ಇತ್ತೀಚೆಗೆ ಬಹಳಷ್ಟು ಹೆಸರು ಮಾಡಿರುವ ಚಲನಚಿತ್ರ ’ಸ್ಲಮ್ ಡಾಗ್ ಮಿಲಿಯನೇರ್’’ ಅಂದರೆ ಕೊಳಚೆನಾಯಿ ಕೋಟ್ಯಾಧೀಶ. ಮುಂಬೈಯ ಧಾರಾವಿ ಕೊಳಗೇರಿಯ ಒಬ್ಬ ಹುಡುಗ ಹೇಗೆ ತನ್ನ ಜೀವನಾನುಭವಗಳಿಂದ ಕೌನ್ ಬನೇಗಾ ಕರೋಡ್ ಪತಿಯಂತಹ ಕಾರ್ಯಕ್ರಮದಲ್ಲಿ ಕೋಟಿ ರುಪಾಯಿಗಳನ್ನು ಗೆಲ್ಲುತ್ತಾನೆ ಅನ್ನುವುದು ಈ ಚಿತ್ರದ ತಿರುಳು. ಭಾರತದ ಹಿನ್ನಲೆ ಇರುವ ಈ ಬ್ರಿಟಿಷ್ ಚಿತ್ರವನ್ನು ನಮ್ಮ ದೇಶದ ಬಹುದೊಡ್ಡ ಸಾಧನೆ ಎಂಬಂತೆ ನಮ್ಮ ಮಾಧ್ಯಮಗಳು ಬಿಂಬಿಸುತ್ತಿವೆ. ಅತ್ಯದ್ಭುತವಾದ ಚಲನಚಿತ್ರ ಎಂದು ಪುಕ್ಕಟೆ ಪ್ರಚಾರ ನೀಡುತ್ತಿವೆ. ಆದಿಯಿಂದ ಅಂತ್ಯದವರೆಗೆ ಬಡತನ, ಕಷ್ಟದ ಹೆಸರಿನಲ್ಲಿ ಕೇವಲ ಕೊಳಕನ್ನು, ಹೇಸಿಗೆಯನ್ನು ತೋರಿಸಿರುವ ಈ ಚಿತ್ರ ಯಾಕೆ ಇಷ್ಟೊಂದು ಸುದ್ದಿ ಮಾಡುತ್ತಿದೆ?
ಈ ಚಿತ್ರದ ಕಥೆ ಮೂಲತಃ ಭಾರತದ ರಾಯಭಾರಿ ವಿಕಾಸ್ ಸ್ವರೂಪ್ ಬರೆದ Q & A ಕಾದಂಬರಿಯ ಮೇಲೆ ಆಧಾರಿತವಾಗಿದೆ. ‘Who Will Win a Billion?’ ಎಂಬ ಟಿವಿ ಕಾರ್ಯಕ್ರಮದಲ್ಲಿ 12 ಪ್ರಶ್ನೆಗಳಿಗೆ ಸರಿಯುತ್ತರ ನೀಡಿ ಕೋಟಿ ರುಪಾಯಿಗಳನ್ನು ಗೆದ್ದಿರುತ್ತಾನೆ ರಾಮ್ ಮೊಹಮ್ಮದ್ ಥೋಮಸ್. ಅವನೇ ಈ ಕಾದಂಬರಿಯ ಕಥಾನಾಯಕ, ಕೇಂದ್ರಬಿಂದು. ಅವನಿಗೆ ನೀಡಲು ಹಣವಿಲ್ಲದೆ ಕಾರ್ಯಕ್ರಮದ ನಿರ್ಮಾಪಕ ಪಿತೂರಿ ಮಾಡಿ ಕಥಾನಾಯಕ ಜೈಲು ಪಾಲಾಗುವಂತೆ ಮಾಡುತ್ತಾನೆ. ಕಥಾನಾಯಕನ ಅನಕ್ಷರತೆ ನಿರ್ಮಾಪಕನ ತರ್ಕಕ್ಕೆ ಹೆಚ್ಚಿನ ಇಂಬು ಕೊಡುತ್ತದೆ. ತನ್ನ ಬಗ್ಗೆ ಅನುಕಂಪ ತೋರಿದ ವಕೀಲೆ ಸ್ಮಿತಾ ಶಾಹ್-ಗೆ ಹೇಗೆ ತನ್ನ ಜೀವನಾನುಭವಗಳಿಂದ ಕಾರ್ಯಕ್ರಮದಲ್ಲಿನ ಪ್ರಶ್ನೆಗಳನ್ನು ಉತ್ತರಿಸುವಂತಾಯಿತೆಂದು ಹೇಳುತ್ತಾನೆ. ಆತನ ಜೀವನಾನುಭವಗಳ ಅನಾವರಣದೊಂದಿಗೆ ಕತೆ ಮುಂದುವರಿಯುತ್ತದೆ. ತಾಯಿ ನವಜಾತ ಶಿಶುವನ್ನು ದೆಹಲಿಯ ಚರ್ಚೊಂದರಲ್ಲಿ ತ್ಯಜಿಸುತ್ತಾಳೆ. ಕಾಥೋಲಿಕ್ ಚರ್ಚಿನ ಅನಾಥಾಲಯದಲ್ಲಿ ಬೆಳೆಯುವ ಮಗುವಿನ ಅತ್ಯಂತ ಆಪ್ತ ಗೆಳೆಯ ಸಲೀಮ್ ಕೂಡಾ ಒಬ್ಬ ಅನಾಥ. ಕ್ರೈಸ್ತ ಪಾದ್ರಿಯಿಂದ ದೈಹಿಕ ಶೋಷಣೆಗೊಳಗಾಗಿ ಅನಾಥಾಶ್ರಮದಿಂದ ಓಡಿಹೋಗುವ ರಾಮ್, ಉದರ ಪೋಷಣೆಗೆ ಬಾಲಿವುಡ್ಡ್ ತಾರೆಯ ಮನೆಯಲ್ಲಿ, ಗುಪ್ತಚರನಾಗಿರುವ ಆಸ್ಟ್ರೇಲಿಯಾದ ರಾಯಭಾರಿಯ ತೋಟದ ಮನೆಯಲ್ಲಿ , ಮತ್ತೆ ಮುಂಬೈಯಲ್ಲಿ ಚಾಯ್ ವಾಲನಾಗಿ ಕೆಲಸ ಮಾಡುತ್ತಾನೆ. ತಾಜ್ ಮಹಲ್-ನಲ್ಲಿ ಗೈಡ್ ಆಗಿದ್ದಾಗ ಪರಿಚಯವಾಗುವ ನೀತಾ ವೃತ್ತಿಯಲ್ಲಿ ವೇಶ್ಯೆ. ಅವಳ ಪ್ರೇಮಕ್ಕೆ ಶರಣಾಗುವ ರಾಮ್ ಅವಳಿಗೋಸಕ್ಕರವೇ ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾನೆ. ತನ್ನ ಜೀವನ ಕಂಡ ಕರಾಳ ಸತ್ಯಗಳೇ ಕ್ವಿಜ್-ನ ಉತ್ತರಗಳಾಗಿದ್ದುದು ಅವನ ಅದೃಷ್ಟವೇ ಸರಿ. ಬಡತನ, ಅನಕ್ಷರತೆಯಂತಹ ದೌರ್ಬಲ್ಯಗಳನ್ನು ಮೆಟ್ಟಿ, ತನ್ನ ಅನುಭವ, ಅದೃಷ್ಟದಿಂದ ಜೀವನವೆಂಬ ಸ್ಪರ್ಧೆಯನ್ನು ಗೆಲ್ಲುತ್ತಾನೆ ರಾಮ್ ಮೊಹಮ್ಮದ್ ಥೋಮಸ್.
ಇನ್ನು ‘ಸ್ಲಮ್ ಡಾಗ್ ಮಿಲಿಯನೇರ್’’ ಚಿತ್ರದ ಕಡೆಗೆ ಗಮನ ಹರಿಸೋಣ. ಚಿತ್ರದ ನಾಯಕನ ಹೆಸರು ಜಮಾಲ್. ಆತ ಕ್ಯಾಥೋಲಿಕ್ ಚರ್ಚನಲ್ಲಿರುವ ಅನಾಥನಲ್ಲ. ಮುಂಬೈಯ ಕೊಳಗೇರಿಯಲ್ಲಿ ತನ್ನ ತಾಯಿಯ ಹಾಗೂ ಅಣ್ಣ ಸಲೀಮರ ಜೊತೆ ವಾಸಿಸುತ್ತಾರೆ. 1993 ರಲ್ಲಿ ನಡೆದ ಮುಂಬೈ ಗಲಭೆಯಲ್ಲಿ ಹಿಂದೂ ಮೂಲಭೂತವಾದಿಗಳು ಜಮಾಲನ ತಾಯಿಯನ್ನು ಬರ್ಬರವಾಗಿ ಕೊಲ್ಲುತ್ತಾರೆ. ಲತಿಕಾ ಅವರ ಬಾಲ್ಯದ ಗೆಳತಿ. ತಂದೆ-ತಾಯಿ, ಮನೆ-ಮಠಗಳನ್ನು ಕಳೆದುಕೊಂಡು ಮಳೆಯಲ್ಲಿ ನೆನೆಯುವ ಕರುಣಾಜನಕ ದೃಶ್ಯ ಕಾದಂಬರಿಯಲ್ಲಿ ಇಲ್ಲ!!! ಬಡತನದ ಬವಣೆಯನ್ನು ತೋರಿಸುವ ನೆಪದಲ್ಲಿ ಇಲ್ಲ ಸಲ್ಲದ ಹೊಲಸುಗಳನ್ನೆಲ್ಲಾ ಚಿತ್ರದಲ್ಲಿ ತೋರಿಸಲಾಗಿದೆ. ಕ್ವಿಜ್-ನ ಪ್ರಶ್ನೆಗಳೂ ಅಷ್ಟೇ. ಭಾರತದ ಬಗ್ಗೆ ಒಂದೇ ಒಂದು ಧನಾತ್ಮಕ ಪ್ರಶ್ನೆಯಿಲ್ಲ. (ಬಹುಪಾಲು ಜನರು ಚಿತ್ರ ನೋಡಿರುವುದರಿಂದ ಇದರ ಬಗ್ಗೆ ಹೆಚ್ಚೇನು ಬರೆಯುತ್ತಿಲ್ಲ)
ತಮ್ಮ ಸಂಸ್ಕೃತಿ, ಜೀವನ ಶೈಲಿಯು ಅತ್ಯಂತ ಶ್ರೇಷ್ಠವಾದದ್ದೆಂಬ ಮೊಂಡುತನ ಪಾಶ್ಚಿಮಾತ್ಯರಲ್ಲಿ ಮನೆಮಾಡಿದೆ. ಸ್ನೇಹಕೂಟಗಳಲ್ಲಿ, ಸಂಜೆಯ ಭೋಜನಕೂಟಗಳಲ್ಲಿ ಮದಿರೆಯನ್ನು ಸವಿಯುತ್ತಾ ಬೇರೆ ದೇಶದ ಬಡತನ, ಕಷ್ಟಗಳನ್ನು ತೋರಿಸುವ ಸ್ಲಮ್ ಡಾಗ್ ನಂತಹ ಚಿತ್ರಗಳನ್ನು ನೋಡಿ ತಮ್ಮ ಶ್ರೇಷ್ಟತೆಯ ಬಗ್ಗೆ ಬೆನ್ನು ತಟ್ಟಿಕೊಳ್ಳುವುದು ಇವರಿಗೆ ಹೊಸತೇನಲ್ಲ. ಆದರೆ ತಮ್ಮ ಧರ್ಮದ ಬಗ್ಗೆ ಅಪರಿಮಿತವಾದ ಶ್ರದ್ಧೆಯೂ ಪಾಶ್ಚಿಮಾತ್ಯರಲ್ಲಿದೆ ಅನ್ನುವ ಮಾತನ್ನು ಅಲ್ಲಗಳೆಯುವಂತಿಲ್ಲ. ಅಂಥದ್ದರಲ್ಲಿ ಒಬ್ಬ ಕ್ರೈಸ್ತ ಪಾದ್ರಿಯು ಮಗುವನ್ನು ದೈಹಿಕವಾಗಿ ಶೋಷಿಸುತ್ತಾನೆ ಅಂದರೆ ಜನ ಹೇಗೆ ತಾನೆ ಸಹಿಸುತ್ತಾರೆ. ಇಂಥಹ ಸೂಕ್ಷತೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ನಿರ್ದೇಶಕ ಡ್ಯಾನಿ ಬೋಯಲ್ ಮೂಲ ಕಥೆಯನ್ನು ಪಾಶ್ಚಿಮಾತ್ಯರಿಗೆ ತಕ್ಕಂತೆ ತಿರುಚಿ ಸ್ಲಮ್ ಡಾಗನ್ನು ನಿರ್ದೇಶಿಸಿದ್ದಾನೆ. ಇಂದು 8 ಆಸ್ಕರ್ ಗೆದ್ದಿರುವ ಚಿತ್ರ ಒಂದು ವೇಳೆ ಮೂಲಕತೆಯನ್ನೇ ಹೊಂದಿದ್ದರೆ ಕಸದ ಬುಟ್ಟಿ ಸೇರಬೇಕಾಗುತ್ತೇನೋ???. ಬಾಲ್ಯದಲ್ಲೇ ಕ್ರೈಸ್ತ ಮತಪ್ರಚಾರಕನಾಗಬೇಕೆಂಬ ಹಂಬಲವಿತ್ತೆಂದೂ, ಈಗಲೂ ಮಾಡುವ ಪ್ರತಿ ಕಾರ್ಯಗಳಿಗೆ ಪಾದ್ರಿಗಳ ಸಲಹೆ ಕೇಳುತ್ತೇನೆಂದೂ ಸಂದರ್ಶನವೊಂದರಲ್ಲಿ ಹೇಳಿದ ಡ್ಯಾನಿ ಬೋಯಲ್ ಇನ್ನೆಷ್ಟು ನಿಶ್ಪಕ್ಷಪಾತಿಯಾಗಲು ಹೇಗೆ ಸಾಧ್ಯ?? ಚಿತ್ರದ ತುಂಬೆಲ್ಲಾ ಕೊಳಗೇರಿ, ಕಳ್ಳತನ, ವೇಶ್ಯಾವಾಟಿಕೆ, ಮಾಫಿಯಾ, ಬಡತನ ತೋರಿಸಿ, ಭಾರತವೆಂದರೆ ಹೀಗೆ ಅಂಥ ಜಗತ್ತಿಗೆ ತೋರಿಸಿ ತಮ್ಮನ್ನು ತಾವು ಹೊಗಳಿಕೊಳ್ಳುವುದು ಒಂದು ರೀತಿಯ ವರ್ಣೀಯ ಭೇದವಲ್ಲವೇ? ಅಮಾಯಕ ಪಾಶ್ಚಿಮಾತ್ಯರ, ಭಾರತೀಯ ಮೂಲದ ಯುವಕ-ಯುವತಿಯರ ಮನಸ್ಸಲ್ಲಿ ದುಷ್ಟತೆ, ದರಿದ್ರಕ್ಕೆ ಮತ್ತೊಂದು ಹೆಸರು ಭಾರತ ಅನ್ನುವಂತಹ ಭಾವನೆ ಮೂಡಿದಲ್ಲಿ ಎಳ್ಳಷ್ಟೂ ಆಶ್ಚರ್ಯ ಪಡಬೇಕಾಗಿಲ್ಲ!!!
ಕಾಕತಾಳೀಯವೆಂಬಂತೆ ಒರಿಸ್ಸಾ, ಕರ್ನಾಟಕಗಳಲ್ಲಿ ಮತೀಯ ಗಲಭೆಗಳು ತಣ್ಣಗಾಗುವ ಮೊದಲೇ ಸ್ಲಮ್ ಡಾಗ್ ತೆರೆ ಕಂಡಿದೆ. ನಮ್ಮ ದೇಶದ ‘ಜಾತ್ಯಾತೀತ’ ಮಾಧ್ಯಮಗಳ ಕೃಪೆಯಿಂದ ಈ ಮತೀಯ ಕಲಹಗಳು ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡಿವೆ. ಇದರ ಜೊತೆಗೆ ಸ್ಲಮ್ ಡಾಗ್ ನಲ್ಲಿ ತೋರಿಸಿರುವ ಹಿಂದು ಮೂಲವಾದಿಗಳ ಬರ್ಬರತೆ ಅಮಾಯಕ ಪಾಶ್ಚಿಮಾತ್ಯರಿಗೆ ಬಹುತೇಕ ಶಾಂತಿಪ್ರಿಯ ಹಿಂದೂಗಳ ಬಗ್ಗೆ ಯಾವ ಚಿತ್ರಣ ಕೊಡಬಹುದು ಎಂಬುದನ್ನು ಊಹಿಸುವುದೂ ಅಸಾಧ್ಯ!!! ನಮ್ಮ ಮಾಧ್ಯಮಗಳು ಯಾವತ್ತೂ ಅರ್ಧಸತ್ಯವನ್ನು ಮಾತ್ರ ಪ್ರಕಟಿಸುತ್ತವೆ. ಅಲ್ಪಸಂಖ್ಯಾತ ವರ್ಗದ ನೋವನ್ನು, ಬವಣೆಯನ್ನು ಪ್ರಕಟಿಸುವುದೇ ಜಾತ್ಯಾತೀತತೆ ಅಂದುಕೊಂಡಿದ್ದಾರೆ ಇವರೆಲ್ಲಾ!!! ಬೆಂಕಿ ಇಲ್ಲದೆ ಹೊಗೆ ಬಾರದೆಂಬುದು ಗೊತ್ತಿಲ್ಲದಷ್ಟು ಮುಗ್ಧರು!!! ಆಸ್ಟ್ರೇಲಿಯಾದ ಮಿಷನರಿ ಗ್ರಹಾಂ ಸ್ಟೈನ್ ಕೊಲೆಯಾದಾಗ ಗಂಟಲು ಹರಿಯುವಂತೆ ಕಿರುಚಾಡಿದ ಪದ್ಮಶ್ರೀಗಳು ಒರಿಸ್ಸಾದಲ್ಲಿ ಸ್ವಾಮಿ ಲಕ್ಷ್ಮಣಾನಂದ ಸತ್ತು ಹೆಣವಾದಾಗ ಯಾಕೆ ಸುಮ್ಮನಿದ್ದರು? ಮಂಗಳೂರಿನ ಚರ್ಚಗಳ ಮೇಲೆ ಕಲ್ಲುತೂರಾಟವಾದಾಗ ವಿಶ್ವದಲ್ಲಿ ನಮ್ಮ ಮಾನ ಹೋಯಿತು ಅಂತ ಗೊಳೋ ಎಂದು ಕಣ್ಣೀರು ಹಾಕಿದ ಮಾಧ್ಯಮಗಳು ಕಲ್ಲು ತೂರಾಟದ ಹಿನ್ನಲೆಯ ಬಗ್ಗೆ ಯಾಕೆ ಬೆಳಕು ಹರಿಸಲಿಲ್ಲ? ಅಷ್ಟಕ್ಕೂ ಮಂಗಳೂರಿನಲ್ಲಿ ಆದದ್ದೇನು? ಪಾಶ್ಚಿಮಾತ್ಯ ಮೂಲಗಳಿಂದ ಧನ ಸಹಾಯ ಪಡೆದು ಮಿಷನರಿ ಕಾರ್ಯಗಳನ್ನು ಕೈಗೆತ್ತಿಕೊಂಡಂತಹ ಸಂಸ್ಥೆ ‘ನ್ಯೂ ಲೈಫ್’. ಧರ್ಮ ಬೋಧನೆಯ ಹೆಸರಲ್ಲಿ ಬಡ ಜನರ ವಿವಶತೆಯನ್ನೇ ಬಂಡವಾಳವಾಗಿಟ್ಟು ಮತಾಂತರ ಮಾಡುತ್ತಿದ್ದ ಈ ಸಂಸ್ಥೆ ‘ಸತ್ಯದರ್ಶಿನಿ’ ಎಂಬ ಪುಸ್ತಕವನ್ನು ಪ್ರಕಟಿಸಿತು. ಹಿಂದೂ ದೇವತೆಗಳ, ಪುರಾಣಪುರುಷರ ಬಗ್ಗೆ ಅವಹೇಳನಕಾರಿ ವಿಷಯಗಳನ್ನು ಪ್ರಕಟಿಸಿ ಜನರ ಹಾದಿ ತಪ್ಪಿಸುತ್ತಿದ್ದಂತೆ ಕುಪಿತಗೊಂಡ ಬಹುಸಂಖ್ಯಾತ ವರ್ಗ ಕೈಗೆ ಕಲ್ಲನ್ನೆತ್ತಿಕೊಂಡಿತು. ಹಾಡುಹಗಲೇ ತಮ್ಮ ಸಂಸ್ಕೃತಿ, ಧರ್ಮ, ನಂಬಿಕೆಯನ್ನು ಸುಮ್ಮನೆ ಜರೆಯುತ್ತಿರಬೇಕಾದರೆ ಹೇಗೆ ತಾನೆ ಸುಮ್ಮನಿರಲು ಸಾಧ್ಯ??? ಇದು ಯಾಕೆ ಮಾಧ್ಯಮದವರ ಕಣ್ಣಿಗೆ ಬೀಳಲ್ಲಿಲ್ಲ??? ಧರ್ಮ ಬೋಧನೆ ಮಾಡುವುದು ತಪ್ಪಲ್ಲ ಸ್ವಾಮಿ. ಜನರಿಗೂ, ಸಮಾಜಕ್ಕೂ ಒಳ್ಳೆಯದಾಗಬೇಕು. ಜನರು ಧಾರ್ಮಿಕರೂ, ಸದ್ಗುಣಿಗಳೂ ಆಗಬೇಕು. ನಮ್ಮ ಹಿರಿಯರು ಜಗತ್ತಿಗೆ ಹೇಳಿ ಕೊಟ್ಟ ಬೀಜಮಂತ್ರ ‘ಸರ್ವೇ ಜನಾಃ ಸುಖಿನೋ ಭವಂತು’ ಹೇಳುವುದೂ ಇದನ್ನಲ್ಲವೇ?. ಧರ್ಮದ ಹೆಸರಿನಲ್ಲಿ ಜನರ ಹಾದಿ ತಪ್ಪಿಸುವುದು ತಪ್ಪು. ಸುಳ್ಳು ಹೇಳುವುದು ತಪ್ಪು,ಸಾಮಾಜಿಕ ಶಾಂತಿಗೆ ಹುಳಿ ಹಿಂಡುವುದು ತಪ್ಪು. ತಮ್ಮ ಧರ್ಮವೇ ಶ್ರೇಷ್ಠವಾದಲ್ಲಿ ಅದರ ಶ್ರೇಷ್ಠತೆಯನ್ನು ಅಳೆಯಲು ಇನ್ನೊಂದು ಧರ್ಮವನ್ನು ಮಾನದಂಡವಾಗಿ ಬಳಸಬೇಕೆ? ಕಳೆದ ಏಳು ವರ್ಷಗಳಿಂದ ಗೋಧ್ರಾ ಗಲಭೆಯಲ್ಲಿ ಅಲ್ಪ ಸಂಖ್ಯಾತರಿಗಾದ ಅನ್ಯಾಯವನ್ನು (ಅದರಲ್ಲೂ ಹೆಚ್ಚಿನವು ತೀಸ್ತಾ ಸೆತಲ್ವಾಡ್ ಅಂಥವರು ಬರೆದಿರುವಂತಹ ಕಟ್ಟುಕತೆಗಳು. ಎಸ್.ಐ.ಟಿಯ ವರದಿಯೂ ಇದನ್ನೇ ಹೇಳುತ್ತದೆ. ಹೆಚ್ಚಿನ ವಿಷಯಕ್ಕೆ ಓದಿ: http://pratapsimha.com/bettale-jagattu/teesta/) ಹೇಳಿ-ಹೇಳಿ ದಣಿಯದ ಮಾಧ್ಯಮಗಳು ಕಳೆದ 60 ವರ್ಷಗಳಿಂದ ಮನೆ-ಮಠಗಳನ್ನು ಕಳೆದುಕೊಂಡು ನಿರ್ಗತಿಕರಾದ ಲಕ್ಷಾಂತರ ಕಾಶ್ಮೀರಿ ಪಂಡಿತರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಯಾಕೆ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ????
ಶತಶತಮಾನಗಳಿಂದ ಮೇಲಿಂದ ಮೇಲೆ ಆಕ್ರಮಣಕಾರಿಗಳ ದಾಳಿಗೆ ಸಿಕ್ಕು ನಲುಗಿದ ದೇಶ ನಮ್ಮದು. ಗ್ರೀಕರು, ಮಂಗೋಲರು, ತುರ್ಕರು, ಮೊಘಲರು, ಡಚ್ಛರು, ಫ್ರೆಂಚರು, ಬ್ರಿಟಿಷರು ಹೀಗೆ ಒಬ್ಬೊಬ್ಬರೂ ಬಂದು ಇಲ್ಲಿನ ಸಂಸ್ಕೃತಿ, ಸಂಪತ್ತನ್ನು ಧಾರಾಳವಾಗಿ ದೋಚಿದವರೆ!!! ತಮ್ಮ ಮೇಲೆ ನಡೆದ ದಬ್ಬಾಳಿಕೆಯನ್ನು ಹಲ್ಲು ಕಚ್ಚಿ ಸಹಿಸಿದ ಬಹುಸಂಖ್ಯಾತರು ಈಗ ‘ನಮಗೆ ಅನ್ಯಾಯವಾಗುತ್ತಿದೆ, ನಮ್ಮ ಆಸ್ಥೆಯನ್ನು ಹೀಗಳೆಯಲಾಗುತ್ತಿದೆ, ನಮ್ಮಶ್ರದ್ಧೆಗೆ ಅವಮಾನವಾಗುತ್ತಿದೆ’ ಎಂದು ದನಿಯೆತ್ತಿದರೆ ಅವರು ಕೋಮುವಾದಿಯಾಗುತ್ತಾರೆ! ಅಲ್ಪಸಂಖ್ಯಾತರು ಸಿಡಿದೆದ್ದರೆ ಅವರು ತಮ್ಮ ಹಕ್ಕಿಗೆ ಹೋರಾಡುತ್ತಿದ್ದಾರೆ! ಇದೆಂತಹ ದ್ವಿಮುಖ ನೀತಿ? ಒಂದೇ ಮುಖದ ನಾಣ್ಯ ಹೇಗೆ ನಗಣ್ಯವೋ ಅದೇ ರೀತಿ ಅರ್ಧಸತ್ಯವನ್ನಷ್ಟೇ ತಿಳಿಸುವ ಮಾಧ್ಯಮಗಳ ಸುದ್ದಿಯೂ ನಗಣ್ಯವಲ್ಲವೇ? ಆದರೆ ಇದೇ ಪರಮ ಸತ್ಯವೆಂಬಂತೆ ದಿನನಿತ್ಯ ನಮ್ಮ ಮನೆ-ಮನಗಳಿಗೆ ಲಗ್ಗೆ ಇಡುತ್ತಿರುವುದು ನಿಜಕ್ಕೂ ದುರದೃಷ್ಟಕರ!!! ಪ್ರಜಾಪ್ರಭುತ್ವದ ಕಾವಲುಗಾರನೆನಿಸಿಕೊಳ್ಳುವ ಸುದ್ದಿ ಮಾಧ್ಯಮ ಯಾಕೆ ಪಕ್ಷಪಾತಿಯಾಗಿದೆ????