ಗೆ ಮನವರಿಕೆಯಾಗುತ್ತದೆ. ಗುರುವಿನ ಮೇಲೆ ಅಚಲವಾದ ನಂಬಿಕೆ ಇದ್ದಲ್ಲಿ ವಿದ್ಯೆ ತಂತಾನೆ ಬರುತ್ತದೆ ಅಲ್ವಾ? ಮತ್ತೆ ನಮ್ಮ ದಾಸರ ಪದ ಕೂಡ ಇದನ್ನೇ ಅಲ್ವಾ ಹೇಳೋದು “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣಾ ಮುಕುತಿ…” ಅಂತ. ಸಣ್ಣವನಾಗಿದ್ದಾಗ ನಾನು ಅಷ್ಟೆ. ಟೀಚರ್ ಹೇಳಿದ್ದೆ ವೇದವಾಕ್ಯ, ಪರಮ ಸತ್ಯ. ಎಷ್ಟೋ ಬಾರಿ ಅಪ್ಪ ಲೆಕ್ಕ ಹೇಳಿಕೊಡ್ತಿದ್ದಾಗ ‘ಹೀಗಲ್ಲ ನಮ್ಮ ಟೀಚರ್ ಹೇಳಿಕೊಟ್ಟದ್ದು’ ಅಂತ ವಾದ ಮಾಡಿ ಸಿಟ್ಟು ಬರಿಸ್ತಿದ್ದೆ.

ಗುರುವಿನ ವಿಷಯ ಬಂದಾಗ ಅಮ್ಮನನ್ನು ಹೇಗೆ ತಾನೆ ಮರೆಯಲು ಸಾಧ್ಯ? ‘ತಾಯಿಯೇ ಮೊದಲ ಗುರು’ ಅಂತ ತಿಳಿದವರು ಯಾರೋ ಹೇಳಿದ್ದಾರಲ್ವಾ? ಹೌದು. ಅಮ್ಮ ಮುದ್ದಿಸ್ತಾ ಎಲ್ಲಾ ಕಲಿಸ್ತಾಳೆ. ಭಾಷೆ, ಮಾತು, ಕತೆ, ಆಟ ಏನೇನೋ. ಕಾಗದ, ಪುಸ್ತಕ ತುಳೀಬಾರ್ದು, ದೆದ್ದು ಸಾಮಿ ಮಾಡು (ದೆದ್ದು ಅಂದ್ರೆ ದೇವ್ರು) ಅನ್ನೋ ಪುಟ್ಟ ಪುಟ್ಟ ವಿಷಯಗಳಿಂದ ಹಿಡಿದು ಗುರು ಹಿರಿಯರನ್ನು ಗೌರವಿಸಬೇಕೆಂಬ ಮೌಲ್ಯಗಳನ್ನೂ ಹೇಳಿಕೊಡ್ತಾಳೆ. ಒಟ್ಟಿನಲ್ಲಿ ಕಲಿಕೆಯೆಂಬುದು ಮನೆಯಿಂದಲೇ ಶುರುವಾಗುತ್ತದೆ. ಅಮ್ಮನೇ ಟೀಚರ್ ಆಗ್ತಾಳೆ.

ಮನೆಯಿಂದ ಹೊರಗಡೆ ಕಾಲಿಟ್ಟ ಮೇಲೆ ಸೇರಿದ್ದು ಶಾಲೆಗೆ. ಅಲ್ಲಿನ ವಾತಾವರಣ ಸ್ವಲ್ಪ ಭಿನ್ನ. ಒಬ್ಬೊಬ್ಬ ಟೀಚರುಗಳ ರೀತಿ ನೀತಿಗಳು ಬೇರೆ ಬೇರೆ. ಒಬ್ರು ತುಂಬಾ ಶಾಂತವಾಗಿದ್ರೆ, ಇನ್ನೊಬ್ರು ಭಯಂಕರ ಖಡಕ್. ಗುರುಭಕ್ತಿ, ಗೌರವ ಅನ್ನೋ ಪದಗಳು ಇನ್ನೂ ನನ್ನ ಡಿಕ್ಷನರಿನಲ್ಲೇ ಇರ್ಲಿಲ್ಲ. ಭಯದಿಂದ ಭಕ್ತಿಯೂ, ಗೌರವವೂ ಬರ್ತಾ ಇತ್ತು. ಮೊದಲಿಂದಲೂ ನನ್ಗೆ ಗಣಿತ ಕಬ್ಬಿಣದ ಕಡಲೆ ಇದ್ದ ಹಾಗೆ. ಲೆಕ್ಕ ತಪ್ಪು ಮಾಡಿದಾಗಲೆಲ್ಲಾ ರಾಜೀವಿ ಟೀಚರ್ ಫಟ್-ಫಟ್ ಅಂತ ಕೈ ಗಂಟಿಗೆ ಹೊಡೆಯೋರು. ಅಬ್ಬಾ ಏನಪ್ಪಾ ಈ ಟೀಚರು ಅಂತ ಬಹಳ ಬಾರಿ ಅನ್ನಿಸ್ತಿತ್ತು. ಆ ಶಾಲೆಯಲ್ಲಿದ್ದಾಗ, ಮುಂದೆಯೂ ನನ್ನ ಲೀಸ್ಟ್ ಫೇವರಿಟ್ ಟೀಚರ್ ಆಗಿದ್ದರು. ಬಹಳ ವರ್ಷಗಳ ನಂತರ ಭೇಟಿಯಾದಾಗ ಅವರು ಬರ ಮಾಡಿಸಿಕೊಂಡ ರೀತಿ, ಮಾತನಾಡಿಸಿದ ರೀತಿ ಅವರ ಮೇಲಿದ್ದ ನನ್ನ ಒಪಿನಿಯನ್ಗಳನ್ನೆಲ್ಲಾ ತಲೆಕೆಳಗಾಗಿಸಿತ್ತು. ಐದಾರು ವರ್ಷಗಳ ಬಳಿಕ ಭೇಟಿಯಾದಾಗಲೂ ಬಾಲ ಮಾಸ್ಟ್ರಿಗೆ ನನ್ನ ನೆನಪು ಚೆನ್ನಾಗಿಯೇ ಇತ್ತು. ಇಡೀ ಸ್ಟಾಫ್ ರೂಮಿಗೆ ಇವನು ನಮ್ಮ ಶಾಲೆಯಲ್ಲಿ ಓದಿದ್ದ ಹುಡುಗ ಅಂತ ಪರಿಚಯ ಮಾಡಿಸಿದ್ದರು. ಅವರು ತೋರಿಸಿದ ಪ್ರೀತಿಗೆ ಏನಂತ ಹೇಳೋದು? ಕುಮಾರ ವ್ಯಾಸನ ಹಳೆಗನ್ನಡ ಕಾವ್ಯ, ಕುವೆಂಪು,ಅಡಿಗರ ನವ್ಯ ಸಾಹಿತ್ಯಗಳನ್ನು ಮನ:ತಟ್ಟುವಂತೆ ಹೇಳಿಕೊಟ್ಟ ಗಂಗಮ್ಮ ಟೀಚರ್ (ಇವತ್ತು ನಾನು ತಪ್ಪಿಲ್ಲದೆ ಅಲ್ಪ ಸ್ವಲ್ಪ ಕನ್ನಡ ಗೀಚಿದ್ರೆ ಅದಕ್ಕೆ ಕಾರಣ ಇವರೇ. . ), ಇತಿಹಾಸವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿ ಇತಿಹಾಸಲ್ಲಿ ನನಗೆ ಆಸಕ್ತಿ ಮೂಡುವಂತೆ ಮಾಡಿದ ಪುರುಷೋತ್ತಮ ಮಾಸ್ಟ್ರು (ಅಂದ ಹಾಗೆ ಇತಿಹಾಸ, ಹಿಸ್ಟರಿ ಚಾನೆಲ್ ನಾನು ತುಂಬಾ ಇಷ್ಟ ಪಡುತ್ತೇನೆ), ಎಂಥದ್ದೇ ಕಷ್ಟದ ಸಮಯದಲ್ಲಿ ಅದರ ಲೈಟರ್ ಸೈಡ್ ನೋಡಿ ಅಂತ ಹೇಳಿಕೊಟ್ಟ, ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಿದ್ದ ಹಿಂದಿ ಮಾಸ್ಟ್ರು, ಇಡೀ ಶಾಲೆಯನ್ನು ರಾಮ, ಲಕ್ಷ್ಮಣ, ಭರತ, ಶತ್ರುಘ್ನ ಅಂತ ನಾಲ್ಕು ತಂಡಗಳನ್ನು ಮಾಡಿ, ನಮ್ಮ ಮಧ್ಯೆ ಆರೋಗ್ಯಕರ ಪೈಪೋಟಿ ಏರ್ಪಡಿಸಿ ಕ್ರೀಡಾಕೂಟವನ್ನು ಉತ್ಸವವಾಗಿ ಮಾರ್ಪಡಿಸುತ್ತಿದ್ದ ಪೀಟಿ ಮಾಸ್ಟ್ರು. ಹೀಗೆ ಪ್ರತಿಯೊಬ್ಬರೂ ನನ್ನನ್ನು ಒಳ್ಳೆಯ ವ್ಯಕ್ತಿಯನ್ನಾಗಿಸಿದ್ದಕ್ಕೆ ನೀಡಿದ ಮಾರ್ಗದರ್ಶನಕ್ಕೆ ನಾನೆಂದೂ ಋಣಿ. (ಕೊನೆ ಪಕ್ಷ ನಾನು ಸ್ವಲ್ಪನಾದ್ರೂ ಒಳ್ಳೆಯವನು ಅಂತ ಮನಸ್ಸು ಹೇಳತ್ತೆ) ಇವತ್ತು ನಾನು ಏನೇ ಆಗಿದ್ರೂ ಅದು ನನ್ನ ತಂದೆ ತಾಯಿಯಿಂದ, ನನ್ನ ಟೀಚರುಗಳಿಂದ, ನನ್ನ ಶಾಲೆಯಿಂದ. . . ಇವರೆಲ್ಲಾ ಹಾಕಿಕೊಟ್ಟ ಭದ್ರ ಅಡಿಪಾಯದ ಮೇಲೆ ಇವತ್ತು ನಾನು ನಿಂತಿದ್ದೇನೆ. ಶಾಲಾ ದಿನಗಳಲ್ಲಿದ್ದ ಗುರು-ಶಿಷ್ಯರ ಸಂಬಂಧವೇ ಅಂಥದ್ದು. ಅಲ್ಲಿ ತಪ್ಪಿಗೆ ದಂಡನೆಯೂ ಇತ್ತು, ಗುರುವಿನ ನಿಶ್ಕಲ್ಮಶ ಪ್ರೀತಿನೂ ಇತ್ತು, ಒಳ್ಳೆಯ ಕೆಲಸ ಮಾಡಿದಲ್ಲಿ ಕಣ್ಣಲ್ಲಿ ಮೆಚ್ಚುಗೆಯ ಸೂಚನೆಯಿತ್ತು, ಒಳ್ಳೆಯದನ್ನು ಮಾಡ್ಲಿಕ್ಕೆ ಪ್ರೋತ್ಸಾಹವೂ ಇತ್ತು. ತಿಂಗಳ ಕೊನೆಗೆ ಸಂಬಳ ಸಿಗತ್ತಪ್ಪಾ, ಅದವರ ಕೆಲಸ ಅಂತ ಅನಿಸಿದ್ರೂ ಅವರಿಗೆ ವಿದ್ಯಾರ್ಥಿಗಳ ಬಗ್ಗೆ ಒಂದು ರೀತಿಯ ಕಾಳಜಿ ಇತ್ತು, ಪ್ರೀತಿ ಇತ್ತು, ನಮ್ಮ ಶಾಲೆ ಮಕ್ಕಳು ಅನ್ನೋ ಹೆಮ್ಮೆ ಇತ್ತು. ಮುಂದೆ ಕಾಲೇಜು ಮೆಟ್ಟಿಲು ಹತ್ತಿದಾಗ ಈ ಗುರು-ಶಿಷ್ಯ ಸಂಬಂಧ ಕೇವಲ ವ್ಯಾವಹಾರಿಕವಾದದ್ದಕ್ಕೆ ಸ್ವಲ್ಪ ಬೇಸರವಿದೆ.

ಯಾಕೆ ಇಷ್ಟೆಲ್ಲಾ ಕುಯ್ತಾ ಇದ್ದೀನಿ ಅಂತ ಅನ್ನಿಸ್ತಿದೆಯಾ??? ಏನಿಲ್ಲ. ಆಷಾಡ ಮಾಸದ ಹುಣ್ಣಿಮೆಯನ್ನು ಸಾಮಾನ್ಯವಾಗಿ ಗುರು ಪೂರ್ಣಿಮೆ ಅಂತ ಆಚರಿಸ್ತಾರೆ. ವೇದಗಳನ್ನು ವಿಂಗಡಿಸಿ ಚತುರ್ವೇದಗಳನ್ನಾಗಿಸಿದ, ಮಹಾಭಾರತದ ಕರ್ತೃ ವೇದ ವ್ಯಾಸರ ಜನ್ಮದಿನವೂ ಹೌದು. ಅದಕ್ಕಾಗಿಯೇ ಈ ದಿನವನ್ನು ವ್ಯಾಸ ಪೂರ್ಣಿಮೆ ಅಂತಲೂ ಕರೆಯುತ್ತಾರೆ. ದೇಶದಾದ್ಯಂತ ಆಧ್ಯಾತ್ಮಿಕ ಗುರುಗಳಿಗೆ, ಮಠಾಧೀಶರಿಗೆ ಗುರುವಂದನೆ ಸಲ್ಲಿಸಲಾಗುತ್ತದೆ. ನಾವು ಎಷ್ಟು ಬ್ಯುಸಿ ಅಂದ್ರೆ ನಮ್ಮ ಟೀಚರುಗಳನ್ನು ನೆನಪಿಸುವಷ್ಟು ಪುರುಸೊತ್ತಿರುವುದಿಲ್ಲ. ನಮ್ಮದೇ ದಿನ ನಿತ್ಯದ ಜಂಜಾಟಗಳಲ್ಲಿ ಮುಳುಗಿದ್ದೇವೆ. ಅಸಂಖ್ಯ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ, ಒಳ್ಳೆಯ ನಾಗರಿಕರನ್ನಾಗಿ ರೂಪಿಸುವ ಎಲ್ಲಾ ಟೀಚರುಗಳಿಗೆ ಗುರುಪೂರ್ಣಿಮೆಯ ನೆಪದಲ್ಲಿ ನಾನು ಸಲ್ಲಿಸುವ ಗುರುವಂದನೆಗಳು.

Wednesday, July 08, 2009

ಗೆಳತಿ... ಕಾಡುತ್ತಿರುವ ಆ ಸಂಜೆಗಳು . . .


ದಿನ ಹೀಗೆ ಜಾರಿ ಹೋಗಿದೆ ನೀನೀಗ ಬಾರದೇ. . .
ಜೊತೆಯಿರದ ಬಾಳ ಯಾತ್ರೆಯಲಿ ಸೊಗಸೇನಿದೆ. . .

ಎಷ್ಟು ನಿಜ ಅಲ್ವಾ ಗುಬ್ಬಿ? ಜೀವನದಲ್ಲಿ ಸಂಗಾತಿಯಿಲ್ಲ ಅಂದ ಮೇಲೆ ಬಾಳಲ್ಲಿ ಅರ್ಥ ಏನಿದೆ? ನನ್ನ ಬಾಳಿಗೆ ಒಂದು ದಿಕ್ಕು, ಅರ್ಥ ಸಿಕ್ಕಿದ್ದೇ ನಿನ್ನಿಂದ ಕಣೋ. ಪ್ರೇಮಪೂರ್ವಕ ಕನಸುಗಳನ್ನು ಕಾಣುವ ಧೈರ್ಯವನ್ನು, ಹುಮ್ಮಸ್ಸನ್ನು ತಂದವಳೇ ನೀನು. ಅಂತಹ ಕನಸುಗಳ ಸೌಧವನ್ನು ಕಟ್ಟಲು ಪ್ರೇರೇಪಿಸಿ, ಬೆನ್ನು ತಟ್ಟಿದವಳು ನೀನು. ನನ್ನ ಜೀವನ, ನನ್ನ ಆಸೆ, ನನ್ನ ಇಷ್ಟ, ಹೀಗೆ ಕೇವಲ ನನ್ನಗಳ ಜಾಡು ಹಿಡಿದು ನಡೆಯುತ್ತಿದ್ದವನನ್ನು ಒಪ್ಪಿಸಿ, ನಮ್ಮ ಆಸೆ, ನಮ್ಮ ಕನಸುಗಳು, ನಮ್ಮ ಜೀವನ ಅಂತ ಹೊಸ ದಾರಿಯೆಡೆಗೆ ನಡೆಸಿದವಳು ನೀನು. ಇಷ್ಟು ವರುಷ ನನ್ನ ನಿನ್ನ ಪ್ರೀತಿ ಉಳಿದು ಬರಲಿಕ್ಕೆ ಕಾರಣವೇ ನೀನು ಗುಬ್ಬಿ. ನಿನ್ನ ಮುಗ್ಧ ವ್ಯಕ್ತಿತ್ವ ನನ್ನನ್ನು ನಿನ್ನೆಡೆಗೆ ಯಾವತ್ತೂ ಆಕರ್ಷಿಸುತ್ತಾ ಬಂದಿದೆ. ಇನ್ನು ಮುಂದೆಯೂ ಆ ಮುಗ್ಧತೆಗೆ ನಾನು ಮತ್ತೆ ಮತ್ತೆ ಮರುಳಾಗುತ್ತಿರುತ್ತೇನೆ.

ಗುಬ್ಬಿ, ನೀನು ಬಂದು ಬೆಚ್ಚನೆ ಮನಸ್ಸಲ್ಲಿ ಕದಮುಚ್ಚಿ ಕುಳಿತೆಯಲ್ಲಾ? ಆಮೇಲೆ ನಾನು ನಾನಾಗಿ ಉಳಿದಿಲ್ಲ. ಮಾಡುವ ಪ್ರತಿ ಕೆಲಸದಲ್ಲಿ, ಪ್ರತಿ ವಿಷಯದಲ್ಲಿ, ಪ್ರತಿ ಕನಸಲ್ಲಿ, ಪ್ರತಿ ಆಸೆಯಲ್ಲಿ, ನಿಜ ಹೇಳಬೇಕೆಂದರೆ ಪ್ರತಿಯೊಂದರಲ್ಲೂ ನೀನು ಇರುತ್ತೀಯಾ. ಒಂದೊಂದು ಸಲ ಅನ್ನಿಸುವುದಿದೆ. . . ನಿನ್ನ ಬಿಟ್ಟು ಅದರಿಂದಾಚೆಗೆ ನಾನೇನಾದರೂ ಯೋಚಿಸಲು ಸಾಧ್ಯವೇ ಅಂತ? ಆದರೆ ಅದು ನನ್ನಿಂದ ಸಾಧ್ಯವಾಗುವ ಮಾತಲ್ಲ.

ಗುಬ್ಬಚ್ಚಿ, ಜೀವನ ಪ್ರಿಯ ಅನ್ನಿಸಿದ್ದೇ ನಿನ್ನ ಸಾಂಗತ್ಯದಿಂದ. ನೀನು ನನಗೆ ಮೊದಲು ಇಷ್ಟವಾದದ್ದು ನಿನ್ನ ಮುಗ್ಧತೆಯಿಂದ. ಪ್ರತಿ ವಿಷಯದಲ್ಲಿ ಇರುವ ನಿನ್ನ ತೀವ್ರತೆಯಿಂದ. ಈಗ ಇಲ್ಲಿ ಸಂಜೆ, ನೀನಿಲ್ಲದ ಸಂಜೆಗೆ ಒಂದು ಅರ್ಥವೂ ಇಲ್ಲ, ಚಂದವೂ ಇಲ್ಲ. ನಿನ್ನ ನೆನಪುಗಳು ಕಣ್ಣಂಚಲ್ಲಿ ಮೂಡಿ ಸಂ
ಜೆಯ ಹೊತ್ತಿಗೆ ತುಂಬಾ ಕಾಡುತ್ತವೆ. ನೀನು ಕಾಲೇಜಿಗೆ ಹೋಗಿದ್ದಾಗ ನಿನ್ನ ಬರವಿಗೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದೆ. ದಿನಕ್ಕೊಂದು ಬಾರಿ ನಿನ್ನನ್ನು ನೋಡದಿದ್ದರೆ ಏನನ್ನೋ ಕಳೆದುಕೊಂಡಂತಹ ಭಾವ. ಆಗ ತಾನೆ ಸ್ನಾನ ಮಾಡಿ ಬಂದು ಟೆರೇಸಲ್ಲಿ ನೀನು ತಲೆಗೂದಲು ಒಣಗಿಸುವುದನ್ನು ನೋಡುವುದೇ ಚಂದ!!! ಆಗಾಗ ಟೆರೇಸ್ ಕಡೆಗೆ ದೃಷ್ಟಿ ಹಾಯಿಸುವುದೇ ನನ್ನ ಕೆಲಸವಾಗುತ್ತಿತ್ತು!!! ತಣ್ಣನೆ ಬೀಸುವ ತಂಗಾಳಿ ನಿನ್ನ ಒದ್ದೆ ಕೂದಲ ಕಂಪನ್ನು ಹೊತ್ತು ತಂದಾಗ, ಅದರ ಕಂಪನ್ನು ಸವಿಯುವುದೇ ಒಂದು ಅದ್ಭುತವಾದ ಅನುಭೂತಿ ಕಣೋ. ಆಮೇಲೆ ಮಾತುಗಳು. . . ಸಣ್ಣ ಮಗುವಿನಂತಹ ಪ್ರಶ್ನೆಗಳು. . . ಎಷ್ಟು ಆಶ್ಚರ್ಯವಾಗುತ್ತಿತ್ತು ಗೊತ್ತಾ? ಈ ಹುಡುಗಿಗೆ ಏನೂ ಗೊತ್ತಿಲ್ವಾ ಅಂತ ಎಷ್ಟೋ ಬಾರಿ ಅನಿಸುತ್ತಿತ್ತು. ಅದರಿಂದಲೇ ಇರಬೇಕು ಈಗಲೂ ನೀನು ನನಗೆ ಮಗುವಿನಂತೆ ಕಾಣಿಸುವುದು. ನನ್ನ ಗುಬ್ಬಚ್ಚಿ. . . ಇಲ್ಲಿ ತಂಗಾಳಿ ಬೀಸಿದಾಗೆಲ್ಲಾ ಕಣ್ಮುಚ್ಚಿ ನಿನ್ನ ಸನಿಹವನ್ನು ಅನುಭವಿಸಲು ಪ್ರಯತ್ನಿಸುತ್ತೇನೆ. ನಿನ್ನ ಮುಗ್ಧ ಪ್ರಶ್ನೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಮನಃಪೂರ್ತಿ ನಗುತ್ತೇನೆ.

ಹಳೆಯ ನೆನಪುಗಳು ತುಂಬಾನೇ ಕಾಡುತ್ತವೆ ಕಣೋ. . . ಅದರ ಜೊತೆಗೆ ನೀನು ಬಳಿ ಇಲ್ಲ ಅನ್ನುವ ಸಂಕಟ ಬೇರೆ. ನನಗೆ ನಿನ್ನನ್ನು ಬಿಟ್ಟು ಇರಲು ಆಗುತ್ತಿಲ್ಲ. ಆದಷ್ಟೂ ಬೇಗ ನಿನ್ನ ಬಳಿ ಬರುತ್ತೇನೆ. ಮತ್ತೆ ಆ ಸಂಜೆಗಳನ್ನು ಜೊತೆಯಾಗಿ ಕಳೆಯೋಣ!!!!!